ಹೀರೋ ಗರ್ಲ್ ಫ್ರೆಂಡ್ಗೆ ನಾನು ಇಷ್ಟವಿಲ್ಲ ಎಂದು ಸಿನಿಮಾದಿಂದಲೇ ಕಿತ್ತುಹಾಕಿದ್ದರು: ರವೀನಾ ಟಂಡನ್
ಬಾಲಿವುಡ್ನಲ್ಲಿ ರಾಜಕೀಯವಿದೆ. ಅದನ್ನು ಒಪ್ಪಿಕೊಳ್ಳುತ್ತೇನೆ. ಅಲ್ಲಿ ಒಳ್ಳೆಯ ಜನರೂ ಇದ್ದಾರೆ ಮತ್ತು ಕೆಟ್ಟವರೂ ಇದ್ದಾರೆ. ಇದನ್ನು ಈ ಹಿಂದೆಯೂ ಹೇಳಿದ್ದೇನೆ. ಕೆಟ್ಟ ಜನರು ನಿಮ್ಮ ವೈಫಲ್ಯಕ್ಕೆ ಯೋಜನೆ ರೂಪಿಸುತ್ತಾರೆ. ನನಗೆ ಅದರ ಅನುಭವವಾಗಿದೆ ಎಂದು ನಟಿ ರವೀನಾ ಟಂಡನ್ ಹೇಳಿದ್ದಾರೆ.
ನೀವು ಚಿತ್ರರಂಗದಲ್ಲಿ ಸೋಲುವುದನ್ನು ಮತ್ತು ನಿಮ್ಮನ್ನು ಸಿನಿಮಾಗಳಿಂದ ತೆಗೆದುಹಾಕುವುದನ್ನು ನೋಡಲು ಬಯಸುವ ಜನರು ಇರುತ್ತಾರೆ. ಇದು ಅಕ್ಷರಶಃ ಕ್ಲಾಸ್ ರೂಮ್ ರಾಜಕೀಯವಿದ್ದಂತೆ. ಅವರಿಲ್ಲಿ ಕೊಳಕು ಆಟಗಳನ್ನು ಆಡುತ್ತಾರೆ. ಆದರೆ ಈ ರೀತಿಯ ಜನರು ಪ್ರತಿ ಚಿತ್ರೋದ್ಯಮದಲ್ಲಿಯೂ ಇರುತ್ತಾರೆ. ನಾವು ಉತ್ಕೃಷ್ಟ ದರ್ಜೆಯ ಗ್ಲಾಮರಸ್ ಕೆಲಸದಲ್ಲಿದ್ದೇವೆ. ಅತ್ಯಂತ ನಿಕಟ ಪೈಪೋಟಿ ಇರುತ್ತದೆ. ಹೀಗಾಗಿ ಇಲ್ಲಿ ನಡೆಯುವುದೆಲ್ಲ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತದೆ ಎಂದಿದ್ದಾರೆ. ಮುಂದೆ ಓದಿ..

ಮಹಿಳಾ ಗುಂಪುಗಾರಿಕೆ ಇದೆ
ಚಿತ್ರರಂಗದಲ್ಲಿ ಗುಂಪುಗಾರಿಕೆ ಹಾಗೂ ಒಂದು ವರ್ಗದ ಮಹಿಳೆಯರ ಗುಂಪು ಇರುವುದು ನಿಜ. ಇದರ ಅನುಭವ ತಮಗೇ ಆಗಿದೆ. ಕೆಟ್ಟ ಮಹಿಳೆಯರ ಗ್ಯಾಂಗ್ ಕೈವಾಡದಿಂದಾಗಿ ರಾತ್ರೋ ರಾತ್ರಿ ಸಿನಿಮಾವೊಂದರಿಂದ ತಮ್ಮನ್ನು ಕಿತ್ತು ಹಾಕಲಾಗಿತ್ತು ಎಂಬುದನ್ನು ರವೀನಾ ನೆನಪಿಸಿಕೊಂಡಿದ್ದಾರೆ.

ಗರ್ಲ್ ಫ್ರೆಂಡ್ಗೆ ಇಷ್ಟವಿರಲಿಲ್ಲ
'ಸಿನಿಮಾದ ಮುಹೂರ್ತ ನಡೆದ ಸಂಜೆ ಪಾರ್ಟಿ ವೇಳೆ ಚಿತ್ರಕ್ಕೆ ಅಗತ್ಯವಾದ ಉಡುಪುಗಳನ್ನು ಸರಿಪಡಿಸುವ ಕೆಲಸವನ್ನು ಡಿಸೈನರ್ ಜತೆಗೂಡಿ ಮಾಡುತ್ತಿದ್ದೆ. ಸಂಜೆ 4 ಗಂಟೆ ಇರಬಹುದು. ನನಗೆ ಒಂದು ಕರೆ ಬಂತು. ನಿಮ್ಮನ್ನು ಚಿತ್ರದಿಂದ ಹೊರಹಾಕಲಾಗಿದೆ. ನಿಮಗೆ ಸಹಿ ಹಾಕುವಾಗ ನೀಡಿರುವ ಹಣವನ್ನು ವಾಪಸ್ ನೀಡಿ ಎಂದರು. ಇದಕ್ಕೆ ಕಾರಣ ಆ ಚಿತ್ರದ ಹೀರೋನ ಗರ್ಲ್ ಫ್ರೆಂಡ್ ನನ್ನನ್ನು ಇಷ್ಟಪಡುತ್ತಿರಲಿಲ್ಲ'.

ರಾಜ್ ಕಪೂರ್ ಕುಟುಂಬಕ್ಕೂ ಕಾಡಿದೆ
ಹೀರೋಗೆ ಕರೆ ಮಾಡಿದಾಗ ನಾನು ಪಾರ್ಟಿಯಲ್ಲಿದ್ದೇನೆ ಎಂದ. ಬಳಿಕ ನನಗೆ ಅದರ ರಾಜಕೀಯದ ಅರ್ಥವಾಯ್ತು. ಮಹಾನ್ ಸಿನಿಮಾ ನಿರ್ದೇಶಕ, ನಟ ರಾಜ್ ಕಪೂರ್ ಕುಟುಂಬವನ್ನೂ ಈ ರಾಜಕೀಯ ಕಾಡಿದೆ. ಅವರು ಕೂಡ ಇಂತಹ ಸನ್ನಿವೇಶಗಳನ್ನು ಎದುರಿಸಿದ್ದಾರೆ. ಆ ಸಮಯದಲ್ಲಿ ನಾನು ಈ ಜನರನ್ನು ಸ್ಫೂರ್ತಿಯಾಗಿ ಪಡೆದೆ. ಇಂತಹ ಅನೇಕ ಘಟನೆಗಳನ್ನು ಎದುರಿಸಿದ ಬಳಿಕವೂ ನನ್ನನ್ನು ನಾನು ಸಮಾಧಾನಪಡಿಸಿಕೊಳ್ಳುತ್ತಿದ್ದೆ ಎಂದು ತಿಳಿಸಿದ್ದಾರೆ.

ಪ್ರತಿ ನಟರಲ್ಲೂ ಭಯ ಇರುತ್ತದೆ
ತನ್ನ ಸಿನಿಮಾ ಹಿಟ್ ಆಗದೆ ಇದ್ದರೆ ಬಾಲಿವುಡ್ನಿಂದ ಹೊರಹಾಕುತ್ತಾರೆ ಎಂಬ ಭಯ ಸುಶಾಂತ್ ಸಿಂಗ್ ರಜಪೂತ್ ಅವರಲ್ಲಿತ್ತು. ಈ ಭಯ ಪ್ರತಿಯೊಬ್ಬ ನಟನಲ್ಲಿಯೂ ಇರುತ್ತದೆ. ಅತಿ ದೊಡ್ಡ ನಟ, ನಿರ್ಮಾಪಕ ಅಥವಾ ನಿರ್ದೇಶಕನ ಸಹೋದರರು, ಮಕ್ಕಳಲ್ಲಿ ಸಹ ಈ ಭೀತಿ ಇರುತ್ತದೆ. ಹಾಗೆ ಆಗಿರದೆ ಇದ್ದಿದ್ದರೆ ಪ್ರತಿ ಸ್ಟಾರ್ಗಳ ಮಕ್ಕಳು ಇಂದು ಸೂಪರ್ ಸ್ಟಾರ್ಗಳಾಗಿರುತ್ತಿದ್ದರು. ಅವರಲ್ಲಿಯೂ ಅನೇಕರನ್ನು ಬಾಲಿವುಡ್ನಿಂದ ಹೊರಹಾಕಲಾಗಿದೆ.

ಊಹಿಸಲು ಆಗುವುದಿಲ್ಲ
ಸುಶಾಂತ್ ತಮ್ಮ ಸಿನಿಮಾಗಳನ್ನು ನೋಡಿ ಎಂದು ಜನರಲ್ಲಿ ಮನವಿ ಮಾಡುವಾಗ ಅವರು ಅತ್ಯಂತ ಭಾವುಕರಾಗಿ ಹೇಳುತ್ತಿದ್ದರು ಎನ್ನುವುದು ಯಾರಿಗೂ ಅರ್ಥವಾಗಿರಲಿಲ್ಲ. ಆ ಹುಡುಗ ಬಹುಶಃ ಆಳವಾಗಿ ಮತ್ತು ಸದಾ ಭಾವನಾತ್ಮಕವಾಗಿ ವಿಹ್ವಲನಾಗಿರುತ್ತಿದ್ದ ಎನಿಸುತ್ತದೆ. ಅಷ್ಟು ಯುವ, ಸುಂದರ, ಪ್ರತಿಭಾವಂತ ಮತ್ತು ಯಶಸ್ವಿ ನಟ ಆ ರೀತಿ ತೀರ್ಮಾನ ಹೇಗೆ ತೆಗೆದುಕೊಂಡ ಎಂಬುದನ್ನು ಊಹಿಸಲು ಆಗುವುದಿಲ್ಲ ಎಂದಿದ್ದಾರೆ.


Click it and Unblock the Notifications











