"ಸಲ್ಮಾನ್ ಖಾನ್, ಅಕ್ಷಯ್ ಕುಮಾರ್ ಸಿನಿಮಾಗಳೂ ನೆಲಕಚ್ಚಲು ಇದೇ ಕಾರಣ"; ಬಾಲಿವುಡ್ ನಟನ ಶಾಕಿಂಗ್ ಕಮೆಂಟ್!
ಹಿಂದೆಲ್ಲಾ ಒಂದು ಲೆಕ್ಕಾಚಾರ ಇರುತ್ತಿತ್ತು. ದೊಡ್ಡ ಸ್ಟಾರ್ ನಟರ ಚಿತ್ರಗಳು ಅಂದರೆ, ಅದು ಖಂಡಿತಾ ಗೆದ್ದೇ ಗೆಲ್ಲುತ್ತದೆ. ಸೂಪರ್ ಡೂಪರ್ ಹಿಟ್ ಆಗದಿದ್ದರೂ ಹಾಕಿದ ಬಂಡವಾಳಕ್ಕೆ ಮೋಸವಿಲ್ಲ ಎನ್ನುವಂತೆ ಸ್ಟಾರ್ಗಳ ಚಿತ್ರ ವ್ಯವಹಾರ ಮಾಡುತ್ತಿತ್ತು. ಆದರೆ, ಈಗ ಯಾಕೋ ಪರಿಸ್ಥಿತಿ ಬದಲಾಗಿದೆ. ಕೆಲವೊಮ್ಮೆಯಂತೂ ಸಂಪೂರ್ಣ ತಲೆಕೆಳಗೆ ಆಗಿರುವಂಥಾ ಸನ್ನಿವೇಶಗಳೂ ಇವೆ.
ಬಾಲಿವುಡ್ ಸೂಪರ್ಸ್ಟಾರ್ ಸಲ್ಮಾನ್ ಖಾನ್, ಆಕ್ಷನ್ ಕಿಂಗ್ ಅಕ್ಷಯ್ ಕುಮಾರ್ ರಂಥಾ ಘಟಾನುಘಟಿಗಳ ಸಿನಿಮಾಗಳನ್ನು ನೋಡುವುದಕ್ಕೂ ಜನ ಥಿಯೇಟರ್ ಗೆ ಬರುತ್ತಿಲ್ಲ. ಇದ್ಯಾಕೆ ಹೀಗಾಗ್ತಿದೆ? ಈ ಪ್ರಶ್ನೆಗೆ ಮತ್ತೊಬ್ಬ ಬಾಲಿವುಡ್ ನಟ ಶ್ರೇಯಸ್ ತಲ್ಪಾಡೆ ಉತ್ತರ ಕೊಟ್ಟಿದ್ದಾರೆ.

ಸಲ್ಮಾನ್ ಖಾನ್ ಅಭಿನಯದ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಮತ್ತು 'ಟೈಗರ್ 3' ಚಿತ್ರಗಳು ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟಿಸಿದ್ದವು. 'ಟೈಗರ್ 3' ಅಂತೂ ಒಂದು ಯಶಸ್ವೀ ಫ್ರಾಂಚೈಸಿಯ ಭಾಗ. ಮೊದಲೆರಡು ಚಿತ್ರಗಳು ಸಲ್ಮಾನ್ ಖಾನ್ ಕೆರಿಯರ್ ಗ್ರಾಫ್ ಅನ್ನು ಮತ್ತಷ್ಟು ಮೇಲಕ್ಕೆ ತೆಗೆದುಕೊಂಡು ಹೋದಂಥವು. ಹಾಗಾಗಿ ಮೂರನೇ ಚಿತ್ರಕ್ಕೂ ಗೆಲುವು ಗ್ಯಾರಂಟಿ ಎಂದೇ ನಂಬಲಾಗಿತ್ತು. ಕತ್ರಿನಾ ಕೈಫ್ ನಂತಹಾ ಮೈಲೇಜ್ ಇರುವ ನಟಿ ಇದ್ದ ಮೇಲೂ ಯಾಕೋ ಟೈಗರ್ 3 ಮೇಲೇಳಲೇ ಇಲ್ಲ. 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಚಿತ್ರವಂತೂ ಬಂದಿದ್ದು ಹೋಗಿದ್ದು ಎರಡೂ ಗೊತ್ತೇ ಆಗಲಿಲ್ಲ ಎನ್ನುವಂತಾಗಿತು.
ಇನ್ನು ಅಕ್ಷಯ್ ಕುಮಾರ್ ವಿಚಾರ. ಅಕ್ಷಯ್ ಕುಮಾರ್ ಒಂಥರಾ ಬ್ಯಾಂಕೆಬಲ್ ನಟ. ಆತ ಮುಟ್ಟಿದ ಚಿತ್ರಗಳು ಸೋತ ಉದಾಹರಣೆ ಕಡಿಮೆ. ಬಾಕ್ಸಾಫೀಸ್ ಬ್ಲಾಕ್ ಬಸ್ಟರ್ ಅಲ್ಲದಿದ್ದರೂ ಬ್ಯುಸಿನೆಸ್ ಗೆ ಬರವಿಲ್ಲ ಎನ್ನುವಂಥಾ ಚಿತ್ರಗಳು ಅಕ್ಷಯ್ ಅಕೌಂಟ್ನಲ್ಲಿ ಇರುತ್ತಿತ್ತು. ಆದರೆ, ಅಕ್ಷಯ್ ಇತ್ತೀಚಿನ ಚಿತ್ರಗಳು ಈ ಲೆಕ್ಕಾಚಾರವನ್ನು ಬುಡಮೇಲು ಮಾಡಿವೆ. 'ಸಾಮ್ರಾಟ್ ಪೃಥ್ವಿರಾಜ್', 'ರಾಮ್ ಸೇತು' ಮತ್ತು 'ಬಡೆ ಮಿಯಾ ಚೋಟೆ ಮಿಯಾ' ಸಾಲು ಸಾಲಾಗಿ ನೆಲಕಚ್ಚಿದ ಚಿತ್ರಗಳು.
ಈ ದೊಡ್ಡ ಸ್ಟಾರ್ ಗಳ ಕತೆಯೇ ಹೀಗಾಗಿರುವಾಗ ಬೇರೆ ಇನ್ಯಾವ ಲೆಕ್ಕಾಚಾರ ಇದಕ್ಕೆ ಹೊಂದುತ್ತದೆ ಎನ್ನುವುದು ಬಹುಭಾಷಾ ನಟ ಶ್ರೇಯಸ್ ತಲ್ಪಾಡೆ ಅನಿಸಿಕೆ. ಇತ್ತೀಚೆಗೆ ನಡೆಸಿದ ಸಂದರ್ಶನವೊಂದರಲ್ಲಿ ಶ್ರೇಯಸ್ ಈ ಬಗ್ಗೆ ಕೆಲವು ವಿಚಾರ ಚರ್ಚೆ ಮಾಡಿದ್ದಾರೆ.

"ಈಗಿನ ಕಾಲದ ವೀಕ್ಷಕರ ನಿರೀಕ್ಷೆ ಬೇರೆಯೇ ಇದೆ. ಅವರು ಸುಮಾರಾದ ಸಿನಿಮಾಗಳನ್ನು ನೋಡಲು ತಯಾರಿಲ್ಲ. ಅವರ ರುಚಿ ಅಭಿರುಚಿಗಳು ಸಂಪೂರ್ಣ ವಿಭಿನ್ನ. ಚಿತ್ರದ ಟ್ರೇಲರ್ ನೋಡಿಯೇ ಸಿನಿಮಾ ನೋಡಬೇಕಾ ಬೇಡವಾ, ಇದನ್ನು ನೋಡಲು ಥಿಯೇಟರ್ ಗೆ ಹೋಗಬೇಕೋ ಬೇಡವೋ ಎನ್ನುವ ಬಗ್ಗೆ ನಿರ್ಧಾರ ಮಾಡಿಬಿಡುತ್ತಾರೆ. ಎಷ್ಟೇ ಅದ್ಧೂರಿ ಪ್ರಚಾರ ಮಾಡಿದ್ದರೂ ಜನರಿಗೆ ಅದ್ಯಾವುದೂ ಮುಖ್ಯ ಅಲ್ಲವೇ ಅಲ್ಲ. ಚಿತ್ರ ಬಿಡುಗಡೆಯಾದ ನಂತರ ಜನರ ಬಾಯಿ ಮಾತಿನ ರಿವ್ಯೂ ನೋಡಿ ನಂತರ ತಾವು ನೋಡಬೇಕೋ ಬೇಡವೋ ಎಂದು ನಿರ್ಧಾರ ಮಾಡುತ್ತಾರೆ. ಉದಾಹರಣೆಗೆ ಹಿಂದಿನ ಕಾಲದ ಸೂಪರ್ ಸ್ಟಾರ್ ರಾಜೇಶ್ ಖನ್ನಾ ವಿಚಾರವನ್ನೇ ತೆಗೆದುಕೊಳ್ಳಿ. ಸಾಲು ಸಾಲಾಗಿ ಅವರ ಸಿನಿಮಾಗಳೆಲ್ಲಾ ಗೆದ್ದು ಬೀಗುತ್ತಿದ್ದವು. ಆದರೆ ನಂತರ ಒಂದು ದಿನ ಅವರ ಚಿತ್ರಗಳೂ ಸೋಲಲು ಆರಂಭಿಸಿದವು. ಯಾವಾಗಿನಿಂದ ನಾವು ಚಿತ್ರಗಳನ್ನು ಮಾಡುತ್ತಿದ್ದೇವೋ ಆಗಿನಿಂದಲೂ ಈ ಎಲ್ಲವೂ ನಡೆಯುತ್ತಲೇ ಇದೆ. ಅದಕ್ಕೆ ಈಗಿನ ಸ್ಟಾರ್ ನಟರೇನೂ ಹೊರತಲ್ಲ" ಎಂದರು.
ಶ್ರೇಯಸ್ ತಲ್ಪಾಡೆ ಕರ್ತಮ್ ಭುಗ್ತಮ್ ಎನ್ನುವ ಸಿನಿಮಾದಲ್ಲಿ ನಟಿಸಿದ್ದು ಅದು ಬಿಡುಗಡೆಗೆ ಸಜ್ಜಾಗಿದೆ. ಮಧೂ ಷಾ, ವಿಜಯ್ ರಾಜ್, ಅಕ್ಷ ಪರ್ದಾಸಾನಿ ಮುಂತಾದವರು ನಟಿಸಿರುವ ಈ ಚಿತ್ರ ಮೇ 17ಕ್ಕೆ ಬಿಡುಗಡೆಯಾಗಲಿದೆ.


Click it and Unblock the Notifications











