ಬೆಂಬಲಕ್ಕೆ ಬಾರದ ಬಾಲಿವುಡ್: ಬೇಸೆತ್ತ ಕರಣ್ ಜೋಹರ್ 'ಮಾಮಿ' ಮಂಡಳಿಗೆ ರಾಜೀನಾಮೆ?
ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದಲ್ಲಿ ಅತಿ ಹೆಚ್ಚು ಆಕ್ರೋಶಕ್ಕೆ ತುತ್ತಾಗಿರುವುದು ನಿರ್ಮಾಪಕ ಕರಣ್ ಜೋಹರ್. ತಮ್ಮ ಕಾರ್ಯಕ್ರಮಗಳಲ್ಲಿ ಪ್ರತಿ ಬಾರಿಯೂ ಅವಹೇಳನೆ ಮಾಡಲು ಸುಶಾಂತ್ ಹೆಸರನ್ನು ಉಲ್ಲೇಖಿಸುತ್ತಿದ್ದದ್ದು, ಸುಶಾಂತ್ ಅವರಿಗೆ ಅವಕಾಶ ನೀಡದೆ ಅವಮಾನಿಸಿದ್ದರು ಎಂದು ಆರೋಪಗಳು ಒಂದೆಡೆಯಾದರೆ, ಸ್ಟಾರ್ಗಳು ಮತ್ತು ಅವರ ಮಕ್ಕಳಿಗೆ ಮಾತ್ರ ತಮ್ಮ ಸಿನಿಮಾಗಳಲ್ಲಿ ಅವಕಾಶ ಎನ್ನುವ ಮೂಲಕ ಪ್ರತಿಭೆಗಳನ್ನು ಕಡೆಗಣಿಸಿದ ಆಕ್ರೋಶ ಇನ್ನೊಂದೆಡೆ.
ಕರಣ್ ಜೋಹರ್ ಅವರ ನಡೆ ಬಾಲಿವುಡ್ನ ಸ್ವಜನಪಕ್ಷಪಾತದ ಚರ್ಚೆಯನ್ನು ತೀವ್ರಗೊಳಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕರಣ್ ಅವರನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡಲಾಗುತ್ತಿದೆ. ಇಷ್ಟೆಲ್ಲಾ ಆದರೂ ಕರಣ್ ಅವರ ಬೆಂಬಲಕ್ಕೆ ನಿಂತರವರು ತೀರಾ ಕಡಿಮೆ. ಮುಂದೆ ಓದಿ..

ಸಾಮಾಜಿಕ ಜಾಲತಾಣದಿಂದಲೂ ದೂರ
ಕಳೆದ ಕೆಲವು ದಿನಗಳ ಹಿಂದೆ ಕರಣ್ ಜೋಹರ್ ಸಾಮಾಜಿಕ ಜಾಲತಾಣದಲ್ಲಿ ಆಲಿಯಾ ಭಟ್, ವರುಣ್ ಧವನ್ ಸೇರಿದಂತೆ ನಟ-ನಟಿಯರನ್ನು ಅನ್ಫಾಲೋ ಮಾಡಿದ್ದರು. ಎಂಟು ಖಾತೆಗಳನ್ನು ಮಾತ್ರವೇ ಈಗ ಅವರು ಫಾಲೋ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇದುವರೆಗೂ ಯಾವುದೇ ಪೋಸ್ಟ್ ಮಾಡಿಲ್ಲ.

ಮಾಮಿ ಮಂಡಳಿಗೆ ರಾಜೀನಾಮೆ
ಈ ನಡುವೆ ಕರಣ್ ಜೋಹರ್ ಮುಂಬೈ ಫಿಲಂ ಫೆಸ್ಟಿವಲ್ನ (ಮಾಮಿ) ನಿರ್ದೇಶಕದ ಸ್ಥಾನದಿಂದ ಹೊರನಡೆಯಲು ನಿರ್ಧರಿಸಿದ್ದಾರೆ. ಮುಂಬೈ ಅಕಾಡೆಮಿ ಆಫ್ ಮೂವಿಂಗ್ ಇಮೇಜ್ನ ಮಂಡಳಿಯ ಸ್ಥಾನಕ್ಕೆ ಕರಣ್ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.

ಬೆಂಬಲ ಸಿಗದೆ ಬೇಸರ
ತಮ್ಮ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆರೋಪಗಳು ವ್ಯಕ್ತವಾಗುತ್ತಿದ್ದರೂ ಬಾಲಿವುಡ್ನ ಯಾರೊಬ್ಬರೂ ತಮ್ಮ ಬೆಂಬಲಕ್ಕೆ ಬಂದಿಲ್ಲ ಎಂದು ಕರಣ್ ಜೋಹರ್ ಬೇಸರಪಟ್ಟುಕೊಂಡಿದ್ದಾರೆ. ಇದರಿಂದ ಚಿತ್ರೋತ್ಸವದ ಆರ್ಟಿಸ್ಟಿಕ್ ನಿರ್ದೇಶಕಿ ಸ್ಮೃತಿ ಕಿರಣ್ ಅವರಿಗೆ ರಾಜೀನಾಮೆ ಪತ್ರವನ್ನು ಇ-ಮೇಲ್ ಮೂಲಕ ರವಾನಿಸಿದ್ದಾರೆ ಎನ್ನಲಾಗಿದೆ.

ಮನವೊಲಿಸಲು ದೀಪಿಕಾ ಪ್ರಯತ್ನ
ನಟಿ ದೀಪಿಕಾ ಪಡುಕೋಣೆ ಈ ಬಾರಿ ಮಾಮಿ ಮಂಡಳಿಯ ಅಧ್ಯಕ್ಷರಾಗಿದ್ದು, ಕರಣ್ ಜೋಹರ್ ಅವರ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ. ಈ ಮಂಡಳಿಯಲ್ಲಿ ಜೋಯಾ ಅಖ್ತರ್, ಕಬೀರ್ ಖಾನ್, ಸಿದ್ಧಾರ್ಥ್ ರಾಯ್ ಕಪೂರ್, ವಿಕ್ರಮಾದಿತ್ಯ ಮೋಟ್ವಾನಿ ಮತ್ತು ರೋಹನ್ ಸಿಪ್ಪಿ ಇದ್ದಾರೆ.


Click it and Unblock the Notifications











