ಅಂದು ಕೇಳಿದ್ದೊಂದು, ಈಗ ಹೇಳುವುದು ಇನ್ನೊಂದು: ಉಲ್ಟಾ ಹೊಡೆದ ರಿಯಾ ಚಕ್ರವರ್ತಿ
'ಅಮಿತ್ ಶಾ ಸರ್, ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ಕಾರಣವೇನೆಂದು ತಿಳಿಯಬೇಕಿದೆ. ದಯವಿಟ್ಟು ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಕೈಮುಗಿದು ಕೇಳಿಕೊಳ್ಳುತ್ತೇನೆ'- ಹೀಗೆ ಕೆಲವು ದಿನಗಳ ಹಿಂದಷ್ಟೇ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದ ನಟಿ ರಿಯಾ ಚಕ್ರವರ್ತಿ ಈಗ ಉಲ್ಟಾ ಹೊಡೆದಿದ್ದಾರೆ.
ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲಾಗಿದೆ. ಇದಕ್ಕೂ ಮುನ್ನ ಸುಶಾಂತ್ ತಂದೆ ಕೆ.ಕೆ. ಸಿಂಗ್, ಸುಶಾಂತ್ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪದಲ್ಲಿ ಪಟ್ನಾದಲ್ಲಿ ರಿಯಾ ವಿರುದ್ಧ ದೂರು ದಾಖಲಿಸಿದ್ದರು. ಈ ಸಂಬಂಧ ಬಿಹಾರ ಪೊಲೀಸರು ಎಫ್ಐಆರ್ ಕೂಡ ದಾಖಲು ಮಾಡಿದ್ದರು. ಸುಶಾಂತ್ ಸಾವಿನ ನಂತರ ಒಂದು ತಿಂಗಳು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳದ ರಿಯಾ, ತಮ್ಮ ವಿರುದ್ಧ ಅತ್ಯಾಚಾರದ ಬೆದರಿಕೆ ಬರುತ್ತಿದೆ ಎಂದು ಆರೋಪಿಸಿದ್ದರು. ಸುಶಾಂತ್ ಪ್ರಕರಣ ಸಿಬಿಐಗೆ ಒಪ್ಪಿಸಿ ಎಂದೂ ಬರೆದುಕೊಂಡಿದ್ದರು. ಆದರೆ ಅದೇ ಸಿಬಿಐ ತನಿಖೆ ಮಾಡುವಂತಿಲ್ಲ ಎಂದು ಹೊಸ ವಾದ ಮುಂದಿಟ್ಟಿದ್ದಾರೆ. ಮುಂದೆ ಓದಿ.

ತೀರ್ಪು ನೀಡುವವರೆಗೂ ತನಿಖೆ ಮಾಡುವಂತಿಲ್ಲ
ಬಿಹಾರದ ಪಟ್ನಾ ಪೊಲೀಸ್ ಠಾಣೆಯಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ನ ವಿಚಾರಣೆಯನ್ನು ಬಿಹಾರದಿಂದ ಮುಂಬೈಗೆ ವರ್ಗಾಯಿಸುವಂತೆ ರಿಯಾ ಚಕ್ರವರ್ತಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿ ಇನ್ನೂ ವಿಚಾರಣೆಗೆ ಬಂದಿಲ್ಲ. ಹೀಗಾಗಿ ಇದರ ಬಗ್ಗೆ ಸುಪ್ರೀಂಕೋರ್ಟ್ ತೀರ್ಪು ನೀಡುವವರೆಗೂ ಸಿಬಿಐ ತನಿಖೆಯಿಂದ ದೂರವೇ ಇರಬೇಕು ಎಂದು ರಿಯಾ ಹೇಳಿದ್ದಾರೆ.

ಸಿಬಿಐ ತನಿಖೆ ಅಕ್ರಮ
ಈ ಸಂದರ್ಭದಲ್ಲಿ ಯಾವುದೇ ಕಾನೂನಾತ್ಮಕ ತತ್ವಗಳಾಚೆಗೂ ಸಿಬಿಐ ತನಿಖೆ ಅಕ್ರಮವಾಗುತ್ತದೆ. ಇದು ದೇಶದ ಒಕ್ಕೂಟ ವ್ಯವಸ್ಥೆಗೆ ಹಾನಿಯುಂಟು ಮಾಡುತ್ತದೆ. ಮಹಾರಾಷ್ಟ್ರ ಸರ್ಕಾರದ ಒಪ್ಪಿಗೆ ಇಲ್ಲದೆ ಇದ್ದರೆ ಇಲ್ಲಿ ಸಿಬಿಐ ತನಿಖೆ ನಡೆಸಲು ಸಾಧ್ಯವಿಲ್ಲ ಎಂದು ರಿಯಾ ಪರ ವಕೀಲ ಸತೀಶ್ ಮಾನೆಶಿಂದೆ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಬಿಹಾರ ಸರ್ಕಾರಕ್ಕೆ ಅಧಿಕಾರವಿಲ್ಲ
ಸುಶಾಂತ್ ಸಿಂಗ್ ಸತ್ತಿರುವುದು ಮುಂಬೈನಲ್ಲಿ. ಹೀಗಾಗಿ ಇದರ ತನಿಖೆಯನ್ನು ಮುಂಬೈ ಪೊಲೀಸರು ನಡೆಸಬೇಕೇ ವಿನಾ, ಇದು ಬಿಹಾರ ಪೊಲೀಸರ ವ್ಯಾಪ್ತಿಗೆ ಬರುವುದಿಲ್ಲ. ತನಿಖೆ ನಡೆಸಲು ತಮ್ಮ ವ್ಯಾಪ್ತಿಗೆ ಬಾರದೆ ಇರುವ ಪ್ರಕರಣವನ್ನು ಬಿಹಾರ ಸರ್ಕಾರ ಸಿಬಿಐಗೆ ಒಪ್ಪಿಸಿದೆ ಎಂದು ವಾದಿಸಿದ್ದಾರೆ. ಸಿಬಿಐ ತನಿಖೆ ಶುರು ಮಾಡಲು ಮಹಾರಾಷ್ಟ್ರ ಸರ್ಕಾರ ಒಪ್ಪಿಗೆ ನೀಡಬೇಕಿದೆ. ಅದು ಅನುಮತಿ ನೀಡದೆ ಹೋದರೆ ಅದರ ರಾಜ್ಯದೊಳಗೆ ಯಾವುದೇ ವ್ಯಕ್ತಿಯನ್ನು ಪ್ರಶ್ನಿಸಲು ಸಾಧ್ಯವಿಲ್ಲ.

ಆರು ಮಂದಿ ವಿರುದ್ಧ ಎಫ್ಐಆರ್
ಈ ಪ್ರಕರಣದಲ್ಲಿ ಸಿಬಿಐ, ರಿಯಾ ಚಕ್ರವರ್ತಿ, ಆಕೆಯ ತಾಯಿ ಸಂಧ್ಯಾ ಚಕ್ರವರ್ತಿ, ತಂದೆ ಇಂದ್ರಜಿತ್ ಚಕ್ರವರ್ತಿ, ಸಹೋದರ ಶೌವಿಕ್ ಚಕ್ರವರ್ತಿ, ರಿಯಾ ಸಹವರ್ತಿಗಳಾದ ಸಾಮ್ಯುಯೆಲ್ ಮಿರಾಂಡಾ ಮತ್ತು ಶ್ರುತಿ ಮೋದಿ ವಿರುದ್ಧ ಎಫ್ಐಆರ್ ದಾಖಲಿಸಿದೆ. ಜಾರಿ ನಿರ್ದೇಶನಾಲಯ ಕೂಡ ಸಾಮ್ಯುಯೆಲ್ ಮಿರಾಂಡಾ ಅವರನ್ನು ವಿಚಾರಣೆಗೆ ಒಳಪಡಿಸಿದ್ದು, ರಿಯಾಗೆ ಸಮನ್ಸ್ ನೀಡಿದೆ.

ಸಿಬಿಐಗೆ ಒಪ್ಪಿಸಿ ಎಂದಿದ್ದ ರಿಯಾ
ಜುಲೈ 16ರಂದು ಸಾಮಾಜಿಕ ಜಾಲತಾಣದಲ್ಲಿ ಅಮಿತ್ ಶಾ ಅವರನ್ನು ಟ್ಯಾಗ್ ಮಾಡಿ ಪೋಸ್ಟ್ ಹಾಕಿದ್ದ ರಿಯಾ, ನಾನು ಸುಶಾಂತ್ ಸಿಂಗ್ ರಜಪೂತ್ ಪ್ರೇಯಸಿ. ಅವರ ಹಠಾತ್ ನಿಧನವಾಗಿ ಒಂದು ತಿಂಗಳು ಕಳೆದಿದೆ. ಸರ್ಕಾರದ ಬಗ್ಗೆ ನನಗೆ ಸಂಪೂರ್ಣ ನಂಬಿಕೆ ಇದೆ. ಆದರೆ ನ್ಯಾಯದ ಸಲುವಾಗಿ, ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಎರಡೂ ಕೈಗಳನ್ನು ಜೋಡಿಸಿ ಮನವಿ ಮಾಡುತ್ತೇನೆ. ಸುಶಾಂತ್ ಈ ನಿರ್ಧಾರ ತೆಗೆದುಕೊಳ್ಳಲು ಯಾವ ಒತ್ತಡಗಳು ಕಾರಣವಾದವು ಎಂಬುದನ್ನಷ್ಟೇ ನಾನು ತಿಳಿದುಕೊಳ್ಳಲು ಬಯಸಿದ್ದೇನೆ ಎಂದು ಬರೆದಿದ್ದರು.


Click it and Unblock the Notifications











