Shah Rukh Khan: ಅಟ್ಲೀಗಿಂತ ಮುನ್ನ ಶಾರುಖ್ ಖಾನ್ಗೆ ಆಕ್ಷನ್ ಕಟ್ ಹೇಳಿದ ಸೌತ್ ನಿರ್ದೇಶಕರು ಯಾರು?
'ಪಠಾಣ್' ಬಳಿಕ ಶಾರುಖ್ ಖಾನ್ ಮತ್ತೊಂದು ಪವರ್ಫುಲ್ ಸಿನಿಮಾ ಮೂಲಕ ಥಿಯೇಟರ್ಗೆ ಲಗ್ಗೆ ಇಡುವ ಸಾಧ್ಯತೆಯಿದೆ. ಇತ್ತೀಚೆಗಷ್ಟೇ ರಿಲೀಸ್ ಆಗಿದ್ದ 'ಜವಾನ್' ಸಿನಿಮಾದ ಪ್ರಿವ್ಯೂ ಇಂತಹದ್ದೊಂದು ಸುಳಿವು ನೀಡಿದೆ. ಕಿಂಗ್ ಖಾನ್ ಇದೂವರೆಗೂ ಇಂತಹದ್ದೊಂದು ಅವತಾರದಲ್ಲಿ ಕಂಡಿದ್ದೇ ಇಲ್ಲ.
ದಕ್ಷಿಣ ಭಾರತದ ನಿರ್ದೇಶಕರೊಂದಿಗೆ ಶಾರುಖ್ ಖಾನ್ ಸಿನಿಮಾ ಮಾಡಿದ್ದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಸೌತ್ನ ಜನಪ್ರಿಯ ನಿರ್ದೇಶಕರ ಸಿನಿಮಾದಲ್ಲಿ ನಟಿಸಿದ್ದಾರೆ. ಆದರೆ, ಹಲವು ವರ್ಷಗಳ ಬಳಿಕ ಮತ್ತೊಬ್ಬ ದಕ್ಷಿಣ ಭಾರತದ ನಿರ್ದೇಶಕನ ಸಿನಿಮಾದಲ್ಲಿ ನಟಿಸಿದ್ದಾರೆ. ಇದು ಅಭಿಮಾನಿಗಳಿಗಂತೂ ಕಿಕ್ ಕೊಟ್ಟಿದೆ.

ಶಾರುಖ್ ಖಾನ್ ಆಗಾಗ ಸೋಶಿಯಲ್ ಮೀಡಿಯಾಗಳಲ್ಲಿ ತಮ್ಮ ಅಭಿಮಾನಿಗಳ ಜೊತೆ ಸಿನಿಮಾ ಬಗ್ಗೆ ಚರ್ಚೆ ಮಾಡುತ್ತಾರೆ. ಇತ್ತೀಚೆಗೆ ಟ್ವಿಟರ್ನಲ್ಲಿ #AskSRK ಸೆಷನ್ಸ್ನಲ್ಲಿ ಕಿಂಗ್ ಖಾನ್ ಭಾಗಿಯಾಗಿದ್ದರು. ಈ ವೇಳೆ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಶಾರುಖ್ ಖಾನ್ ದಕ್ಷಿಣ ಭಾರತದ ಸೂಪರ್ಸ್ಟಾರ್ಗಳ ಬಗ್ಗೆ ಮಾತಾಡಿದ್ದಾರೆ. ಇದು ಸೋಶಿಯಲ್ ಮೀಡಿಯಾದಲ್ಲಿ ಗುಲ್ಲೆದ್ದಿದೆ.
ರಜನಿ, ವಿಜಯ್, ಯಶ್ ಬಗ್ಗೆ ಶಾರುಖ್ ಹೇಳಿದ್ದೇನು?
ಟ್ವಿಟರ್ನಲ್ಲಿ ಶಾರುಖ್ ಖಾನ್ ತಮ್ಮ ಅಭಿಮಾನಿಗಳ ಪ್ರಶ್ನೋತ್ತರಕ್ಕೆ ಉತ್ತರ ಕೊಟ್ಟಿದ್ದಾರೆ. ಅಭಿಮಾನಿಯೊಬ್ಬರು " ಜವಾನ್ ಸಿನಿಮಾದ ನಿಮ್ಮ ಪಾತ್ರಕ್ಕೆ ಹಲವು ಸಿನಿಮಾಗಳನ್ನು ನೋಡಿ ತಯಾರಿ ನಡೆಸಿದ್ದೀರಾ?" ಎಂದು ಕೇಳಿದ್ದರು. ಅದಕ್ಕೆ ಶಾರುಖ್ ಖಾನ್ ದಕ್ಷಿಣ ಭಾರತದ ಸೂಪರ್ಸ್ಟಾರ್ಗಳ ಹೆಸರನ್ನು ತೆಗೆದುಕೊಂಡಿದ್ದಾರೆ.
" ನಾನು ಅಟ್ಲೀಯ ಹಲವು ಸಿನಿಮಾಗಳನ್ನು ನೋಡಿದ್ದೇನೆ. ಭಾಷೆ ಹಾಗೂ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ವಿಜಯ್ ಸರ್, ಅಲ್ಲು ಅರ್ಜುನ್ ಜೀ, ರಜನಿ ಸರ್, ಯಶ್ ಹಾಗೂ ಹಲವು ನಟರ ಸಿನಿಮಾಗಳನ್ನು ನೋಡಿ ಹೊಸ ಜಗತ್ತನ್ನು ಕಂಡುಕೊಂಡಿದ್ದೇವೆ. ಹಾಗೇ ನನ್ನ ಪಾತ್ರಕ್ಕೂ ತಯಾರಿ ಮಾಡಿಕೊಂಡಿದ್ದೇನೆ." ಎಂದು ಶಾರುಖ್ ಖಾನ್ ಹೇಳಿದ್ದಾರೆ.
ನಯನತಾರಾ, ವಿಜಯ್ ಬಗ್ಗೆ ಫುಲ್ ಖುಷ್
ಇದೂವರೆಗೂ ಅಟ್ಲೀ ನಿರ್ದೇಶಿಸಿದ ಸಿನಿಮಾಗಳು ಪವರ್ಫುಲ್ ಆಗಿವೆ. ಶಾರುಖ್ ಖಾನ್ ಅನ್ನೂ ಅಟ್ಲೀ ಹಿಂದೆಂದೂ ನೋಡಿರದ ರೀತಿಯಲ್ಲಿ ಕಾಣಿಸಿಕೊಳ್ಳಬಹುದು ಅನ್ನೋ ನಿರೀಕ್ಷೆಯಲ್ಲಿದ್ದಾರೆ. ವಿಜಯ್ ನಟಿಸಿದ ಸಿನಿಮಾಗಳಂತೆ ಥೇರಿ, ಮರ್ಸೆಲ್ ಅಂತಯೇ ಶಾರುಖ್ ಖಾನ್ ಕೂಡ ಫುಲ್ ಮಾಸ್ ಹೀರೊ ಲುಕ್ನಲ್ಲಿ ಅಬ್ಬರಿಸಬಹುದು.

ಶಾರುಖ್ ಖಾನ್ ಜೊತೆಗೆ ನಯನತಾರಾ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇವರೊಂದಿಗೆ ವಿಜಯ್ ಸೇತುಪತಿ ಖಳನಾಯಕನಾಗಿ ನಟಿಸುತ್ತಿದ್ದು, ದಳಪತಿ ವಿಜಯ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ. ಹೀಗಾಗಿ 'ಜವಾನ್' ಉತ್ತರ ಹಾಗೂ ದಕ್ಷಿಣ ಭಾರತದ ಸಿನಿಪ್ರೇಮಿಗಳಿಗೆ ಸಖತ್ ಕಿಕ್ ಕೊಡುವ ಸಾಧ್ಯತೆಯಿದೆ.
ಸೌತ್ ಡೈರೆಕ್ಟರ್ ಜೊತೆ ನಟಿಸೋದು ಇದೇ ಮೊದಲೇನಲ್ಲ
ಬಾಲಿವುಡ್ ಸೂಪರ್ಸ್ಟಾರ್ ಶಾರುಖ್ ಖಾನ್ ದಕ್ಷಿಣ ಭಾರತದ ನಿರ್ದೇಶಕರೊಂದಿಗೆ ನಟಿಸುತ್ತಿರೋದು ಇದೇ ಮೊದಲೇನಲ್ಲ. ಈ ಹಿಂದೆ ಮಣಿರತ್ನಂ ನಿರ್ದೇಶಿಸಿದ 'ದಿಲ್ ಸೇ' ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿಯೇ ಕಾಣಿಸಿಕೊಂಡಿದ್ದರು. ಹಾಗೇ ಕಮಲ್ ಹಾಸನ್ ನಟಿಸಿ, ನಿರ್ದೇಶಿಸಿದ 'ಹೇ ರಾಮ್' ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ನಟಿಸಿದ್ದರು. ಈಗ ಅಟ್ಲೀ ನಿರ್ದೇಶಿಸಿದ ಸಿನಿಮಾದಲ್ಲಿ ನಟಿಸಿದ್ದಾರೆ.
ಇಷ್ಟೇ ಅಲ್ಲದೆ ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ನಟಿಸಿದ 'ಚೆನ್ನೈ ಎಕ್ಸ್ಪ್ರೆಸ್' ಸಿನಿಮಾ ದಕ್ಷಿಣ ಭಾರತದಲ್ಲಿ ನಡೆಯುವ ಕಥೆಯಾಗಿತ್ತು. ದೀಪಿಕಾ ಪಡುಕೋಣೆ ತಮಿಳು ಹುಡುಗಿಯಾಗಿ ಕಂಡಿದ್ದರು. ಬಹುತೇಕ ಪಾತ್ರಗಳು ದಕ್ಷಿಣ ಭಾರತದವರೇ ಆಗಿದ್ದರು.


Click it and Unblock the Notifications











