ಅಚ್ಚರಿಯ ಬೆಳವಣಿಗೆ: ಕರಣ್ ಜೋಹರ್ ವಿರುದ್ಧ ಕಿಡಿಕಾರಿದ ಶತ್ರುಘ್ನ ಸಿನ್ಹಾ
'ಕಾಫಿ ವಿತ್ ಕರಣ್' ಕಾರ್ಯಕ್ರಮದಲ್ಲಿ ಸುಶಾಂತ್ ಸಿಂಗ್ ರಜಪೂತ್ ಸೇರಿದಂತೆ ಅನೇಕ ಹೊರಗಿನ ನಟರನ್ನು ಅವಹೇಳನೆ ಮಾಡಿದ ಆರೋಪ ಕರಣ್ ಜೋಹರ್ ಮೇಲಿದೆ. ಸ್ವಜನಪಕ್ಷಪಾತದ ವಿವಾದಕ್ಕೆ ಸಂಬಂಧಿಸಿದಂತೆ ಕರಣ್ ಜೋಹರ್ ವಿರುದ್ಧ ಅನೇಕರು ಕಿಡಿಕಾರಿದ್ದಾರೆ. ಈಗ ಹಿರಿಯ ನಟ ಶತ್ರುಘ್ನ ಸಿನ್ಹಾ ಕೂಡ ಕರಣ್ ವಿರುದ್ಧ ಹರಿಹಾಯ್ದಿದ್ದಾರೆ.
Recommended Video
ಶತ್ರುಘ್ನ ಸಿನ್ಹಾ ಸ್ವತಃ ನೆಪೋಟಿಸಂಗೆ ಬೆಂಬಲ ನೀಡಿದ ಆರೋಪ ಎದುರಿಸುತ್ತಿದ್ದಾರೆ. ಅವರ ಮಗಳು ಸೋನಾಕ್ಷಿ ಸಿನ್ಹಾ ಪ್ರತಿಭೆ ಇಲ್ಲದೆ ಇದ್ದರೂ ದೊಡ್ಡ ದೊಡ್ಡ ನಟರೊಂದಿಗೆ ಅನೇಕ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಸಲ್ಮಾನ್ ಖಾನ್ ಕಾರಣದಿಂದ ಸೋನಾಕ್ಷಿ ಚಿತ್ರರಂಗ ಪ್ರವೇಶಿಸಿದರು. ಅವರು ಕೂಡ ಸ್ವಜನಪಕ್ಷಪಾತದ ಉತ್ಪನ್ನ ಎಂಬ ಟೀಕೆಗಳಿವೆ.
ಈ ಟೀಕೆಗಳನ್ನು ಎದುರಿಸಲಾಗಿದೆ ಸೋನಾಕ್ಷಿ, ತಮ್ಮ ಟ್ವಿಟ್ಟರ್ ಖಾತೆಯನ್ನೇ ಡಿಲೀಟ್ ಮಾಡಿ ಹೋಗಿದ್ದರು. ಆದರೂ ಸೋನಾಕ್ಷಿ ಈಗಲೂ ಕೂಡ ಟೀಕೆಗಳಿಂದ ಮುಕ್ತವಾಗಿಲ್ಲ. ಈ ನಡುವೆ ಸೋನಾಕ್ಷಿ ತಂದೆ ಶತ್ರುಘ್ನ ಸಿನ್ಹಾ, ಕರಣ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವುದು ಹೊಸ ಚರ್ಚೆ ಹುಟ್ಟುಹಾಕಿದೆ. ಮುಂದೆ ಓದಿ..

ಚಿತ್ರೋದ್ಯಮ ಯಾರೊಬ್ಬರ ಆಸ್ತಿಯಲ್ಲ
'ನಮ್ಮ ಕಾಲದಲ್ಲಿ ಕಾಫಿ ವಿತ್ ಅರ್ಜುನ್ ಶೋ ಇರಲಿಲ್ಲ' ಎಂದು ಅವರು ಕರಣ್ ಜೋಹರ್ ಕಾರ್ಯಕ್ರಮದ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ್ದಾರೆ. 'ಇಂತಹ ಪೂರ್ವನಿಯೋಜಿತ ಕಾರ್ಯಕ್ರಮಗಳು ವಿವಾದಗಳನ್ನು ಹುಟ್ಟುಹಾಕುತ್ತದೆ. ಈ ಸಂದರ್ಭದಲ್ಲಿ ಮಾತನಾಡುತ್ತಿರುವವರೆಲ್ಲರೂ ನಮ್ಮದೇ ಸಮಾಜದ ಸದಸ್ಯರು. ಆದರೆ ಯಾರಾದರೂ ಹೇಳುವಂತೆ ಸಿನಿಮಾ ಉದ್ಯಮ ಒಬ್ಬ ವ್ಯಕ್ತಿಗೆ ಸೇರಿದ್ದಲ್ಲ. ಈ ವ್ಯಕ್ತಿಯನ್ನು ಬಹಿಷ್ಕರಿಸೋಣ ಅಥವಾ ಈ ವ್ಯಕ್ತಿಯನ್ನು ಚಿತ್ರರಂಗದಿಂದ ಕಿತ್ತು ಹಾಕೋಣ ಎನ್ನಲಾಗದು ಎಂದು ಕರಣ್ ಮನೋಭಾವವನ್ನು ಅವರು ಪ್ರಶ್ನಿಸಿದ್ದಾರೆ.

ಹೀಗೆ ಹೇಳಲು ನೀವು ಯಾರು?
ಹೀಗೆ ಹೇಳಲು ನೀವು ಯಾರು? ನೀವು ಹೇಗೆ ಚಿತ್ರೋದ್ಯಮದ ಒಳಗೆ ಪ್ರವೇಶಿಸಿದಿರಿ? ನಿಮ್ಮ ಜೀವನದಲ್ಲಿ ಏನು ಸಾಧಿಸಿದ್ದೀರಿ? ಎಂದು ಶತ್ರುಘ್ನ ಸಿನ್ಹಾ ಕೇಳಿದ್ದಾರೆ. 'ಕಾಫಿ ವಿತ್ ಕರಣ್' ಕಾರ್ಯಕ್ರಮದ ಹೆಸರನ್ನು ನೇರವಾಗಿ ಉಲ್ಲೇಖಿಸದೆ ಇದ್ದರೂ ನಟ ಅರ್ಜುನ್ ಕಪೂರ್ ಅವರನ್ನು ಪ್ರತಿಬಾರಿಯೂ ಕರಣ್ ಜೋಹರ್ ಪ್ರಮೋಟ್ ಮಾಡುವ ಕೆಲಸ ಮಾಡುವುದಕ್ಕೆ ಪರೋಕ್ಷವಾಗಿ ತಿವಿದಿರುವುದು ಎನ್ನಲಾಗಿದೆ.

ಸುಶಾಂತ್ ಪ್ರಕರಣ ಸಿಬಿಐ ತನಿಖೆ
ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂಬ ಒತ್ತಾಯಕ್ಕೆ ಶತ್ರುಘ್ನ ಸಿನ್ಹಾ ಕೂಡ ದನಿಗೂಡಿಸಿದ್ದಾರೆ. ಬಿಹಾರದವರೇ ಆದ ಶತ್ರುಘ್ನ, ತಮ್ಮ ರಾಜ್ಯದ ನಟನ ಸಾವಿನ ಪ್ರಕರಣದ ಸೂಕ್ತ ತನಿಖೆಯಾಗಬೇಕು. ಸತ್ಯ ಹೊರಬರಬೇಕು ಎಂದು ಹೇಳಿದ್ದಾರೆ.

'ಶತ್ರುಘ್ನ ಸಿನ್ಹಾ ಅವಕಾಶವಾದಿ'
ಆದರೆ, ಶತ್ರುಘ್ನ ಸಿನ್ಹಾ ಹೇಳಿಕೆ ಕುರಿತು ನೆಟ್ಟಿಗರು ವಿವಿಧ ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. ಶತ್ರುಘ್ನ ಅವರ ಮಗಳೇ ಇಲ್ಲಿ ನೆಪೋಟಿಸಂನ ಲಾಭ ಪಡೆದಿರುವಾಗ ಶತ್ರುಘ್ನ ಕರಣ್ ಜೋಹರ್ ವಿರುದ್ಧ ಮಾತನಾಡಲು ಬೇರೆ ಯಾವುದೋ ಲಾಭ ಪಡೆಯುವ ಹುನ್ನಾರ ಇರಬೇಕು. ಅವರೊಬ್ಬ ಅವಕಾಶವಾದಿ. ಈ ಪರಿಸ್ಥಿತಿಯ ಪ್ರಯೋಜನ ಪಡೆದುಕೊಳ್ಳಲು ಅವರು ಮುಂದಾಗಿದ್ದಾರೆ ಎಂದೂ ಆರೋಪಿಸಲಾಗಿದೆ.


Click it and Unblock the Notifications











