ಅನಿರುದ್ಧಾಚಾರ್ಯ-ಪ್ರೇಮಾನಂದ ಮಹಾರಾಜ್ ವಿರುದ್ಧ ಟೀಕೆ; ನಟಿ ದಿಶಾ ಪಟಾನಿ ಮನೆ ಮೇಲೆ ಗುಂಡಿನ ದಾಳಿ
ಸಲ್ಮಾನ್ ಖಾನ್ ಬಳಿಕ ಬಾಲಿವುಡ್ ನಟಿ ದಿಶಾ ಪಟಾನಿ ನಿವಾಸ ಮೇಲೆ ದಾಳಿ ನಡೆದಿದೆ. ಉತ್ತರ ಪ್ರದೇಶದ ಬರೇಲಿಯಲ್ಲಿ ಇರುವ ನಟಿ ದಿಶಾ ಅವರ ನಿವಾಸದ ಮೇಲೆ ಗುಂಡಿನ ದಾಳಿ ಮಾಡಿದ್ದು, ಇದರ ಹೊಣೆಯನ್ನು ಗೋಲ್ಡಿ ಬ್ರಾರ್ ಮತ್ತು ರೋಹಿತ್ ಗೋದಾರಾ ಹೊತ್ತುಕೊಂಡಿದ್ದಾರೆ. ಶುಕ್ರವಾರ (ಸೆಪ್ಟೆಂಬರ್ 12) ನಸುಗಿನ ಜಾವ 4.30ರ ವೇಳೆ ಹಲವು ಬಾರಿ ಗುಂಡಿನ ದಾಳಿ ನಡೆದಿದ್ದು, ಪೊಲೀಸರು ಖಚಿತ ಪಡಿಸಿದ್ದಾರೆ.
ದಿಶಾ ಪಟಾನಿ ಕೆಲವು ದಿನಗಳ ಹಿಂದೆ ಅನಿರುದ್ಧಾಚಾರ್ಯ ಮಹಾರಾಜ್ ಮತ್ತು ಪ್ರೇಮಾನಂದ ಮಹಾರಾಜ್ ವಿರುದ್ಧ ಅವಮಾನವಾಗುವಂತೆ ಟೀಕೆ ಮಾಡಿದ್ದರಿಂದ ಈ ದಾಳಿ ನಡೆದಿದೆ. ಗೋಲ್ಡಿ ಬ್ರಾರ್ ಮತ್ತು ರೋಹಿತ್ ಗೋದಾರಾ ಫೇಸ್ಬುಕ್ನಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದು ದಾಳಿಯ ಹೊಣೆ ಹೊತ್ತುಕೊಂಡಿದ್ದಾರೆ.

ಬಾಲಿವುಡ್ ನಟಿ ದಿಶಾ ಪಟಾನಿ ಅವರ ಬರೇಲಿಯ ಮನೆಯಲ್ಲಿ ತಂದೆ-ತಾಯಿ ಹಾಗೂ ಸಹೋದರಿ ಖುಷ್ಬೂ ಪಟಾನಿ ವಾಸವಿದ್ದಾರೆ. ಶುಕ್ರವಾರ ಬೆಳಿಗ್ಗೆ 4.30 ರ ಸುಮಾರಿಗೆ ಗಾಳಿಯಲ್ಲಿ ಎರಡು ಸುತ್ತು ಗುಂಡಿನ ದಾಳಿ ನಡೆದ ಬಳಿಕ ಮನೆಯ ಮೇಲೂ ದಾಳಿ ಮಾಡಲಾಗಿದೆ. ಈ ದಾಳಿಯನ್ನು ತಾವೇ ಮಾಡಿರುವುದಾಗಿ ಗೋಲ್ಡಿ ಬ್ರಾರ್ ಮತ್ತು ರೋಹಿತ್ ಗೋದಾರಾ ಹೇಳಿದ್ದು, ಪೊಲೀಸರು ಫೇಸ್ಬುಕ್ ಖಾತೆ ಅಧಿಕೃತವೇ ಎಂದು ಪರಿಶೀಲಿಸುತ್ತಿದ್ದಾರೆಂದು ವರದಿಯಾಗಿದೆ.
ದಾಳಿ ಮಾಡಿದ್ದು ಯಾಕೆ?
ಗೋಲ್ಡಿ ಬ್ರಾರ್ ಮತ್ತು ರೋಹಿತ್ ಗೋದಾರಾ ಮಾಡಿದ ಪೋಸ್ಟ್ನಲ್ಲಿ, ಪ್ರೇಮಾನಂದ ಮಹಾರಾಜ್ ಮತ್ತು ಅನಿರುದ್ಧಾಚಾರ್ಯ ಮಹಾರಾಜರಿಗೆ ಅವಮಾನ ಮಾಡಿದ್ದೇ ಈ ದಾಳಿಗೆ ಕಾರಣ ಎಂದು ಹೇಳಲಾಗಿದೆ. ಈ ದಾಳಿಯ ಬಗ್ಗೆ ದಿಶಾ ಪಟಾನಿ, ಅವರ ಸಹೋದರಿ ಹಾಗೂ ಪೋಷಕರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಬರೇಲಿಯ ಪೊಲೀಸರು ದೂರನ್ನು ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.
ಕೆಲವು ದಿನಗಳ ಹಿಂದೆ ಅನಿರುದ್ಧಾಚಾರ್ಯ ಮಹಾರಾಜ್ ಹುಡುಗಿಯರ ಬಗ್ಗೆ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದರು. ಇಂದಿನ ಕಾಲದ ಹುಡುಗರು 25 ವರ್ಷದ ಹುಡುಗಿಯರನ್ನು ಮನೆಗೆ ಕರೆದುಕೊಂಡು ಬರುತ್ತಾರೆ. ಅವರು ನಾಲ್ಕೈದು ಕಡೆ ತಿರುಗಾಡಿ ಬಂದಿರುತ್ತಾರೆಂದು ಹೇಳಿಕೆ ನೀಡಿದ್ದರು. ಇದನ್ನು ಖಂಡಿಸಿ, ದಿಶಾ ಪಟಾನಿ ಸಹೋದರಿ ಖುಷ್ಬೂ ಪಟಾನಿ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಮಾಡಿ ಹಾಕಿದ್ದರು. ಈ ವಿಡಿಯೋದಲ್ಲಿ ಅನಿರುದ್ಧಾಚಾರ್ಯ ಮಹಾರಾಜ್ ದೇಶದ್ರೋಹಿ. ಅವರನ್ನು ಬೆಂಬಲಿಸುವವರು ನಪೂಂಸಕರು ಎಂದು ಜರಿದಿದ್ದರು.

ಈ ವೇಳೆ ಪ್ರೇಮಾನಂದ ಮಹಾರಾಜರ ಲಿವ್-ಇನ್ ರಿಲೇಷನ್ಶಿಪ್ ಬಗ್ಗೆ ಮಾತನಾಡಿದ ವಿಡಿಯೋ ವೈರಲ್ ಆಗಿತ್ತು. ಪ್ರೇಮಾನಂದ ಮಹಾರಾಜರ ಹೇಳಿಕೆಯನ್ನು ಖಂಡಿಸಿದ್ದರು. ಇದು ದೊಡ್ಡ ಮಟ್ಟಕ್ಕೆ ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. ಬಳಿಕ ಖುಷ್ಬೂ ತಮ್ಮ ಹೇಳಿಕೆ ಕೇವಲ ಅನಿರುದ್ಧಾಚಾರ್ಯ ಮಹಾರಾಜ್ ಅವರಿಗೆ ಸಂಬಂಧಿಸಿದ್ದಾಗಿದ್ದು, ಪ್ರೇಮಾನಂದ ಮಹಾರಾಜರಿಗೆ ಸಂಬಂಧವಿಲ್ಲ ಎಂದಿದ್ದರು. ಅಷ್ಟರಲ್ಲಾಗಿ ಇದು ಪ್ರೇಮಾನಂದ ಮಹಾರಾಜ್ ಅವರ ಅನುಯಾಯಿಗಳನ್ನು ಕೆರಳಿಸಿತ್ತು.
ಗುಂಡು ಹಾರಿಸಿದವರು ಯಾರು?
ಇನ್ನು ದಿಶಾ ಪಟಾನಿ ಮನೆ ಮುಂದೆ ಗುಂಡು ಹಾರಿಸಿದವರು ಯಾರೆಂದು ತಿಳಿದು ಬಂದಿಲ್ಲ. ಆದರೆ, ಇಬ್ಬರು ಬೈಕ್ನಲ್ಲಿ ದೆಹಲಿ ಹೈವೇ ಮೂಲಕ ಬಂದು ಏಳು ಸುತ್ತು ಗುಂಡು ಹಾರಿಸಿ, ಅದೇ ಏಳು ನಿಮಿಷಗಳಲ್ಲಿ ಅಲ್ಲಿಂದ ಪರಾರಿಯಾಗಿದ್ದಾರೆಂದು ವರದಿಯಾಗಿವೆ. ದಿಶಾ ಪಟಾನಿ ಮನೆಯಿಂದ ದೆಹಲಿ ಹೈವೇ ವರೆಗೆ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಆದರೆ, ಫೇಸ್ ಬುಕ್ ಪೋಸ್ಟ್ನಲ್ಲಿ ವೀರೇಂದ್ರ ಚರಣ್ ಮತ್ತು ಮಹೇಂದ್ರ ಸರಣ್ ಹೆಸರುಗಳು ಉಲ್ಲೇಖವಾಗಿವೆ. "ನಾವು ವಿರೇಂದ್ರ ಚರಣ್ ಹಾಗೂ ಮಹೇಂದ್ರ ಸರಣ್. ಸಹೋದರೇ ಇಂದು ಖುಷ್ಬೂ ಪಟಾನಿ/ ದಿಶಾ ಪಟಾನಿ (ಬಾಲಿವುಡ್ ನಟಿ) ಮನೆಯ ಮೇಲೆ ದಾಳಿ ಮಾಡಿದ್ದು ನಾವೇ. ಅವರು ನಮ್ಮ ಗುರುಗಳಿಗೆ (ಅನಿರುದ್ಧಾಚಾರ್ಯ ಮಹಾರಾಜ್ ಮತ್ತು ಪ್ರೇಮಾನಂದ ಮಹಾರಾಜ್) ಅವಮಾನ ಮಾಡಿದ್ದಾರೆ. ಅವರು ನಮ್ಮ ಸಮಾತನ ಧರ್ಮವನ್ನು ಕೆಳಮಟ್ಟಕ್ಕೆ ತರುವುದಕ್ಕೆ ಯತ್ನಿಸಿದ್ದಾರೆ. ಇದನ್ನು ತಡೆದುಕೊಳ್ಳುವುದಕ್ಕೆ ಆಗುವುದಿಲ್ಲ. ಇದು ಕೇವಲ ಟ್ರೈಲರ್ ಅಷ್ಟೇ. ಮುಂದೆ ಆಕೆಯಾಗಲಿ ಅಥವಾ ಯಾರೇ ಆಗಿರಲಿ ನಮ್ಮ ಧರ್ಮದ ಬಗ್ಗೆ ಅಗೌರವ ತೋರಿದರೆ, ಅವರ ಮನೆಯಲ್ಲಿ ಯಾರೂ ಉಳಿದಿರುವುದಿಲ್ಲ." ಎಂದು ಪೋಸ್ಟ್ನಲ್ಲಿ ಬರೆಯಲಾಗಿದೆ.


Click it and Unblock the Notifications











