ಹೌದು, ಅಪ್ಪನಿಂದಾಗಿಯೇ ನಾನಿಲ್ಲಿದ್ದೇನೆ ಏನಿವಾಗ?: ನೆಪೋಟಿಸಂ ಟೀಕೆಗೆ ಸೋನಂ ಕಪೂರ್ ಗರಂ
ಬಾಲಿವುಡ್ನಲ್ಲಿ ಅತಿ ಹೆಚ್ಚು ಚರ್ಚೆಗೆ ಒಳಗಾಗುತ್ತಿರುವ ವಸ್ತು ಸಿನಿಮಾ ಅಲ್ಲ. ಅದು ಪ್ರತಿಭಾನ್ವಿತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವು ಮತ್ತು ಸ್ವಜನಪಕ್ಷಪಾತದ ಹಾವಳಿ. ಸುಶಾಂತ್ ಸಿಂಗ್ ಸಾವಿಗೆ ಈ ಸ್ವಜನಪಕ್ಷಪಾತಿ ಕುಟುಂಬಗಳೇ ಕಾರಣ ಎನ್ನುವ ಆರೋಪ ತೀವ್ರವಾಗಿದೆ.
ಚಿತ್ರರಂಗದಲ್ಲಿ ಬೇರೂರಿ ಪ್ರಭಾವಿಗಳಾದ ಕೆಲವು ಮನೆತನಗಳಿಂದ ಬಂದವರಿಗೆ ಚಿತ್ರರಂಗದಲ್ಲಿ ಸಲೀಸಾಗಿ ಒಳ್ಳೆಯ ಸಿನಿಮಾಗಳು ಸಿಗುತ್ತವೆ. ಹಾಗೆಯೇ ಅವರು ಸ್ಟಾರ್ಗಳಾಗಿ ಬೆಳೆಯುತ್ತಾರೆ. ಆದರೆ ಈ ಅವಕಾಶ ಹೊರಗಿನಿಂದ ಬಂದವರಿಗೆ ಸಿಗುವುದಿಲ್ಲ. ಹಾಗೆ ಬಂದವರು ಈ ಕುಟುಂಬಗಳನ್ನು ಓಲೈಸಿಕೊಂಡಿದ್ದರೆ ಮಾತ್ರ ಬೆಳೆಯಲು ಸಾಧ್ಯ ಎನ್ನುವುದು ಜನರ ಆರೋಪ. ಈ ಆರೋಪಕ್ಕೆ ಸಂಬಂಧಿಸಿದಂತೆ ಟೀಕೆಗೆ ಒಳಗಾದ 'ಸ್ಟಾರ್ ಕಿಡ್'ಗಳಲ್ಲಿ ಅನಿಲ್ ಕಪೂರ್ ಮಗಳು, ನಟಿ ಸೋನಂ ಕಪೂರ್ ಒಬ್ಬರು. ಮುಂದೆ ಓದಿ...

ಹೌದು, ಅಪ್ಪನ ಕಾರಣದಿಂದಾಗಿ ಇದೆಲ್ಲ...
ಅಪ್ಪಂದಿರ ದಿನದ ಸಂದರ್ಭದಲ್ಲಿ ನಟಿ ಸೋನಂ ಕಪೂರ್ ಹಾಕಿರುವ ಪೋಸ್ಟ್ ಮತ್ತೊಂದು ಚರ್ಚೆ ಹುಟ್ಟುಹಾಕಿದೆ. 'ಫಾದರ್ಸ್ ಡೇ ಸಂದರ್ಭವಾದ ಇಂದು ಒಂದು ಮಾತು ಹೇಳಲು ಬಯಸುತ್ತೇನೆ, ಹೌದು ನಾನು ನನ್ನ ಅಪ್ಪನ ಮಗಳು. ನಾನು ಅಪ್ಪನ ಕಾರಣಕ್ಕಾಗಿಯೇ ಇಲ್ಲಿದ್ದೇನೆ. ಹೌದು ನನಗೆ ಈ ಸವಲತ್ತುಗಳು ಸಿಕ್ಕಿವೆ' ಎಂದು ಸೋನಮ್ ತೀಕ್ಷ್ಣವಾಗಿ ಹೇಳಿದ್ದಾರೆ.

ಅವರ ಮಗಳಾಗಿದ್ದಕ್ಕೆ ಹೆಮ್ಮೆ
'ಹೀಗೆ ಹೇಳಿಕೊಳ್ಳುವುದು ಅವಮಾನಕಾರಿಯೇನಲ್ಲ. ನನಗೆ ಇವುಗಳನ್ನೆಲ್ಲಾ ನೀಡಲು ನನ್ನ ತಂದೆ ಬಹಳ ಕಷ್ಟಪಟ್ಟು ಕೆಲಸ ಮಾಡಿದ್ದಾರೆ. ನಾನು ಎಲ್ಲಿ ಹುಟ್ಟಿದ್ದೇನೆಯೋ ಮತ್ತು ಯಾರಿಗೆ ಹುಟ್ಟಿದ್ದೇನೆಯೋ ಅದು ನನ್ನ ಕರ್ಮ. ನಾನು ಅವರ ಮಗಳಾಗಿರುವುದಕ್ಕೆ ಹೆಮ್ಮೆ ಪಡುತ್ತೇನೆ' ಎಂದಿದ್ದಾರೆ.

ಕರ್ಮಕ್ಕೆ ತಕ್ಕಂತೆ ಹುಟ್ಟಿದ್ದೇವೆ
'ಕರ್ಮ ಅತಿ ದೊಡ್ಡ ಸಮಕಾರಕ. ನಮ್ಮ ನಮ್ಮ ಕರ್ಮಗಳಿಂದಾಗಿ ನಾವಿಲ್ಲಿ ಇದ್ದೇವೆ. ನಮ್ಮ ಕರ್ಮಗಳಿಗೆ ಅನುಗುಣವಾಗಿ ನಾವು ಹುಟ್ಟಿದ್ದೇವೆ ಮತ್ತು ಸನ್ನಿವೇಶಗಳನ್ನು ಎದುರಿಸುತ್ತಿದ್ದೇವೆ. ಯಾರೆಲ್ಲ ದ್ವೇಷ ಕಾರುತ್ತಿದ್ದೀರೋ ಅದು ನಿಮ್ಮ ಕರ್ಮ. ನಿಮಗೆಲ್ಲರಿಗೂ ನನ್ನ ಪ್ರಾರ್ಥನೆಯಿದೆ' ಎಂದಿದ್ದಾರೆ.

ನಿಮಗೆ ಧರ್ಮದ ಬಗ್ಗೆ ಗೊತ್ತಿಲ್ಲ
'ನಾನು ಎಲ್ಲಿದ್ದೇನೆಯೋ ಮತ್ತು ಯಾರಿಗೆ ಜನಿಸಿದ್ದೇನೆಯೋ ಅದಕ್ಕಾಗಿ ಪ್ರತಿದಿನ ದೇವರಿಗೆ ಧನ್ಯವಾದ ಹೇಳುತ್ತೇನೆ. ಹಿಂದೂ ತತ್ವಶಾಸ್ತ್ರ ಮತ್ತು ಧರ್ಮದ ಕುರಿತು ನಿಮಗೆ ನಿಜವಾಗಿಯೂ ತಿಳಿದಿದ್ದರೆ ನೀವು ಇಷ್ಟು ಮೂರ್ಖರಾಗಿರುವುದಿಲ್ಲ. ಹೀಗೆ ನೀವು ನಿಮ್ಮತನ ಹಾಗೂ ಜೀವನದ ಗುಣಮಟ್ಟವನ್ನು ಹಾಳುಮಾಡಿಕೊಳ್ಳುತ್ತಿದ್ದೀರಿ' ಎಂದು ಸೋನಂ ವಾಗ್ದಾಳಿ ನಡೆಸಿದ್ದಾರೆ.

ಇನ್ನೂ ಕೆಟ್ಟದಾಗಿ ವರ್ತಿಸುತ್ತಿದ್ದಾರೆ
ಇದಕ್ಕೂ ಮುನ್ನ ತಮ್ಮ ವಾಲ್ನಲ್ಲಿ ವ್ಯಕ್ತವಾದ ಟೀಕೆ ಮತ್ತು ನಿಂದನೆಗಳ ಸ್ಕ್ರೀನ್ ಶಾಟ್ ಹಂಚಿಕೊಂಡಿರುವ ಅವರು, 'ನನ್ನ ವಿರುದ್ಧ ಬರುತ್ತಿರುವ ಕಾಮೆಂಟ್ಗಳಲ್ಲಿ ಕೆಲವೊಂದು ಇಲ್ಲಿವೆ. ಈ ರೀತಿಯ ವರ್ತನೆಯನ್ನು ಬೆಂಬಲಿಸಿದ ಮತ್ತು ಪ್ರಚೋದಿಸಿದ ಎಲ್ಲ ಬಗೆಯ ಮಾಧ್ಯಮಗಳು ಹಾಗೂ ಜನರಿಂದ ಬರುತ್ತಿರುವುದು ಇದು. ಬೇರೆಯವರ ಬಗ್ಗೆ ಹೇಗೆ ಕರುಣೆ ಹೊಂದಿರಬೇಕು ಎಂದು ಮಾತನಾಡುವ ಜನರು ಬೇರೆಯವರಿಗೆ ಅದಕ್ಕಿಂತಲೂ ಕೆಟ್ಟದನ್ನು ಮಾಡುತ್ತಿದ್ದಾರೆ' ಎಂದು ಕಿಡಿಕಾರಿದ್ದಾರೆ.


Click it and Unblock the Notifications











