ಕೇರಳದಿಂದ 177 ಯುವತಿಯರನ್ನು ರಕ್ಷಿಸಲು ನೆರವಾದ ನಟ ಸೋನು ಸೂದ್
ನಟ ಸೋನು ಸೂದ್ ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ಖಳನಾಯಕನಾಗಿ ಪರಿಚಿತರಾದವರು. ಆದರೆ ನಿಜ ಜೀವನದಲ್ಲಿ ಅವರು ಹೀರೋ ಆಗಿ ಮೆರೆಯುತ್ತಿದ್ದಾರೆ. ವಿವಿಧ ರಾಜ್ಯಗಳಲ್ಲಿ, ಮೂಲೆಗಳಲ್ಲಿ ಸಿಲುಕಿರುವ ಜನಸಾಮಾನ್ಯರನ್ನು ಅವರ ಊರುಗಳಿಗೆ ಕಳುಹಿಸಲು ನೆರವಾಗುವ ಮೂಲಕ ವ್ಯಾಪಕ ಮೆಚ್ಚುಗೆ ಪಡೆಯುತ್ತಿದ್ದಾರೆ.
ಈ ನಡುವೆ ಸೋನು, 177 ಮಂದಿ ಯುವತಿಯರನ್ನು ಅವರ ತವರು ರಾಜ್ಯ ಒಡಿಶಾಕ್ಕೆ ಕಳುಹಿಸಲು ಸಹಾಯ ಮಾಡಿದ್ದಾರೆ. ಲಾಕ್ ಡೌನ್ ಶುರುವಾದಾಗಿನಿಂದ ಈ ಯುವತಿಯರು ಕೇರಳದಲ್ಲಿ ಸಿಲುಕಿಕೊಂಡಿದ್ದರು. ಅಲ್ಲಿಂದ ಅವರನ್ನು ವೈಮಾನಿಕ ಮಾರ್ಗದ ಮೂಲಕ ಒಡಿಶಾಕ್ಕೆ ರವಾನಿಸಲಾಗಿದೆ. ಮುಂದೆ ಓದಿ...

ಯುವತಿಯರ ರಕ್ಷಣೆ
ಭುವನೇಶ್ವರದಲ್ಲಿರುವ ಸ್ನೇಹಿತರೊಬ್ಬರ ಮೂಲಕ ಸೋನು ಸೂದ್ ಈ ಯುವತಿಯರ ಕುರಿತು ತಿಳಿದುಕೊಂಡಿದ್ದರು. ಕೂಡಲೇ ಅವರಿಗೆ ನೆರವು ನೀಡಲು ಮುಂದಾಗಿದ್ದರು. ವಿಮಾನ ನಿಲ್ದಾಣಗಳನ್ನು ತೆರೆಯಲು ಕೇರಳ ಮತ್ತು ಒಡಿಶಾ ಸರ್ಕಾರಗಳಿಂದ ಅನೇಕ ಅನುಮತಿಗಳನ್ನು ಪಡೆದುಕೊಂಡ ಬಳಿಕ ಅವರು ಯುವತಿಯರ ರಕ್ಷಣೆ ಮಾಡಿದ್ದಾರೆ.

ಸರ್ಕಾರದಿಂದ ಅನುಮತಿ
ಕೇರಳದ ಕೊಚ್ಚಿ ಮತ್ತು ಒಡಿಶಾದ ಭುವನೇಶ್ವರ ವಿಮಾನ ನಿಲ್ದಾಣಗಳನ್ನು ತೆರೆಯುವಂತೆ ಅವರು ಆಯಾ ಸರ್ಕಾರಗಳಿಗೆ ಮನವಿ ಮಾಡಿ ಅನೇಕ ಬಗೆಯ ಅನುಮತಿಗಳನ್ನು ಪಡೆದುಕೊಂಡಿದ್ದಾರೆ. ಬಳಿಕ ಬೆಂಗಳೂರಿನಿಂದ ಕೊಚ್ಚಿಗೆ ವಿಶೇಷ ವಿಮಾನ ರವಾನಿಸಲು ವ್ಯವಸ್ಥೆ ಮಾಡಿದ್ದಾರೆ. ಈ ವಿಮಾನದ ಮೂಲಕ 177 ಯುವತಿಯರನ್ನು ಒಡಿಶಾಕ್ಕೆ ಕಳುಹಿಸಿ ಅವರ ಕುಟುಂಬವನ್ನು ಸೇರಲು ನೆರವಾಗಿದ್ದಾರೆ.

ಮಗುವಿಗೆ ಸೋನು ಸೂದ್ ಹೆಸರು
ಸೋನು ಸೂದ್ ಹೀಗೆ ಸಾವಿರಾರು ಮಂದಿಗೆ ನೆರವಾಗಿದ್ದಾರೆ. ವಲಸಿಗರಾಗಿ ನಗರಕ್ಕೆ ಬಂದಿದ್ದ ಗರ್ಭಿಣಿಯೊಬ್ಬರು ಅವರ ಹಳ್ಳಿ ತಲುಪಲು ಸೋನು ಸೂದ್ ಎರಡು ವಾರಗಳ ಹಿಂದೆ ವ್ಯವಸ್ಥೆ ಮಾಡಿದ್ದರು. ಈಗ ಆ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದು, ಮಗುವಿಗೆ ಸೋನು ಸೂದ್ ಎಂದೇ ಹೆಸರು ಇಟ್ಟಿದ್ದಾರೆ. ಆ ಕುಟುಂಬದ ಸರ್ ನೇಮ್ ಶ್ರೀವಾಸ್ತವ್ ಎಂದಿದ್ದು, ಮಗುವಿಗೆ ಸೋನು ಸೂದ್ ಶ್ರೀವಾಸ್ತವ್ ಎಂದು ನಾಮಕರಣ ಮಾಡಿದ್ದಾರೆ ಎಂಬ ಸಂಗತಿಯನ್ನು ಸ್ವತಃ ಸೋನು ಖುಷಿಯಿಂದ ಹೇಳಿಕೊಂಡಿದ್ದಾರೆ.

ವಲಸಿಗರಿಗೆ ಬಸ್ ವ್ಯವಸ್ಥೆ
ಕೆಲವು ವಾರಗಳ ಹಿಂದೆ ಮುಂಬೈನ ಹೈವೇಯಲ್ಲಿ ಸಿಲುಕಿದ್ದ ಕರ್ನಾಟಕ ಎಂಟು ಮಂದಿ ವಲಸಿಗರನ್ನು ಊರು ತಲುಪಿಸಲು ಸಹಾಯ ಮಾಡಿದ್ದರು. ನಂತರ ನಿರಂತರವಾಗಿ ಅವರು ವಿವಿಧ ಕಡೆಗಳಿಂದ ಮಾಹಿತಿ ಪಡೆದ ವಲಸಿಗರನ್ನು ಪತ್ತೆಹಚ್ಚಿ ಅವರು ತಮ್ಮ ಸ್ವಂತ ಊರು ಸೇರಲು ಬಸ್ ವ್ಯವಸ್ಥೆ ಕಲ್ಪಿಸುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ.


Click it and Unblock the Notifications











