ಮುಂಬೈ ಪೊಲೀಸ್ Vs ಬಿಹಾರ ಪೊಲೀಸ್: ಸುಶಾಂತ್ ಸಾವಿನ ಹಿಂದೆ ಏನೆಲ್ಲಾ ಆಗುತ್ತಿದೆ?
ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸರು ಪ್ರಕರಣವನ್ನು ಮುಚ್ಚಿಹಾಕಲು ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದ್ದಾರೆ ಎಂಬ ಆರೋಪ ಆರಂಭದಿಂದಲೂ ಕೇಳಿಬಂದಿತ್ತು. ಈಗ ಅವರ ನಡೆಗಳು ಆರೋಪಕ್ಕೆ ಮತ್ತಷ್ಟು ಬಲ ನೀಡಿವೆ. ಮುಂಬೈ ಪೊಲೀಸರು ತಮಗೆ ಸಹಕಾರ ನೀಡುತ್ತಿಲ್ಲ ಎಂದು ಬಿಹಾರ ಪೊಲೀಸರು ಆರೋಪಿಸಿದ್ದಾರೆ. ಸುಶಾಂತ್ ಅವರದ್ದು ಆತ್ಮಹತ್ಯೆಯೇ ಆಗಿದ್ದರೆ ಬಿಹಾರ ಪೊಲೀಸರ ತನಿಖೆಗೆ ಮುಂಬೈ ಪೊಲೀಸರು ಅಡ್ಡಿಪಡಿಸುವ ಪ್ರಯತ್ನ ಏಕೆ ಮಾಡುತ್ತಿದ್ದರು? ಇದರ ಹಿಂದೆ ಇರುವ ಅನುಮಾನಗಳು ಸತ್ಯ, ಈ ಕಾರಣಕ್ಕಾಗಿಯೇ ಮುಂಬೈ ಪೊಲೀಸರು ತನಿಖೆಯ ಹಾದಿ ತಪ್ಪಿಸುವ ಕೆಲಸ ಮಾಡಿ ಅಪರಾಧಿಗಳನ್ನು ರಕ್ಷಿಸುತ್ತಿದ್ದಾರೆ ಎನ್ನಲಾಗಿದೆ.
ಮುಂಬೈನಲ್ಲಿ ಎರಡು ಮೂರು ದಿನಗಳಿಂದ ನಾಟಕೀಯ ಬೆಳವಣಿಗೆಗಳು ನಡೆದಿವೆ. ಮುಂಬೈ ಪೊಲೀಸರು ಸುಶಾಂತ್ಗೆ ಆಪ್ತರಾಗಿದ್ದ ಅನೇಕರಿಂದ ಹೇಳಿಕೆಗಳನ್ನೇ ಪಡೆದಿಲ್ಲ. ಘಟನೆ ನಡೆದು ಎರಡು ತಿಂಗಳಾಗುತ್ತಾ ಬಂದಿದ್ದರೂ ಎಫ್ಐಆರ್ ದಾಖಲಿಸಿಲ್ಲ. ಹೇಳಿಕೆ ದಾಖಲು ಹೊರತಾಗಿ ಬೇರೆ ಯಾವುದೇ ಬೆಳವಣಿಗೆ ತನಿಖೆಯಲ್ಲಿ ಆಗಿಲ್ಲ. ಇತ್ತ ಸರ್ಕಾರದ ಸಚಿವರು ಇದು ಅತ್ಮಹತ್ಯೆ. ಸಿಬಿಐ ತನಿಖೆಗೆ ಯಾವ ಕಾರಣಕ್ಕೂ ಒಪ್ಪಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಮುಂದೆ ಓದಿ.

ಮುಂಬೈನಲ್ಲಿ ಪೊಲೀಸರ ತಂಡ
ಬಿಹಾರ ಪೊಲೀಸರ ತಂಡವೊಂದು ಈಗಾಗಲೇ ಮುಂಬೈಗೆ ತೆರಳಿ ಅಂಕಿತಾ ಲೋಖಂಡೆ, ಸುಶಾಂತ್ ಅವರ ಮನೆಯಲ್ಲಿ ಕೆಲಸ ಮಾಡಿದ್ದವರು ಸೇರಿದಂತೆ ಹಲವರಿಂದ ಹೇಳಿಕೆಗಳನ್ನು ದಾಖಲಿಸಿದೆ. ಸುಶಾಂತ್ ಅವರ ಬ್ಯಾಂಕ್ ಖಾತೆಗಳ ವ್ಯವಹಾರಗಳನ್ನು ಪರಿಶೀಲಿಸಿದೆ. ಈ ತನಿಖೆಯ ನೇತೃತ್ವ ವಹಿಸಿರುವ ಬಿಹಾರದ ಐಪಿಎಸ್ ಅಧಿಕಾರಿ ಭಾನುವಾರ ಮುಂಬೈಗೆ ತೆರಳಿದ್ದಾಗ ಅಲ್ಲಿನ ಅಧಿಕಾರಿಗಳು ಅವರನ್ನು ಬಲವಂತವಾಗಿ ಕ್ವಾರೆಂಟೈನ್ ಮಾಡಿರುವುದು ಮತ್ತಷ್ಟು ಅನುಮಾನ ಮೂಡಿಸಿದೆ.

ಐಪಿಎಸ್ ಅಧಿಕಾರಿ ಕ್ವಾರೆಂಟೈನ್
ಮುಂಬೈನ ಸ್ಥಳೀಯ ಪಾಲಿಕೆ ಅಧಿಕಾರಿಗಳು ಪಟ್ನಾ ಪೊಲೀಸ್ ತಂಡದ ಮುಖ್ಯಸ್ಥ ವಿನಯ್ ತಿವಾರಿ ಅವರನ್ನು ರಾತ್ರಿ 11 ಗಂಟೆ ಸುಮಾರಿಗೆ ಬಲವಂತವಾಗಿ ಕ್ವಾರೆಂಟೈನ್ ಮಾಡಿದ್ದಾರೆ. ಪ್ರಕರಣವೊಂದರ ತನಿಖೆಗೆ ತೆರಳಿದ್ದ ಪೊಲೀಸ್ ಅಧಿಕಾರಿಯ ಮೇಲೆ ಮುಂಬೈ ಅಧಿಕಾರಿಗಳು ದೌರ್ಜನ್ಯ ಎಸಗಿದ್ದಾರೆ. ಅವರ ಕೈಗೆ ಕ್ವಾರೆಂಟೈನ್ ಸೀಲ್ ಹಾಕಲಾಗಿದೆ.

ಸೌಲಭ್ಯ ಕೂಡ ನೀಡಿಲ್ಲ
ಪ್ರಕರಣದ ತನಿಖೆಗೆ ಬಂದಿರುವ ಅಧಿಕಾರಿ ಎಂದು ಹೇಳಿದರೂ ಮುಂಬೈ ಪಾಲಿಕೆ ಅಧಿಕಾರಿಗಳು ವಿನಾಯಿತಿ ತೋರಿಸಿಲ್ಲ. ಕಡೇ ಪಕ್ಷ ಐಪಿಎಸ್ ಮೆಸ್ನಲ್ಲಿ ಉಳಿದುಕೊಳ್ಳಲು ಅವಕಾಶ ನೀಡಿ ಎಂಬ ಮನವಿಗೂ ಕಿವಿಗೊಟ್ಟಿಲ್ಲ. ಗೊರೆಗಾಂವ್ನ ಅತಿಥಿ ಗೃಹದಲ್ಲಿ ಅವರನ್ನು ಇರಿಸಲಾಗಿದೆ ಎಂದು ಬಿಹಾರ ಪೊಲೀಸ್ ಮಹಾ ನಿರ್ದೇಶಕ ಗುಪ್ತೇಶ್ವರ ಪಾಂಡೆ ತಿಳಿಸಿದ್ದಾರೆ.

ದಿಶಾ ಪ್ರಕರಣದ ಫೈಲ್ ಡಿಲೀಟ್!
ಸುಶಾಂತ್ ಸಾವಿಗೂ ಮುನ್ನ ಕೆಲವು ದಿನಗಳ ಹಿಂದೆ ನಡೆದಿದ್ದ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಆತ್ಮಹತ್ಯೆ ಪ್ರಕರಣಕ್ಕೂ ಸಂಬಂಧವಿದೆ ಎಂಬ ಆರೋಪವಿದೆ. ಈ ನಿಟ್ಟಿನಲ್ಲಿಯೂ ಬಿಹಾರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮಲ್ವಾನಿ ಪೊಲೀಸ್ ಠಾಣೆಯ ಅಧಿಕಾರಿಗಳನ್ನು ಸಂಪರ್ಕಿಸಿದ್ದ ಬಿಹಾರ ಪೊಲೀಸರಿಗೆ ನಿರಾಶೆ ಉಂಟಾಗಿದೆ. ದಿಶಾ ಸಾವಿನ ಪ್ರಕರಣದ ವಿವರಗಳನ್ನು ಹೊಂದಿದ್ದ ಫೋಲ್ಡರ್ ಪ್ರಮಾದವಶಾತ್ ಡಿಲೀಟ್ ಆಗಿದೆ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ.

ಪೋಸ್ಟ್ ಮಾರ್ಟಂ ವರದಿ ಕೂಡ ಸಿಕ್ಕಿಲ್ಲ
ಡಿಲೀಟ್ ಅಗಿರುವ ಫೋಲ್ಡರ್ ಅನ್ನು ಮರಳಿ ಪಡೆದುಕೊಳ್ಳಲು ಸಹಾಯ ಮಾಡುವುದಾಗಿ ಬಿಹಾರ ಪೊಲೀಸರು ಹೇಳಿದಾಗ ಆ ಕಂಪ್ಯೂಟರ್ ಅನ್ನು ಅವರ ವಶಕ್ಕೆ ನೀಡಲು ಮುಂಬೈ ಪೊಲೀಸರು ನಿರಾಕರಿಸಿದ್ದಾರೆ. ಅಲ್ಲದೆ, ದಿಶಾ ಹಾಗೂ ಸುಶಾಂತ್ ಸಿಂಗ್ ಅವರ ಮರಣೋತ್ತರ ಪರೀಕ್ಷೆಯ ವರದಿಗಳನ್ನು ಬಿಹಾರ ಪೊಲೀಸರಿಗೆ ನೀಡಲು ಮುಂಬೈ ಪೊಲೀಸರು ನಿರಾಕರಿಸಿದ್ದಾರೆ. ಆಸ್ಪತ್ರೆಗಳೂ ವರದಿ ನೀಡಿಲ್ಲ.

ವಿರೋಧಾಭಾಸದ ಹೇಳಿಕೆಗಳು
ಈ ಪ್ರಕರಣದಲ್ಲಿ ರಿಯಾ ಚಕ್ರವರ್ತಿ, ಸಂದೀಪ್ ಸಿಂಗ್ ಮತ್ತು ಸಿದ್ಧಾರ್ಥ್ ಪಿಟಾನಿ ವಿರುದ್ಧದ ಅನುಮಾನಗಳು ಹೆಚ್ಚಾಗುತ್ತಿವೆ. ಮೂವರ ಹೇಳಿಕೆಗಳಿಗೂ ತಾಳೆಯಾಗುತ್ತಿಲ್ಲ. ಮಾಧ್ಯಮದೊಂದಿಗೆ ಮಾತನಾಡಿರುವ ಸುಶಾಂತ್ ಫ್ಲಾಟ್ಮೇಟ್ ಸಿದ್ಧಾರ್ಥ್ ವಿರೋಧಾಭಾಸದ ಹೇಳಿಕೆಗಳು ಸಂದೇಹ ಹೆಚ್ಚುವಂತೆ ಮಾಡಿದೆ. ಸುಶಾಂತ್ ಮೃತದೇಹ ಕೊಂಡೊಯ್ಯಲು ಎರಡು ಆಂಬುಲೆನ್ಸ್ಗಳು ಬಂದಿದ್ದು ವಿಡಿಯೋದಲ್ಲಿ ದಾಖಲಾಗಿತ್ತು. ಆದರೆ ಒಂದೇ ಆಂಬುಲೆನ್ಸ್ ಬಂದಿದ್ದು ಎಂದು ಸಿದ್ಧಾರ್ಥ್ ಹೇಳಿದ್ದಾರೆ.

ಫ್ಯಾನ್-ಮಂಚದ ಅಂತರ
ಆಂಬುಲೆನ್ಸ್ ಚಾಲಕನಿಗೆ ಸಮೀಪದಲ್ಲಿರುವ ನಾನಾವತಿ ಆಸ್ಪತ್ರೆಗೆ ಹೋಗುವಂತೆ ಅಲ್ಲಿಯವರು ಹೇಳಿದ್ದರು. ಆದರೆ ದೂರದಲ್ಲಿರುವ ಕೂಪರ್ ಆಸ್ಪತ್ರೆಗೆ ಮೃತದೇಹ ಸಾಗಿಸಲಾಗಿತ್ತು. ಸುಶಾಂತ್ ಕೊಠಡಿಯ ಬಾಗಿಲು ಒಡೆದು ಅವರು ಆತ್ಮಹತ್ಯೆಗೆ ಬಳಸಿದ್ದ ದುಪ್ಪಟ್ಟ ಕತ್ತರಿಸಿದ್ದಾಗಿ ಸಿದ್ಧಾರ್ಥ್ ಹೇಳಿದ್ದಾರೆ. ಆದರೆ ಫ್ಯಾನ್ ಹಾಗೂ ಮಂಚಕ್ಕೆ ಹೆಚ್ಚು ಎತ್ತರವಿಲ್ಲ. ಸುಶಾಂತ್ ಮಂಚದ ಮೇಲೆ ನಿಂತರೆ ಸುಶಾಂತ್ ಕೈಗೆ ಫ್ಯಾನ್ ಸುಲಭವಾಗಿ ಎಟುಕುವಂತಿದೆ. ಇಲ್ಲಿ ಅವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಮೂಡಿದೆ.

ಸಂದೀಪ್ ಸಿಂಗ್ ವಿರುದ್ಧವೂ ಅನುಮಾನ
ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ತಮಗೆ ಕರೆ ಬಂದಿತ್ತು. ಕೂಡಲೇ ಮತ್ತೊಬ್ಬ ಸ್ನೇಹಿತ ಮಹೇಶ್ ಶೆಟ್ಟಿ ಜತೆಗೆ ಅಲ್ಲಿಗೆ ತೆರಳಿದ್ದಾಗಿ ಸಂದೀಪ್ ಸಿಂಗ್ ಹೇಳಿದ್ದಾರೆ. ಅವರಿಗೆ ಕೊಠಡಿಯವರೆಗೂ ಪ್ರವೇಶಕ್ಕೆ ಅವಕಾಶ ನೀಡಲಾಗಿತ್ತು. ಅಪರಾಧ ನಡೆದ ಸ್ಥಳದಲ್ಲಿ ಹೊರಗಿನಿಂದ ಬಂದ ವ್ಯಕ್ತಿಗೆ ಹೇಗೆ ಪ್ರವೇಶ ನೀಡಲಾಯಿತು ಎಂಬ ಅನುಮಾನ ವ್ಯಕ್ತವಾಗಿದೆ. ಅಲ್ಲದೆ, ಘಟನೆ ನಡೆದ ದಿನದಿಂದಲೂ ಸಂದೀಪ್ ನಿರಂತರ ಹೇಳಿಕೆಗಳನ್ನು ನೀಡುತ್ತಿದ್ದರು.

ಆದಿತ್ಯ ಠಾಕ್ರೆ ವಿರುದ್ಧ ಆಕ್ರೋಶ
ಬಿಹಾರ ಪೊಲೀಸರ ತನಿಖೆಗೆ ಅಡ್ಡಿಪಡಿಸುತ್ತಿರುವ ಮುಂಬೈ ಪೊಲೀಸರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಪ್ರಕರಣದಲ್ಲಿ ಮುಂಬೈ ಪೊಲೀಸರು ಪ್ರಾಮಾಣಿಕರಾಗಿದ್ದರೆ ಸುಶಾಂತ್ಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಅವರೇ ನೀಡಬಹುದಾಗಿತ್ತು. ಆದರೆ ಅವರು ಈ ರೀತಿ ಅಡ್ಡಿಪಡಿಸುತ್ತಿರುವುದು ಪ್ರಕರಣದಲ್ಲಿ ಬೇರೆ ಸಂಚು ಇದೆ ಹಾಗೂ ಅದನ್ನು ಮುಚ್ಚಿಹಾಕಲು ಪ್ರಯತ್ನಗಳು ನಡೆದಿವೆ ಎಂಬ ಅನುಮಾನವನ್ನು ನಿಜವಾಗಿಸಿದೆ. ಇದೆಲ್ಲವೂ ಆದಿತ್ಯ ಠಾಕ್ರೆ ಅಣತಿಯಂತೆ ನಡೆಯುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಆರೋಪ ಕೇಳಿಬಂದಿದೆ. ಆದಿತ್ಯ ಠಾಕ್ರೆ ಅವರನ್ನು 'ಬೇಬಿ ಪೆಂಗ್ವಿನ್' ಎಂದು ಟೀಕಿಸಲಾಗುತ್ತಿದೆ.


Click it and Unblock the Notifications











