ಸುಶಾಂತ್ ಸಿಂಗ್ ಸಾವು: ಸ್ನೇಹಿತನೆಡೆಗೇ ತಿರುಗಿದ ಅನುಮಾನ
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ರಹಸ್ಯ ಇನ್ನೂ ಕಗ್ಗಂಟಾಗಿಯೇ ಉಳಿದಿದೆ. ಈ ಸಾವು ಬಾಲಿವುಡ್ನಲ್ಲಿ ಅಲ್ಲೋಲಕಲ್ಲೋಲ ಉಂಟುಮಾಡಿದೆ. ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಅನೇಕರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಉಸಿರುಗಟ್ಟಿ ಸಾವು ಎಂದಿದ್ದು, ಬೇರೆ ಯಾವುದೇ ಕೈವಾಡಗಳು ಇಲ್ಲ ಎಂದು ಹೇಳಲಾಗಿದೆ. ಆದರೆ ಆತ್ಮಹತ್ಯೆಯ ಸುತ್ತ ವಿವಿಧ ತರ್ಕಗಳು ನಡೆಯುತ್ತಿವೆ.
Recommended Video
ಸುಶಾಂತ್ ಸಿಂಗ್ ಸಾವಿನ ವಿಚಾರವಾಗಿ ಅನೇಕ ರೀತಿಯ ಅನುಮಾನಗಳಿವೆ. ಇದು ಪೂರ್ವ ನಿಯೋಜಿತ ಸಂಚಾಗಿರುವ ಸಾಧ್ಯತೆ ಇದೆ ಎಂದು ಶಂಕಿಸಿರುವ ಜನರು ಮಹೇಶ್ ಭಟ್ ಮತ್ತು ಸುಶಾಂತ್ ಗೆಳತಿ ರಿಯಾ ಚಕ್ರಬೊರ್ತಿ ಮೇಲೆ ಅನೇಕರು ಅನುಮಾನ ವ್ಯಕ್ತಪಡಿಸಿದ್ದರು. ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಲಾಗುತ್ತಿದೆ. ಆದರೆ, ಈಗ ಕೆಲವರ ಗುಮಾನಿ ಸುಶಾಂತ್ ಸ್ನೇಹಿತ ಎಂದು ಹೇಳಿಕೊಂಡಿರುವ ನಿರ್ಮಾಪಕ ಸಂದೀಪ್ ಸಿಂಗ್ ವಿರುದ್ಧ ತಿರುಗಿದೆ. ಮುಂದೆ ಓದಿ...

ಸಂದೀಪ್ ವರ್ತನೆ ಬಗ್ಗೆ ಸಂದೇಹ
ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡ ದಿನದಿಂದಲೂ ಸಂದೀಪ್ ಸಿಂಗ್ ಪ್ರತಿದಿನ ಒಂದಿಲ್ಲೊಂದು ಹೇಳಿಕೆ ನೀಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕುತ್ತಿದ್ದಾರೆ. ಇತ್ತೀಚೆಗೆ ಹಳೆಯ ಪೋಸ್ಟ್ಗಳನ್ನು ಇದ್ದಕ್ಕಿದ್ದಂತೆ ಡಿಲೀಟ್ ಮಾಡತೊಡಗಿದ್ದಾರೆ. ಅವರ ವರ್ತನೆ ಅನುಮಾನ ಮೂಡಿಸುತ್ತಿದೆ ಎಂದು ಅನೇಕರು ಹೇಳಿದ್ದಾರೆ.

ಸಂದೀಪ್ ವಿಚಾರಣೆ ಮಾಡಿ
ಸುಶಾಂತ್ ಅವರಿಗೆ ಆತ್ಮೀಯರಾಗಿದ್ದ ಸಂದೀಪ್ ಸಿಂಗ್ ಅವರೊಂದಿಗೆ 'ವಂದೇ ಭಾರತಂ' ಎಂಬ ಚಿತ್ರದ ಕೆಲಸ ನಡೆಯುತ್ತಿತ್ತು. ಸುಶಾಂತ್ ಮೃತದೇಹವನ್ನು ಹಸ್ತಾಂತರಿಸುವ ಪ್ರಕ್ರಿಯೆ ನಡೆಯುವಾಗ ಸಹಿ ಹಾಕಿದವರಲ್ಲಿ ಸಂದೀಪ್ ಕೂಡ ಒಬ್ಬರು.
ಸುಶಾಂತ್ ಅವರ ಇನ್ಸ್ಟಾಗ್ರಾಂ ಪೋಸ್ಟ್ಗಳನ್ನು ಡಿಲೀಟ್ ಮಾಡಲಾಗುತ್ತಿದೆ. ಇದಕ್ಕಾಗಿ ಸಂದೀಪ್ ಅವರನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಸುಶಾಂತ್ ಅವರ ಕುಟುಂಬದ ಸ್ನೇಹಿತರೊಬ್ಬರು ಪೊಲೀಸರಿಗೆ ಪತ್ರಬರೆದಿದ್ದಾರೆ.

ಹಾದಿ ತಪ್ಪಿಸುವ ಹೇಳಿಕೆ
ಸುಶಾಂತ್ ಅವರ ಸಾವಿನ ಬಗ್ಗೆ ಜನರಲ್ಲಿ ಯಾರ ಮೇಲೆ ಅನುಮಾನ ಮೂಡುತ್ತಿದೆಯೋ, ಅವರಿಗೆಲ್ಲ ಸಂದೀಪ್ ಸಿಂಗ್ ಕ್ಲೀನ್ ಚಿಟ್ ನೀಡುತ್ತಿದ್ದಾರೆ. ಪೊಲೀಸ್ ತನಿಖೆ ನಡೆಯುವಾಗಲೇ ಮಾಧ್ಯಮದವರನ್ನು ಸುದ್ದಿಗೋಷ್ಠಿ ಕರೆಯುವುದು, ಹಾದಿ ತಪ್ಪಿಸುವ ಹೇಳಿಕೆಗಳನ್ನು ನೀಡುವುದು ಅವರ ಮೇಲೆ ಅನುಮಾನ ಮೂಡಿಸುತ್ತಿದೆ ಎಂದು ಮುಂಬೈ ಪೊಲೀಸರಿಗೆ ಸುಶಾಂತ್ ಸ್ನೇಹಿತ ನೀಲೋತ್ಪಲ್ ಎಂಬುವವರು ಪತ್ರ ಬರೆದಿದ್ದಾರೆ.

ಸಂದೀಪ್ ಸಿಂಗ್ ಫೋನ್ ಕರೆ ಪರಿಶೀಲಿಸಿ
ಬಾಲಿವುಡ್ನಲ್ಲಿ ಭವಿಷ್ಯ ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿರುವ ಸಂದೀಪ್ ಸಿಂಗ್, ಅವರ ಮೇಲೆ ಉದ್ಯಮದ ಯಾರೋ ಒತ್ತಡ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಸುಶಾಂತ್ ಅವರ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಸಂದೀಪ್ ಕೈಯಾಡಿಸಿರುವ ಸಾಧ್ಯತೆ ಇದ್ದು, ಅವರ ಫೋನ್ಅನ್ನು ಪರಿಶೀಲಿಸಬೇಕು. ಸುಶಾಂತ್ ಸಾವಿನ ಬಳಿಕದ ಸಂದೀಪ್ ಅವರ ಫೋನ್ ಕರೆಗಳನ್ನು ಪರಿಶೀಲಿಸಬೇಕು ಎಂದು ಒತ್ತಾಯಿಸಿದ್ದಾರೆ.

ಪೋಸ್ಟ್ಗಳು ಹೇಗೆ ಡಿಲೀಟ್ ಆಗುತ್ತಿವೆ?
ಸುಶಾಂತ್ ಅವರು ಸಾಮಾಜಿಕ ಜಾಲತಾಣದಲ್ಲಿ ಈ ಹಿಂದೆ ಹಾಕಿದ್ದ ಕೆಲವು ಪೋಸ್ಟ್ಗಳನ್ನು ಡಿಲೀಟ್ ಮಾಡಲಾಗುತ್ತಿದೆ. ಸುಶಾಂತ್ ಹಿಂಬಾಲಿಸುತ್ತಿದ್ದ ಖಾತೆಗಳ ಸಂಖ್ಯೆ ಕಡಿಮೆಯಾಗಿದೆ. ಏನನ್ನು ಸೇರಿಸಲಾಗುತ್ತಿದೆ, ಏನನ್ನು ಡಿಲೀಟ್ ಮಾಡಲಾಗುತ್ತಿದೆ ಎನ್ನುವುದು ಯಾರಿಗೂ ಗೊತ್ತಾಗುತ್ತಿಲ್ಲ. ಅವರ ಅಕೌಂಟನ್ನು ಯಾರಾದರೂ ಹೀಗೆ ಬಳಸಲು ಸಾಧ್ಯವೇ? ಅದು ಪೊಲೀಸರೇ ಅಥವಾ ಬೇರೆ ಇನ್ಯಾರಾದರೂ ಆಗಿದ್ದಾರೆಯೇ? ಎಂದು ನಟಿ ರೂಪಾ ಗಂಗೂಲಿ ಪ್ರಶ್ನಿಸಿದ್ದಾರೆ.

ಸಂದೀಪ್ ಹೇಳಿಕೆಗೆ ಬಗ್ಗೆ ಅನುಮಾನ
ಸುಶಾಂತ್ ಸಾವಿನ ಬಳಿಕ ಸಂದೀಪ್ ನಿರಂತರವಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸುಶಾಂತ್ ಅವರನ್ನು ನೀನು ಬಿಟ್ಟುಹೋಗಬಾರದಿತ್ತು ಎಂದು ಅಂಕಿತಾ ಲೋಖಂಡೆ ಅವರನ್ನು ಉಲ್ಲೇಖಿಸಿ ಹೇಳಿದ್ದ ಸಂದೀಪ್, ಸುಶಾಂತ್ಗಾಗಿ ವೃತ್ತಿಯನ್ನೇ ಬಿಡಲು ಅಂಕಿತಾ ಸಿದ್ಧರಿದ್ದರು ಎಂದು ಇತ್ತೀಚೆಗೆ ಮತ್ತೊಂದು ಹೇಳಿಕೆ ನೀಡಿದ್ದರು. ಅವರಿಬ್ಬರೂ ಮೇಡ್ ಫಾರ್ ಈಚ್ ಅದರ್ ಎಂದು ಹೇಳಿದ್ದರು. ಅಷ್ಟೇ ಅಲ್ಲದೆ, ಸುಶಾಂತ್ ವೃತ್ತಿ ಬದುಕಿನ ಬಗ್ಗೆ ಸತತ ಹೇಳಿಕೆ ನೀಡಿದ್ದರು. ಇವುಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆ ನಡೆಯುತ್ತಿದೆ.

ಶೇಖರ್ ಸುಮನ್, ಸಂದೀಪ್ ಭೇಟಿ
ಹಿರಿಯ ನಿರೂಪಕ ಶೇಖರ್ ಸುಮನ್ ಮತ್ತು ಸಂದೀಪ್ ಸಿಂಗ್ ಮಂಗಳವಾರ ಪಟ್ನಾದಲ್ಲಿರುವ ಸುಶಾಂತ್ ಮನೆಗೆ ತೆರಳಿ ಅವರ ತಂದೆಯನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ಸುಶಾಂತ್ ತಂದೆ ಕೆಕೆ ಸಿಂಗ್ ಇನ್ನೂ ಆಘಾತದಿಂದ ಚೇತರಿಸಿಕೊಂಡಿಲ್ಲ ಎಂದಿರುವ ಶೇಖರ್ ಸುಮನ್, ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.


Click it and Unblock the Notifications











