ಬಾಲಿವುಡ್ ತೊರೆದು ಕೊಡಗಿನಲ್ಲಿ ಕೃಷಿ ಮಾಡಲು ಬಯಸಿದ್ದರು ಸುಶಾಂತ್ ಸಿಂಗ್
ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ರೋಚಕ ತಿರುವು ಪಡೆದುಕೊಂಡಿದೆ. ಸುಶಾಂತ್ ಅವರದ್ದು ಆತ್ಮಹತ್ಯೆಯಲ್ಲ, ಪೂರ್ವ ನಿಯೋಜಿತ ಕೊಲೆ. ಇದನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಕಂಗನಾ ರಣಾವತ್ ಹಾಗೂ ಅನೇಕರು ಒತ್ತಾಯಿಸುತ್ತಿದ್ದಾರೆ. ಸುಮಾರು ಒಂದೂವರೆ ತಿಂಗಳಾದರೂ ಈ ಪ್ರಕರಣದ ಕುರಿತು ಮಾತನಾಡದ ಸುಶಾಂತ್ ಕುಟುಂಬ ಕೂಡ ಈಗ ಇದಕ್ಕೆ ದನಿಗೂಡಿಸಿದೆ.
Recommended Video
ಸುಶಾಂತ್ ತಂದೆ ಕೃಷ್ಣ ಕುಮಾರ್ ಸಿಂಗ್, ಮಗ ಪ್ರೇಯಸಿ ರಿಯಾ ಚಕ್ರಬೊರ್ತಿ ವಿರುದ್ಧ ಬಿಹಾರ ಪೊಲೀಸರಿಗೆ ದೂರು ನೀಡಿದ್ದಾರೆ. ಅದರಲ್ಲಿ ರಿಯಾ ವಿರುದ್ಧ ಅವರು ಅನೇಕ ಆರೋಪಗಳನ್ನು ಮಾಡಿದ್ದಾರೆ. ಮುಂಬೈ ಪೊಲೀಸರು ಮೊದಲು ವರದಿ ನೀಡಲಿ ಎಂದು ಕಾಯುತ್ತಿದ್ದ ಸುಶಾಂತ್ ಕುಟುಂಬದವರು ಈಗ ಸಿಬಿಐ ತನಿಖೆಯಾಗಲಿ ಎಂದು ಆಗ್ರಹಿಸುತ್ತಿದ್ದಾರೆ. ಇದರಿಂದ ಈ ಗದ್ದಲ ಮತ್ತಷ್ಟು ತೀವ್ರವಾಗುವ ಸೂಚನೆ ದೊರಕಿದೆ. ಮುಂದೆ ಓದಿ...

ರಿಯಾ ವಿರುದ್ಧ ಹಲವು ಆರೋಪ
ಮಗನ ಪ್ರೇಯಸಿ ಎನ್ನಲಾದ ರಿಯಾ ಚಕ್ರಬೊರ್ತಿ ಕುರಿತು ತಮಗೆ ಹೆಚ್ಚು ತಿಳಿದಿಲ್ಲ ಎಂದಿದ್ದ ಕೃಷ್ಣಕುಮಾರ್ ಸಿಂಗ್, ಈಗ ರಿಯಾ ವಿರುದ್ಧ ಅನೇಕ ಆರೋಪಗಳನ್ನು ಮಾಡಿದ್ದಾರೆ. ಸುಶಾಂತ್ರನ್ನು ಬ್ಲ್ಯಾಕ್ ಮೇಲ್ ಮಾಡುವ ಮೂಲಕ ರಿಯಾ, ಮಗನನ್ನು ತನ್ನ ಹಿಡಿತದಲ್ಲಿರಿಸಿಕೊಳ್ಳಲು ಪ್ರಯತ್ನಿಸಿದ್ದರು ಎಂದು ಆರೋಪಿಸಿದ್ದಾರೆ. ಸುಶಾಂತ್ ತಂದೆ ನೀಡಿರುವ ದೂರಿನಲ್ಲಿ ಅನೇಕ ಕುತೂಹಲಕಾರಿ ಸಂಗತಿಗಳಿವೆ.

ಸ್ನೇಹಿತನ ಜತೆ ಕೂರ್ಗ್ನಲ್ಲಿ ಕೃಷಿ
ಸುಶಾಂತ್ ಸಿಂಗ್ ರಜಪೂತ್ ತಮ್ಮ ಸ್ನೇಹಿತ ಮಹೇಶ್ ಶೆಟ್ಟಿ ಜತೆಗೂಡಿ ಕೂರ್ಗ್ನಲ್ಲಿ ಕೃಷಿ ಮಾಡಲು ಬಯಸಿದ್ದರು. ಚಿತ್ರರಂಗದ ಕೆಲಸ ತೊರೆಯಲು ನಿರ್ಧರಿಸಿದ್ದರು. ಆದರೆ ಇದಕ್ಕೆ ರಿಯಾ ಬೆಂಬಲ ನೀಡಿರಲಿಲ್ಲ. ಮುಂಬೈ ಬಿಟ್ಟು ಎಲ್ಲೂ ಹೋಗಲು ಸಾಧ್ಯವಿಲ್ಲ ಎಂದು ಸುಶಾಂತ್ಗೆ ರಿಯಾ ಹೇಳಿದ್ದರು.

ಹಣ, ಆಭರಣದೊಂದಿಗೆ ಹೋದ ರಿಯಾ
ಮುಂಬೈನಲ್ಲಿ ಇರಲು ಸುಶಾಂತ್ ಸುತಾರಾಂ ಒಪ್ಪದೇ ಇದ್ದಾಗ ಜೂನ್ 6ರಂದು ರಿಯಾ, ಅಪಾರ ಪ್ರಮಾಣದ ನಗದು, ಆಭರಣ, ಕ್ರೆಡಿಟ್ ಕಾರ್ಡ್ಗಳು, ಮಹತ್ವದ ದಾಖಲೆಗಳು, ಲ್ಯಾಪ್ ಟಾಪ್ ಮತ್ತು ವೈದ್ಯಕೀಯ ವರದಿಗಳನ್ನು ತೆಗೆದುಕೊಂಡು ಮನೆಯಿಂದ ಹೊರಹೋಗಿದ್ದಾರೆ. ಜತೆಗೆ ತನ್ನ ಮೊಬೈಲ್ನಲ್ಲಿ ಸುಶಾಂತ್ ನಂಬರ್ ಅನ್ನು ಬ್ಲಾಕ್ ಮಾಡಿದ್ದಾರೆ.

ಹುಚ್ಚ ಎಂದು ಹೇಳುತ್ತೇನೆ
ಎಲ್ಲ ದಾಖಲೆಗಳನ್ನು ತೆಗೆದುಕೊಂಡ ರಿಯಾ, ಸುಶಾಂತ್ ಒಬ್ಬ ಹುಚ್ಚ ಎಂದು ಮಾಧ್ಯಮಗಳ ಎದುರು ಬಹಿರಂಗಪಡಿಸುತ್ತೇನೆ ಮತ್ತು ಇದರಿಂದ ನಿನಗೆ ಯಾವುದೇ ಕೆಲಸಗಳು ಸಿಗುವುದಿಲ್ಲ ಎಂದು ಬೆದರಿಕೆ ಹಾಕಿದ್ದಾಗಿ ಸುಶಾಂತ್ ಸಹೋದರಿಯ ಬಳಿ ಹೇಳಿಕೊಂಡಿದ್ದರು.
2019ರಲ್ಲ ರಿಯಾಳನ್ನು ಭೇಟಿಯಾಗುವ ಮುನ್ನ ಸುಶಾಂತ್ ಯಾವುದೇ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರಲಿಲ್ಲ. ಆದರೆ ರಿಯಾ ಭೇಟಿಯ ಬಳಿಕ ಏಕೆ ಮಾನಸಿಕ ಸಮಸ್ಯೆಗಳಿಗೆ ತುತ್ತಾಗಿದ್ದರು ಎನ್ನುವುದು ತನಿಖೆಯಾಗಬೇಕಿದೆ.

ಕುಟುಂಬದವರಿಗೆ ತಿಳಿಸಬೇಕಲ್ಲವೇ?
ಸುಶಾಂತ್ ಸಿಂಗ್ ಅವರಿಗೆ ಮಾನಸಿಕ ಅನಾರೋಗ್ಯದ ಚಿಕಿತ್ಸೆ ನೀಡಲಾಗುತ್ತಿದ್ದರೆ, ಅದಕ್ಕೆ ವೈದ್ಯರು ಅವರ ಕುಟುಂಬದ ಸದಸ್ಯರನ್ನು ಏಕೆ ಮೊದಲು ಸಂಪರ್ಕಿಸಿ ಅನುಮತಿ ಪಡೆದಿರಲಿಲ್ಲ? ಚಿಕಿತ್ಸೆ ಸಂದರ್ಭದಲ್ಲಿ ರಿಯಾ ಆತನನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಓವರ್ ಡೋಸ್ ನೀಡಿದ್ದರು. ಸುಶಾಂತ್ಗೆ ಡೆಂಗ್ಯೂ ಇದೆ ಎಂದು ರಿಯಾ ಎಲ್ಲರ ಬಳಿ ಹೇಳಿಕೊಂಡಿದ್ದರು.

ಹೊಸ ಸಿನಿಮಾ ಒಪ್ಪಲು ಬಿಡುತ್ತಿರಲಿಲ್ಲ
ಸುಶಾಂತ್ ಯಾವುದೇ ಸಿನಿಮಾಗಳಿಗೆ ಸಹಿ ಹಾಕಲು ರಿಯಾ ಬಿಡುತ್ತಿರಲಿಲ್ಲ. ಯಾವುದೇ ಸಿನಿಮಾ ಪ್ರಸ್ತಾಪ ಬಂದಾಗ, ಸುಶಾಂತ್ ಜತೆ ಮುಖ್ಯ ಪಾತ್ರದಲ್ಲಿ ತಾನು ನಟಿಸುವುದಾದರೆ ಮಾತ್ರವೇ ಸುಶಾಂತ್ ಅದನ್ನು ಒಪ್ಪಿಕೊಳ್ಳುವಂತೆ ಒತ್ತಾಯಿಸುತ್ತಿದ್ದರು. ಸುಶಾಂತ್ ಹೆಚ್ಚು ನಂಬಿಕೆ ಇರಿಸಿದ್ದ ಹಳೆಯ ಸಿಬ್ಬಂದಿಯನ್ನು ರಿಯಾ ಬದಲಿಸಿ, ತನಗೆ ಗೊತ್ತಿರುವವರನ್ನು ನೇಮಿಸಿದ್ದರು.
2019ರ ಡಿಸೆಂಬರ್ನಲ್ಲಿ ಒತ್ತಾಯದಿಂದ ಸುಶಾಂತ್ ಮೊಬೈಲ್ ನಂಬರ್ ಬದಲಿಸಿದ್ದ ರಿಯಾ, ಅವರು ಕುಟುಂಬದವರು ಮತ್ತು ಸ್ನೇಹಿತರ ಜತೆ ನಿರಂತರವಾಗಿ ಮಾತನಾಡುವುದನ್ನು ತಡೆದಿದ್ದರು. ಪಟ್ನಾದಲ್ಲಿರುವ ಕುಟುಂಬವನ್ನು ಭೇಟಿ ಮಾಡಲು ರಿಯಾ ಬಿಟ್ಟಿರಲಿಲ್ಲ.

15 ಕೋಟಿ ರೂ ವರ್ಗಾವಣೆ
2019ರಲ್ಲಿ ಸುಶಾಂತ್ ಬ್ಯಾಂಕ್ ಖಾತೆಯಲ್ಲಿ 17 ಕೋಟಿ ರೂ. ಇತ್ತು. ಆದರೆ ಕೆಲವೇ ತಿಂಗಳಲ್ಲಿ ಅದರಲ್ಲಿ 15 ಕೋಟಿ ರೂ ಹಣ ಅವರಿಗೆ ಯಾವುದೇ ಸಂಬಂಧವಿಲ್ಲದ ಖಾತೆಗಳಿಗೆ ವರ್ಗಾವಣೆಯಾಗಿದೆ. ರಿಯಾ ಮತ್ತು ಆಕೆಯ ಸಹವರ್ತಿಗಳಿಂದ ಸುಶಾಂತ್ಗೆ ಎಷ್ಟು ಹಣ ವಂಚನೆಯಾಗಿದೆ ಎನ್ನುವುದು ತನಿಖೆಯಾಗಬೇಕಿದೆ ಎಂದು ಸುಶಾಂತ್ ತಂದೆ ದೂರಿನಲ್ಲಿ ತಿಳಿಸಿದ್ದಾರೆ.

ರಿಯಾ ವಿರುದ್ಧ ಪ್ರಕರಣ ದಾಖಲು
ರಿಯಾ ಚಕ್ರಬೊರ್ತಿ ವಿರುದ್ಧ ಬಿಹಾರದ ಪೊಲೀಸರು ಐಪಿಸಿ ಸೆಕ್ಷನ್ 341, 342, 380, 406, 420, 306 ಮತ್ತು 120 (ಬಿ) ಅಡಿ ಪ್ರಕರಣ ದಾಖಲಿಸಿದ್ದಾರೆ. ರಿಯಾ ಹಾಗೂ ಅವರ ಕುಟುಂಬದವರನ್ನು ವಿಚಾರಣೆಗೆ ಒಳಪಡಿಸಲು ಪಟ್ನಾ ಪೊಲೀಸರ ತಂಡವೊಂದು ಮುಂಬೈಗೆ ತೆರಳಿದೆ. ಬಂಧನದ ಭೀತಿಗೆ ಒಳಗಾಗಿರುವ ರಿಯಾ ಚಕ್ರಬೊರ್ತಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ಸುಶಾಂತ್ಗೆ ಬಹಳ ಆಪ್ತರಾಗಿದ್ದ ಸಹೋದರಿ ಶ್ವೇತಾ ಸಿಂಗ್ ಕೂಡ ಸುಶಾಂತ್ ಸಾವಿಗೆ ನ್ಯಾಯ ಒದಗಿಸಿ ಎಂದು ಮೊದಲ ಬಾರಿ ಧ್ವನಿ ಎತ್ತಿದ್ದಾರೆ.


Click it and Unblock the Notifications











