ಬಾಲಿವುಡ್ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ: ಆಘಾತದಿಂದ ಅತ್ತಿಗೆ ಸಾವು
ಭಾನುವಾರ ಆತ್ಮಹತ್ಯೆ ಮಾಡಿಕೊಂಡ ಸುಶಾಂತ್ ಸಿಂಗ್ ರಜಪೂತ್ ಅವರ ಸಂಬಂಧಿ ಆಘಾತದಿಂದ ಮೃತಪಟ್ಟಿದ್ದಾರೆ. ಸುಶಾಂತ್ ಅವರ ಹಠಾತ್ ಸಾವಿನಿಂದ ಶೋಕದಲ್ಲಿ ಮುಳುಗಿದ್ದ ಅವರ ಕುಟುಂಬಕ್ಕೆ ಮತ್ತೊಂದು ಆಘಾತ ಬರಸಿಡಿಲಿನಂತೆ ಅಪ್ಪಳಿಸಿದೆ.
Recommended Video
ಸುಶಾಂತ್ ಸಿಂಗ್ ರಜಪೂತ್ ಅವರ ಅತ್ತಿಗೆ (ಸೋದರ ಸಂಬಂಧಿಯ ಪತ್ನಿ) ಸುಧಾ ದೇವಿ, ಸೋಮವಾರ ಬಿಹಾರದ ತಮ್ಮ ಊರು ಪೂರ್ನಿಯಾದಲ್ಲಿ ಕೊನೆಯುಸಿರೆಳೆದಿದ್ದಾರೆ. ಸುಶಾಂತ್ ಸಾವಿನಿಂದ ಸುಧಾ ದೇವಿ ಅತೀವ ದುಃಖಿತರಾಗಿದ್ದರು. ಸುಶಾಂತ್ ಬಗ್ಗೆ ಅಪಾರ ಪ್ರೀತಿ ಕಾಳಜಿ ಹೊಂದಿದ್ದ ಅವರು, ಮೈದುನನ ಸಾವಿನ ಸುದ್ದಿ ಕೇಳಿದಾಗಿನಿಂದ ಅಸ್ವಸ್ಥಗೊಂಡಿದ್ದರು. ಆಘಾತಕಾರಿ ಸುದ್ದಿ ತಿಳಿದ ಬಳಿಕ ಅವರು ಆಹಾರ ಸೇವಿಸುವುದನ್ನು ನಿಲ್ಲಿಸಿದ್ದರು ಎನ್ನಲಾಗಿದೆ. ಮುಂದೆ ಓದಿ...

ಅನಾರೋಗ್ಯದಿಂದ ಬಳಲುತ್ತಿದ್ದರು
ಸುಶಾಂತ್ ಅವರ ಅತ್ತಿಗೆ ಸುಧಾ ದೇವಿ ಕೆಲವು ಸಮಯದಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ಸುಶಾಂತ್ ಸಾವಿನ ಸುದ್ದಿ ತಿಳಿದಿ ಬಳಿಕ ಅವರು ಮತ್ತಷ್ಟು ಅಸ್ವಸ್ಥಗೊಂಡರು. ಆಹಾರ ಕೂಡ ಸೇವಿಸದ ಕಾರಣದಿಂದ ಆರೋಗ್ಯ ಇನ್ನಷ್ಟು ಕ್ಷೀಣಿಸಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಅಸ್ವಸ್ಥಗೊಂಡಿದ್ದ ತಂದೆ
ಸುಶಾಂತ್ ಸಾವಿನ ಸುದ್ದಿ ಫೋನ್ನಲ್ಲಿ ಬಂದಾಗ ಬಿಹಾರದ ತಮ್ಮ ಮನೆಯಲ್ಲಿ ಊಟಕ್ಕೆ ಕುಳಿತಿದ್ದ ತಂದೆ ಕೃಷ್ಣ ಕುಮಾರ್ ಸಿಂಗ್ ಕೂಡ ಕುಸಿದುಬಿದ್ದಿದ್ದರು. ಕುಟುಂಬದಲ್ಲಿ ಅತ್ಯಂತ ಕಿರಿಯರಾಗಿದ್ದ ಸುಶಾಂತ್ ಬಗ್ಗೆ ಎಲ್ಲರಿಗೂ ಅಪಾರ ಪ್ರೀತಿ ಇತ್ತು ಎಂದು ಕುಟುಂಬದ ಆಪ್ತರು ತಿಳಿಸಿದ್ದಾರೆ.

ಆತ್ಮಹತ್ಯೆಗೆ ಕಾರಣವೇನು?
ಸುಶಾಂತ್ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಇನ್ನೂ ತಿಳಿದುಬಂದಿಲ್ಲ. ಪ್ರೇಮ ವೈಫಲ್ಯ, ಬಾಲಿವುಡ್ನಲ್ಲಿ ಗಣ್ಯರಿಂದ ತಿರಸ್ಕಾರಗೊಂಡು ಅವಮಾನಕ್ಕೆ ಒಳಗಾಗಿದ್ದು, ತಾರುಣ್ಯದಲ್ಲಿ ಕಳೆದುಕೊಂಡಿದ್ದ ಅಮ್ಮನ ನೆನಪು ಮುಂತಾದ ಕಾರಣಗಳಿಂದಾಗಿ ಅವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು.

ಸುಶಾಂತ್ ಮೊದಲಿಗರಲ್ಲ!
'ಸುಶಾಂತ್ ಅದ್ಭುತ ವ್ಯಕ್ತಿ. ಅವರನ್ನು ಪಾರ್ಟಿ, ಮದುವೆಗಳಿಗೆ ಆಹ್ವಾನಿಸದೆ ಹೊರಗಿನವರಂತೆ ನೋಡಲಾಗುತ್ತಿತ್ತು ಎಂದು ಕೇಳಿದೆ. ಅನೇಕ ಜನರು ಈ ರೀತಿ ಅನುಭವಕ್ಕೆ ಒಳಗಾಗಿದ್ದಾರೆ. ನಿಮ್ಮ ಕುಟುಂಬ ಚಿತ್ರೋದ್ಯಮಕ್ಕೆ ಸಂಬಂಧಿಸದೆ ಇದ್ದರೆ ಅಥವಾ ನೀವು ಒಂದು ಗುಂಪನ್ನು ಫಾಲೋ ಮಾಡದೆ ಹೋದರೆ ಚಿತ್ರರಂಗ ನಿಮ್ಮನ್ನು ತನ್ನ ಕುಟುಂಬ ಎಮದು ಪರಿಗಣಿಸುವುದಿಲ್ಲ. ಸುಶಾಂತ್ ಇದರಲ್ಲಿ ಮೊದಲಿಗರಲ್ಲ. ನಮ್ಮ ಚಿತ್ರರಂಗದಲ್ಲಿ ಅನೇಕ ಸುಶಾಂತ್ಗಳಿದ್ದಾರೆ' ಎಂದು ನಟಿ ಕೊಯ್ನಾ ಮಿತ್ರಾ ಹೇಳಿದ್ದಾರೆ.


Click it and Unblock the Notifications











