'ನಿನ್ನಲ್ಲಿ ವಿಪರೀತ ನೋವಿತ್ತು ಎಂದು ನನಗೆ ಗೊತ್ತು': ಸುಶಾಂತ್ ಸಿಂಗ್ ಅಕ್ಕ ಬರೆದ ಬಹಿರಂಗ ಪತ್ರ
ಅಮೆರಿಕದಲ್ಲಿ ನೆಲೆಸಿದ್ದ ಸುಶಾಂತ್ ಸಿಂಗ್ ರಜಪೂತ್ ಅವರ ಅಕ್ಕ ಶ್ವೇತಾ ಸಿಂಗ್ ಕೀರ್ತಿ ಅವರಿಗೆ ತಮ್ಮನ ಮುಖವನ್ನು ಕೊನೆಯ ಬಾರಿ ನೋಡುವ ಅವಕಾಶ ಸಿಕ್ಕಿರಲಿಲ್ಲ. ಅವರು ಅಮೆರಿಕದಿಂದ ಸ್ವದೇಶಕ್ಕೆ ಮರಳುವ ಮುನ್ನವೇ ಪ್ರೀತಿಯ ಸಹೋದರನ ಅಂತ್ಯಸಂಸ್ಕಾರ ಕಾರ್ಯಗಳೆಲ್ಲ ಮುಗಿದಿದ್ದವು.
Recommended Video
ಬಿಹಾರದ ಪಟ್ನಾದಲ್ಲಿರುವ ತಮ್ಮ ಮನೆಗೆ ಕೊನೆಗೂ ತಲುಪಿರುವ ಶ್ವೇತಾ ಸಿಂಗ್, ಸುಶಾಂತ್ ಕುರಿತು ಹೃದಯಸ್ಪರ್ಶಿ ಪತ್ರವೊಂದನ್ನು ಬರೆದಿದ್ದಾರೆ. ಫೇಸ್ಬುಕ್ನಲ್ಲಿ ಬರೆದಿರುವ ಬರಹದ ಜತೆಗೆ ಅವರು ಸುಶಾಂತ್ಗೆ ನೀಡಿದ್ದ ಕೈಬರಹದ ಪತ್ರವೊಂದರ ಫೋಟೊ ಕೂಡ ಹಂಚಿಕೊಂಡಿದ್ದಾರೆ.
ನನ್ನ ಮಗುವೇ, ನೀನು ಎಲ್ಲಿಯೇ ಇದ್ದರೂ ಖುಷಿಯಾಗಿರು. ಕನಸುಗಳನ್ನು ಈಡೇರಿಸಿಕೋ... ಪ್ರತಿಯೊಬ್ಬರೂ ನಿನ್ನನ್ನು ಪ್ರೀತಿಸಿದ್ದರು, ಪ್ರೀತಿಸುತ್ತಿದ್ದಾರೆ ಮತ್ತು ನಿನ್ನನ್ನು ಸದಾ ಪ್ರೀತಿಸುತ್ತಿರುತ್ತಾರೆ ಎಂದು ಅವರು ಬರೆದಿದ್ದಾರೆ. ಮುಂದೆ ಓದಿ...

ನೀನು ಅನುಭವಿಸಿದ ನೋವುಗಳಿಗೆ ಕ್ಷಮೆ ಇರಲಿ
'ನನ್ನ ಬೇಬಿ, ನನ್ನ ಬಾಬು, ನನ್ನ ಮಗು ಎಂದಿಗೂ ದೈಹಿಕವಾಗಿ ನಮ್ಮೊಂದಿಗೆ ಇರಲಾರ. ಪರವಾಗಿಲ್ಲ... ನೀನು ಅತೀವ ನೋವಿನಿಂದ ಇದ್ದಿ ಎಂದು ನನಗೆ ಗೊತ್ತು. ನೀನೊಬ್ಬ ಹೋರಾಟಗಾರ ಎನ್ನುವುದೂ ನನಗೆ ಗೊತ್ತು. ನೀನು ಧೈರ್ಯದಿಂದಲೇ ಹೋರಾಡಿದ್ದಿ. ಕ್ಷಮಿಸು ನನ್ನ ಚಿನ್ನ. ನೀನು ಅನುಭವಿಸಿದ ಎಲ್ಲ ನೋವುಗಳಿಗೂ ಕ್ಷಮೆಯಿರಲಿ. ನನಗೆ ಸಾಧ್ಯವಾಗಿದ್ದರೆ ನಿನ್ನ ನೋವುಗಳನ್ನೆಲ್ಲ ನಾನು ಪಡೆದುಕೊಂಡು ನನ್ನ ಎಲ್ಲ ಖುಷಿಗಳನ್ನೂ ನಿನಗೆ ಕೊಡುತ್ತಿದ್ದೆ' ಎಂದು ಬರೆದಿದ್ದಾರೆ.

ನಿನ್ನನ್ನು ಮತ್ತಷ್ಟು ಪ್ರೀತಿಸುತ್ತೇವೆ
'ನಿನ್ನ ಮನುಗುವ ಕಣ್ಣುಗಳು ಹೇಗೆ ಕನಸು ಕಾಣಬೇಕು ಎಂಬುದನ್ನು ಜಗತ್ತಿಗೆ ಹೇಳಿಕೊಟ್ಟಿತು. ನಿನ್ನ ಮುಗ್ಧ ನಗು ನಿನ್ನ ಹೃದಯದ ಪರಿಶುದ್ಧತೆಯನ್ನು ಬಹಿರಂಗಪಡಿಸಿತ್ತು. ನನ್ನ ಮಗು ನಿನ್ನನ್ನು ಎಂದಿಗೂ ಪ್ರೀತಿಸುತ್ತೇವೆ, ಇನ್ನಷ್ಟು, ಮತ್ತಷ್ಟು.

ದ್ವೇಷಕ್ಕಿಂತ ಪ್ರೀತಿ ಇರಲಿ
'ನನ್ನ ಎಲ್ಲ ಆತ್ಮೀಯರೇ, ಇದು ಪರೀಕ್ಷೆಯ ಸಮಯ ಎಂದು ತಿಳಿದಿದೆ. ಆದರೆ ಯಾವಾಗಲೂ ಒಂದು ಆಯ್ಕೆ ಇರುತ್ತದೆ. ದ್ವೇಷಿಸುವವರಿಗಿಂತ ಪ್ರೀತಿಸುವವರನ್ನು, ಕರುಣೆಯನ್ನು ಆಯ್ಕೆ ಮಾಡಿಕೊಳ್ಳಿ. ಸಿಟ್ಟಿಗಿಂತ ಸಹಾನುಭೂತಿಯನ್ನು ಆಯ್ದುಕೊಳ್ಳಿ. ಸ್ವಾರ್ಥಕ್ಕಿಂತ ನಿಸ್ವಾರ್ಥವನ್ನು ಆಯ್ದುಕೊಳ್ಳಿ.

ನಿಮ್ಮನ್ನು ನೀವು ಕ್ಷಮಿಸಿಕೊಳ್ಳಿ
ಕ್ಷಮಿಸಿ... ನಿಮ್ಮನ್ನು ಕ್ಷಮಿಸಿಕೊಳ್ಳಿ. ಬೇರೆಯವರನ್ನು ಕ್ಷಮಿಸಿ. ಪ್ರತಿಯೊಬ್ಬರನ್ನೂ ಕ್ಷಮಿಸಿ. ಪ್ರತಿಯೊಬ್ಬರೂ ತಮ್ಮದೇ ಯುದ್ಧದಲ್ಲಿ ಹೋರಾಡುತ್ತಿದ್ದಾರೆ. ನಿಮ್ಮ ಬಗ್ಗೆ ನೀವು ಸಹಾನುಭೂತಿ ಹೊಂದಿ ಮತ್ತು ಇತರರೆಡೆಗೆ ಹಾಗೂ ಪ್ರತಿಯೊಬ್ಬರ ಮೇಲೆಯೂ ಸಹಾನುಭೂತಿ ತೋರಿ. ನಿಮ್ಮ ಹೃದಯವನ್ನು ಎಂದಿಗೂ ಮುಚ್ಚದಿರಿ, ಯಾವ ಕಾರಣಕ್ಕೂ... ಎಂದು ತಿಳಿಸಿದ್ದಾರೆ.

ಸಂತೋಷದಿಂದ ಕಳುಹಿಸೋಣ
'ನಿನ್ನೆ ಪಟ್ನಾದ ಮನೆಗೆ ಸುರಕ್ಷಿತವಾಗಿ ತಲುಪಿದೆ. ಈ ಪ್ರಕ್ರಿಯೆಯಲ್ಲಿ ಸಹಾಯ ಮಾಡಿದ ಮತ್ತು ಪ್ರಾರ್ಥಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ಇಂದು ನಾವು ಸಹೋದರ ಅಸ್ಥಿ ವಿಸರ್ಜನೆ ಮಾಡುತ್ತಿದ್ದೇವೆ. ನೀವೆಲ್ಲರೂ ಆತನಿಗಾಗಿ ಪಾರ್ಥಿಸುವಂತೆ, ಎಲ್ಲ ಸಿಹಿ ನೆನಪುಗಳೊಂದಿಗೆ ಮತ್ತು ನಿಮ್ಮ ಹೃದಯಪೂರ್ವಕ ಪ್ರೀತಿಯೊಂದಿಗೆ ಆತನನ್ನು ಕಳುಹಿಸುವಂತೆ ನಾನು ಮತ್ತೆ ಮನವಿ ಮಾಡಲು ಬಯಸುತ್ತೇನೆ. ಆತನ ಬದುಕನ್ನು ಸಂಭ್ರಮಿಸೋಣ. ಆತನಿಗೆ ಪ್ರೀತಿ ಪೂರ್ವಕ ಮತ್ತು ಸಂತೋಷದ ವಿದಾಯ ನೀಡೋಣ ಎಂದು ಭಾವಪೂರ್ಣವಾಗಿ ಬರೆದಿದ್ದಾರೆ.


Click it and Unblock the Notifications











