ಬಾಬಾ ಸಿದ್ಧಿಕಿಗಿಂತ ಕೆಟ್ಟದಾಗುತ್ತೆ ಸಲ್ಮಾನ್ ಖಾನ್ ಸ್ಥಿತಿ: ಜೀವ ಉಳಿಸಿಕೊಳ್ಳಲು ₹5 ಕೋಟಿ ಬೇಡಿಕೆ ಇಟ್ಟ ಗ್ಯಾಂಗ್!
ಬಾಲಿವುಡ್ ನಟ ಸಲ್ಮಾನ್ ಖಾನ್ಗೆ ಮತ್ತೆ ಜೀವ ಬೆದರಿಕೆ ಹಾಕಲಾಗಿದೆ. ಮುಂಬೈ ಟ್ರಾಫಿಕ್ ಪೊಲೀಸರ ವಾಟ್ಸಾಪ್ ನಂಬರ್ಗೆ ಬೆದರಿಕೆಯ ಸಂದೇಶ ಬಂದಿದ್ದು ಸಲ್ಮಾನ್ ಖಾನ್ನಿಂದ 5 ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಮುಂಬೈ ಪೊಲೀಸರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಸಲ್ಮಾನ್ ಖಾನ್ ವಲಯದಲ್ಲಿ ಆತಂಕ ಹೆಚ್ಚಾಗಿದೆ.
ಈ ವಾಟ್ಸಾಪ್ ಸಂದೇಶದಲ್ಲಿ ಸಲ್ಮಾನ್ ಖಾನ್ ಐದು ಕೋಟಿ ರೂಪಾಯಿ ಹಣವನ್ನು ನೀಡದೇ ಹೋದರೆ, ಇತ್ತೀಚೆಗೆ ಗುಂಡೇಟಿಗೆ ಬಲಿಯಾದ ರಾಜಕಾರಣಿ ಬಾಬಾ ಸಿದ್ಧಿಕಿಗಿಂತ ಪರಿಸ್ಥಿತಿ ಕೆಟ್ಟದಾಗಿ ಇರುತ್ತೆ ಎಂದು ಹೇಳಲಾಗಿದೆ. ಈ ಮೂಲಕ ಸಲ್ಮಾನ್ ಖಾನ್ಗೆ ಮತ್ತೊಂದು ಬೆದರಿಕೆ ಸಂದೇಶ ಬಂದಂತೆ ಆಗಿದೆ. ಇದನ್ನು ಮುಂಬೈ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು ತನಿಖೆಯನ್ನು ಆರಂಭಿಸಿದ್ದಾರೆ.

ಕೆಲವು ದಿನಗಳ ಹಿಂದಷ್ಟೇ ಸಲ್ಮಾನ್ ಖಾನ್, ಶಾರುಖ್ ಖಾನ್ ಸೇರಿದಂತೆ ಬಾಲಿವುಡ್ ತಾರೆಯರಿಗೆ ಆತ್ಮೀಯರಾಗಿದ್ದ ರಾಜಕಾರಣಿ ಬಾಬಾ ಸಿದ್ಧಿಕಿಯನ್ನು ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಮುಂಬೈನಲ್ಲಿ ಗುಂಡಿಕ್ಕಿ ಹತ್ಯೆ ಮಾಡಿದ್ದರು. ಈ ಬೆನ್ನಲ್ಲೇ ಈಗ ಸಲ್ಮಾನ್ ಖಾನ್ಗೂ ಆತಂಕ ಹೆಚ್ಚಾಗಿದೆ. 5 ಕೋಟಿ ರೂಪಾಯಿ ಬೇಡಿಕೆ ಇಟ್ಟಿರುವ ಸಂದೇಶದಲ್ಲಿ ಏನಿದೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.
ಮುಂಬೈ ಟ್ರಾಫಿಕ್ ಪೊಲೀಸರಿಗೆ ಬಂದಿರುವ ಬೆದರಿಕೆ ಸಂದೇಶದಲ್ಲಿ ಇದನ್ನು ಸಾಮಾನ್ಯವಾಗಿ ಪರಿಗಣಿಸಬೇಡಿ ಎಂದು ಎಚ್ಚರಿಕೆಯನ್ನು ನೀಡಲಾಗಿದೆ. " ಈ ಸಂದೇಶವನ್ನು ಹಗುರವಾಗಿ ತೆಗೆದುಕೊಳ್ಳಬೇಡಿ. ಸಲ್ಮಾನ್ ಖಾನ್ ಬದುಕಿರಬೇಕು ಅಂದರೆ, ಲಾರೆನ್ಸ್ ಬಿಷ್ಟೋಯಿ ದ್ವೇಷಗಳನ್ನು ಕೊನೆಗಾಣಿಸಬೇಕು ಅಂದರೆ, ಅವರು ಐದು ಕೋಟಿ ರೂಪಾಯಿಯನ್ನು ಕೊಡಬೇಕು. ಒಂದು ವೇಳೆ ಹಣವನ್ನು ನೀಡದೇ ಹೋದರೆ, ಬಾಬಾ ಸಿದ್ಧಿಕಿಗಿಂತ ಅವರ ಪರಿಸ್ಥಿತಿ ಕೆಟ್ಟದಾಗಿರುತ್ತೆ." ಎಂದು ವಾಟ್ಸಾಪ್ ಸಂದೇಶದಲ್ಲಿ ಹೇಳಲಾಗಿದೆ.
ಎನ್ಸಿಪಿಯ ಮುಖಂಡ ಹಾಗೂ ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿಯವರನ್ನು ಅಕ್ಟೋಬರ್ 12ರ ರಾತ್ರಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಈ ಹತ್ಯೆ ಇಡೀ ಮುಂಬೈ ಅನ್ನು ಬೆಚ್ಚಿಬೀಳಿಸಿತ್ತು. ಲಾರೆನ್ಸ್ ಬಿಷ್ಣೋಯಿ ತಂಡ ಈ ಹತ್ಯೆಯ ಜವಾಬ್ದಾರಿಯನ್ನು ಹೊತ್ತು ಕೊಂಡಿತ್ತು. ಬಾಬಾ ಸಿದ್ದಿಕಿ ಹತ್ಯೆಯ ಬಳಿಕ ಸಲ್ಮಾನ್ ಖಾನ್ಗೂ ಜೀವ ಬೆದರಿಕೆ ಬಂದಿದೆ. ಹೀಗಾಗಿ ಸಲ್ಮಾನ್ ಖಾನ್ಗೆ ಪೊಲೀಸರು ರಕ್ಷಣೆಯನ್ನು ನೀಡಿದ್ದಾರೆ.
ಬಾಬಾ ಸಿದ್ಧಿಕಿ ಹತ್ಯೆಗೆ ಸಂಬಂಧಿಸಿದಂತೆ ಈಗಾಗಲೇ ನಾಲ್ಕು ಮಂದಿಯನ್ನು ಅರೆಸ್ಟ್ ಮಾಡಲಾಗಿದೆ. ಹರಿಯಾಣದ ಗುರ್ಮೈಲ್ ಬಲ್ಜಿತ್ ಸಿಂಗ್, ಉತ್ತರ ಪ್ರದೇಶದ ಧರ್ಮರಾಜ್ ರಾಜೇಶ್ ಕಶ್ಯಪ್, ಹರೀಶ್ ಕುಮಾರ್ ಬಾಲಕ್ರಾಮ್, ಶುಭಂ ಲೊಂಕರ್, ಸಹೋದರ ಪರ್ವಿನ್ ಲೊಂಕರ್ ಅವರನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಇದೇ ವೇಳೆ ಸಲ್ಮಾನ್ ಖಾನ್ಗೆ ಬೆದರಿಕೆ ಹಾಕುತ್ತಿದ್ದ ಲಾರೆನ್ಸ್ ಬಿಷ್ಟೋಯಿ ಗ್ಯಾಂಗ್ನ ಸದಸ್ಯನನ್ನು ಬಂಧಿಸಿದ್ದಾಗಿ ಪೊಲೀಸರು ಹೇಳಿಕೆ ಕೊಟ್ಟ ಬಳಿಕ ಈ ಸಂದೇಶವನ್ನು ರವಾನೆ ಮಾಡಲಾಗಿದೆ.
ಹಾಗೇ ಬಾಬಾ ಸಿದ್ಧಿಕಿ ಹತ್ಯೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಮತ್ತೊಬ್ಬ ಆರೋಪಿ ಸುಖಾ ಅಲಿಯಾಸ್ ಸುಖ್ಬಿರ್ ಬಲ್ಬೀರ್ ಸಿಂಗ್ ಎಂಬಾತನನ್ನು ಹರಿಯಾಣದಲ್ಲಿ ಬಂಧಿಸಿದ್ದಾರೆ. ಸುಖ್ಬೀರ್ ಬಲ್ಬೀರ್ ಸಿಂಗ್ ಹಾಗೂ ಲಾರೆನ್ಸ್ ಬಿಷ್ಟೋಯಿ ಗ್ಯಾಂಗ್ನ ಸದಸ್ಯರು ಬಾಬಾ ಸಿದ್ಧಿಕಿ ಹತ್ಯೆ ಮಾಡುವುದಕ್ಕೆ ಪಾಕಿಸ್ತಾನದ ಗನ್ಗಳನ್ನು ಬಳಕೆ ಮಾಡಿದ್ದರು ಎಂದು ಹೇಳಲಾಗುತ್ತಿದೆ. ಬಾಬಾ ಸಿದ್ಧಿಕಿ ಹತ್ಯೆ ಹಾಗೂ ಸಲ್ಮಾನ್ ಖಾನ್ಗೆ ಬೆದರಿಕೆ ಸಂದೇಶದ ಬಗ್ಗೆ ಪೊಲೀಸರು ತನಿಖೆಯನ್ನು ಚುರುಕು ಗೊಳಿಸಿದ್ದಾರೆ.


Click it and Unblock the Notifications











