ಡಾ. ರಾಜ್ ಕುಮಾರ್ ಅಪಹರಣ: ಆ ಕರಾಳ ಘಟನೆಗೆ 20 ವರ್ಷ
ಇಂದಿಗೆ 20 ವರ್ಷಗಳ ಹಿಂದೆ ಇಡೀ ನಾಡು ನಡುಗುವ ಘಟನೆಯೊಂದು ನಡೆದಿತ್ತು. ಎಲ್ಲೆಡೆ ಆಕ್ರಂದನ, ಆಕ್ರೋಶ, ಗೊಂದಲ, ಹತಾಶೆ ಸಂಪೂರ್ಣ ರಾಜ್ಯವನ್ನು ಕದಡಿತ್ತು. 2000ನೇ ಇಸವಿಯ ಜುಲೈ 30ರ ರಾತ್ರಿ ಪತ್ನಿ ಪಾರ್ವತಮ್ಮ ಅವರೊಂದಿಗೆ ತಮ್ಮ ಹುಟ್ಟೂರು ಗಾಜನೂರಿಗೆ ಹೋಗಿದ್ದ ಡಾ. ರಾಜ್ ಕುಮಾರ್ ಅವರನ್ನು ಕಾಡುಗಳ್ಳ, ನರಹಂತಕ ವೀರಪ್ಪನ್ ಅಪಹರಿಸಿದ್ದ. ಆ ಸುದ್ದಿ ರಾಜ್ಯದ ಜನತೆಗೆ ಮರುದಿನ ಬೆಳಿಗ್ಗೆ ಬರಸಿಡಿಲಿನಂತೆ ಅಪ್ಪಳಿಸಿತ್ತು.
ಈ ಘಟನೆ ನಡೆದ 108 ದಿನಗಳ ಬಳಿಕ ರಾಜ್ ಕುಮಾರ್ ಬಿಡುಗಡೆಯಾಗಿ ಮನೆಗೆ ಮರಳಿದ್ದು. ನಂತರ ಅಣ್ಣಾವ್ರು ಅಭಿಮಾನಿ ದೇವರುಗಳ ಜತೆಗೆ ಇದ್ದದ್ದು ಆರು ವರ್ಷ ಮಾತ್ರ. ಆದರೆ, ರಾಜ್ ಕುಮಾರ್ ಅಪಹರಣದ ಸಂದರ್ಭದಲ್ಲಿ ರಾಜ್ಯದಾದ್ಯಂತ ಉಂಟಾದ ಗದ್ದಲ, ಪ್ರತಿಭಟನೆ, ಜನರ ಕಣ್ಣೀರು, ಸರ್ಕಾರದಲ್ಲಿಯೂ ಮೂಡಿಸಿದ ಕೋಲಾಹಲವನ್ನು ಕಂಡವರಿಗೆ, 20 ವರ್ಷಗಳು ಕಳೆದಿದ್ದರೂ ಈ ಕರಾಳ ಘಟನೆಯನ್ನು ಮರೆಯಲು ಸಾಧ್ಯವಾಗದು. ಮುಂದೆ ಓದಿ...

ಹುಟ್ಟೂರಿಗೆ ತೆರಳಿದ್ದ ರಾಜ್ ಕುಮಾರ್
ರಾಜ್ ಕುಮಾರ್ ಅವರ ತಾಯಿಯ ಊರು ಗಾಜನೂರು. ಇಲ್ಲಿಯೇ ಹುಟ್ಟಿ ಬೆಳೆದ ರಾಜ್ ಕುಮಾರ್ ಅವರಿಗೆ ಹುಟ್ಟೂರನ್ನು ಕಂಡರೆ ಅಪಾರ ಪ್ರೀತಿ. ಅಭಿನಯಿಸುತ್ತಿದ್ದಾಗ, ನಟನೆಯಿಂದ ದೂರವಾದ ಬಳಿಕವೂ ಅವರು ಆಗಾಗ ಗಾಜನೂರಿಗೆ ಬರುತ್ತಿದ್ದರು. ಅಲ್ಲಿನ ತೋಟದ ಮನೆಯಲ್ಲಿ ವಾಸ್ತವ್ಯ ಹೂಡುತ್ತಿದ್ದರು. ಆ ಜಮೀನಿನಲ್ಲಿ ಕೊರೆಯಿಸಿದ ಕೊಳವೆ ಬಾವಿಯಲ್ಲಿ ನೀರು ಬಂದಿರುವ ಸಂತಸದ ಸುದ್ದಿ ತಿಳಿದ ರಾಜ್ ಕುಮಾರ್, ಪಾರ್ವತಮ್ಮ ಮತ್ತು ಇತರೆ ಕೆಲವು ಸಂಬಂಧಿಕರೊಂದಿಗೆ ಅಲ್ಲಿಗೆ ತೆರಳಿದ್ದರು.

ಚಾಮರಾಜನಗರದಿಂದ ಫೋನ್
ರಾಜ್ ಕುಮಾರ್ ಅವರು ಗಾಜನೂರಿಗೆ ಬಂದಿದ್ದ ಸಂಗತಿ ವೀರಪ್ಪನ್ ಕಿವಿಗೆ ಬಿದ್ದಿತ್ತು. ಕೂಡಲೇ ಸಂಚು ರೂಪಿಸಿ ಗಾಜನೂರಿನ ತೋಟದ ಮನೆಯಿಂದ ರಾಜ್ ಕುಮಾರ್ ಹಾಗೂ ಇತರೆ ಮೂವರನ್ನು ರಾತ್ರಿ ಅಪಹರಿಸಿ ಕರೆದೊಯ್ದಿದ್ದ. ಗಾಬರಿಗೊಂಡ ಪಾರ್ವತಮ್ಮ ಹಾಗೂ ಇತರರು ಚಾಮರಾಜನಗರಕ್ಕೆ ಬಂದು ಎಸ್ಟಿಡಿ ಬೂತ್ ಮೂಲಕ ಮಕ್ಕಳು ಹಾಗೂ ಇತರರಿಗೆ ಅಪಹರಣದ ಮಾಹಿತಿ ನೀಡಿದ್ದರು.

ಊಟ ಮುಗಿಸಿ ಕುಳಿತಿದ್ದಾಗ ಅಪಹರಣ
ರಾತ್ರಿ ಊಟ ಮುಗಿಸಿ ಹಳೆಯ ಮನೆಯ ಹಜಾರದಲ್ಲಿ ಎಲೆ ಅಡಿಕೆ ಹಾಕಿಕೊಳ್ಳುತ್ತಾ ಟಿ.ವಿ. ನೋಡುತ್ತಾ ಕುಳಿತಿದ್ದರು. ರಾತ್ರಿ 9 ಗಂಟೆ ಸುಮಾರಿಗೆ ಸುಮಾರು 15 ಸಹಚರರ ಜತೆಗೆ ಮನೆಗೆ ನುಗ್ಗಿದ್ದ ವೀರಪ್ಪನ್, ರಾಜ್ ಕುಮಾರ್ ಅವರ ಬೆನ್ನಿಗೆ ಬಂದೂಕು ಇರಿಸಿ ಕೈಗಳನ್ನು ನೈಲಾನ್ ಹಗ್ಗದಿಂದ ಕಟ್ಟಿದ್ದ. ಪೊಲೀಸರಿಗೆ ಮಾಹಿತಿ ನೀಡಿದರೆ ಕೊಂದು ಬಿಡುತ್ತೇವೆ ಎಂದು ಬೆದರಿಕೆ ಪಾರ್ವತಮ್ಮ ಅವರ ಕೈಗೆ ಕ್ಯಾಸೆಟ್ವೊಂದನ್ನು ನೀಡಿದ್ದ. ಅದರಲ್ಲಿ ತನ್ನ ಬೇಡಿಕೆಗಳನ್ನು ಹೇಳಿದ್ದು, ಅದನ್ನು ಸರ್ಕಾರಕ್ಕೆ ತಲುಪಿಸುವಂತೆ ಹೇಳಿದ್ದ.

ಅಣ್ಣಾವ್ರ ಜತೆ ಮೂವರ ಅಪಹರಣ
ರಾಜ್ ಕುಮಾರ್ ಅವರೊಂದಿಗೆ ಅವರ ಅಳಿಯ ಎಸ್ಎ ಗೋವಿಂದರಾಜ್, ಸಹ ನಿರ್ದೇಶಕ ನಾಗಪ್ಪ ಮಾರಡಗಿ, ಸಂಬಂಧಿ ನಾಗೇಶ್ ಅವರನ್ನು ವೀರಪ್ಪನ್ ಅಪಹರಿಸಿ ಕರೆದುಕೊಂಡು ಹೋಗಿದ್ದ. ರಾತ್ರಿ 1.30ರ ವೇಳೆ ಪಾರ್ವತಮ್ಮ ರಾಜ್ ಕುಮಾರ್, ಬೆಂಗಳೂರಿಗೆ ಧಾವಿಸಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರನ್ನು ಭೇಟಿ ಮಾಡಿದ್ದರು. ಎಸ್ ಎಂ ಕೃಷ್ಣ ಬೆಳಿಗ್ಗೆಯೇ ತಮಿಳುನಾಡಿಗೆ ತೆರಳಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಜತೆ ಸಭೆ ನಡೆಸಿದ್ದರು.

108 ದಿನಗಳ ಬಳಿಕ ಬಿಡುಗಡೆ
ನಂತರ ನಡೆದಿದ್ದು 108 ದಿನಗಳ ಆತಂಕ, ಭಯ, ಪ್ರತಿಭಟನೆ. ಚಿತ್ರರಂಗ ಅಕ್ಷರಶಃ ಸ್ಥಗಿತಗೊಂಡಿತ್ತು. ಆರಾಧ್ಯ ದೈವ ರಾಜ್ ಕುಮಾರ್ ಕ್ಷೇಮವಾಗಿ ಬರಲಿ ಎಂದು ಪ್ರತಿನಿತ್ಯ ಪೂಜೆ ಹೋಮ ಹವನಗಳನ್ನು ನಡೆಸಿದರು. ಸತತ ಪ್ರಯತ್ನ, ಸಂಧಾನಗಳ ಬಳಿಕ 2000ದ ನವೆಂಬರ್ 15ರಂದು ರಾಜ್ ಕುಮಾರ್ ಅವರನ್ನು ವೀರಪ್ಪನ್ ಬಿಡುಗಡೆ ಮಾಡಿದ್ದ. ಇದಾಗಿ ನಾಲ್ಕು ವರ್ಷಗಳ ಬಳಿಕ 2004ರ ಅ. 18ರಂದು ವೀರಪ್ಪನ್ನನ್ನು ಎಸ್ಟಿಎಫ್ ಪಡೆ ಎನ್ಕೌಂಟರ್ನಲ್ಲಿ ಹತ್ಯೆ ಮಾಡಿತ್ತು.

ಕಾಡುವ ಘಟನೆಗಳು
ರಾಜ್ ಕುಮಾರ್ ಅವರ ಅಪಹರಣ ನಡೆದ ಆ ತೋಟದ ಮನೆ ಈಗಿಲ್ಲ. ಅದನ್ನು ನೆಲಸಮ ಮಾಡಲಾಗಿತ್ತು. ಬಳಿಕ ಅದರ ಎದುರಿನ ಜಾಗದಲ್ಲಿ ಮತ್ತೊಂದು ಬೃಹತ್ ಬಂಗಲೆಯನ್ನು ನಿರ್ಮಿಸಲಾಯಿತು. ಇದೆಲ್ಲವೂ ಈಗ ಇತಿಹಾಸ. ಆದರೆ ಡಾ. ರಾಜ್ ಕುಮಾರ್ ಅವರ ಅಭಿಮಾನಿಗಳ ಪಾಲಿಗೆ ಎಂದಿಗೂ ಕಾಡುವ ಎರಡು ದುರಂತ ಘಟನೆಗಳೆಂದರೆ ಅವರ ಅಗಲಿಕೆ ಮತ್ತು ಈ ಅಪಹರಣ.


Click it and Unblock the Notifications