ಜೋಗಿ ಪ್ರೇಮ್-ಕನಕಪುರ ಶ್ರೀನಿವಾಸ್ ನಡುವಿನ 18 ವರ್ಷಗಳ ಹಿಂದಿನ ವ್ಯವಹಾರವೇನು?
ಇತ್ತೀಚೆಗೆ ಕನಕಪುರ ಶ್ರೀನಿವಾಸ್ ಮಾಡಿದ ಆರೋಪಗಳು ಸ್ಯಾಂಡಲ್ವುಡ್ನಲ್ಲಿ ದೊಡ್ಡ ಮಟ್ಟಕ್ಕೆ ಹಲ್ಚಲ್ ಎಬ್ಬಿಸಿದೆ. ಕನ್ನಡದ ಸೂಪರ್ಸ್ಟಾರ್ಗಳು, ನಿರ್ದೇಶಕರು ಸೇರಿದಂತೆ ಹಲವರ ಮೇಲೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಇದರಲ್ಲಿ ಪುನೀತ್ ರಾಜ್ಕುಮಾರ್ ಸೇರಿದಂತೆ ಜೋಗಿ ಪ್ರೇಮ್ ಕೂಡ ಸೇರಿಕೊಂಡಿದ್ದಾರೆ.
ನಿರ್ದೇಶಕ ಜೋಗಿ ಪ್ರೇಮ್ ವಿರುದ್ಧ ಕನಕಪುರ ಶ್ರೀನಿವಾಸ್ ಹಣ ಪಡೆದು ಹಿಂತಿರುಗಿಸಿಲ್ಲವೆಂದು ಗಂಭೀರ ಆರೋಪ ಮಾಡಿದ್ದಾರೆ. ಹಾಗಂತ ಈ ಆರೋಪ ಮಾಡಿದ್ದು ಇದೇ ಮೊದಲೇನಲ್ಲ. ಸುಮಾರು 7 ವರ್ಷಗಳ ಹಿಂದೇನೆ ಈ ಆರೋಪ ಮಾಡಿದ್ದರು. ಆಗಲೂ ಜೋಗಿ ಪ್ರೇಮ್ ಫಿಲ್ಮ್ ಚೇಂಬರ್ಗೆ ದೂರನ್ನು ನೀಡಿದ್ದರು. ಆ ವೇಳೆ ನಿರ್ಮಾಪಕ ಕೆ ಮಂಜು ಸಂಧಾನ ಮಾಡುವುದಕ್ಕೆ ಮುಂದೆ ಬಂದಿದ್ದರು.

7 ವರ್ಷಗಳ ಹಿಂದೆ ಜೋಗಿ ಪ್ರೇಮ್ ವಿರುದ್ಧ ಏನೆಲ್ಲ ಆರೋಪಗಳನ್ನು ಮಾಡಿದ್ದರು? ಕನಕಪುರ ಶ್ರೀನಿವಾಸ್ ಯಾವಾಗ ಜೋಗಿ ಪ್ರೇಮ್ಗೆ ಸಿನಿಮಾ ಮಾಡುವುದಕ್ಕೆ ಹೇಳಿದ್ದರು? ಇಬ್ಬರ ನಡುವೆ ಎಲ್ಲಿ ಮಾತುಕತೆ ಆಗಿತ್ತು? ಮುಂಗಡ ಹಣ ಅಂತ ಎಷ್ಟು ಕೊಟ್ಟಿದ್ದರು? ಎಷ್ಟು ಹಣವನ್ನು ಹಿಂತಿರುಗಿಸಿದ್ದರು? ಇದೆಲ್ಲ ಮಾಹಿತಿಯನ್ನು ಹಂಚಿಕೊಂಡಿದ್ದರು.
ಇತ್ತೀಚೆಗೆ ವೇದಿಕೆ ಮೇಲೆ ಕನಕಪುರ ಶ್ರೀನಿವಾಸ್ ಆರೋಪ ಮಾಡಿದಂತೆ ಅಂದು ಪತ್ರಿಕಾಗೋಷ್ಠಿ ನಡೆಸಿದ್ದರು. ಜೋಗಿ ಪ್ರೇಮ್ ಗಂಭೀರ ಆರೋಪ ಮಾಡಿದ್ದರು. ಆ ವೇಳೆ ಜೋಗಿ ಸೀದಾ ಫಿಲ್ಮ್ ಚೇಂಬರ್ಗೆ ಬಂದು ದೂರನ್ನು ನೀಡಿದ್ದರು. ಆ ವೇಳೆ ಕೆ. ಮಂಜು ಕೂಡ ಜೊತೆಯಲ್ಲಿ ಇದ್ದರು. ಆಗ ಮಾಧ್ಯಮಗಳ ಮುಂದೆ ಹೀಗಂದಿದ್ದರು.
"ಅವರು ಪ್ರೆಸ್ ಮೀಟ್ ಮಾಡಿ 'ಅ', 'ಮ' ಅಂತ ಮಾತಾಡಿದ್ದಾರೆ. ನಾನು ಅವರ ಲೆವೆಲ್ಗೆ ಇಳಿದು ಮಾತಾಡುವುದಿಲ್ಲ. ನಾನು ಇಳಿದು ಮಾತಾಡಿದರೆ, ಅದು ಬೇರೆ ತರ ಆಗುತ್ತೆ. ಪಾಪಾ ವಯಸ್ಸಾಗಿದೆ. ಅವರು ನಮ್ಮ ತಂದೆ ಸಮಾನರು. ಎಲ್ಲಕ್ಕಿಂತ ಹೆಚ್ಚಾಗಿ ನಿರ್ಮಾಪಕರನ್ನು ಅನ್ನದಾತರು ಅಂತ ಹೇಳ್ತೀವಿ. ಅವರನ್ನು ನೋಯಿಸಬಾರದು ಅನ್ನೋದು ನನ್ನ ಭಾವನೆ." ಎಂದಿದ್ದರು.
ಜೋಗಿ ಪ್ರೇಮ್ಗೆ ಕನಕಪುರ ಶ್ರೀನಿವಾಸ್ ಅವರನ್ನು ಪುನೀತ್ ರಾಜ್ಕುಮಾರ್ ನಟಿಸುತ್ತಿದ್ದ 'ರಾಜ್ ದಿ ಶೋ' ಶೂಟಿಂಗ್ ವೇಳೆ ನಿರ್ಮಾಪಕ ಶ್ರೀಕಾಂತ ಪರಿಚಯಿಸಿದ್ದರು. ಆ ವೇಳೆ ಏನೆಲ್ಲ ಮಾತುಕತೆ ನಡೀತು ಅನ್ನೋದನ್ನು ಹೇಳಿದ್ದಾರೆ. "ನಾನು ಅವರಿಗೆ ರಾಜ್ ದಿ ಶೋ ಮ್ಯಾನ್ ಮಾಡುವಾಗ ಒಂದು ಸಿನಿಮಾ ಮಾಡುತ್ತೇನೆ ಎಂದು ಒಪ್ಪಿಕೊಂಡಿದ್ದೆ. ನನಗೆ ಕನಕಪುರ ಶ್ರೀನಿವಾಸ್ ಅವರು ಪರಿಚಯ ಇರಲಿಲ್ಲ. ಶ್ರೀಕಾಂತ್ ಅವರು ಕರೆದುಕೊಂಡು ಬಂದು ನನಗೆ ಅಡ್ವಾನ್ಸ್ ಕೊಡಿಸಿದರು. ಐದು ಲಕ್ಷ ಚೆಕ್. ನಾಲ್ಕು ಲಕ್ಷ ಕ್ಯಾಶ್ನಲ್ಲಿ ಅಡ್ವಾನ್ಸ್ ಕೊಟ್ಟರು. ಆಗ ನಾನು ಬಾಡಿಗೆಗೆ ಆಫೀಸ್ ಮಾಡಿಕೊಂಡಿದ್ದೆ. ವಿಜಯನಗರದ ಹತ್ತಿರ 15 ಸಾವಿರ ಬಾಡಿಗೆ ಕೊಡುತ್ತಿದ್ದೆ. 15 ಜನ ಹುಡುಗರು ಇದ್ದರು. ನಾನು ದುಡ್ಡು ಕೊಟ್ಟ ಮೇಲೆ 1 ವರ್ಷ ಕೆಲಸ ಮಾಡಿದೆ. ಕೂತು ಕಥೆ ಮಾಡಿದೆ." ಎಂದಿದ್ದಾರೆ.

ಕನಕಪುರ ಶ್ರೀನಿವಾಸ್ ಅವರ ಸಿನಿಮಾ ಒಪ್ಪಿಕೊಂಡಿದ್ದಕ್ಕಾಗಿ ಜೋಗಿ ಪ್ರೇಮ್ ಮೂರು ಪ್ರಾಜೆಕ್ಟ್ ಕೈ ಬಿಟ್ಟಿದ್ದರಂತೆ. "ಸೌಂದರ್ಯ ಜಗದೀಶ್ ಅವರ ಸಿನಿಮಾ ಮಾಡಬೇಕಿತ್ತು. ಅದನ್ನು ಮುಂದಕ್ಕೆ ಹಾಕಿದೆ. ನಾನು ಉಪೇಂದ್ರ ಅವರು ಮುನಿರತ್ನ ಅವರ ಪ್ರೊಡಕ್ಷನ್ನಲ್ಲಿ ಮಾಡಬೇಕಿತ್ತು ಅದನ್ನೂ ಮುಂದಕ್ಕೆ ಹಾಕಿದೆ. ಕೊನೆಗೆ ಮಂಜಣ್ಣನ ಸಿನಿಮಾದಲ್ಲಿ ಆಕ್ಟ್ ಮಾಡಬೇಕಿತ್ತು. ಅದನ್ನೂ ಮುಂದಕ್ಕೆ ಹಾಕಿದೆ. ಯಾಕೆ ಅಂದರೆ, ಇವರ ಹತ್ತಿರ 9 ಲಕ್ಷ ಅಡ್ವಾನ್ಸ್ ತೆಗೆದುಕೊಂಡಿದ್ದೆ. ಒಂದು ವರ್ಷ ಕಥೆ ಮಾಡಿದೆ. ಇನ್ನೊಂದು ವರ್ಷ ಇವರಿಗಾಗಿ ಕಾದು ಕೂತಿದ್ದೆ." ಎಂದು ಪ್ರೇಮ್ ಹೇಳಿದ್ದರು.
ಎರಡು ವರ್ಷ ಒಂದು ಪ್ರಾಜೆಕ್ಟ್ಗಾಗಿ ಕೆಲಸ ಮಾಡಿದ್ದು, 9 ಲಕ್ಷ ರೂಪಾಯಿಯಲ್ಲಿ 5 ಲಕ್ಷ ರೂ. ಅನ್ನು ಹಿಂತಿರುಗಿಸಿದ್ದು, ಇನ್ನು ನಾಲ್ಕು ಆಫೀಸ್ ಬಾಡಿಗೆ, ಸಹಾಯಕರು ಅಂತ ಖರ್ಚಾಗಿದೆಯೆಂದು ಲೆಕ್ಕ ಕೊಟ್ಟಿದ್ದರು. "ಇವರು ಯಾವಾಗ ಸಮಸ್ಯೆ ಅಂದರು, ಆಗ ಮಾನವೀಯತೆಗಿಂತ ಹೆಚ್ಚಾಗಿ 5 ಲಕ್ಷ ರೂಪಾಯಿಯನ್ನು ವಾಪಾಸ್ ಕೊಟ್ಟಿದ್ದೇನೆ. 2.5 ಲಕ್ಷ ಚೆಕ್ ಮೂಲಕ, 2.5 ಲಕ್ಷ ಕ್ಯಾಶ್ ಕೊಟ್ಟಿದ್ದೇನೆ. ಅವರು ಇನ್ನೂ ನಾಲ್ಕು ಲಕ್ಷ ಕೊಡಿ ಅಂತ ಕೇಳುತ್ತಿದ್ದಾರೆ. ಈ ನಾಲ್ಕು ಲಕ್ಷವನ್ನು ಕೊಡಬಹುದು. ಆದರೆ, ಈ ಎರಡು ವರ್ಷ ಕೆಲಸ ಮಾಡಿದ್ದೇನಲ್ಲ. ಅದಕ್ಕೆ ಯಾರು ದುಡ್ಡು ಕೊಡುತ್ತಾರೆ?" ಎಂದು ಅಂದೇ ಜೋಗಿ ಪ್ರೇಮ್ ಪ್ರಶ್ನೆ ಮಾಡಿದ್ದರು.


Click it and Unblock the Notifications











