ಚಿಕ್ಕದೊಂದು ನ್ಯೂಸ್ ಆಧರಿಸಿ ನಿರ್ಮಿಸಿದ ಸಿನಿಮಾ ₹423 ಕೋಟಿ ಲೂಟಿ ಮಾಡಿತ್ತು; ದಿಗ್ಗಜರು ನಟಿಸಿದ ಆ ಸಿನಿಮಾ ಯಾವುದು?
ಸಿನಿಮಾಗೆ ಕಥೆ ಎಲ್ಲಿಂದ ಬೇಕಾದರೂ ಸಿಗಬಹುದು. ನಿರ್ದೇಶಕರಿಗೆ, ಕಥೆಗಾರರಿಗೆ ಚಿಕ್ಕೊಂದು ಎಳೆ ಸಿಕ್ಕರೂ ಇಡೀ ಸಿನಿಮಾದ ಕಥೆಯೇ ಸಿಕ್ಕಿಬಿಡುತ್ತೆ. ಭಾರತೀಯ ಚಿತ್ರರಂಗದ ಎವರ್ಗ್ರೀನ್ ಸಿನಿಮಾವೊಂದಕ್ಕೆ ಇಂತಹದ್ದೇ ಒಂದು ಸನ್ನಿವೇಶದಲ್ಲಿ ಕಥೆ ಸಿಕ್ಕಿತ್ತು. ನ್ಯೂಸ್ ಪೇಪರ್ನಲ್ಲಿ ಬಂದಿದ್ದ ಚಿಕ್ಕದೊಂದು ಸುದ್ದಿ ಆ ವರ್ಷದಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ ಪಟ್ಟಿಗೆ ಸೇರಿಸಿತ್ತು.
ಭಾರತೀಯ ಚಿತ್ರರಂಗಕ್ಕೆ ಹಲವು ಎವರ್ಗ್ರೀನ್ ಸಿನಿಮಾಗಳನ್ನು ಕೊಟ್ಟಿರುವ ನಿರ್ದೇಶಕ ಮನಮೋಹನ್ ದೇಸಾಯಿ. ಭಾರತೀಯ ನಾಡಿ ಮೀಡಿತವನ್ನು ಚೆನ್ನಾಗಿ ಅರಿತಿದ್ದ ಈ ನಿರ್ದೇಶಕ ಕಥೆಯನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದ ಪರಿಯೇ ಬೇರೆ. ಬಾಲಿವುಡ್ನ ಮೆಗಾ ಸ್ಟಾರ್ ಅಮಿತಾಭ್ ಬಚ್ಚನ್ ಜೊತೆಯೇ ಹೆಚ್ಚು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು. ಬಹುತೇಕ ಎಲ್ಲಾ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿವೆ.

ಕಡಿಮೆ ಸಮಯದಲ್ಲಿ, ಕಡಿಮೆ ಬಜೆಟ್ನಲ್ಲಿ ಸಿನಿಮಾವನ್ನು ನಿರ್ಮಾಣ ಮಾಡುವುದರಲ್ಲಿ ಮನಮೋಹನ್ ದೇಸಾಯಿ ಫೇಮಸ್. ಇವರು ನಿರ್ದೇಶಿಸಿದ ಸಿನಿಮಾಗಳಿಗೆ ಪ್ರತ್ಯೇಕ ಅಭಿಮಾನಿ ಬಳಗವೇ ಇವೆ. ಹೀಗೊಮ್ಮೆ ಮನಮೋಹನ್ ದೇಸಾಯಿ ಸಂಜೆ ವೇಳೆ ಸಂಜೆ ಪತ್ರಿಕೆಯೊಂದನ್ನು ಓದುತ್ತಿದ್ದರು. ಆ ವೇಳೆ ನ್ಯೂಸ್ ಪೇಪರ್ನಲ್ಲಿ ಚಿಕ್ಕದೊಂದು ಸುದ್ದಿ ಪ್ರಕಟವಾಗಿತ್ತು. ಅದನ್ನು ಓದುತ್ತಿದ್ದಂತೆ ಮನಮೋಹನ್ ದೇಸಾಯಿಗೆ ಸೂಪರ್ ಹಿಟ್ ಸಿನಿಮಾದ ಕಥೆ ಹೊಳೆದು ಬಿಟ್ಟಿತ್ತು. ಅಲ್ಲಿಂದ ಶುರುವಾದ ಕೆಲಸ ಭಾರತೀಯ ಚಿತ್ರರಂಗ ಎವರ್ಗ್ರೀನ್ ಸಿನಿಮಾ ಕೊಡುವವರೆಗೂ ಸಾಗಿತ್ತು.
ನಿರ್ದೇಶಕ ಮನಮೋಹನ್ ದೇಸಾಯಿ ನಿರ್ದೇಶಿಸಿದ ಸಿನಿಮಾಗಳು ಕಣ್ಮುಂದೆ ಬರಬಹುದು. ಈ ಲೆಜೆಂಡರಿ ನಿರ್ದೇಶನಿಗೆ ಚಿಕ್ಕದೊಂದು ಸುದ್ದಿಯಿಂದ ಹೊಳೆದ ಆ ಸಿನಿಮಾ ಕತೆಯೇ 'ಅಮರ್ ಅಕ್ಬರ್ ಆಂಟೋನಿ'. ಈ ಸಿನಿಮಾ ಬಾಲಿವುಡ್ ಬಾಕ್ಸಾಫೀಸ್ನಲ್ಲಿ ಹೊಸ ದಾಖಲೆಯನ್ನೇ ಬರೆದಿತ್ತು. 1977ರಲ್ಲಿ ರಿಲೀಸ್ ಆಗಿದ್ದ ಈ ಸಿನಿಮಾ ಅಂದೇ 155 ಮಿಲಿಯನ್ ಡಾಲರ್ ಅನ್ನು ಕಲೆ ಹಾಕಿತ್ತು. ವಿಕಿಪೀಡಿಯ ಪ್ರಕಾರ, ಇಂದಿನ ಕಾಲಕ್ಕೆ ಅದು 423 ಕೋಟಿ ರೂಪಾಯಿ. ಹಿರಿಯ ಪತ್ರಕರ್ತ ಹರಿಹರಪುರ ಮಂಜುನಾಥ್ ಸಿನೆರಮಾ ಅನ್ನೋ ಯೂಟ್ಯೂಬ್ ಚಾನೆಲ್ನಲ್ಲಿ ಈ ಇಂಟ್ರೆಸ್ಟಿಂಗ್ ಕಥೆಯನ್ನು ಹೇಳಿದ್ದಾರೆ.

"ಒಮ್ಮೆ ನಿರ್ದೇಶಕ ಮನಮೋಹನ್ ದೇಸಾಯಿಯವರು ಸಂಜೆ ಪತ್ರಿಕೆಯನ್ನು ಓದುತ್ತಿರುತ್ತಾರೆ. ಅದರಲ್ಲೊಂದು ಸುದ್ದಿ ಪ್ರಕಟವಾಗಿರುತ್ತೆ. ಮದ್ಯ ವ್ಯಸನಿಯಾದ ತಂದೆಯೊಬ್ಬ ತನ್ನ ಮೂರು ಮಕ್ಕಳನ್ನು ಅನಾಥವಾಗಿ ಬಿಟ್ಟು ಎಲ್ಲೋ ಹೊರಟು ಹೋಗಿದ್ದಾನೆ. ಇಷ್ಟೇ ಸುದ್ದಿಯಿತ್ತು. ಈ ಸುದ್ದಿಯನ್ನು ಓದಿದ ಕೂಡಲೇ 'ಅಮರ್ ಅಕ್ಬರ್ ಆಂಟೋನಿ' ಕಥೆ ಸ್ಥೂಲವಾಗಿ ರೂಪುಗೊಳ್ಳುತ್ತೆ." ಎಂದು ಇಂಟ್ರೆಸ್ಟಿಂಗ್ ಕಥೆಯನ್ನು ಹೇಳಿದ್ದಾರೆ.
'ಅಮರ್ ಅಕ್ಬರ್ ಆಂಟೋನಿ' ಕಥೆ ಹೊಳೆದ ಕೂಡಲೇ ನಿರ್ದೇಶಕ ಮನಮೋಹನ್ ದೇಸಾಯಿ ಅವರ ಪತ್ನಿ ಜೀವನ್ ಪ್ರಭಾ ದೇಸಾಯಿ ಅವರ ಬಳಿ ಈ ವಿಷಯವನ್ನು ಹಂಚಿಕೊಳ್ಳುತ್ತಾರೆ. ಆಗ ಅವರ ಪತ್ನಿ ಹಾಗೂ ಪುಷ್ಪ ಶರ್ಮಾ ಸೇರಿಕೊಂಡು ಕಥೆಗೆ ಅಂತಿಮ ರೂಪವನ್ನು ಕೊಡುತ್ತಾರೆ. ಇಷ್ಟಾದ್ಮೇಲೆ ಬಾಲಿವುಡ್ ಖ್ಯಾತ ನಟ ಹಾಗೂ ಸಂಭಾಷಣೆಗಾರ ಖಾದರ್ ಖಾನ್ ಡೈಲಾಗ್ ಬರೆಯುತ್ತಾರೆ. ಅಲ್ಲಿಗೆ ಒಂದು ಹಂತದಲ್ಲಿ ಸಿನಿಮಾ ಸಿದ್ಧವಾಗುತ್ತೆ.
'ಅಮರ್ ಅಕ್ಬರ್ ಆಂಟೋನಿ'ಗೆ ದೊಡ್ಡ ತಾರಗಣವೇ ಬೇಕಿರುತ್ತೆ. ಮೂರು ಪಾತ್ರಗಳಿಗೂ ಅಂದಿನ ಕಾಲದ ಸೂಪರ್ಸ್ಟಾರ್ಗಳನ್ನೇ ಆಯ್ಕೆ ಮಾಡಿಕೊಳ್ಳಲಾಗಿತ್ತು. ನಿರ್ದೇಶಕ ಫೇವರಿಟ್ ಅಮಿತಾಭ್ ಬಚ್ಚನ್, ರಿಷಿ ಕಪೂರ್ ಹಾಗೂ ವಿನೋದ್ ಖನ್ನಾ ಆಯ್ಕೆಯಾಗಿದ್ದರು. ಇವರಿಗೆ ಪರ್ವಿನ್ ಬಾಬಿ, ಶಬಾನಾ ಆಜ್ಮಿ ಹಾಗೂ ನೀತು ಸಿಂಗ್ ನಾಯಕಿಯರಾಗಿ ನಟಿಸಿದ್ದರು. ಜೊತೆಗೆ ಪ್ರಾಣ್, ಜೀವನ್ ಅಂತ ದಿಗ್ಗಜರು ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.


Click it and Unblock the Notifications











