ಅಣ್ಣಾವ್ರ ಎದುರು ನಟಿಸುವುದಕ್ಕೆ ಹೆದರಿ ಬೆವರಿದ ಆರತಿ ನಾಲ್ಕು ಬಾರಿ ಬ್ಲೌಸ್ ಬದಲಿಸಿದ್ದರು: ಆ ಸಿನಿಮಾ ಯಾವುದು?
ಡಾ.ರಾಜ್ಕುಮಾರ್ ಅವರೊಂದಿಗೆ ನಟಿಸಬೇಕು ಅನ್ನೋದು ಅದೆಷ್ಟೋ ಮಂದಿಯ ಕನಸು. ಇಂತಹ ಮಹದಾಸೆಯನ್ನು ಈಡೇರಿಸಿಕೊಂಡಿದ್ದು ಕನ್ನಡದ ಕೆಲವೇ ಕೆಲವು ನಟಿಯರು. ಅವರಲ್ಲಿ ಹಿರಿಯ ನಟಿ ಆರತಿ ಕೂಡ ಒಬ್ಬರು. ಅಣ್ಣಾವ್ರು ಹಾಗೂ ಆರತಿ ಜೋಡಿಯಾಗಿ ನಟಿಸಿದ ಸಿನಿಮಾಗಳಲ್ಲಿ ಕೆಲವು ಎವರ್ಗ್ರೀನ್ ಸಿನಿಮಾಗಳ ಲಿಸ್ಟ್ ಸೇರಿದೆ. ಕನ್ನಡ ಚಿತ್ರರಂಗ ಕಂಡ ಬೆಸ್ಟ್ ಜೋಡಿಗಳಲ್ಲಿ ಇದೂ ಕೂಡ ಒಂದು.
ಆರತಿ ಹೆಸರು ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರೊಂದಿಗೆ ವೃತ್ತಿ ಹಾಗೂ ವೈಯಕ್ತಿಕ ಬದುಕಿನಲ್ಲಿ ಹೆಚ್ಚಾಗಿ ತಳುಕು ಹಾಕಿಕೊಂಡಿದೆ. ಆರತಿಗಾಗಿಯೇ ಪುಟ್ಟಣ್ಣ ಕಣಗಲ್ ಕೆಲವು ಸಿನಿಮಾಗಳನ್ನು ನಿರ್ದೇಶಿಸಿದ್ದು ಇದೆ. ಆದರೆ, ಆರತಿಗೆ ಸಿನಿಮಾ ರಂಗದಲ್ಲಿ ಮೊದಲು ಜನಪ್ರಿಯತೆ ಅಂತ ಸಿಕ್ಕಿದ್ದು ಅಣ್ಣಾವ್ರೊಂದಿಗೆ ನಟಸಿದಾಗಲೇ. ಇವರಿಬ್ಬರ ಜೋಡಿ ಚಿತ್ರರಂಗದಲ್ಲಿ ಆ ಮಟ್ಟಿಗೆ ಮೋಡಿ ಮಾಡಿತ್ತು.

ಆರತಿ ಹಾಗೂ ರಾಜ್ಕುಮಾರ್ ಇಬ್ಬರೂ ಜೊತೆಯಾಗಿ ನಟಿಸಿದ್ದು ಕೆಲವೇ ಸಿನಿಮಾಗಳು. ಅವುಗಳಲ್ಲಿ ಎಲ್ಲಾ ಸಿನಿಮಾಗಳಲ್ಲೂ ಆರತಿ ನಾಯಕಿಯಾಗಿ ನಟಿಸಿಲ್ಲ. ಆದರೂ ಕನ್ನಡ ಚಿತ್ರರಂಗದಲ್ಲಿ ಇವರು ಅತ್ಯದ್ಭುತ ಜೋಡಿಯಾಗಿ ಗುರುತಿಸಿಕೊಂಡಿದ್ದರು. ಒಮ್ಮೆ ಅಣ್ಣಾವ್ರ ಸಿನಿಮಾದಲ್ಲಿ ನಟಿಸುವಾಗ ಹೆದರಿ ಬೆವರುತ್ತಿದ್ದ ನಟಿ ನಾಲ್ಕು ಬಾರಿ ಬ್ಲೌಸ್ ಬದಲಿಸಿದ್ದರಂತೆ. ಆ ಇಂಟ್ರೆಸ್ಟಿಂಗ್ ವಿಷಯವನ್ನು ಹಿರಿಯ ಪತ್ರಕರ್ತ ಹರಿಹರಪುರ ಮಂಜುನಾಥ್ ಟೋಟಲ್ ಕನ್ನಡ ಯೂಟ್ಯೂಬ್ ಚಾನೆಲ್ನಲ್ಲಿ ರಿವೀಲ್ ಮಾಡಿದ್ದಾರೆ.
"ಆರತಿಯವರಿಗೆ ಅಣ್ಣಾವ್ರ ಜೊತೆ ಹೆಚ್ಚು ಸಿನಿಮಾಗಳಲ್ಲಿ ನಟಿಸುವುದಕ್ಕೆ ಅವಕಾಶ ಸಿಕ್ಕಿಲ್ಲ. ಕೇವಲ 13 ಸಿನಿಮಾಗಳಲ್ಲಿ ಅಣ್ಣಾವ್ರೊಂದಿಗೆ ನಟಿಸಿದ್ದಾರೆ. ಇದರಲ್ಲೂ ರಾಜ್ಕುಮಾರ್ ಅವರಿಗೆ ನಾಯಕಿಯಾಗಿ ಕೆಲವು ಸಿನಿಮಾಗಳಲ್ಲಿ ಮಾತ್ರ ಕಾಣಿಸಿಕೊಂಡಿದ್ದಾರೆ" ಎನ್ನುತ್ತಾರೆ ಹರಿಹರಪುರ ಮಂಜುನಾಥ್.

'ಕಸ್ತೂರಿ ನಿವಾಸ' ಸಿನಿಮಾದಲ್ಲಿ ಆರತಿ ಚಿಕ್ಕ ಪಾತ್ರವೊಂದರಲ್ಲಿ ನಟಿಸುತ್ತಿದ್ದರು. ಮೈಸೂರಿನ ಕೆಆರ್ಎಸ್ನಲ್ಲಿ "ನೀ ಬಂದು ನಿಂತಾಗ" ಹಾಡಿನ ಚಿತ್ರೀಕರಣ ನಡೆಯುತ್ತಿತ್ತು. ಆ ವೇಳೆ ರಾಜ್ಕುಮಾರ್ ಎದುರು ಅಭಿನಯಿಸಬೇಕಿತ್ತು. ಆ ವೇಳೆ ಆರತಿ ಟೆನ್ಷನ್ ಆಗಿದ್ದಂತೆ. "ನೀ ಬಂದು ನಿಂತಾಗ ಹಾಡು ಕಸ್ತೂರಿ ನಿವಾಸ ಸಿನಿಮಾದಲ್ಲಿ ಜಿಕೆ ವೆಂಕಟೇಶ್ ಸಂಗೀತ ಸಂಯೋಜಿಸಿದ ಹಾಡು. ರಾಜ್ಕುಮಾರ್ ಹಾಗೂ ಆರತಿಯವರ ಮೇಲೆ ಈ ಹಾಡನ್ನು ಚಿತ್ರೀಕರಣ ಮಾಡಲಾಗಿದೆ. ಕೆಆರ್ಎಸ್ನಲ್ಲಿ ಈ ಸಿನಿಮಾದ ಶೂಟಿಂಗ್ ನಡೀತು. ಮೊದಲ ದಿನವೇ ಈ ಸಿನಿಮಾದ ಶೂಟಿಂಗ್ನಲ್ಲಿ ಆರತಿಯವರು ಭಾಗವಹಿಸಬೇಕಿತ್ತು. ಅದಕ್ಕೂ ಮುಂಚೆ ಗೆಜ್ಜೆಪೂಜೆ ಸಿನಿಮಾದಲ್ಲಿ ಚಿಕ್ಕದೊಂದು ಪಾತ್ರ ಮಾಡಿದ್ದರು. ಇಲ್ಲಿ ರಾಜ್ಕುಮಾರ್ ಅವರೊಂದಿಗೆ ದೃಶ್ಯ ಆಗಿದ್ದರೆ ಸುಲಭವಾಗಿ ಅಭಿನಯಿಸುತ್ತಿದ್ದರೋ ಏನೋ. ಆದರೆ ಹಾಡಿನ ಚಿತ್ರೀಕರಣ ತುಂಬಾನೇ ಕಷ್ಟಕರವಾದದ್ದು. ಈ ವೇಳೆ ರಾಜ್ಕುಮಾರ್ ಅಂತಹ ಮಹಾನ್ ನಟನ ಎದುರಿಗೆ ನಟಿಸುವಾಗ ತುಂಬಾನೇ ಗಾಬರಿಯಾಗಿದ್ದರು." ಎನ್ನುತ್ತಾರೆ ಮಂಜುನಾಥ್.
ಕಸ್ತೂರಿ ನಿವಾಸದ "ನೀ ಬಂದು ನಿಂತಾಗ" ಹಾಡಿನ ಚಿತ್ರೀಕರಣ ನಡೆಯುವ ವೇಳೆ ಆರತಿ ಸಿಕ್ಕಾಪಟ್ಟೆ ಗಾಬರಿಯಾಗಿದ್ದರು. ಈ ವೇಳೆ ಅವರನ್ನು ನೋಡಿ ಬೆವರುತ್ತದ್ದೆ ಎಂದು ಸ್ವತ: ನಟಿಯೇ ಹೇಳಿಕೊಂಡಿದ್ದರಂತೆ. ಕಸ್ತೂರಿ ನಿವಾಸದ ಹಾಡಿನ ಚಿತ್ರೀಕರಣದ ವೇಳೆ ಆರತಿಗಾದ ಟೆನ್ಷನ್ ಬಗ್ಗೆ ಅವರೇ ಬ್ಲೌಸ್ ಬದಲಿಸಿದ ಕತೆಯನ್ನು ಹೇಳಿಕೊಂಡಿದ್ದರು. "ಅವರ ಹೇಳಿಕೊಂಡಿದ್ದರು. ಅವತ್ತು ನನಗೆ ಎಷ್ಟು ಬೆವರು ಹರಿಯಿತು ಅಂದರೆ, ನಾಲ್ಕು ಬಾರಿ ನಾನು ಬ್ಲೌಸ್ ಬದಲಾಯಿಸಿಕೊಂಡು ಚಿತ್ರೀಕರಣಕ್ಕೆ ಬರಬೇಕಾಯ್ತು ಎಂದಿದ್ದರು." ಎಂದು ಅಂದಿನ ಘಟನೆಯನ್ನು ನೆನಪಿಸಿಕೊಳ್ಳುತ್ತಾರೆ.

ಇನ್ನು ಅಣ್ಣಾವ್ರಿಗೆ ಈ ವಿಷಯ ಗೊತ್ತಾಗಿ ಹೋಗಿತ್ತು. ಹೀಗಾಗಿ ಅವರನ್ನು ಒಂದು ವಾಕ್ ಕರೆದುಕೊಂಡು ಹೋಗಿ ಕೆಲವು ಸಲಹೆಗಳನ್ನು ನೀಡಿದ್ದರು. "ರಾಜ್ಕುಮಾರ್ ಅವರಿಗೆ ಆರತಿಯವರು ಈ ರೀತಿ ಕಷ್ಟ ಪಡುತ್ತಿದ್ದಾರೆ ಎಂದು ಯಾರೋ ಬಂದು ಹೇಳುತ್ತಾರೆ. ಆಗ ಅಣ್ಣಾವ್ರ ಚಿತ್ರೀಕರಣವನ್ನು ನಿಲ್ಲಿಸಿಬಿಡುತ್ತಾರೆ. ಆರತಿಯವರನ್ನು ಕರೆದುಕೊಂಡು ಕೆಆರ್ ರಸ್ತೆಯಲ್ಲಿ ಸುಮ್ಮನೆ ಸುತ್ತಾಡಿಕೊಂಡು ಬರುತ್ತಾರೆ. ಸುತ್ತಾಡಿಕೊಂಡು ಬರುವಾಗ ಕಿವಿ ಮಾತನ್ನು ಹೇಳುತ್ತಾರೆ. ನಾನೇ ಮಹಾನ್ ಕಲಾವಿದೆ ಅಂದುಕೊಂಡು ಅಭಿನಯ ಮಾಡು. ರಾಜ್ಕುಮಾರ್ ಇದ್ದಾರೆ ಅಂತ ಅಂದುಕೊಳ್ಳಬೇಡ ಎಂದು ಅಣ್ಣಾವ್ರು ಹೇಳಿದ್ದರು." ಎನ್ನುತ್ತಾರೆ.
ಅಣ್ಣಾವ್ರು ಹೇಳಿದ ಈ ಮಾತು ಆರತಿಯವರಿಗೆ ಹೊಸ ಹುರುಷನ್ನು ನೀಡಿತ್ತು. ಆ ಸಿನಿಮಾದಲ್ಲಿ ಪುಟ್ಟ ಪಾತ್ರವನ್ನು ಮಾಡಿದ್ದರೂ, ಆರತಿಯ ಪಾತ್ರ ಇಂದಿಗೂ ನೆನೆಪಿನಲ್ಲಿ ಇಟ್ಟುಕೊಳ್ಳುವಂತೆ ನಟಿಸಿದ್ದರು. ರಾಜ್ಕುಮಾರ್ ಅವರೊಂದಿಗೆ ನಟಿಸಿದ ಬಳಿಕ ಆರತಿ ಮುಂದೆ ಕನ್ನಡ ಚಿತ್ರರಂಗದ ಮೇರು ನಟಿಯಾಗಿ ಬೆಳೆಯುತ್ತಾರೆ. ಒಂದರ ಹಿಂದೊಂದು ಸೂಪರ್ ಹಿಟ್ ಸಿನಿಮಾಗಳಲ್ಲಿ ಅಭಿನಯಿಸುತ್ತಾರೆ. ಆರತಿ ಆ ಮಟ್ಟಿಗೆ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡುತ್ತಾರೆ.
ಇನ್ನು ಪುಟ್ಟಣ್ಣ ಅವರೊಂದಿಗೆ ಗುರುತಿಸಿಕೊಂಡಿದ್ದ ನಟಿ ಆರತಿ ಹಾಗೂ ಕಲ್ಪನಾ ಇಬ್ಬರ ಬದುಕಿನಲ್ಲಿ ಕೆಲವು ಸಾಮ್ಯತೆಗಳನ್ನು ಹರಿಹರಪುರ ಮಂಜುನಾಥ್ ಗುರುತಿಸಿದ್ದಾರೆ. "ಆರತಿ ಹಾಗೂ ಕಲ್ಪನಾ ಚಿತ್ರ ಜೀವನದಲ್ಲಿ ಅನೇಕ ಸಾಮ್ಯತೆಗಳಿವೆ. ಇವರು ಅಚ್ಚ ಕನ್ನಡದ ತಾರೆಯರು. ಅಣ್ಣಾವ್ರ ಚಿತ್ರಗಳಲ್ಲಿ ಅನೇಕ ಬಾರಿ ಹೃದಯಂಗಮ ಅಭಿನಯವನ್ನು ಕೊಟ್ಟಿದ್ದಾರೆ. ಅದಲ್ಲದೆ ರಾಜ್ಕುಮಾರ್ ಅಲ್ಲದ ನಾಯಕರೊಂದಿಗೂ ನಟಿಸಿದ್ದಾರೆ. ಇಬ್ಬರೂ ನಿರ್ದೇಶಕ ಪುಟ್ಟಣ್ಣ ಕಣಗಲ್ ಅವರ ಗರಡಿಯಿಂದ ಬಂದವರು. ಅಲ್ಲದೆ ಪುಟ್ಟಣ್ಣ ಕಣಗಾಲ್ ಅಲ್ಲದೆ ಬೇರೆ ನಿರ್ದೇಶಕರ ಸಿನಿಮಾದಲ್ಲೂ ತಮ್ಮ ಪ್ರತಿಭೆಯನ್ನು ತೋರಿಸಿದ್ದಾರೆ." ಎನ್ನುತ್ತಾರೆ.
ಕಲ್ಪನಾ ಅವರೊಂದಿಗೂ ಪುಟ್ಟಣ್ಣ ಕಣಗಾಲ್ ರೊಮ್ಯಾಂಟಿಕ್ ಸಂಬಂಧವನ್ನು ಹೊಂದಿದ್ದರು ಅಂತ ಆಗಿನ ಪತ್ರಿಕೆಗಳು ಬರೆದವು. ಆಗ ಅವರು ನಮ್ಮದು ಗುರು ಶಿಷ್ಯರ ಸಂಬಂಧ ಅಂತ ಹೇಳಿ ತಳ್ಳಿ ಹಾಕಿದ್ದರು. ಆರತಿಯೊಂದಿಗೆ ಪುಟ್ಟಣ್ಣನವರ ಸಂಬಂಧವನ್ನು ಒಂದು ದಿನ ಇಬ್ಬರೂ ಪತ್ರಿಕೆಗಳಲ್ಲಿ ಹೇಳಿಕೆ ನೀಡುವ ಮೂಲಕ ಒಪ್ಪಿಕೊಂಡರು. ಇಲ್ಲಿ ಕಲ್ಪನಾ ಅವರ ಕೊನೆಯ ದಿನಗಳು ಗೊಂದಲ ಮಯವಾಗಿತ್ತು. ಅವಕಾಶಗಳಿಂದ ವಂಚಿತರಾಗಿದ್ದರು. ಜೀವನದಲ್ಲೂ ವಂಚಿತರಾಗಿದ್ದು, ಕೊನೆಯಲ್ಲಿ ಪ್ರಾಣವನ್ನು ಕೈ ಚಲ್ಲಿಸಿದ್ದರು. ಆದರೆ, ಪುಟ್ಟಣ್ಣ ಅವರೊಂದಿಗೆ ಆರತಿಯ ಸಹಜೀವನ ಕೊನೆಯಾದರೂ, ಧೃತಿ ಗೆಡದೆ ಗಟ್ಟಿಯಾಗಿ ನಿಂತು ತಮ್ಮ ಬದುಕನ್ನು ಕಟ್ಟಿಕೊಂಡರು.
"ಆರತಿಯವರು ಗಟ್ಟಿಯಾಗಿ ನಿಲ್ಲುವುದಕ್ಕೆ ರಾಜ್ಕುಮಾರ್ ಅವರ ಅನೇಕ ಸಿನಿಮಾಗಳು ಕಾರಣವಾದವು. ಮೊದಲೇ ಹೇಳಿದ ಹಾಗೆ ಆರತಿ ಹಾಗೂ ರಾಜ್ಕುಮಾರ್ ನಟಿಸಿದ್ದು ಕೇವಲ 13 ಸಿನಿಮಾಗಳಲ್ಲಿ. ಈ ಸಿನಿಮಾಗಳು ಬಂದಿದ್ದು ಕೇವಲ 5 ವರ್ಷಗಳಲ್ಲಿ. ಕಸ್ತೂರಿ ನಿವಾಸ ಬಳಿಕ ಪ್ರತಿಧ್ವನಿಯಲ್ಲಿ ಆರತಿಯವರು ನಾಯಕಿ. ಆ ಬಳಿಕ ನ್ಯಾಯವೇ ದೇವರು, ಶ್ರೀಕೃಷ್ಣ ರುಕ್ಷ್ಮಿಣಿ ಸತ್ಯಭಾಮಾ, ಸಿಪಾಯಿ ರಾಮು, ಬಂಗಾರದ ಮನುಷ್ಯ, ಮೂರುವರೆ ವಜ್ರಗಳು, ಬಂಗಾರದ ಪಂಜರ, ದಾರಿ ತಪ್ಪಿದ ಮಗ, ಪ್ರೇಮದ ಕಾಣಿಕೆ, ಭಾಗ್ಯವಂತ, ಭಲೇ ಹುಚ್ಚ, ರಾಜ ನನ್ನ ರಾಜ ಇಲ್ಲಿವರೆಗೆ ಅವರ ಸಿನಿ ಪಯಣ ಮುಂದುವರೆಯುತ್ತೆ" ಎಂದು ಮಂಜುನಾಥ್ ಅಭಿಪ್ರಾಯ ಪಟ್ಟಿದ್ದಾರೆ.
"ಬಹದ್ದೂರು ಗಂಡು ಸಿನಿಮಾದಲ್ಲಿ ರಾಜ್ಕುಮಾರ್ಗೆ ನಾಯಕಿ ಅಲ್ಲದೆ ಇದ್ದರೂ ಒಂದು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರವನ್ನು ಲೆಕ್ಕಕ್ಕೆ ತೆಗೆದುಕೊಂಡರೆ, ಇದನ್ನೂ ಸೇರಿಸಿದರೆ, ರಾಜ್ಕುಮಾರ್ ಅವರೊಂದಿಗೆ 14 ಸಿನಿಮಾಗಳಲ್ಲಿ ಸಿನಿ ಪಯಣ ಮುಂದುವರೆದಿರುವುದನ್ನು ಕಾಣಬಹುದು. ಇಲ್ಲಿ ಕಾದಂಬರಿ ಆಧಾರಿತ ಚಿತ್ರಗಳು ಅಂದರೆ, ಒಂದು ಸಿಪಾಯಿ ರಾಮು, ಇನ್ನೊಂದು ಬಂಗಾರದ ಮನುಷ್ಯ. ಈ ಎರಡು ಸಿನಿಮಾಗಳಲ್ಲಿ ಬಂಗಾರದ ಮನುಷ್ಯ ಸಿನಿಮಾದಲ್ಲಿ ನಾಯಕಿ ಅಲ್ಲದೇ ಹೋದರೂ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ."


Click it and Unblock the Notifications











