27 ವರ್ಷದ ಹಿಂದೆ ನಡೆದ ಅಪಘಾತದ ಕಟುಸತ್ಯ ಬಿಚ್ಚಿಟ್ಟ ಸುನೀಲ್ ಆಪ್ತ
90ರ ದಶಕದಲ್ಲಿ ಮಿಂಚಿ ಮರೆಯಾದ ಸುಂದರ ಪ್ರತಿಭಾನ್ವಿತ ನಟ ಸುನೀಲ್ ಈಗ ನೆನಪು ಮಾತ್ರ. ನೋಟದಿಂದಲೇ ಮಹಿಳಾ ಅಭಿಮಾನಿಗಳ ಹೃದಯ ಕದ್ದಿದ್ದ ಕಲಾವಿದ ಕಡಿಮೆ ಅವಧಿಯಲ್ಲಿ ಹೆಚ್ಚು ಖ್ಯಾತಿ ಗಳಿಸಿಕೊಂಡರು. ಕೇವಲ ಐದು ವರ್ಷದಲ್ಲಿ 20ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಭರವಸೆ ಮೂಡಿಸಿದ್ದರು.
Recommended Video
ಕನ್ನಡ ಚಿತ್ರರಂಗಕ್ಕೆ ಓರ್ವ ಅದ್ಭುತ ನಟ ಸಿಕ್ಕ ಎಂದು ಖುಷಿಯಾಗಿರುವಾಗಲೇ ವಿಧಿಯ ಕ್ರೌರ್ಯಕ್ಕೆ ಸುನೀಲ್ ಬಲಿಯಾಗಬೇಕಾಯಿತು. 1994ರಲ್ಲಿ ಚಿತ್ರದುರ್ಗದ ಬಳಿ ನಡೆದ ಕಾರು ಅಪಘಾತದಲ್ಲಿ ಸುನೀಲ್ ಸಾವನ್ನಪ್ಪಿದರು. ಈ ಅಪಘಾತ ನಡೆದ ಸಮಯದಲ್ಲಿ ಚಾಲಕ ಸೇರಿ ಕಾರಿನಲ್ಲಿ ನಾಲ್ಕು ಜನ ಇದ್ದರು. ಆ ನಾಲ್ವರ ಪೈಕಿ ಸುನೀಲ್ ಆಪ್ತ ಸಚಿನ್ ಸಹ ಒಬ್ಬರು.
ಪ್ರಸ್ತುತ ಯುಎಸ್ನಲ್ಲಿ ನೆಲೆಸಿರುವ ಸಚಿನ್ ಬಹಳ ವರ್ಷದ ನಂತರ ಆ ದುರಂತದ ಬಗ್ಗೆ ಮಾತನಾಡಿದ್ದಾರೆ. ನಿರ್ದೇಶಕರ ರಘುರಾಮ್ ಜೊತೆಗಿನ ಸಂದರ್ಶನದಲ್ಲಿ 27 ವರ್ಷದ ಹಿಂದೆ ನಡೆದ ಅಪಘಾತದ ಕಟು ಸತ್ಯವನ್ನು ಬಹಿರಂಗಪಡಿಸಿದ್ದಾರೆ. ಮುಂದೆ ಓದಿ...

ಹೈದರಾಬಾದ್ನಲ್ಲಿದ್ದ ಸುನೀಲ್
ಅದಾಗಲೇ ಸ್ಟಾರ್ ನಟ ಎನಿಸಿಕೊಂಡಿದ್ದ ಸುನೀಲ್ಗೆ ಎರಡು ಕಾರ್ಯಕ್ರಮ ನಿಗದಿಯಾಗಿತ್ತು. ಹೈದರಾಬಾದ್ನಲ್ಲಿದ್ದ ಸುನೀಲ್, ಬೆಂಗಳೂರಿನಿಂದ ಡ್ರೈವರ್ನ ಬರೋಕೆ ಹೇಳಿದರು. ಸಂಬಂಧಿ ಸಚಿನ್ರನ್ನು ಕರೆಸಿಕೊಂಡರು. ನಂತರ ಹೈದರಾಬಾದ್ನಿಂದ ಹೊರಟು ಸುನೀಲ್ ಮೊದಲ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಅದನ್ನು ಮುಗಿಸ್ಕೊಂಡು ಮರುದಿನ ಇನ್ನೊಂದು ಕಾರ್ಯಕ್ರಮಕ್ಕೆ ಹೋದರು ಎಂದು ಸಚಿನ್ ನೆನಪಿಸಿಕೊಂಡರು.

ಸತತ ಜರ್ನಿಯಿಂದ ಆಯಾಸ ಆಗಿತ್ತು
ಆ ದಿನ ಕಾರ್ಯಕ್ರಮ ಮುಗಿಯುವುದು ಬಹಳ ಲೇಟ್ ಆಯಿತು. ಸುಮಾರು 11 ರಿಂದ 11.30 ಆಗಿರಬಹುದು. ತಡರಾತ್ರಿಯೇ ಬೆಂಗಳೂರಿನ ಕಡೆ ಜರ್ನಿ ಶುರು ಮಾಡಿದ್ವಿ. ಡ್ರೈವರ್ ಸತತವಾಗಿ ಕಾರು ಚಾಲನೆ ಮಾಡಿದ್ದರಿಂದ ಆಯಾಸವಾಗಿದ್ದರು. ಕಾರು ಸ್ಟಾರ್ಟ್ ಮಾಡಬೇಕಾದರೆ ಡ್ರೈವರ್ಗೆ, ''ನಿನಗೆ ನಿದ್ದೆ ಬಂದ್ರೆ ನನ್ನ ಅಥವಾ ಸಚಿನ್ ಅಲರ್ಟ್ ಮಾಡು, ನಾವು ಡ್ರೈವ್ ಮಾಡ್ತೀವಿ'' ಅಂತ ಸುನೀಲ್ ಎಚ್ಚರಿಸಿದ್ದರು. ಸುನೀಲ್ ಮತ್ತು ಸ್ನೇಹಿತರು ಪ್ರಯಾಣಿಸುತ್ತಿದ್ದ ಕಾರಿನ ಹೆಸರು ಕಂಟೆಸಾ (contessa car).

ನನಗೆ ಎಚ್ಚರ ಆಗಿದ್ದೇ ಆಸ್ಪತ್ರೆಯಲ್ಲಿ
''ರಾತ್ರಿ ಪ್ರಯಾಣದಲ್ಲಿ ಮಲುಗುವುದು ಸಾಮಾನ್ಯ. ಡ್ರೈವರ್ಗೆ ಹೇಳಿ ನಾವು ಮಲಗಿದ್ವಿ. ಆಮೇಲೆ ನನಗೆ ಎಚ್ಚರ ಆಗಿದ್ದೇ ಆಸ್ಪತ್ರೆಯಲ್ಲಿ. ನನಗೆ ಪ್ರಜ್ಞೆ ಬರುವುದಕ್ಕೆ ಎರಡ್ಮೂರು ದಿನ ಆಗಿತ್ತು. ಮಾಲಾಶ್ರೀ ಅವರಿಗೆ ಬೇಗ ಪ್ರಜ್ಞೆ ಬಂತು'' ಎಂದು ಸುನೀಲ್ ಸಂಬಂಧಿ (ತಾಯಿ ತಮ್ಮನ ಮಗ) ಸಚಿನ್ ಹೇಳಿದರು.

ಉಳಿದುಕೊಳ್ಳುವ ಆಲೋಚನೆ ಬಂತು
'ಸತತವಾಗಿ ಜರ್ನಿ ಮಾಡಿದ್ದರಿಂದ ಎಲ್ಲರಿಗೂ ಆಯಾಸ ಆಗಿತ್ತು. ಕಾರ್ಯಕ್ರಮ ಮುಗಿದಮೇಲೆ ಆ ರಾತ್ರಿ ಅಲ್ಲೆ ಉಳಿದುಕೊಳ್ಳುವ ಆಲೋಚನೆಯೂ ಇತ್ತು. ಅದು ನಮ್ಮ ಪ್ಲಾನ್ ಆಗಿರಲಿಲ್ಲ. ಮಾತಿಗೆ ಒಮ್ಮೆ ಚರ್ಚೆ ಮಾಡಿದ್ವಿ, ಆದರೆ ಡ್ರೈವರ್ ಮಗಳ ಬರ್ತಡೇ ಇದೆ, ಹೋಗ್ಬೇಕು ಎಂದಾಗ ಸರಿ ಹೋಗೋಣ ಅಂತ ಬಂದ್ವಿ' ಎಂದು ಸಚಿನ್ ತಿಳಿಸಿದರು.

ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಸುನೀಲ್
''ಸುನೀಲ್ ಹಾಗೂ ಡ್ರೈವರ್ಗೆ ಗಂಭೀರ ಗಾಯ ಆಗಿತ್ತು. ಆಸ್ಪತ್ರೆ ಸೇರಿಸಲಾಗಿತ್ತು. ಅಲ್ಲಿಂದ ಬೆಂಗಳೂರಿಗೆ ಶಿಫ್ಟ್ ಮಾಡಬೇಕು ಎಂದು ಅಂದುಕೊಂಡು ಸಿದ್ದತೆ ನಡೆದಿತ್ತು. ಆದ್ರೆ, ಹಾಗೆ ಆಗಲಿಲ್ಲ' ಎಂದು ಸಚಿನ್ ಆ ದುರಂತ ಅಂತ್ಯದ ಬಗ್ಗೆ ಬಹಳ ವರ್ಷದ ನಂತರ ಮಾತನಾಡಿದರು.

ಆಕಸ್ಮಿಕ ಸಾವು
ಬೆಂಗಳೂರಿಗೆ ಬರುತ್ತಿದ್ದ ಕಾರಿಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಸುನೀಲ್ ಮತ್ತು ಡ್ರೈವರ್ ಕೃಷ್ಣ ಸಾವನ್ನಪ್ಪಿದರು. ಪ್ರಾಣಾಪಾಯದಿಂದ ಪಾರಾದ ನಟಿ ಮಾಲಾಶ್ರೀ ಮತ್ತು ಸಚಿನ್ಗೆ ಗಾಯಗಳಾದವು. ಸುನೀಲ್ ಯಶಸ್ಸು ಸಹಿಸದವರು ಆಕ್ಸಿಡೆಂಟ್ ಮಾಡಿಸಿದರೂ ಎಂಬ ಕಥೆಗಳು ಹುಟ್ಟಿಕೊಂಡಿದ್ದವು. ಆದರೆ, ಇದು ಆಕಸ್ಮಿಕ ಸಾವು ಎಂದು ಕುಟುಂಬಸ್ಥರು ಘೋಷಿಸಿದರು. (ಚಿತ್ರಕೃಪೆ: ಆರ್ಆರ್ ಕಾರ್ಖಾನೆ)

'ಶ್ರುತಿ'ಯೊಂದಿಗೆ ಆರಂಭ
1990ರಲ್ಲಿ ದ್ವಾರಕೀಶ್ ನಿರ್ಮಾಣದ 'ಶ್ರುತಿ' ಚಿತ್ರದ ಮೂಲಕ ನಾಯಕನಟರಾಗಿ ಪ್ರವೇಶ ಮಾಡಿದ ಸುನೀಲ್, ನಂತರ ಒಳ್ಳೊಳ್ಳೆ ಚಿತ್ರಗಳನ್ನು ನೀಡಿದ್ದರು. ಶ್ರುತಿ ಚಿತ್ರಕ್ಕೂ ಮುಂಚೆ ಕೆಲವು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರ ಮಾಡಿದ್ದರು. ಬೆಳ್ಳಿ ಕಾಲುಂಗರ, ಸಿಂಧೂರ ತಿಲಕ, ಮರಣ ಮೃದಂಗ, ದಾಕ್ಷಾಯಿಣಿ, ಸ್ನೇಹದ ಕಡಲಲ್ಲಿ, ಮನ ಮೆಚ್ಚಿದ ಸೊಸೆ, ಮಾಲಾಶ್ರೀ ಮಾಮಾಶ್ರೀ, ಶಾಂಭವಿ ಸೇರಿದಂತೆ ಹಲವು ಸಿನಿಮಾದಲ್ಲಿ ಸುನೀಲ್ ನಟಿಸಿದ್ದರು.


Click it and Unblock the Notifications











