ಊಟಿಯಲ್ಲಿ ಅಣ್ಣಾವ್ರ ಮೇಲೆ ಅಟ್ಯಾಕ್ ಮಾಡಲು ಮುಂದಾಗಿದ್ಯಾರು? ಹಿರಿಯ ನಟಿ ಏನಂತಾರೆ?
80 ರಿಂದ 90ರ ದಶಕದಲ್ಲಿ ತಮ್ಮ ಅಭಿನಯದಿಂದಲೇ ಕನ್ನಡಿಗರ ಮನಗೆದ್ದಿದ್ದ ಹಿರಿಯ ನಟಿ ರೂಪಾದೇವಿ. ಡಾ.ರಾಜ್ಕುಮಾರ್, ಡಾ.ವಿಷ್ಣುವರ್ಧನ್, ಡಾ.ಅಂಬರೀಶ್, ಶ್ರೀನಾಥ್ ಅಂತಹ ಮೇರು ನಟರೊಂದಿಗೆ ನಟಿಸಿದ್ದಾರೆ. ಕನ್ನಡ ಚಿತ್ರರಂಗಕ್ಕೆ ನಟಿ ರೂಪಾ ದೇವಿ ಸಾಕಷ್ಟು ಎವರ್ಗ್ರೀನ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ಇಂದಿಗೂ ಇವರ ಸಿನಿಮಾದ ಹಾಡುಗಳನ್ನು ಮೆಲುಕು ಹಾಕುವ ಸಿನಿಪ್ರಿಯರು ಇದ್ದಾರೆ.
ಅಣ್ಣಾವ್ರ ಜೊತೆನೂ ರೂಪಾದೇವಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದರಲ್ಲೊಂದು ಸಿನಿಮಾ 'ಯಾರಿವನು?'. ಈ ಸಿನಿಮಾದಲ್ಲಿ ರೂಪಾದೇವಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ರೊಮ್ಯಾಂಟಿಕ್ ಸಾಂಗ್ಗಳಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾದ "ರಾಗವೋ ಅನುರಾಗವೋ.." ಅನ್ನುವ ಹಾಡು ಇಂದಿಗೂ ಸಂಗೀತ ಪ್ರಿಯರಿಗೆ ತುಂಬಾನೇ ಇಷ್ಟ.

'ಯಾರಿವನು' ಸಿನಿಮಾದ ಇದೇ "ರಾಗವೋ ಅನುರಾಗವೋ.." ಹಾಡಿನ ಚಿತ್ರೀಕರಣ ಮಾಡುವಾಗ ಒಂದು ಘಟನೆ ನಡೆದಿತ್ತು. ಆ ಘಟನೆಯ ಬಗ್ಗೆ ಇತ್ತೀಚೆಗೆ ನೀಡಿದ ಕನ್ನಡದ ನಿರೂಪಕ ಕಮ್ ನಿರ್ದೇಶಕ ರಘುರಾಮ್ ಅವರ ಯೂಟ್ಯೂಬ್ ಚಾನೆಲ್ನಲ್ಲಿ ರಿವೀಲ್ ಮಾಡಿದ್ದಾರೆ. ಆ ಹಾಡಿನ ಚಿತ್ರೀಕರಣ ಮಾಡುವಾಗ ಅಂತಹದ್ದೇನಾಯ್ತು? ಹಲ್ಲೆ ಮಾಡುವುದಕ್ಕೆ ಬಂದವರು ಯಾರು? ಅನ್ನೋದನ್ನು ಹೇಳಿದ್ದಾರೆ.
'ಯಾರಿವನು' ಸಿನಿಮಾದ ಚಿತ್ರೀಕರಣ ತಮಿಳುನಾಡಿನ ಊಟಿಯಲ್ಲಿ ನಡೆಯುತ್ತಿತ್ತು. ಅಂದು ಕೊನೆಯ ದಿನದ ಚಿತ್ರೀಕರಣ. ಇನ್ನೇನು ಹಾಡು ಬಹುತೇಕ ಮುಗಿಯುವ ಹಂತಕ್ಕೆ ಬಂದಿತ್ತು. ಆ ವೇಳೆ ಒಂದಿಷ್ಟು ಜನರ ಗುಂಪು ಕೂಗುತ್ತಾ ಚಿತ್ರೀಕರಣ ನಡೆಯುತ್ತಿದ್ದ ಜಾಗಕ್ಕೆ ಬಂದಿದ್ದರು. ಮುಂದೇನಾಯ್ತು? ಅನ್ನೋದನ್ನು ನಟಿ ರೂಪಾದೇವಿ ಹೇಳಿದ್ದಾರೆ.
"ಆಗ ಕರ್ನಾಟಕ ಹಾಗೂ ತಮಿಳುನಾಡು ನಡುವೆ ಏನೋ ನಡೀತಾ ಇತ್ತು. ನನಗಂತೂ ಈ ಬಗ್ಗೆ ಸ್ವಲ್ಪನೂ ಗೊತ್ತಿರಲಿಲ್ಲ. ನಾನು ಶೂಟಿಂಗ್ಗೆ ಹೋಗಿದ್ದೆ. ರಾಜ್ಕುಮಾರ್ ಸರ್ ಇದ್ದರೆ, ಬೆಳಂಬೆಳಗ್ಗೆ ಶೂಟಿಂಗ್ ಶುರುವಾಗುತ್ತೆ. ಬೆಳಗ್ಗೆ 3 ಗಂಟೆಗೆ ಎದ್ದು 6 ಗಂಟೆಗೆಲ್ಲ ಹೋಗುತ್ತಿದ್ದೆವು. ಆ ಸಿನಿಮಾದ ಹಾಡು ಕಂಪ್ಲೀಟ್ ಮುಗಿಯುತ್ತಿತ್ತು. ಕೊನೆಯ ದಿನದ ಶೂಟಿಂಗ್ ಮುಗಿಸಿ, ಬೆಂಗಳೂರಿಗೆ ವಾಪಸ್ ಬರಬೇಕಿತ್ತು." ಎಂದು ಆ ಸನ್ನಿವೇಶವನ್ನು ನೆನಪಿಸಿಕೊಂಡಿದ್ದಾರೆ.

ಊಟಿಯ ಕೆರೆಯಲ್ಲಿ ರಾಜ್ಕುಮಾರ್ ಹಾಗೂ ರೂಪಾದೇವಿ ಇಬ್ಬರ ಬೋಟ್ನಲ್ಲಿ ಹಾಡುತ್ತಾ ಬರುವ ದೃಶ್ಯವನ್ನು ಚಿತ್ರೀಕರಿಸಬೇಕಿತ್ತು. ಆವೇಳೆ ಗುಂಪೊಂದು ಅಟ್ಯಾಕ್ ಮಾಡುವುದಕ್ಕೆ ಬಂದಿದ್ದರು. "ಆ ಕೆರೆಯಲ್ಲಿ, ಬೋಟ್ನಲ್ಲಿ ನಮ್ಮಿಬ್ಬರದ್ದು ಶೂಟ್ ಇತ್ತು. ನೀವು ಬೋಟ್ನಲ್ಲಿ ಹೋಗಿ, ನಾವು ದಡದಲ್ಲಿ ನಿಲ್ಲುತ್ತೇವೆ ಎಂದಿದ್ದರು. ಹಾಡಿನ ಆಡಿಯೋ ಬರುತ್ತಿತ್ತು. ಹಿಂದೆನೇ ಕೆಲವರು ಕೂಗುತ್ತಿದ್ದರು. ಯಾರಪ್ಪ ಅಂತ ನೋಡಿದರೆ, ಎಲ್ಲಿಂದಲೋ ತುಂಬಾ ಜನರು ಬಂದುಬಿಟ್ಟಿದ್ದರು. ಯೂನಿಟ್ ಅವರು ಅಣ್ಣ ಬಂದು ಬಿಡಿ ಅಂತ ಹೇಳಿದರು. ನಾವು ಬಂದು ಬಿಟ್ಟೆವು. ಎಲ್ಲರೂ ಬಂದು ಅಟ್ಯಾಕ್ ಮಾಡುವುದಕ್ಕೆ ಶುರು ಮಾಡಿದ್ದರು." ಎಂದು ಹಿರಿಯ ನಟಿ ರೂಪಾದೇವಿ ಹೇಳಿದ್ದಾರೆ.
ಇದೇ ಸಂದರ್ಶನದಲ್ಲಿ ಆ ವೇಳೆ ಮಹಿಳೆಯರನ್ನೆಲ್ಲ ಹೇಗೆ ರಕ್ಷಣೆ ಮಾಡಿದ್ದರು? ಪಾರ್ವತಮ್ಮ ರಾಜ್ಕುಮಾರ್ ಅವರನ್ನು ಹೇಗೆ ಬೆಂಗಳೂರಿಗೆ ತಲುಪಿಸಿದರು ಅನ್ನೋದನ್ನು ಹೇಳಿದ್ದಾರೆ. "ಯೂನಿಟ್ನವರು ಮೊದಲು ಮಹಿಳೆಯನ್ನು ಅಲ್ಲಿಂದ ಕಳಿಸುವುದಕ್ಕೆ ವ್ಯವಸ್ಥೆ ಮಾಡಿದ್ದರು. ಲಕ್ಷ್ಮಿಯವರು ಹಾಗೂ ಅವರ ಹೆಣ್ಣು ಮಕ್ಕಳು ಕೂಡ ಅಲ್ಲಿ ಇದ್ದರು. ಪಾರ್ವತಕ್ಕ ರೂಮಿನಲ್ಲಿ ಇದ್ದರು. ಯೂನಿಟ್ ಅವರು ಮೊದಲು ನನ್ನನ್ನು ತೆಗೆದು ಮೊದಲು ಕಾರಿನಲ್ಲಿ ಹಾಕಿ ಕಳಿಸಿದರು. ಆಮೇಲೆ ಪಾರ್ವತಮ್ಮ ಹಾಗೂ ರಾಜ್ಕುಮಾರ್ ಇಬ್ಬರೂ ನನ್ನನ್ನು ಕಾರಿನಲ್ಲಿ ಕೂರಿಸಿಕೊಂಡು ಬೆಂಗಳೂರಿಗೆ ಕರೆದುಕೊಂಡು ಬಿಟ್ಟರು." ಎಂದಿದ್ದಾರೆ.


Click it and Unblock the Notifications











