ನಟಿ ವಿಜಯಲಕ್ಷ್ಮಿ ಪ್ರಕರಣ: ವಿವಾದದಲ್ಲಿರುವ ಸೀಮನ್ ಯಾರು? ಇಲ್ಲಿದೆ ವಿವರ
ಕನ್ನಡದ 'ನಾಗಮಂಡಲ', 'ಸೂರ್ಯವಂಶ' ಮುಂತಾದ ಚಿತ್ರಗಳಲ್ಲಿ ನಟಿಸಿದ್ದ ವಿಜಯಲಕ್ಷ್ಮಿ ಆತ್ಮಹತ್ಯೆಗೆ ಪ್ರಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಿನಿಮಾದಲ್ಲಿ ಹೆಸರು ಮಾಡಿದ್ದ ಸಂದರ್ಭದಲ್ಲಿಯೂ ವಿವಾದಗಳಿಂದ ಸದ್ದು ಮಾಡಿದ್ದ, ಅವರು ಕಳೆದ ಒಂದೆರಡು ವರ್ಷದಿಂದ ಮತ್ತೆ ಬೆಳಕಿಗೆ ಬರುತ್ತಿದ್ದಾರೆ. ಅವರ ಸಾವಿನ ಪ್ರಕರಣದಲ್ಲಿ ಈಗ ತಮಿಳಿನ ರಾಜಕಾರಣಿ ಸೀಮನ್ ಹೆಸರು ಕೇಳಿಬರುತ್ತಿದೆ.
ಕರ್ನಾಟಕದಿಂದ ದೂರವಾಗಿ ತಮಿಳುನಾಡಿನಲ್ಲಿ ನೆಲೆಸಿದ್ದ ವಿಜಯಲಕ್ಷ್ಮಿ, ಇದ್ದಕ್ಕಿದ್ದಂತೆ ಕರ್ನಾಟಕದಲ್ಲಿ ಪ್ರತ್ಯಕ್ಷರಾಗಿದ್ದರು. ಕಷ್ಟದಲ್ಲಿರುವ ತಮಗೆ ಕನ್ನಡದ ಚಿತ್ರರಂಗ ಸಹಾಯ ಮಾಡುತ್ತಿಲ್ಲ ಎಂದು ಆರೋಪಿಸಿದ್ದರು. ಸಹಾಯ ಮಾಡಲು ಮುಂದಾಗಿದ್ದ ನಟ ರವಿಪ್ರಕಾಶ್ ವಿರುದ್ಧವೇ ಅಸಭ್ಯ ವರ್ತನೆಯ ಆರೋಪ ಮಾಡಿದ್ದರು.
ಆ ಪ್ರಕರಣಕ್ಕೆ ಮತ್ತೊಂದು ತಿರುವು ಸಿಗುವ ಸೂಚನೆ ದೊರಕಿದ ಬೆನ್ನಲ್ಲೇ ವಿಜಯಲಕ್ಷ್ಮಿ ಆತ್ಮಹತ್ಯೆಯ ಪ್ರಯತ್ನ ಮಾಡಿದ್ದಾರೆ. ಅದಕ್ಕೂ ಮುನ್ನ ವಿಡಿಯೋದಲ್ಲಿ ಸೀಮನ್ ಮತ್ತು ಹರಿ ನಾದರ್ ಹೆಸರನ್ನು ಉಲ್ಲೇಖಿಸಿದ್ದಾರೆ. ಅವರಿಂದ ಅನ್ಯಾಯವಾಗಿದೆ ಎಂದು ಆರೋಪಿಸಿದ್ದಾರೆ. ಸೀಮನ್ ವಿರುದ್ಧ ತನಿಖೆ ನಡೆಸುವಂತೆ ಅನೇಕರು ಆಗ್ರಹಿಸಿದ್ದಾರೆ. ಪ್ರಕರಣದಲ್ಲಿ ಪ್ರಮುಖವಾಗಿ ಹೇಳಿಬರುತ್ತಿರುವ ಸೀಮನ್ ಯಾರು? ಅವರ ಹಿನ್ನೆಲೆ ಏನು? ಮುಂದೆ ಓದಿ...

ಮದುವೆಯಾಗುವುದಾಗಿ ವಂಚನೆ
ಸೀಮನ್ ತಮಗೆ ಅನ್ಯಾಯ ಎಸಗಿದ್ದಾರೆ. ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ಮೋಸ ಮಾಡಿದ್ದಾರೆ ಎಂದು ವಿಜಯಲಕ್ಷ್ಮಿ ಈಹಿಂದೆಯೂ ಆರೋಪಿಸಿದ್ದರು. ತಮ್ಮಿಬ್ಬರ ನಡುವೆ ರಿಲೇಷನ್ಶಿಪ್ ಇತ್ತು. ಇದಕ್ಕೆ ಸಾಕ್ಷಿಯಾಗಿ ತಾವು ಜತೆಗಿರುವ ಅನೇಕ ಫೋಟೊಗಳಿವೆ ಎಂದು ವಿಜಯಲಕ್ಷ್ಮಿ ಹೇಳಿಕೊಂಡಿದ್ದಾರೆ.

ಗಂಡ ಹೆಂಡತಿಯೆಂತೆ ಇದ್ದೆವು
ನಾವಿಬ್ಬರೂ ಗಂಡ ಹೆಂಡತಿಯಂತೆ ಜತೆಗಿದ್ದೆವು. ಅವರು ನನಗಾಗಿ ಪ್ರೇಮಪತ್ರಗಳನ್ನು ಬರೆದಿದ್ದರು. ಪ್ರೇಮಿಗಳ ದಿನ ಆಚರಿಸಲು ನನ್ನ ಮನೆಗೂ ಬಂದಿದ್ದರು. ಆ ಸಂದರ್ಭದಲ್ಲಿ ನೆನಪಿಗಾಗಿ ಫೋಟೊಗಳನ್ನು ತೆಗೆದುಕೊಂಡಿದ್ದೆ. ನನಗೆ ಮೋಸ ಮಾಡುತ್ತಾರೆ ಎಂದು ಊಹಿಸಿರಲಿಲ್ಲ. ಮದುವೆ ಮಾಡಿಕೊಳ್ಳುವುದಾಗಿ ಸೀಮನ್ ವಂಚಿಸಿದ್ದಾರೆ. ಈ ಬಗ್ಗೆ ದೂರು ನೀಡಿದ್ದರೂ ಪೊಲೀಸರು ಕ್ರಮ ತೆಗೆದುಕೊಂಡಿಲ್ಲ ಎಂದು ವಿಜಯಲಕ್ಷ್ಮಿ ಕೆಲವು ತಿಂಗಳ ಹಿಂದೆ ಆರೋಪಿಸಿದ್ದರು.

2013ರಲ್ಲಿ ಮದುವೆ
ಸೀಮನ್ ತಮಿಳುನಾಡಿನ ಶಿವಗಂಗಾ ಜಿಲ್ಲೆಯಲ್ಲಿ ಜನಿಸಿದವರು. ಅವರಿಗೀಗ 53 ವರ್ಷ. ಎಐಎಡಿಎಂಕೆಯ ಶಾಸಕರಾಗಿದ್ದ ಕೆ. ಕಾಳಿಮುತ್ತು ಅವರ ಮಗಳು ಕಯಾಲ್ವಿಳಿ ಅವರನ್ನು 2013ರಲ್ಲಿ ಮದುವೆಯಾಗಿದ್ದರು. ವಿಜಯಲಕ್ಷ್ಮಿ ಆರೋಪಿಸುತ್ತಿರುವಂತೆ ಸೀಮನ್ ಮತ್ತು ಅವರ ನಡುವೆ ಸಂಬಂಧ ಈ ಮದುವೆಗೂ ಮುನ್ನ ಇತ್ತೇ ಅಥವಾ ನಂತರವೂ ಮುಂದುವರಿದಿತ್ತೇ ಎನ್ನುವುದು ಬಹಿರಂಗವಾಗಿಲ್ಲ.

ವಿವಿಧ ಹೋರಾಟಗಳಲ್ಲಿ ಭಾಗಿ
ಸೀಮನ್, ಶ್ರೀಲಂಕಾ ತಮಿಳ್ ಪೀಪಲ್ ಮತ್ತು ಎಲ್ಟಿಟಿಯ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದವರು. ಶ್ರೀಲಂಕಾದಲ್ಲಿ ತೊಂದರೆ ಅನುಭವಿಸುತ್ತಿರುವ ತಮಿಳರ ಪರ ಕಾನೂನು ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು. ತಮಿಳು ಭಾಷೆಯ ವಿಚಾರದಲ್ಲಿಯೂ ಸೀಮನ್ ಮುಂದಾಳತ್ವ ವಹಿಸಿದ್ದರು. ರಾಜಕೀಯಕ್ಕೆ ಬರುವ ಮುನ್ನ ಅವರು ನಿರ್ದೇಶಕ ಮತ್ತು ನಟರಾಗಿ ಕೂಡ ಗುರುತಿಸಿಕೊಂಡಿದ್ದರು.

ನಿರ್ದೇಶನ, ನಟನೆ
'ಪಂಚಲಂಕುರಿಚಿ' ಸೀಮನ್ ನಿರ್ದೇಶಿಸಿದ ಮೊದಲ ಚಿತ್ರ. ನಂತರ ಇನಿಯವಾಳೈ, ಆನಂದಂ, ಕರ್ಮ ವೀರರ್, ವೀರನದೈ, ತಂಬಿ ಚಿತ್ರಗಳನ್ನು ನಿರ್ದೇಶಿಸಿದ್ದರು. ಪೋರಿ ಚಿತ್ರದ ಮೂಲಕ ನಟನೆಗೂ ಇಳಿದರು. 'ವಾಳ್ತುಗೈ' ಚಿತ್ರ ಸೋಲು ಕಂಡ ಬಳಿಕ ನಿರ್ದೇಶನ ಕೈಬಿಟ್ಟರು. ಹತ್ತು ನಿರ್ದೇಶಕರು ನಟಿಸಿದ್ದ 'ಮಯಾಂದಿ ಕುದುಂಬತ್ತರ್'ನಲ್ಲಿ ಕೂಡ ಅವರು ಬಣ್ಣ ಹಚ್ಚಿದ್ದರು. 2013ರಲ್ಲಿ 'ನಾಗರಾಜ ಚೋಳನ್ ಎಂ.ಎ, ಎಂಎಲ್ಎ ಚಿತ್ರದಲ್ಲಿ ಮುಖ್ಯಪಾತ್ರದಲ್ಲಿ ನಟಿಸಿದ್ದರು.

ರಾಜಕೀಯದಲ್ಲಿ ಸತತ ಸೋಲು
ಇದಕ್ಕೂ ಮುನ್ನ ಎಲ್ಟಿಟಿಇ ಹೋರಾಟಗಳಲ್ಲಿ ಭಾಗವಹಿಸಿದ್ದ ಸೀಮನ್, ಬಂಧನಕ್ಕೂ ಒಳಗಾಗಿದ್ದರು. 2009ರಲ್ಲಿ ನಾಮ್ ತಮಿಳರ್ ಕಚ್ಚಿ ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಂಡರು. ನಂತರ ಅನೇಕ ಚಳವಳಿ ಹೋರಾಟಗಳಲ್ಲಿ ಪಾಲ್ಗೊಂಡು ಮತ್ತೆ ಬಂಧನಕ್ಕೆ ಒಳಗಾಗಿದ್ದರು. 2016ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಅವರ ಪಕ್ಷ ಸ್ಪರ್ಧಿಸಿತ್ತು. ತಾನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿಕೊಂಡು ಕುಡ್ಡಲೋರ್ನಿಂದ ಸ್ಪರ್ಧಿಸಿದ್ದ ಸೀಮನ್, ಠೇವಣಿ ಕಳೆದುಕೊಂಡರು. ಎಲ್ಲ ಅಭ್ಯರ್ಥಿಗಳಲ್ಲಿಯೇ ಅತಿ ಕಡಿಮೆ ಮತ ಅವರಿಗೆ ಬಂದಿತ್ತು. ಲೋಕಸಭೆ ಚುನಾವಣೆಯಲ್ಲಿಯೂ ಅವರ ಪಕ್ಷದ ಎಲ್ಲ 39 ಅಭ್ಯರ್ಥಿಗಳೂ ಸೋಲು ಕೊಂಡಿದ್ದರು.

ವಿಜಯಲಕ್ಷ್ಮಿ ತಾಯಿ ಲಂಕಾ ತಮಿಳಿಗರು
ಸೀಮನ್ ನಿರ್ದೇಶಿಸಿದ ಕೊನೆಯ ಚಿತ್ರ 'ವಾಳ್ತುಗಳ್'ನಲ್ಲಿ ವಿಜಯಲಕ್ಷ್ಮಿ ನಟಿಸಿದ್ದರು. ವಿಜಯಲಕ್ಷ್ಮಿ ಅವರ ತಾಯಿ ಶ್ರೀಲಂಕಾ ತಮಿಳರು. ಶ್ರೀಲಂಕಾದಲ್ಲಿ 1984ರಲ್ಲಿ ತಮಿಳರ ವಿರುದ್ಧ ನಡೆದ ಹಿಂಸಾಚಾರದ ವೇಳೆ ತಮಿಳುನಾಡಿಗೆ ವಲಸೆ ಬಂದಿದ್ದರು. ನಾರಕೋಯಿಲ್ನವರಾದ ವಿಜಯಲಕ್ಷ್ಮಿ ತಂದೆ ಬೆಂಗಳೂರಿನಲ್ಲಿ ನೆಲೆಸಿದ್ದರು. ಚೆನ್ನೈನಲ್ಲಿ ಜನಿಸಿದ್ದ ವಿಜಯಲಕ್ಷ್ಮಿ ಬೆಳೆದಿದ್ದು ಬೆಂಗಳೂರಿನಲ್ಲಿ. ಸಹಾಯಕ ನಿರ್ದೆಶಕರೊಬ್ಬರು ಮದುವೆಯಾಗುವುದಾಗಿ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ಈ ಹಿಂದೆಯೂ ಅವರು ಆತ್ಮಹತ್ಯೆಯ ಪ್ರಯತ್ನ ನಡೆಸಿದ್ದರು. ಬಳಿಕ ಈ ವಿವಾದ ಸೃಷ್ಟಿಯಾಗಿದೆ. ತಾವು ಮತ್ತು ಸೀಮನ್ ಒಂದೇ ಸಮುದಾಯದವರು ಎಂದು ವಿಜಯಲಕ್ಷ್ಮಿ ಹೇಳಿಕೊಂಡಿದ್ದರು.


Click it and Unblock the Notifications











