ವಿಜಯಲಕ್ಷ್ಮಿ- ಸೃಜನ್ ಲೋಕೇಶ್ ನಿಶ್ಚಿತಾರ್ಥ ಯಾಕೆ ಮುರಿದು ಬಿತ್ತು? 'ಯಾಮಾರಿಸಿಬಿಟ್ಟಳು' ಅಂತ ದೂರಿದ್ದೇಕೆ?
'ನಾಗಮಂಡಲ', 'ಸೂರ್ಯವಂಶ' ಅಂತಹ ಸಿನಿಮಾಗಳಲ್ಲಿ ನಟಿಸಿ ಒಂದು ಕಾಲದಲ್ಲಿ ಬಹುಬೇಡಿಕೆಯಲ್ಲಿದ್ದವರು ನಟಿ ವಿಜಯಲಕ್ಷ್ಮಿ. ಆದರೆ, ಬದುಕು ಅಂದುಕೊಂಡಂತೆ ಇರುವುದಿಲ್ಲ. ಯಶಸ್ಸು ಸದಾ ಜೊತೆಯಲ್ಲಿ ಇರುವುದಿಲ್ಲ. ವಿಜಯಲಕ್ಷ್ಮಿ ಕರಿಯರ್ನಲ್ಲೂ ಹೀಗೆ ನಾನಾ ರೀತಿಯ ಬದಲಾವಣೆಗಳು ಆದವು. ವೈಯಕ್ತಿಕ ಬದುಕು ಕಷ್ಟದ ಹಾದಿಯನ್ನು ಹಿಡಿದಿತ್ತು.
ವಿಜಯಲಕ್ಷ್ಮಿ ವೃತ್ತಿ ಬದುಕಿನಲ್ಲಿಯೇ ಟಾಪ್ನಲ್ಲಿ ಇರುವಾಗಲೇ ಮದುವೆ ಆಗಲು ನಿರ್ಧರಿಸಿದ್ದರು. ಕನ್ನಡ ಚಿತ್ರರಂಗದ ಲೆಜೆಂಡರಿ ಜೋಡಿ ಲೋಕೇಶ್ ಹಾಗೂ ಗಿರಿಜಾ ಲೋಕೇಶ್ ಅವರ ಪುತ್ರ ಸೃಜನ್ ಲೋಕೇಶ್ ಅವರನ್ನು ಮದುವೆ ಆಗಬೇಕಿತ್ತು. ಇಬ್ಬರೂ ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದರು. ಆದರೆ, ಕೊನೆಯ ಲಕ್ಷಣದಲ್ಲಿ ಅದು ಮುರಿದು ಬಿತ್ತು.

ಇನ್ನೇನು ಸೃಜನ್ ಲೋಕೇಶ್ ಹಾಗೂ ವಿಜಯಲಕ್ಷ್ಮಿ ಮದುವೆ ಆಗೇ ಬಿಟ್ಟರು ಅನ್ನುವಾಗಲೇ ಮುರಿದು ಬಿದ್ದಿತ್ತು. ಎರಡು ಒಡೆದ ಮನಸ್ಸುಗಳಾಗಿದ್ದವು. ಅಂದು ನಿಶ್ಚಿತಾರ್ಥದ ಬಳಿಕ ಏನಾಗಿತ್ತು? ಯಾಕೆ ಈ ಜೋಡಿ ಮದುವೆ ಆಗುವ ಹಂತದವರೆಗೂ ಹೋಗಿಲ್ಲ? ಈ ಎಲ್ಲಾ ಪ್ರಶ್ನೆಗಳಿಗೂ ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್ಗೆ ವಿಜಯಲಕ್ಷ್ಮಿ ನೀಡಿದ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ. ಅದರದ್ದೊಂದು ಝಲಕ್ ಇಲ್ಲಿದೆ.
ವಿಜಯಲಕ್ಷ್ಮಿ ಹಾಗೂ ಸೃಜನ್ ಲೋಕೇಶ್ ಇಬ್ಬರೂ ಧಾರಾವಾಹಿಗಳಲ್ಲಿ ಒಟ್ಟಿಗೆ ನಟಿಸಿದ್ದರು. ಅಲ್ಲಿ ಇಬ್ಬರಿಗೆ ಪರಿಚಯವಾಗಿತ್ತು. ಬಳಿಕ ವಿಜಯಲಕ್ಷ್ಮಿಯರನ್ನು ಮದುವೆ ಆಗಲು ಸೃಜನ್ ಲೋಕೇಶ್ ನಿರ್ಧರಿಸಿದ್ದರು. ಆಮೇಲೆ ಏನೆಲ್ಲ ಆಯ್ತು ಅನ್ನೋದನ್ನು ಸ್ವತ: ವಿಜಯಲಕ್ಷ್ಮಿ ಅವರೇ ಹೇಳಿಕೊಂಡಿದ್ದಾರೆ.
"ಕನ್ನಡದಲ್ಲಿ ಸಾವಿತ್ರಿ ಮಾಡಿದ್ವಿ. ಆ ಮೇಲೆ ತಮಿಳಿನಲ್ಲಿ ಒಂದು ಸೀರಿಯಲ್ ಮಾಡಿದ್ವಿ. ಆಗ ಅಪ್ಪನ ಹತ್ತಿರ ಬಂದು ಮದುವೆ ಮಾಡಿಕೊಳ್ಳುತ್ತೇವೆ ಅಂತ ಹೇಳಿದ್ದರು. ಅಪ್ಪ ಸ್ವಲ್ಪ ಸಮಯ ತೆಗೆದುಕೊಂಡರು. ಯಾಕಂದ್ರೆ ನಾನು ಆಗ ಪೀಕ್ನಲ್ಲಿ ಇದೆ. ವರ್ಕ್ ಕಮಿಟ್ಮೆಂಟ್ ಎಲ್ಲ ಇತ್ತು. ಸೃಜನ್ ಅವರದ್ದು ನಿಶ್ಚಿತಾರ್ಥದವರೆಗೂ ಪುಶ್ ಮಾಡಿದ್ದು ಯಾಕಂದರೆ, ಅಪ್ಪ ತೀರಿ ಹೋದಾಗ. ಆ ಸಮಯದಲ್ಲಿ ಸೃಜನ್ ಹಾಗೂ ಗಿರಿಜಮ್ಮ ಅವರು ಬೆಂಬಲವಾಗಿ ನಿಂತಿದ್ದರು. ಆ ಟೈಮ್ನಲ್ಲಿ ಮದುವೆ ಮಾಡಿಕೊಳ್ಳಬೇಕು ಅಂತ ಎಂಗೇಜ್ಮೆಂಟ್ವರೆಗೂ ಬಂತು." ಎಂದು ವಿಜಯಲಕ್ಷ್ಮಿ ಹೇಳಿದ್ದಾರೆ.
ಈ ಮದುವೆ ಮುರಿದು ಬಿದ್ದಿದ್ದಕ್ಕೆ ಯಾರದ್ದು ಸರಿ? ಯಾರದ್ದು ತಪ್ಪು ಅಂತ ಈ ಸಮಯದಲ್ಲಿ ಹೇಳುವುದಕ್ಕೂ ಇಷ್ಟ ಪಟ್ಟಿಲ್ಲ. "ಈಗ ನಾನು ಸರಿಯಾಗಿದ್ದೆ ಅಂತ ಹೇಳುವುದಕ್ಕೂ ಹೋಗುವುದಿಲ್ಲ. ಅವರು ತಪ್ಪು ಮಾಡಿದರು ಅಂತ ಹೇಳುವುದಕ್ಕೆ ಹೋಗುವುದಿಲ್ಲ. ನಿಶ್ಚಿತಾರ್ಥ ಎಲ್ಲಾ ನಾನೇ ಖರ್ಚು ಮಾಡಿ ಮಾಡಿದೆ. ನನಗೆ ತುಂಬಾನೇ ಖುಷಿಯಿತ್ತು. ಅವರು ತುಂಬಾನೇ ಒಳ್ಳೆಯ ಸ್ನೇಹಿತ. ನಿಶ್ಚಿತಾರ್ಥ ಆದ್ಮೇಲೆ ಮನಸ್ತಾಪಗಳು ಬರುತ್ತಿತ್ತು. ಆಗ ನಮಗೆ ಖುಷಿ ಇರುತ್ತಿರಲಿಲ್ಲ. ಈಗೆಲ್ಲ ಅಂದುಕೊಳ್ಳುತ್ತಾರೆ ಅವಳು ಯಾಮಾರಿಸಿಬಿಟ್ಟಳು ಅಂತ. ನಮ್ಮ ಜೊತೆ ಸಂತೋಷವಾಗಿರುವವರು ಯಾವಾಗಲೂ ಖುಷಿಯಾಗಿ ಇರುತ್ತಾರೆ ಅಂತ ಅಂದುಕೊಳ್ಳಬಾರದು. ಅವರು ಬೇರೆ ಕಡೆಗೆ ಸಂತೋಷದಿಂದ ಇರುತ್ತಾರೆ ಅಂದರೆ ಅವನ್ನು ಬಿಟ್ಟುಕೊಡಬೇಕು. ಅದನ್ನೇ ನಾನು ಸೃಜನ್ ಅವರ ವಿಷಯದಲ್ಲಿ ಮಾಡಿದ್ದು." ಎಂದಿದ್ದಾರೆ.

ಇತ್ತೀಚೆಗೆ ಸೃಜನ್ ಲೋಕೇಶ್ ಹಾಗೂ ಹಿರಿಯ ನಟಿ ಗಿರಿಜಾ ಲೋಕೇಶ್ ಅವರನ್ನು ಭೇಟಿ ಮಾಡಿದ್ದನ್ನು ನೆನೆಪಿಸಿಕೊಂಡಿದ್ದಾರೆ. "ನಾನು ಬಹಳ ವರ್ಷಗಳ ಬಳಿಕ ಗಿರಿಜಮ್ಮ ಅವರನ್ನು ಭೇಟಿ ಮಾಡಿದೆ. ಅವರನ್ನು ನೋಡಿದ ಕೂಡಲೇ ನಾನು ಓಡಿ ಹೋಗಿ ಮಾತಾಡಿದೆ. ಅವರು ಏನೂ ಕೋಪ ತೋರಿಸಿಕೊಳ್ಳಲಿಲ್ಲ. ನನಗೆ ನಿಮ್ಮೊಂದಿಗೆ ಇರೋದು ಬರೆದಿಲ್ಲ ಅನಿಸುತ್ತೆ ಕ್ಷಮಿಸಿ ಎಂದೆ. ಯಾಕೋ ಅಂದು ಬಿಟ್ಟು ಹೋದರು. ಈಗ ಬ್ಯಾಡ್ಮಿಂಟನ್ ಪಂದ್ಯದ ವೇಳೆ ಸೃಜನ್ ಅವರನ್ನು ನೋಡಿದೆ. ಅವರಿಗೂ ನನ್ನ ಮೇಲೆ ಕೋಪವಿಲ್ಲ. ನನಗೂ ಅವರ ಮೇಲೆ ಇಲ್ಲ."
ವಿಜಯಲಕ್ಷ್ಮಿಗೆ ಮದುವೆ ಆಗಬೇಕು ಅನ್ನುವ ಆಸೆಯಿದೆ. ಆದರೆ ಸರಿಯಾದ ವ್ಯಕ್ತಿ ಬರುವುದಕ್ಕೆ ಕಾಯಬೇಕು ಎಂದಿದ್ದಾರೆ. "ನನಗೆ ಗಂಡ ಇಲ್ಲ. ನನಗೆ ಪಾರ್ಟ್ನರ್ ಇಲ್ಲ. ಉಷಾ ಅಕ್ಕನ ವಿಚಾರದಲ್ಲಿ ನಾನು ಟೆನ್ಷನ್ ಆಗಿಬಿಡುತ್ತೇನೆ. ಆಗ ಯಾರಾದರೂ ದೇವಸ್ಥಾನಕ್ಕೆ ಕರೆದುಕೊಂಡು ಹೋಗಬಾರದ ಅನಿಸುತ್ತೆ. ನಾನು ನೊಂದಾಗ ಸ್ನೇಹಿತರು ನನ್ನನ್ನು ಹೊರಗಡೆ ಕರೆದುಕೊಂಡು ಹೋಗುತ್ತಾರೆ. ಯಾರೂ ಇಲ್ಲ ಅನ್ನೋ ಕಾರಣಕ್ಕೆ ಯಾರನ್ನೋ ಆಯ್ಕೆ ಮಾಡಿಕೊಂಡು ಲೈಫ್ ಅನ್ನು ಮಿಸ್ ಮಾಡಿಕೊಳ್ಳಬಾರದು. ಜೀವನ ಅನ್ನೋದು ಬರೀ ಆಯ್ಕೆಗಳು ಅಷ್ಟೇ ಎಂದು ನಾನು ತಿಳಿದುಕೊಂಡಿದ್ದೇನೆ. ನಾನು ಹೇಗಿದ್ದೇನೋ ಹಾಗೇ ಸ್ವೀಕರಿಸುವಂತಹವರು ಬೇರೆ. ಎಲ್ಲರನ್ನೂ ದೇವರು ಸೃಷ್ಟಿ ಮಾಡಿದ್ದಾನೆ ಅಲ್ವಾ? ನಾನು ಅವರನ್ನು ದೂಷಿಸುವುದು ದೇವರನ್ನೇ ದೂಷಿಸಿದಂತೆ. ಈಗ ನನ್ನನ್ನು ಪ್ರೀತಿಸುವಂತಹ ವ್ಯಕ್ತಿ ಬರಬೇಕು. ಅದಕ್ಕೆ ನಾನು ಕಾಯಬೇಕು. ಅದನ್ನು ನಾನು ಪ್ರಪಂಚಕ್ಕೆ ಹೇಳುವಂತೆ ಬೇಕು." ಎಂದು ಹೇಳಿದ್ದಾರೆ.


Click it and Unblock the Notifications











