ಅಣ್ಣಾವ್ರ 'ರಾವಣ'ನ ಪಾತ್ರ ಕಂಡು ಬೆರಗಾಗಿದ್ದ ಎನ್ಟಿಆರ್: ಆದಿಪುರುಷ್ ಸೋಲು.. ವರನಟನೇ ಮಾಸ್ಟರ್ !
ಪೌರಾಣಿಕ ಸಿನಿಮಾ ಮಾಡೋದು ಅಷ್ಟೊಂದು ಸುಲಭ ಅಲ್ಲ. ಅದಕ್ಕೆ ಸಂಪೂರ್ಣ ತಯಾರಿಬೇಕು. ಸರಿಯಾಗಿ ಸಂಶೋಧನೆ ಮಾಡಬೇಕು. ಪಾತ್ರಧಾರಿಗಳು ತಮ್ಮ ಪಾತ್ರಗಳ ಹಾವ-ಭಾವವನ್ನು ಅರ್ಥ ಮಾಡಿಕೊಂಡು ನಟಿಸಬೇಕಿದೆ. 'ಆದಿಪುರುಷ್' ಸಿನಿಮಾ ಮೇಕಿಂಗ್ ಕೂಡ ಅಷ್ಟೇ. ಸರಿಯಾದ ಸಂಶೋಧನೆ ಇಲ್ಲದೆ ಈ ಸಿನಿಮಾ ಮಾಡಿದ್ದಾರೆ ಅನ್ನೋ ಆರೋಪ ಕೇಳಿಬರುತ್ತಿದೆ.
'ಆದಿಪುರುಷ್' ಸಿನಿಮಾ ಹೀನಾಯವಾಗಿ ಸೋಲುತ್ತಿದ್ದಂತೆ, ಟ್ರೋಲ್ಗಳಾಗುತ್ತಿದ್ದಂತೆ, ಅಣ್ಣಾವ್ರ ಸಿನಿಮಾಗಳ ಬಗ್ಗೆ ಮಾತಾಡುತ್ತಿದ್ದಾರೆ. ಪೌರಾಣಿಕ ಪಾತ್ರಗಳನ್ನು ಅಣ್ಣಾವ್ರು ನಿಭಾಯಿಸಿದಂತೆ ಮತ್ಯಾರೂ ಮಾಡಲು ಸಾಧ್ಯವೇ ಇಲ್ಲ. ಡಾ.ರಾಜ್ಕುಮಾರ್ ಅವರ ಪೌರಾಣಿಕ ಸಿನಿಮಾಗಳನ್ನು ನೋಡಿದ್ರೆ, ಪೌರಾಣಿಕ ಪಾತ್ರಗಳನ್ನು ಮಾಡುವುದು ಸುಲಭ ಅನ್ನೋ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಹಿರಿಯ ಪತ್ರಕರ್ತ ಹರಿಹರಪುರ ಮಂಜುನಾಥ್ ಅಣ್ಣಾವ್ರ ಪಾತ್ರಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿದ್ದಾರೆ. ಟೋಟಲ್ ಕನ್ನಡ ಯೂಟ್ಯೂಬ್ ಚಾನೆಲ್ನಲ್ಲಿ ಅಣ್ಣಾವ್ರ ನಿಭಾಯಿಸಿದ್ದ ಶ್ರೀರಾಮನ ಪಾತ್ರ ಹಾಗೂ ರಾವಣ ಪಾತ್ರಗಳು ತೆಲುಗಿನ ದಿಗ್ಗಜ ಎನ್ಟಿಆರ್ ಅವರನ್ನೇ ಮಂತ್ರಮುಗ್ಧರನ್ನಾಗಿಸಿತ್ತು. ಈ ಸಂಗತಿಯನ್ನು ಸವಿಸ್ತಾರವಾಗಿ ವಿವರಿಸಲಾಗಿದ್ದು, ಅದರ ಸಾರಾಂಶ ಇಲ್ಲಿದೆ.
ಪೌರಾಣಿಕ ಸಿನಿಮಾಗಳಿಗೆ ಟಾಲಿವುಡ್ ಮುಂದು
ತೆಲುಗು ಚಿತ್ರರಂಗದಲ್ಲಿ ಹೆಚ್ಚಾಗಿ ಪೌರಾಣಿಕ ಸಿನಿಮಾಗಳು ನಿರ್ಮಾಣ ಆಗಿವೆ. ಲೆಜೆಂಡ್ ಎನ್ಟಿಆರ್ ಕಾಲದಲ್ಲಿ ಪೌರಾಣಿಕ ಸಿನಿಮಾಗಳು ಸದ್ದು ಮಾಡುತ್ತಿದ್ದವು. ಎನ್ಟಿಆರ್ ನಿಭಾಯಿಸಿದ್ದ ರಾಮ ಹಾಗೂ ಕೃಷ್ಣನ ಪಾತ್ರಗಳು ಪ್ರೇಕ್ಷಕರ ಮನಸೂರೆಗೊಂಡಿದ್ದವು.
"ಪೌರಾಣಿಕ ಕಥೆಗಳನ್ನು ತೆರೆಮೇಲೆ ತರುತ್ತಿದ್ದ ಪ್ರಭಾವಶಾಲಿ ಚಿತ್ರರಂಗ ಅಂದ್ರೆ, ಅದು ತೆಲುಗು ಚಿತ್ರರಂಗ. ಅದರಲ್ಲೂ ಎನ್ಟಿ ರಾಮರಾವ್ ಅವರು ರಾಮ ಹಾಗೂ ಕೃಷ್ಣನ ಪಾತ್ರಗಳನ್ನು ನಿಭಾಯಿಸುವುದರಲ್ಲಿ ದೇಶದಾದ್ಯಂತ ಹೆಸರು ಮಾಡಿದ್ದಂತಹ ಕಲಾವಿದ. ಹೀಗೆ ಬೇರೆ ಬೇರೆ ಕಲಾವಿದರೂ ಕೂಡ ರಾಮನ ಪಾತ್ರವನ್ನು ಮಾಡಿದ್ದಾರೆ. ಹಾಗೇ ಅಣ್ಣಾವ್ರು ಕೂಡ ರಾಮನಾಗಿ ಕಂಡಿದ್ದಾರೆ." ಎನ್ನುತ್ತಾರೆ ಹರಿಹರಪುರ ಮಂಜುನಾಥ್.

ರಾವಣನಾಗಿ ಗೆದ್ದಿದ್ದ ಅಣ್ಣಾವ್ರು
ಸೀಮಿತ ಮಾರುಕಟ್ಟೆ ಇರುವ ಕನ್ನಡದಂತಹ ಚಿತ್ರರಂಗದಲ್ಲೂ 'ರಾಮಾಯಣ' ಕುರಿತಂತೆ ಸಿನಿಮಾಗಳು ನಿರ್ಮಾಣ ಆಗಿದೆ. ಇವುಗಳಲ್ಲಿ ಪ್ರಭಾವಶಾಲಿಯಾದ ನಿರೂಪಣೆ ಇರುತ್ತಿತ್ತು. ಪೌರಾಣಿಕ ಸಿನಿಮಾಗಳಿಗೆ ಹೆಸರಾದ ತೆಲುಗು ಚಿತ್ರರಂಗದ ದಿಗ್ಗಜರೇ ಅದೆಷ್ಟೋ ಕನ್ನಡ ಚಿತ್ರರಂಗವನ್ನು ಮುಕ್ತಕಂಠದಿಂದ ಹೊಗಳಿದ ಉದಾಹರಣಗಳಿವೆ.
"1958ರಲ್ಲಿ ರಾಜಕುಮಾರ್ ನಾಯಕತ್ವದ 10ನೇ ಚಿತ್ರ, ಒಟ್ಟಾರೆಯಾಗಿ 12ನೇ ಚಿತ್ರ 'ಭೂಕೈಲಾಸ'. ಆ ಚಿತ್ರವನ್ನು ನಿರ್ಮಾಣ ಮಾಡಿದವರು ಎವಿ ಮೇಯಪ್ಪನ್ ಅವರು. ಎವಿಎಂ ಸಂಸ್ಥೆಯಿಂದ ಹೊರಬಂದ ಒಂದು ಸಿನಿಮಾ. ಅದು ಏಕಕಾಲಕ್ಕೆ ತೆಲುಗು ಹಾಗೂ ಕನ್ನಡದಲ್ಲಿ ನಿರ್ಮಾಣ ಆಗತ್ತೆ. ಕನ್ನಡದಲ್ಲಿ ರಾವಣ ಪಾತ್ರವನ್ನು ರಾಜ್ಕುಮಾರ್ ನಿಭಾಯಿಸುತ್ತಾರೆ. ತೆಲುಗಿನಲ್ಲಿ ಎನ್ಟಿ ರಾಮರಾವ್ ರಾವಣನ ಪಾತ್ರವನ್ನು ನಿಭಾಯಿಸುತ್ತಾರೆ. ಅಣ್ಣಾವ್ರು ರಾವಣನಾಗಿ ಗೆಲ್ಲುತ್ತಾರೆ." ಎನ್ನುತ್ತಾರೆ ಹಿರಿಯ ಪತ್ರಕರ್ತ ಹರಿಹರಪುರ ಮಂಜುನಾಥ್.
ಎನ್ಟಿಆರ್ ಗೆದ್ದ ಡಾ.ರಾಜ್ಕುಮಾರ್
ಭೂಕೈಲಾಸ ಶೂಟಿಂಗ್ ಮಾಡುವಾಗ "ಒಂದು ತೊಂದರೆಯಿಂದಾಗಿ, ತೆಲುಗು ಸಿನಿಮಾ ದೃಶ್ಯ ತೆಗೆಯುವುಕ್ಕೆ ಸಮಯ ಆಗುತ್ತೆ. ಅದನ್ನು ವ್ಯರ್ಥ ಮಾಡುವುದು ಬೇಡ ಅಂತ ಹೇಳಿ, ಮೊದಲು ಕನ್ನಡದ್ದು ಆಗಲಿ ಅಂತ ಹೇಳುತ್ತಾರೆ. ಆಗ ರಾವಣನಾಗಿ ರಾಜ್ಕುಮಾರ್ ಅವರು ಆ ಸನ್ನಿವೇಶದಲ್ಲಿ ನಟಿಸುತ್ತಿರುತ್ತಾರೆ. ಎನ್ಟಿ ರಾಮರಾವ್ ಅಲ್ಲಿ ಹಾಜರಿರುತ್ತಾರೆ. ಅವರು ಮೊದಲ ಬಾರಿಗೆ ಆ ಚಿತ್ರದಲ್ಲಿ ನೋಡುತ್ತಾರೆ. ರಾಜ್ಕುಮಾರ್ ಅಭಿನಯವನ್ನು ಕಂಡು ಹೃದಯ ತುಂಬಿ ಬರುತ್ತೆ. ಬಳಿಕ ನಿರ್ದೇಶಕ ಶಂಕರ್ ಅವರನ್ನು ಕರೆದು ಇನ್ನು ಮುಂದೆ ಚಿತ್ರೀಕರಣ ಮೊದಲು ಕನ್ನಡದ್ದಾಗಲಿ. ಆಮೇಲೆ ತೆಲುಗಿನದ್ದು ಮಾಡಿ. ರಾಜ್ಕುಮಾರ್ ಅವರಿಂದ ಕಲಿಯುವುದು ಬಹಳಷ್ಟಿದೆ ಅಂತ ಎನ್ಟಿ ರಾಮ ರಾವ್ ಅವರೇ ಹೇಳಿರುವಂತಹದ್ದು." ಅಂದಿನ ಸನ್ನಿವೇಶವನ್ನು ವಿವರಿಸುತ್ತಾರೆ.
ಕೇವಲ ರಾವಣನಾಗಿ ಅಷ್ಟೇ ಅಲ್ಲದೆ ಅಣ್ಣಾವ್ರು ರಾಮನಾಗಿ ಕಾಣಿಸಿಕೊಂಡಿದ್ದಾರೆ. "ರಾಜ್ಕುಮಾರ್ ಅವರಿಗೆ 50ನೇ ಸಿನಿಮಾದಲ್ಲಿ ರಾಮನ ಪಾತ್ರವನ್ನು ನಿಭಾಯಿಸುವುದಕ್ಕೆ ಅವಕಾಶ ಸಿಗುತ್ತೆ. 'ಶ್ರೀ ರಾಮಾಂಜನೇಯ ಯುದ್ಧ' ಇದರಲ್ಲಿ ಅಣ್ಣಾವ್ರು ಶ್ರೀರಾಮನಾಗಿ ಕಾಣಿಸಿಕೊಳ್ಳುತ್ತಾರೆ. ಇದು ರಾಮ ಹಾಗೂ ಆಂಜನೇಯನ ನಡುವೆ ನಡೆಯುವ ಯುದ್ಧದ ಕಥೆ. ಇದೂ ಕೂಡ ಸೂಪರ್ ಹಿಟ್ ಆಗುತ್ತೆ" ಹಿರಿಯ ಪತ್ರಕರ್ತ ಹರಿಹರಪುರ ಮಂಜುನಾಥ್.
ಹೀಗಾಗಿ ಪೌರಾಣಿಕ ಯಾವುದೇ ಕಾಲಘಟ್ಟದಲ್ಲಿ ನಿರ್ಮಾಣಗೊಂಡರೂ, ಕಥೆ, ಪಾತ್ರಗಳ ಸ್ವರೂಪ ಬದಲಾಯಿಸುವುದಕ್ಕೆ ಹೋಗದೆ ಇದ್ದರೆ ಒಳ್ಳೆಯದು. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಆದಿಪುರುಷ್.


Click it and Unblock the Notifications











