ಅಂಬರೀಶ್ ಇಲ್ಲದಿದ್ರೆ 'ಒಡಹುಟ್ಟಿದವರು' ಶೂಟಿಂಗ್ ವೇಳೆನೇ ರಾಜ್ಕುಮಾರ್ ಜೀವ ಹೋಗ್ತಿತ್ತು; ಏನದು ಘಟನೆ?
ರೆಬೆಲ್ ಸ್ಟಾರ್ ಅಂಬರೀಶ್ ಎಲ್ಲರ ಮೆಚ್ಚಿನ ವ್ಯಕ್ತಿಯಾಗಿದ್ದರು. ಗದರಿಸಿ ಮಾತಾಡಿಸುವುದೇ ಅಂಬರೀಶ್ ನಿಜವಾದ ಗುಣ ಎಂಬಂತಾಗಿತ್ತು. ಅಭಿಮಾನಿಗಳಿಗೂ ಅಂಬರೀಶ್ ಬೈದರೇನೆ ಖುಷಿ. ಹೀಗಾಗಿ ರೆಬೆಲ್ ಸ್ಟಾರ್ ಅಂಬರೀಶ್ ಕನ್ನಡ ಚಿತ್ರರಂಗದ ಅಚ್ಚು ಮೆಚ್ಚಿನ ನಟ. ಅಣ್ಣಾವ್ರಿಗೂ ಅಂಬರೀಶ್ ಅಂದರೆ ಬಲು ಪ್ರೀತಿ.
ಸಿನಿಮಾ ಸೆಟ್ಟಿನಲ್ಲಿ ಅಂಬರೀಶ್ ಇದ್ದರೆ ಎನರ್ಜಿ. ಅಂಬಿ ಶೂಟಿಂಗ್ಗೆ ಲೇಟಾಗಿ ಬರುತ್ತಾರೆ ಅನ್ನೋದು ಬಿಟ್ಟರೆ, ಬೇರೆ ಏನೂ ದೂರು ಇರುತ್ತಿರಲಿಲ್ಲ. ಇನ್ನು ಸ್ವತ: ಅಣ್ಣಾವ್ರೇ 'ಒಡಹುಟ್ಟಿದವರು' ಸಿನಿಮಾಗೆ ಸಹೋದರನ ಪಾತ್ರದಲ್ಲಿ ನಟಿಸಲು ಅಂಬರೀಶ್ ಅವರನ್ನು ಆಯ್ಕೆ ಮಾಡಿದ್ದರು.

ಈ ಸಿನಿಮಾದ ಶೂಟಿಂಗ್ ವೇಳೆ ಎತ್ತಿನ ಗಾಡಿ ರೇಸ್ ಇಟ್ಟಿದ್ದರು. ಆ ದೃಶ್ಯವನ್ನು ಚಿತ್ರೀಕರಿಸುವಾಗ ಅಣ್ಣಾವ್ರು ಜೀವವನ್ನೇ ಕಳೆದುಕೊಳ್ಳುತ್ತಿದ್ದರು. ಅಂಬರೀಶ್ ಜೊತೆಯಲ್ಲಿ ಇದ್ದಿದ್ದಕ್ಕೆ ರಾಜ್ಕುಮಾರ್ ಜೀವ ಉಳೀತು ಎಂದು ಆ ಸಿನಿಮಾದ ನಿರ್ದೇಶಕ ದಿವಂಗತ ಭಗವಾನ್ ಕನ್ನಡ ಮಾಣಿಕ್ಯ ಯೂಟ್ಯೂಬ್ ಚಾನೆಲ್ನಲ್ಲಿ ಹೇಳಿಕೊಂಡಿದ್ದರು.
" ಒಂದು ಕಥೆಯನ್ನು ರೆಡಿ ಮಾಡಿಕೊಟ್ಟೆ. ಗಂಡನೂ (ಅಣ್ಣಾವ್ರು) ಲೈಕ್ ಮಾಡಿದರು. ಹೆಂಡತಿನೂ (ಪಾರ್ವತಮ್ಮ ರಾಜ್ಕುಮಾರ್) ಲೈಕ್ ಮಾಡಿದರು. ಅದೇ ಒಡಹುಟ್ಟಿದವರು. ಒಡ ಹುಟ್ಟಿದವರಲ್ಲಿ ಭಿನ್ನಾಭಿಪ್ರಾಯಗಳು ಅನ್ನೋದು ಕಾನ್ಸೆಪ್ಟ್. ಅದರಲ್ಲಿ ಒಂದು ಪ್ರಶ್ನೆ ಬಂತು. ಆಯ್ತು, ಅಣ್ಣನ ಪಾತ್ರವನ್ನೇನೋ ರಾಜ್ಕುಮಾರ್ ಮಾಡುತ್ತಾರೆ. ತಮ್ಮನ ಪಾತ್ರ ಮಾಡುವವರು ಯಾರು? ಅಷ್ಟೇ ಪವರ್ಫುಲ್ ಅದು. ಅದನ್ನು ಯಾರು ಮಾಡುತ್ತಾರೆ? ಅಂತ ಪ್ರಶ್ನೆ ಬಂತು." ಎಂದು ಆ ಘಟನೆಯನ್ನು ನೆನಪಿಸಿಕೊಂಡಿದ್ದರು.

ಈ ಪ್ರಶ್ನೆ ಉದ್ಭವಿಸಿದಾಗ ಸ್ವತ: ರಾಜ್ಕುಮಾರ್ ಅವರೇ ಅಂಬರೀಶ್ ಅವರನ್ನು ಸಂಪರ್ಕ ಮಾಡಿ ಎಂದು ಹೇಳಿದ್ದರು. ಅವರು ನಟಿಸುತ್ತೇನೆ ಅಂದರೆ, ತಮ್ಮನ ಪಾತ್ರಕ್ಕೆ ಚೆನ್ನಾಗಿರುತ್ತೆ ಎಂದು ಹೇಳಿದ್ದರು. ಅದರಂತೆ ಅಂಬರೀಶ್ ಅವರನ್ನು ಸಂಪರ್ಕ ಮಾಡಿದ್ದರು. ಅಣ್ಣಾವ್ರೊಂದಿಗೆ ನಟಿಸುವುದಕ್ಕೆ ಅಂಬಿ ಕೂಡ ಸಂತೋಷದಿಂದ ಒಪ್ಪಿಕೊಂಡಿದ್ದ ಕ್ಷಣಯನ್ನು ದೊರೈ-ಭಗವನ್ ಖ್ಯಾತಿಯ ಭಗವಾನ್ ಸಂದರ್ಶನದಲ್ಲಿ ರಿವೀಲ್ ಮಾಡಿದ್ದರು.
'ಒಡಹುಟ್ಟಿದವರು' ಸಿನಿಮಾದಲ್ಲಿ ಎತ್ತಿನಗಾಡಿ ರೇಸ್ ಇತ್ತು. ರಾಜ್ಕುಮಾರ್ ಹಾಗೂ ಅಂಬರೀಶ್ ಒಂದು ಎತ್ತಿನಗಾಡಿನಲ್ಲಿ ಕೂತು ರೇಸ್ನಲ್ಲಿ ಭಾಗವಹಿಸಬೇಕಿತ್ತು. ಈ ವೇಳೆ ಒಂದು ಅವಘಡ ನಡೆದು ಹೋಯ್ತು. ಆ ಎತ್ತಿನ ಗಾಡಿಯಲ್ಲಿ ಅಂಬರೀಶ್ ಇಲ್ಲದೇ ಹೋಗಿದ್ದರೆ, ಅಂದೇ ಅಣ್ಣಾವ್ರನ್ನು ಕಳೆದುಕೊಳ್ಳಬೇಕಿತ್ತು. ಆ ಘಟನೆಯನ್ನೂ ಹಿರಿಯ ನಿರ್ದೇಶಕ ದಿವಂಗತ ಭಗವಾನ್ ನೆನಪಿಸಿಕೊಂಡಿದ್ದರು.
ಮೈಸೂರಿನ 'ಒಡಹುಟ್ಟಿದವರು' ಸಿನಿಮಾದ ಎತ್ತಿನಗಾಡಿ ರೇಸ್ ಅನ್ನು ಚಿತ್ರೀಕರಿಸಲಾಗಿತ್ತು. ಈ ವೇಳೆ ಅವಘಡ ನಡೆದು ಹೋಯ್ತು. "ಎತ್ತಿನ ಗಾಡಿ ಓಡಿಸುತ್ತಿದ್ದೇವೆ. ಅದರಲ್ಲಿ ರಾಜ್ಕುಮಾರ್ ಹಾಗೂ ಅಂಬರೀಶ್ ಒಂದು ಗಾಡಿಯಲ್ಲಿ ಇರುತ್ತಾರೆ. ಮಿಕ್ಕವರೆಲ್ಲ ಗಾಡಿ ಓಡಿಸುತ್ತಿರುತ್ತಾರೆ. ಫಾಸ್ಟ್ ಆಗಿ ಓಡಿಸುತ್ತಿದ್ದಾರೆ. ಅದೇನಾಯ್ತೋ ಗೊತ್ತಿಲ್ಲ, ಗಾಡಿಯ ಕಡಾಣಿ ಮುರಿದು ಹೋಗುತ್ತೆ. ಚಕ್ರ ಹೊರಬಂದು ಬಿಡ್ತು." ಎಂದು ದಿವಂಗತ ಭಗವಾನ್ ಹೇಳಿಕೊಂಡಿದ್ದರು.
ಹಾಗೇ ಮಾತು ಮುಂದುವರೆಸಿದ್ದ ಭಗವಾನ್, "ರಾಜ್ಕುಮಾರ್ ಬ್ಯಾಲೆನ್ಸ್ ಕಳೆದುಕೊಂಡರು. ಬೀಳುವುದರಲ್ಲಿಇದ್ದರು. ಅದೇನು ಸಮಯ ಪ್ರಜ್ಞೆನೋ ಗೊತ್ತಿಲ್ಲ ಅಂಬರೀಶ್ ಅವರದ್ದು. ರಾಜ್ಕುಮಾರ್ ಅವರನ್ನು ಹಿಡಿದು ಎಳೆದುಕೊಂಡು ಅಪ್ಪಿಕೊಂಡರು. ರಾಜ್ಕುಮಾರ್ ಅವರನ್ನು ಒಂದು ಕೈಯಲ್ಲಿ ಅಪ್ಪಿ ಹಿಡಿದುಕೊಂಡಿದ್ದಾರೆ. ಇನ್ನೊಂದು ಕೈಯಲ್ಲಿ ಎತ್ತಿಗೆ ಕಟ್ಟಿದ್ದ ಹಗ್ಗವನ್ನು ಬಲವಾಗಿ ಹಿಡಿದಿದ್ದಾರೆ. ಅವತ್ತು ಅಂಬರೀಶ್, ಅಣ್ಣಾವ್ರನ್ನು ಹಿಡಿದು ಕೊಂಡಿರಲಿಲ್ಲ ಅಂದರೆ, ಅಣ್ಣಾವ್ರ ಕೆಳಗೆ ಬಿದ್ದು, ಹಿಂದಿನಿಂದ ಬರುತ್ತಿದ್ದ ಗಾಡಿಗಳು ಬಂದು ಅವರ ಮೇಲೆ ಹತ್ತಿಬಿಟ್ಟಿರೋದು. ಹಿಂದಿನ ಗಾಡಿಗಳಿಗೆ ಯಾವುದಕ್ಕೂ ಕಂಟ್ರೋಲ್ ಇರಲಿಲ್ಲ. ಅಂಬರೀಶ್ ಅವರಿಗೆ ಅವತ್ತು ಎಲ್ಲರೂ ಥ್ಯಾಂಕ್ಸ್ ಹೇಳಿದ್ದರು." ಎಂದು ಭಗವಾನ್ ಅಂದಿನ ಘಟನೆಯನ್ನು ನೆನಪಿಸಿಕೊಂಡಿದ್ದರು.


Click it and Unblock the Notifications











