ಅಣ್ಣಾವ್ರ 200ನೇ ಸಿನಿಮಾ ಆಗ್ಬೇಕಿತ್ತು 'ಅಮೋಘವರ್ಷ ನೃಪತುಂಗ': ವೈರಲ್ ಆಯ್ತು ವಿಡಿಯೋ!
ಡಾ.ರಾಜ್ಕುಮಾರ್ ಅಭಿನಯಿಸದೇ ಬಿಟ್ಟು ಹೋದ ಅದೆಷ್ಟೋ ಸಿನಿಮಾಗಳಿವೆ. ಅಣ್ಣಾವ್ರೇ ಬಹಳ ಇಷ್ಟ ಪಟ್ಟಿದ್ದ ಸಿನಿಮಾಗಳುಈ ಪಟ್ಟಿಯಲ್ಲಿದೆ. 'ಭಕ್ತ ಅಂಬರೀಶ' ವರನಟ ನಟಿಸಬೇಕು ಎಂದು ಆಸೆ ಪಟ್ಟಿದ್ದ ಸಿನಿಮಾ. ಆದರೆ ಅದು ಈಡೇರಲೇ ಇಲ್ಲ.
ಇನ್ನೊಂದು ಕಡೆ ಸಿನಿಮಾ ಆರಂಭ ಆಗಿತ್ತು. ಚಿತ್ರೀಕರಣಕ್ಕೆ ಸಕಲ ಸಿದ್ಧತೆಗಳನ್ನೂ ಮಾಡಿಕೊಂಡಿತ್ತು. ವಿಚಿತ್ರ ಅಂದರೆ, ಅದೂ ಕೂಡ ಸಿನಿಮಾ ಆಗಲೇ ಇಲ್ಲ. ಅದುವೇ 'ಅಮೋಘವರ್ಷ ನೃಪತುಂಗ'. ಈ ವಿಷಯ ಬಹುತೇಕ ಸಿನಿಪ್ರಿಯರಿಗೆ ಗೊತ್ತೇ ಇದೆ. ಆದರೆ, ಈ ಸಿನಿಮಾ ಬಗ್ಗೆ ಪಾರ್ವತಮ್ಮ ರಾಜ್ಕುಮಾರ್ ಅಂದಿನ ಪತ್ರಕರ್ತರಿಗೆ ನೀಡಿದ ಮಾಹಿತಿ ಬಹುತೇಕ ಮಂದಿಗೆ ಗೊತ್ತಿರಲಿಕ್ಕಿಲ್ಲ.
ಈಗ ಸೋಶಿಯಲ್ ಮೀಡಿಯಾದಲ್ಲಿ ಡಾ.ಪಾರ್ವತಮ್ಮ ರಾಜ್ಕುಮಾರ್ 'ಅಮೋಘವರ್ಷ ನೃಪತುಂಗ' ಸಿನಿಮಾ ಬಗ್ಗೆ ಆಡಿದ ಮಾತಿನ ತುಣುಕು ವೈರಲ್ ಆಗುತ್ತಿದೆ. ಅಷ್ಟಕ್ಕೂ ಈ ವಿಡಿಯೋದಲ್ಲಿ ಪಾರ್ವತಮ್ಮ ರಾಜ್ಕುಮಾರ್ ಬಿಟ್ಟುಕೊಟ್ಟ ವಿಷಯವೇನು? ಎಂದು ತಿಳಿಯಲು ಮುಂದೆ ಓದಿ.

200ನೇ ಸಿನಿಮಾ ಬಗ್ಗೆ ಪಾರ್ವತಮ್ಮ ಹೇಳಿದ್ದೇನು?
'ಅಮೋಘವರ್ಷ ನೃಪತುಂಗ' ಇದು ವರನಟ ಡಾ.ರಾಜ್ಕುಮಾರ್ ಅವರ 200ನೇ ಸಿನಿಮಾ ಆಗಬೇಕಿತ್ತು. ಈ ಸಿನಿಮಾ ಪೋಸ್ಟರ್ ಕೂಡ ರಿಲೀಸ್ ಆಗಿತ್ತು. ಸಿನಿಮಾ ಹಾಡುಗಳ ಕಂಪೋಸಿಷನ್ ಕೂಡ ಶುರುವಾಗಿತ್ತು. ಇನ್ನೊಂದು ಕಡೆ ಕಥೆ, ಚಿತ್ರಕಥೆ ಕೂಡ ನಡೆಯುತ್ತಿತ್ತು. ಈ ಸಿನಿಮಾ ಡಾ.ಪಾರ್ವತಮ್ಮ ರಾಜ್ಕುಮಾರ್ ಅವರ ಕನಸಿನ ಸಿನಿಮಾ ಆಗಿತ್ತು. ಡಾ.ರಾಜ್ಕುಮಾರ್ ಅವರೇ ಈ ಸಿನಿಮಾದಲ್ಲಿ ನಟಿಸಬೇಕು ಎಂಬ ಬಯಕೆಯಾಗಿತ್ತು. ಈ ಸಿನಿಮಾ ಪ್ರೀ-ಪ್ರೊಡಕ್ಷನ್ ಹಂತದಲ್ಲಿರುವಾಗ ಪಾರ್ವತಮ್ಮ ರಾಜ್ಕುಮಾರ್ ನೀಡಿದ ಸಂದರ್ಶನದ ವಿಡಿಯೋ ಈಗ ವೈರಲ್ ಆಗುತ್ತಿದೆ.

ರೆಡಿಯಾಗಿತ್ತು ಕಥೆ-ಚಿತ್ರಕಥೆ
"ನೃಪತುಂಗ ಸಿನಿಮಾ ಮಾಡುತ್ತಿದ್ದೇವೆ ಈಗ. ಕಥೆ ಸ್ಕ್ರೀನ್ ಪ್ಲೇ, ಡೈಲಾಗ್ ಎಲ್ಲಾ ರೆಡಿಯಾಗಿದೆ. ಪೂರ್ವ ತಯಾರಿ ಏನೇನು ಬೇಕೋ ಎಲ್ಲವನ್ನೂ ಮಾಡಿಕೊಳ್ಳುತ್ತಿದ್ದೇವೆ. ರೆಕಾರ್ಡಿಂಗ್ ದೊಡ್ಡ ದೊಡ್ಡದಾಗಿ ಮಾಡಬೇಕಲ್ಲ. ಅದನ್ನೆಲ್ಲಾ ಮಾಡುತ್ತಿದ್ದೇವೆ. ಇನ್ನೂ ಲೋಕೇಶನ್ ನೋಡುವುದಕ್ಕೆಲ್ಲಾ ಹೋಗಬೇಕು. ಲೋಕೇಶ್ ಎಲ್ಲಾ ನೋಡಿಕೊಂಡು ಬಂದ್ಮೇಲೆ ನವೆಂಬರ್ನಲ್ಲಿ ಶುರು ಮಾಡುತ್ತೇವೆ." ಎಂದು ಪಾರ್ವತಮ್ಮ ರಾಜ್ಕುಮಾರ್ ಈ ವಿಡಿಯೋದಲ್ಲಿ ಹೇಳಿದ್ದರು.

ಪಾರ್ವತಮ್ಮ ಅವರ 35 ವರ್ಷಗಳ ಆಸೆ
"ಅದು ನನ್ನ 35 ವರ್ಷದ ಆಸೆ. ರಾಜ್ಕುಮಾರ್ ಅವರೇ ಈ ಸಿನಿಮಾ ಮಾಡಬೇಕು. ಎರಡು ಕ್ಯಾರೆಕ್ಟರ್ ಅನ್ನೂ ರಾಜ್ಕುಮಾರ್ ಅವರೇ ಮಾಡಬೇಕು. ತರಾಸು ಅವರ ಕಥೆ ಓದಿದ ದಿನದಿಂದ ಹಾಗೆ ಅಂದುಕೊಂಡಿದ್ದೇನೆ. ನನಗೆ 15 ವರ್ಷ ಆ ಕಥೆಯನ್ನು ಓದಿದಾಗ, ಅಷ್ಟೊತ್ತಿಗಾಗಲೇ ಮದ್ರಾಸ್ಗೆ ಬಂದು ಬಿಟ್ಟಿದ್ದೆ ಮದುವೆ ಮಾಡಿಕೊಂಡು. ಅವತ್ತಿನಿಂದ ರಾಜ್ಕುಮಾರ್ ಅವರೇ ಎರಡೂ ಪಾತ್ರಗಳನ್ನು ಮಾಡಬೇಕು ಅಂತ ನನ್ನ ತಲೆಯಲ್ಲಿದೆ. " ಎಂದು ಪಾರ್ವತಮ್ಮ ರಾಜ್ಕುಮಾರ್ ಸಂದರ್ಶನದ ವೇಳೆ ಹೇಳಿದ್ದರು.
ನೃಪತುಂಗ ಸಿನಿಮಾ ಸೆಟ್ಟೇರಲಿಲ್ಲ
ಡಾ.ರಾಜ್ಕುಮಾರ್ 200ನೇ ಸಿನಿಮಾ 'ಅಮೋಘವರ್ಷ ನೃಪತುಂಗ' ಸಿನಿಮಾವನ್ನು ಸಿಂಗೀತಂ ಶ್ರೀನಿವಾಸ ರಾವ್ ನಿರ್ದೇಶನ ಮಾಡಬೇಕಿತ್ತು. ಚಿ.ಉದಯಶಂಕರ್, ಎಂ ರಂಗರಾವ್, ಪಿಭಕ್ತವತ್ಸಲಂ ಸೇರಿದಂತೆ ಹಲವು ಗಣ್ಯರು ಈ ಸಿನಿಮಾಗಾಗಿ ಕೆಲಸ ಮಾಡುತ್ತಿದ್ದರು. ಆದರೆ, ಕಥೆ, ಚಿತ್ರಕತೆ, ಸಂಗೀತ ಎಲ್ಲದರ ಕೆಲಸ ಆರಂಭ ಆಗಿತ್ತು. ಅದ್ಯಾಕೋ ಇನ್ನೇನು ಶುರುವಾಗಬೇಕು ಎನ್ನುವಷ್ಟರಲ್ಲಿಯೇ ಸಿನಿಮಾ ನಿಂತು ಹೋಗಿತ್ತು. ಬಳಿಕ 'ದೇವತಾ ಮನುಷ್ಯ' 200ನೇ ಸಿನಿಮಾವಾಗಿ ಹೊರಹೊಮ್ಮಿತ್ತು.


Click it and Unblock the Notifications











