ಚಿರು ಇನ್ನಿಲ್ಲ ಎಂಬ ಕಹಿ ಸಂಗತಿಯನ್ನು ವೈದ್ಯರು ಮೊದಲು ತಿಳಿಸಿದ್ದು ಈ ನಿರ್ದೇಶಕರಿಗೆ...
ಶನಿವಾರ ಫಿಟ್ಸ್ ಬಂದು ಒದ್ದಾಡಿದ್ದ ಚಿರಂಜೀವಿ ಸರ್ಜಾ ಬಳಿಕ ಚೇತರಿಸಿಕೊಂಡಿದ್ದರು. ಆದರೆ ಭಾನುವಾರ ಮಧ್ಯಾಹ್ನ 12.30ರ ವೇಳೆಗೆ ಇದ್ದಕ್ಕಿದ್ದಂತೆ ಎದೆ ನೋವು ಎಂದು ಹೇಳಿದರು. ಅವರನ್ನು ಕೂಡಲೇ ಸಾಗರ್ ಅಪೋಲೊ ಆಸ್ಪತ್ರೆಗೆ ಸಾಗಿಸಲಾಗಿತ್ತು.
Recommended Video
1.20ರ ಸುಮಾರಿಗೆ ಚಿರಂಜೀವಿ ಅವರನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಅಷ್ಟರಲ್ಲಾಗಲೇ ಅವರು ಕೊನೆಯುಸಿರೆಳೆದಿದ್ದರು. ಹಾಗಿದ್ದೂ ಸ್ತಬ್ಧಗೊಂಡಿದ್ದ ಅವರ ಹೃದಯ ಬಡಿತವನ್ನು ಸರಿಪಡಿಸಲು ವೈದ್ಯರು ಪ್ರಯತ್ನಿಸಿದ್ದರು. ಚಿರಂಜೀವಿ ಸರ್ಜಾ ಇನ್ನಿಲ್ಲ ಎಂಬ ಆಘಾತಕಾರಿ ಸುದ್ದಿ, ಅವರ ಹೃದಯವನ್ನು ಮತ್ತೆ ಎಚ್ಚರಿಸಲು ಪ್ರಯತ್ನಿಸಿದ್ದು, ಅದು ಸಾಧ್ಯವಾಗದೆ ಕೊನೆಗೆ ಅವರ ಸಾವಿನ ಸುದ್ದಿಯನ್ನು ಅಧಿಕೃತಗೊಳಿಸಿದ್ದು.
ಇದೆಲ್ಲವೂ ಅವರ ಕುಟುಂಬದವರಿಗೆ ತಿಳಿಸುವ ಮೊದಲೇ ಮತ್ತೊಬ್ಬ ಗಣ್ಯ ವ್ಯಕ್ತಿಗೆ ವೈದ್ಯರು ತಿಳಿಸುತ್ತಿದ್ದರು. ವಾಸ್ತವವಾಗಿ ಸುಂದರ್ ರಾಜ್ ಅವರ ಕುಟುಂಬಕ್ಕೆ ಬಹಳ ಆತ್ಮೀಯರಾಗಿದ್ದ ವ್ಯಕ್ತಿಯಿಂದ ಸಲಹೆ ಪಡೆದ ನಂತರವೇ ವೈದ್ಯರೂ ಸರ್ಜಾ ಕುಟುಂಬದವರಿಗೆ ಆ ಕಹಿ ಸತ್ಯ ಹೇಳಿದ್ದು. ಮುಂದೆ ಓದಿ..

ಒಂದು ಗಂಟೆ ವೇದನೆ ಅನುಭವಿಸಿದ್ದೆ
'ಚಿರಂಜೀವಿ ಅವರನ್ನು ಕರೆದುಕೊಂಡು ಬಂದ ಸಂದರ್ಭದಿಂದ ವೈದ್ಯರೊಂದಿಗೆ ಮಾತನಾಡುತ್ತಿದ್ದೆ. ಪ್ರತಿ ಪ್ರಯತ್ನದ ಬಳಿಕವೂ ವೈದ್ಯರು ನನಗೆ ಮೊದಲು ಫೋನ್ ಮಾಡಿ ಮಾಹಿತಿ ನೀಡುತ್ತಿದ್ದರು. ಸುಮಾರು ಒಂದು ಗಂಟೆ ಆ ವೇದನೆ ಅನುಭವಿಸಿದ್ದೆ. ನಿಜಕ್ಕೂ ವೇದನೆ ಅದು' ಎಂದು ಭಾವುಕರಾದರು ಖ್ಯಾತ ಸಾಹಿತಿ, ನಿರ್ದೇಶಕ ಬರಗೂರು ರಾಮಚಂದ್ರಪ್ಪ.

ಪ್ರತಿಕ್ಷಣ ಮಾಹಿತಿ ನೀಡುತ್ತಿದ್ದರು
ಬಹಳ ವರ್ಷಗಳಿಂದಲೂ ಸುಂದರ್ ರಾಜ್ ಮತ್ತು ಪ್ರಮೀಳಾ ಜೋಷಾಯ್ ಅವರ ಕುಟುಂಬಕ್ಕೆ ಆಪ್ತರಾಗಿದ್ದವರು ಬರಗೂರು ರಾಮಚಂದ್ರಪ್ಪ. ಚಿರಂಜೀವಿ ಸರ್ಜಾ ಅವರ ಸಾವಿನ ಸುದ್ದಿಯನ್ನು ವೈದ್ಯರು ಮೊದಲು ತಿಳಿಸಿದ್ದೂ ಅವರಿಗೆ. ಚಿರಂಜೀವಿ ಸರ್ಜಾ ಅವರ ಸಾವಿನ ಪ್ರತಿ ಕ್ಷಣದ ಮಾಹಿತಿಯೂ ತಮಗೆ ಬರುತ್ತಿತ್ತು. ಆ ನೋವು ತೀವ್ರವಾಗಿತ್ತು ಎಂಬುದನ್ನು ಬರಗೂರು ರಾಮಚಂದ್ರಪ್ಪ 'ಫಿಲ್ಮಿ ಬೀಟ್'ಗೆ ತಿಳಿಸಿದರು.

ಕುಟುಂಬದ ಒಡನಾಡಿಗಳು
ಸಿನಿಮಾಗಳ ಮೂಲಕ ಸುಂದರ್ ರಾಜ್ ಮತ್ತು ಪ್ರಮೀಳಾ ಜೋಷಾಯಿ ನನಗೆ ಆತ್ಮೀಯರಾಗಿದ್ದರು. ಮೇಘನಾ ಕೂಡ ಮೊದಲು ಬಣ್ಣ ಹಚ್ಚಿದ್ದೇ ನನ್ನ ಚಿತ್ರದಲ್ಲಿ. 'ಕರಡಿಪುರ' ಚಿತ್ರದಲ್ಲಿ ಬಾಲಕಿ ಮೇಘನಾ ನಟಿಸಿದ್ದಳು. ಹೀಗಾಗಿ ಬಹಳ ಹಿಂದಿನಿಂದಲೂ ನಮ್ಮ ಕುಟುಂಬದ ಒಡನಾಟ ಬಹಳ ಚೆನ್ನಾಗಿತ್ತು ಎಂಬುದನ್ನು ವಿವರಿಸಿದರು.

ಆಸ್ಪತ್ರೆ ವೈದ್ಯರ ಪರಿಚಯವಿತ್ತು
ಚಿರಂಜೀವಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲು ಕರೆದೊಯ್ದ ಸಂದರ್ಭದಲ್ಲಿ ಸುಂದರ್ ರಾಜ್ ಮೊದಲು ಕರೆ ಮಾಡಿದ್ದು ಬರಗೂರು ರಾಮಚಂದ್ರಪ್ಪ ಅವರಿಗೆ. ಸಾಗರ್ ಅಪೊಲೊ ಆಸ್ಪತ್ರೆ ಬರಗೂರು ಅವರಿಗೆ ಪರಿಚಿತ. ಎರಡು ವರ್ಷಗಳ ಹಿಂದೆ ನಿಧನರಾದ ಬರಗೂರು ಅವರ ಪತ್ನಿ ಎಸ್. ರಾಜಲಕ್ಷ್ಮಿ ಇಲ್ಲಿಯೇ ಚಿಕಿತ್ಸೆ ಪಡೆದಿದ್ದರು. ಹೀಗಾಗಿ ಬರಗೂರು ಅವರಿಗೆ ಆಸ್ಪತ್ರೆಯ ವೈದ್ಯರ ಪರಿಚಯ ಚೆನ್ನಾಗಿತ್ತು.

ಮಾಹಿತಿ ನೀಡುತ್ತಿದ್ದ ವೈದ್ಯರು
ಕೊರೊನಾ ವೈರಸ್ ಭೀತಿಯ ಕಾರಣದಿಂದ ಯಾರನ್ನೂ ತಕ್ಷಣಕ್ಕೆ ಒಳಗೆ ಸೇರಿಸಿದ ಸ್ಥಿತಿಯಲ್ಲಿ ಆಸ್ಪತ್ರೆಗಳಿವೆ. ಹೀಗಾಗಿ ವೈದ್ಯರಿಗೆ ಫೋನ್ ಮಾಡಿ ಸಹಾಯ ಮಾಡಲು ಕೇಳಿದೆ. ಪ್ರತಿ ಹದಿನೈದು ನಿಮಿಷಕ್ಕೊಮ್ಮೆ ವೈದ್ಯರು ನನಗೆ ಅಲ್ಲಿ ಏನಾಗುತ್ತಿದೆ ಎಂಬ ಮಾಹಿತಿ ನೀಡುತ್ತಿದ್ದರು. ಅದರ ಬಗ್ಗೆ ನಾನು ಸುಂದರ್ ರಾಜ್ ಮತ್ತು ಪ್ರಮೀಳಾ ಜೋಷಾಯ್ ಅವರೊಂದಿಗೆ ಹೇಳುತ್ತಿದ್ದೆ ಎಂದು ಬರಗೂರು ತಿಳಿಸಿದರು.

ಪಲ್ಸ್ ರಿವೈವ್ ಪ್ರಯತ್ನ
ಆಸ್ಪತ್ರೆಗೆ ಕರೆತರುವಾಗಲೇ ಪಲ್ಸ್ ನಿಂತು ಹೋಗಿತ್ತು. ಆದರೆ ರಿವೈವ್ ಮಾಡಲು ಪ್ರಯತ್ನಿಸುವುದಾಗಿ ವೈದ್ಯರು ಹೇಳಿದ್ದರು. ನನ್ನ ಪತ್ನಿಗೂ ಹೀಗೆ ಹೃದಯಾಘಾತವಾದಾಗ ಪಲ್ಸ್ ರಿವೈವ್ ಮಾಡಿದ್ದರು. ಇದರಿಂದ ಒಂದು ತಿಂಗಳು ಪತ್ನಿ ಬದುಕಿದ್ದಳು. ಚಿರಂಜೀವಿಗೂ ಅದೇ ಪ್ರಯತ್ನ ಮಾಡಿದ್ದರು. ಇದರ ಕುರಿತು ನೇರವಾಗಿ ಹೇಳಲಾಗುತ್ತಿಲ್ಲ ಎಂದಾಗ, ಪರೋಕ್ಷವಾಗಿ ತಿಳಿಸುವಂತೆ ವೈದ್ಯರಿಗೆ ಹೇಳಿದ್ದೆ. ಕೊನೆಗೆ ಅವರ ಪ್ರಯತ್ನ ಫಲ ಕೊಡದೇ ಇದ್ದಾಗ ಚಿರಂಜೀವಿ ಇನ್ನಿಲ್ಲ ಎಂಬ ಸುದ್ದಿಯನ್ನು ಪ್ರಕಟಿಸುವುದಾಗಿ ತಿಳಿಸಿದರು ಎಂದು ಬರಗೂರು, ಚಿರಂಜೀವಿ ಸಾವಿನ ಸುದ್ದಿಯ ವೇದನೆಯನ್ನು ಮೊದಲು ತಿಳಿದಿದ್ದರೂ ಸುಂದರ್ ರಾಜ್ ಮತ್ತು ಪ್ರಮೀಳಾ ಜೋಷಾಯ್ ಅವರಿಗೆ ಹೇಳಲಾಗದ ಸಂಕಟದ ಸಂದರ್ಭವನ್ನು ವಿವರಿಸಿದರು.

ಚಿಕ್ಕ ವಯಸ್ಸಲ್ಲಿ ಸತ್ತಿದ್ದು ದುರಂತ
ನನಗೆ ಚಿರಂಜೀವಿ ಸರ್ಜಾ ಪರಿಚಯ ಅಷ್ಟೇ. ಶೂಟಿಂಗ್ ಸಂದರ್ಭದಲ್ಲಿ ದೂರದಿಂದ ನೋಡಿದ್ದೇನೆ. ನನಗೆ ಆತ್ಮೀಯರಾದವರು ಹೇಳಿರುವಂತೆ ಚಿರಂಜೀವಿ ಸರ್ಜಾ ನಿರ್ದೇಶಕರ ನಟ. ಅಹಂಕಾರವಿಲ್ಲದ ವ್ಯಕ್ತಿ. ನಾನು ಅವರನ್ನು ಹೆಚ್ಚಾಗಿ ನೋಡಿದ್ದು, ಮೇಘನಾ ರಾಜ್ ಜತೆ ಮದುವೆಯಾದ ನಂತರ. ಸ್ಟಾರ್ ಆಗಿದ್ದರೂ ಅಹಂ ಇಲ್ಲದ ವ್ಯಕ್ತಿಯಾಗಿದ್ದರು. 39ನೇ ವಯಸ್ಸಿನಲ್ಲಿ ಅವರು ಸತ್ತು ಹೋದದ್ದು ಬಹಳ ದುರಂತ.

ಸರ್ಜಾ ಕುಟುಂಬವೂ ಪರಿಚಯ
ನನಗೆ ಚಿರಂಜೀವಿ ಸರ್ಜಾ ಅವರ ಕುಟುಂಬವೂ ಚೆನ್ನಾಗಿ ಪರಿಚಯವಿತ್ತು. ಅರ್ಜುನ್ ಸರ್ಜಾ ಮಾವ ರಾಜೇಶ್ ಬಹಳ ಚೆನ್ನಾಗಿ ಗೊತ್ತಿದ್ದರು. ಶಕ್ತಿ ಪ್ರಸಾದ್ ತುಂಬಾ ಹಳೆಯ ಪರಿಚಯ. ನನ್ನ ಮನೆಗೆ ಬರುತ್ತಿದ್ದರು. ಶಕ್ತಿ ಪ್ರಸಾದ್ ಊರು ಮಧುಗಿರಿ ತಾಲ್ಲೂಕಿನ ಜಕ್ಕೇನಹಳ್ಳಿ. ನನ್ನ ಹೆಂಡತಿಯ ಪಕ್ಕದ ಊರು. ಹಾಗಾಗಿ ಅವರೊಂದಿಗೆ ಬಾಂಧವ್ಯವಿತ್ತು. ಶಕ್ತಿ ಪ್ರಸಾದ್ ಮತ್ತು ಕಿಶೋರ್ ಸರ್ಜಾ ಅಂತ್ಯಕ್ರಿಯೆ ಆಗಿದ್ದು ಕೂಡ ಅಲ್ಲಿಯೇ.

ಸಾವು ಎನ್ನುವುದು ಸರ್ವಾಧಿಕಾರಿ
ಮೇಘನಾ ರಾಜ್ ಮದುವೆ ಬಳಿಕ ಚಿರಂಜೀವಿ ಹತ್ತಿರವಾಗಿದ್ದರು. ಬೆಳಕಿಗೆ ಬರುತ್ತಿದ್ದ ಭರವಸೆ ಮೂಡಿಸಿದ್ದ ಕಲಾವಿದ. ನಾನು ಸಾವನ್ನು ಸರ್ವಾಧಿಕಾರಿ ಎಂದು ಕರೆಯುತ್ತೇನೆ. ಸಾವಿನಷ್ಟು ಸರ್ವಾಧಿಕಾರಿ ಯಾವುದೂ ಇಲ್ಲ. ಬೇರೆ ಸರ್ವಾಧಿಕಾರಿಗಳನ್ನು ಮಣಿಸಬಹುದು. ಆದರೆ ಸಾವನ್ನು ಮಣಿಸಲು ಸಾಧ್ಯವಿಲ್ಲ. ಸಾವು ಹೇಗೆ ಬೆನ್ನ ಹಿಂದೆ ಬರುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ.

ಆಘಾತ ಊಹಿಸಲಾಗುತ್ತಿಲ್ಲ
ಬದುಕಿನಲ್ಲಿ ಏನೋ ನಿರೀಕ್ಷೆ ಮಾಡಿಕೊಂಡಿರುತ್ತೇವೆ. 39 ತುಂಬಾ ಚಿಕ್ಕ ವಯಸ್ಸು. ಚಿರಂಜೀವಿ ಚೆನ್ನಾಗಿ ಇದ್ದರು. ದೇಹವನ್ನು ಚೆನ್ನಾಗಿ ಇಟ್ಟುಕೊಂಡಿದ್ದರು. ಆದರೆ ನಮ್ಮ ಒಳಗೆ ಏನಾಗುತ್ತದೆಯೋ ನಮಗೆ ಗೊತ್ತಾಗುವುದಿಲ್ಲ. ಈ ಸಾವು ಬಹಳ ನೋವು ತಂದಿದೆ. ಏಕೆಂದರೆ ಆ ಕುಟುಂಬದೊಂದಿಗೆ ಬಹಳ ಆಪ್ತ ಒಡನಾಟವಿತ್ತು. ಮೇಘನಾಗೆ ಆಗಿರುವ ಆಘಾತವನ್ನು ಊಹಿಸಲು ಸಾಧ್ಯವಾಗುತ್ತಿಲ್ಲ ಎಂದು ಭಾವುಕರಾಗಿ ಮಾತು ಮುಗಿಸಿದರು ಬರಗೂರು ರಾಮಚಂದ್ರಪ್ಪ.


Click it and Unblock the Notifications











