ಬೆಂಗಳೂರಿನ ಅಶೋಕ ಹೋಟೆಲ್ನ 101ನೇ ರೂಮ್ ಆ ನಟಿಗೆ ಮೀಸಲು; ಯಾರದು? ಆ ರೂಮಿನ ವಿಶೇಷತೆ ಏನು?
ಒಂದು ಕಾಲದಲ್ಲಿ ಬೆಂಗಳೂರಿನ ಅಶೋಕ ಹೋಟೆಲ್ ಸಿನಿಮಾ ಮಂದಿಯ ತಾಣವಾಗಿತ್ತು. 80 ಹಾಗೂ 90ರ ದಶಕದಲ್ಲಿ ಯಾವುದೇ ಚಿತ್ರರಂಗದಲ್ಲಿ ತಾರೆಯರು, ತಂತ್ರಜ್ಞರು ಬೆಂಗಳೂರಿಗೆ ಬಂದರೆ, ಅವರು ಅಶೋಕ ಹೋಟೆಲ್ನಲ್ಲಿ ಉಳಿದುಕೊಳ್ಳುತ್ತಿದ್ದರು. ಆ ಮಟ್ಟಿಗೆ ಅಶೋಕ ಹೋಟೆಲ್ ಜನಪ್ರಿಯವಾಗಿತ್ತು. ಕನ್ನಡ ಚಿತ್ರರಂಗದಿಂದ ಹಿಡಿದು, ತೆಲುಗು, ತಮಿಳು, ಹಿಂದಿ ಭಾಷೆಯ ಸ್ಟಾರ್ಗಳ ಫೇವರಿಟ್ ಆಗಿತ್ತು.
ಕನ್ನಡ ಚಿತ್ರರಂಗದಲ್ಲಿ ಪೋಷಕ ಕಲಾವಿದರಾಗಿ ಗುರುತಿಸಿಕೊಂಡಿರುವ ಪ್ರಣಯ ಮೂರ್ತಿ ಕೂಡ ಇದೇ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದರು. ಅವರು ಕೆಲಸ ಮಾಡುವ ವೇಳೆ ಸಿನಿಮಾ ತಾರೆಯರು ಬಂದು ಇದೇ ಹೋಟೆಲ್ನಲ್ಲಿ ಹಲವು ಮಂದಿ ತಂಗಿದ್ದರು. ಆ ಅನುಭವಗಳನ್ನು ಪ್ರಣಯ ಮೂರ್ತಿ ಟೋಟಲ್ ಕನ್ನಡ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಇದೇ ಸಂದರ್ಶನದಲ್ಲಿ ಅಶೋಕ ಹೋಟೆಲ್ನ 101ನೇ ರೂಮ್ ಅನ್ನು ಒಬ್ಬ ನಟಿಗೆ ಮೀಸಲಾಗಿ ಇಡಲಾಗಿತ್ತು ಎನ್ನುವ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ. ನಟಿಯೊಬ್ಬರಿಗೆ ಆ ರೂಮ್ ಮೀಸಲಾಗಿ ಇಡಲಾಗಿತ್ತು. ಅಷ್ಟಕ್ಕೂ ಆ ರೂಮ್ ಅನ್ನೇ ಆ ನಟಿ ಇಷ್ಟ ಪಡುತ್ತಿದ್ದಿದ್ದು ಯಾಕೆ? ಆ ನಟಿ ಯಾರು ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.
ಬೆಂಗಳೂರಿನ ಜನಪ್ರಿಯ ಅಶೋಕ ಹೋಟೆಲ್ ಈಗ ಲಲಿತ್ ಅಶೋಕ ಆಗಿದೆ. ಈ ಹೋಟೆಲ್ನಲ್ಲಿ ಸಿನಿಮಾಗೆ ಸಂಬಂಧಿಸಿದ ಚಟುವಟಿಕೆಗಳು ಇಂದಿಗೂ ನಡೆಯುತ್ತವೆ. ಶೂಟಿಂಗ್ ನಿಮಿತ್ತ ಬೆಂಗಳೂರಿಗೆ ಬಂದ ಸ್ಟಾರ್ ನಟ-ನಟಿಯರು, ತಂತ್ರಜ್ಞರು ಇಂದಿಗೂ ಇದೇ ಹೋಟೆಲ್ನಲ್ಲಿ ಉಳಿದುಕೊಳ್ಳುತ್ತಾರೆ. ಅಷ್ಟಕ್ಕೂ ಈ ಹೋಟೆಲ್ನ 101 ರೂಮ್ ಬಾಲಿವುಡ್ ನಟಿ ಡ್ರೀಮ್ ಗಲ್ ಹೇಮಾ ಮಾಲಿನಿಗೆ ಮೀಸಲಾಗಿರುತ್ತಿತ್ತು. ಆ ರೂಮ್ ಹೇಮಾ ಮಾಲಿನಿ ತುಂಬಾನೇ ಇಷ್ಟ ಪಡುತ್ತಿದ್ದರು. ಅದ್ಯಾಕೆ ಅನ್ನೋದನ್ನು ಪ್ರಣಯ ಮೂರ್ತಿ ಹೇಳಿಕೊಂಡಿದ್ದಾರೆ.

"101ನೇ ರೂಮ್ ಯಾವಾಗಲೂ ಹೇಮಾ ಮಾಲಿನಿಗೆ ಫಿಕ್ಸ್ ಆಗಿತ್ತು. ಅವರು ಬಂದರೆ ಅದೇ ರೂಮ್ ಆಗಬೇಕಿತ್ತು. ಯಾಕೆ ಅಂದರೆ, ಒಂದು ಸಾಂಪ್ರದಾಯಿಕವಾದ ಉಯ್ಯಾಲೆ ಇತ್ತು. ಅಯ್ಯಂಗಾರ್ ಮನೆಗಳಲ್ಲಿ ಇರತ್ತಲ್ಲ ಹಾಗೇ ಕೂತು ಉಯ್ಯಾಲೆ ಆಡುತ್ತಿದ್ದರು. ಒಂದು ಜೂಸ್ ಕುಡಿಯಬೇಕು ಅಂದರೂ ನಿಧಾನಕ್ಕೆ ಕೂತುಕೊಂಡು ಉಯ್ಯಾಲೆ ಆಡುತ್ತಾ ಕುಡಿಯೋಳು. ಅವರ ಅಮ್ಮ ಎದುರುಗಡೆ ಕೂತುಕೊಂಡು ಮಾತುಕತೆ ಆಡೋರು." ಎಂದು ಪ್ರಣಯ ಮೂರ್ತಿ ಆ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.
ಒಮ್ಮೆ ಹೇಮಾ ಮಾಲಿನಿ ತಂಗಿದ್ದ ಅಶೋಕ ಹೋಟೆಲ್ನ 101ನೇ ರೂಮ್ಗೆ ಪ್ರಣಯ ಮೂರ್ತಿ ಹೋಗಿದ್ದರು. ಆಗ ಹೇಮಾ ಮಾಲಿನಿ ಹಾಗೂ ಅವರ ಅಮ್ಮ ಮಾತಾಡಿಕೊಂಡ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. "ಗುಲ್ಜಾರ್ ಸಿನಿಮಾದಲ್ಲಿ ನಾನು ನಟಿಸಬೇಕಮ್ಮ. ನೀನು ಯಾವತ್ತೂ ಕಾಲ್ ಶೀಟ್ ಇಲ್ಲ ಅಂತ ಹೇಳಬೇಡ. ನಾನು ಆ ಸಿನಿಮಾದಲ್ಲಿ ನಟಿಸಲೇಬೇಕು ಅಂತ ನನ್ನ ಎದುರಿಗೆ ಹೇಳಿದರು. ಅವರು ಹೇಳುವಾಗ ನಾನು ಎದುರಿಗೆ ಇದ್ದೇ ಅಷ್ಟೇ. ನಾನು ಏನಕ್ಕೋ ಹೋದಾಗ ಕೇಳಿಸಿಕೊಂಡಿದ್ದೆ ಅಷ್ಟೇ." ಎಂದು ಸಂದರ್ಶನದ ವೇಳೆ ಹೇಳಿದ್ದಾರೆ.

ಇಷ್ಟೇ ಇದೇ ಅಶೋಕ ಹೋಟೆಲ್ಗೆ ನಾಗರಹಾವು ಶೂಟಿಂಗ್ ಸಲುವಾಗಿ ಪುಟ್ಟಣ್ಣ ಕಣಗಾಲ್ ಬಂದಿದ್ದರು. ಆ ಘಟನೆಯನ್ನು ನೆನೆದಿದ್ದಾರೆ. "ನಾನು 1971ನೇ ಇಸವಿ, ಮೇ ತಿಂಗಳಲ್ಲಿ ಅಶೋಕ ಹೋಟೆಲ್ನಲ್ಲಿ ದೈವ ಆಶೀರ್ವಾದದಿಂದ ಅಲ್ಲಿ ಕೆಲಸ ಸಿಕ್ತು. ಅದು ಒಂದು ದೊಡ್ಡ ವಿಚಾರ." ಎಂದು ಅಶೋಕ ಹೋಟೆಲ್ನಲ್ಲಿ ಕೆಲಸ ಮಾಡಿದ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ನಾಗರಹಾವು ಶೂಟಿಂಗ್ ಮಾಡುವಾಗ ಪುಟ್ಟಣ್ಣ ಕಣಗಾಲ್, ವೀರಸ್ವಾಮಿ ಸೇರಿದಂತೆ ದಿಗ್ಗಜರು ಬಂದಿದ್ದರು. ಆ ವೇಳೆ ಪುಟ್ಟಣ್ಣ ಅವರನ್ನು ನೋಡಿ ಸಿನಿಮಾದಲ್ಲಿ ಅವಕಾಶ ಕೊಡುವಂತೆ ಪ್ರಣಯ ಮೂರ್ತಿ ಹಿಂದೆ ಬಿದ್ದಿದ್ದರಂತೆ. ಆಗ ಪುಟ್ಟಣ್ಣ ಕಣಗಾಲ್ ಅವರು ಕೊಟ್ಟ ಒಂದು ಚಿಕ್ಕ ಸೀನ್ ಅವರ ಬದುಕನ್ನೇ ಬದಲಿಸಿತ್ತು ಎಂದು ಟೋಟಲ್ ಕನ್ನಡಕ್ಕೆ ನೀಡಿದ ಸಂದರ್ಶನಲ್ಲಿ ಹೇಳಿಕೊಂಡಿದ್ದಾರೆ.
"ಒಮ್ಮೆ ಪೊರ್ಟಿಕೋದಲ್ಲಿ ಕಾರು ಬಂದು ನಿಲ್ತು. ರೂಮ್ ಯಾರೋ ಗೆಸ್ಟ್ ಬಂದಿದ್ದಾರೆ ಅಂತ ಹೋದರೆ, ಕಾರಿನ ಡೋರ್ ಓಪನ್ ಆಯ್ತು. ವೀರಸ್ವಾಮಿಯವರು, ಪುಟ್ಟಣ್ಣ ಕಣಗಾಲ್, ಅಂಗಪ್ಪ, ಪುಣ್ಯಕೋಟಿ ಇವರೆಲ್ಲ ಇಳಿದರು. ನನಗೆ ಸಂತೋಷ ತಡೆದುಕೊಳ್ಳುವುದಕ್ಕೆ ಆಗಲಿಲ್ಲ. ನನಗೆ ಕೈಕಾಲೇ ಓಡಲಿಲ್ಲ. ನಿಂತ ಜಾಗದಲ್ಲಿ ನಡುಗುತ್ತಿದ್ದೇನೆ. ಅವರು ಬಂದು ಕೈ ಹಿಡಿದುಕೊಂಡರು. ನನಗೆ ನಿಮ್ಮನ್ನು ಕಂಡರೆ ತುಂಬಾ ಇಷ್ಟ. ನನಗೆ ಸಿನಿಮಾದಲ್ಲಿ ನಟನೆ ಮಾಡಬೇಕು ಅಂತ ತುಂಬಾ ಹುಚ್ಚು. ನಿಮ್ಮ ಸಿನಿಮಾದಲ್ಲಿ ನಾನು ನಟಿಸಬೇಕು ಅಂದೆ." ಆ ದಿನ ಪುಟ್ಟಣ್ಣ ಕಣಗಾಲ್ ಅವರನ್ನು ಭೇಟಿ ಮಾಡಿದ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ.
ಇನ್ನು ನಾಗರಹಾವು ಸಿನಿಮಾದ ಪ್ರಮುಖ ಘಟನೆಗಳನ್ನು ನೆನಪಿಸಿಕೊಂಡಿದ್ದಾರೆ. ಪುಟ್ಟಣ್ಣ ಕಣಗಾಲ್ ಅಶೋಕ ಹೋಟೆಲ್ಗೆ ಬಂದಾಗ ಹೇಗೆ ನಡೆದುಕೊಂಡರು. ಅವರೊಂದಿಗೆ ಒಡನಾಟ ಹೇಗೆ ಬೆಳೀತು. ಪುಟ್ಟಣ್ಣ ಅಶೋಕ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಯುವತಿಯರನ್ನೇ ಸಿನಿಮಾ ಆಯ್ಕೆ ಮಾಡುವುದಕ್ಕೆ ಮುಂದಾಗಿದ್ದನ್ನು ನೆನಪಿಸಿಕೊಂಡಿದ್ದಾರೆ.
"ಮಾರ್ಗರೇಟ್ ಪಾತ್ರಕ್ಕೆ ಇನ್ನೂ ನಾಯಕಿ ಆಯ್ಕೆ ಆಗಿರಲಿಲ್ಲ. ಆ ಪಾತ್ರಕ್ಕೆ ಕಲ್ಪನಾ ಅಲ್ಲ ಅಂತಾಗಿತ್ತು. ನನಗೆ ಕಲ್ಪನಾ ಅಕ್ಕ ಇದ್ದ ಹಾಗೆ. ಅವರು ಆಯ್ಕೆ ಆಗಲಿಲ್ವಲ್ಲ ಅಂತ ಬೇಜಾರು ಇತ್ತು. ಆಗ ಪುಟ್ಟಣ್ಣ ಅವರು ಈ ಪಾತ್ರಕ್ಕೆ ಪರ್ಫೆಕ್ಟ್ ಆಗಿ ಮ್ಯಾಚ್ ಆಗುವವರು ಈ ಹೋಟೆಲ್ನಲ್ಲಿ ಇದ್ದಾರೆ. ನಿನಗೆ ಪರಿಚಯ ಜಾಸ್ತಿ ಇರುತ್ತಲ್ಲ ಕೇಳು ಅಂದರು. ಆಗ ಪಬ್ಲಿಕ್ ರಿಲೇಷನ್ಶಿಪ್ ಆಫಿಸರ್ ತಸ್ಲೀಮ ಫಕೀರ್ ಮೊಹಮ್ಮದ್ ಇಂತಿದ್ದರು. ಕಲ್ಪನಾ ಅವರಷ್ಟೇ ಎತ್ತರವಿದ್ದರು. ಅವರನ್ನು ಹೇಳಿದೆ. ನಮ್ಮ ಮನೆಯಲ್ಲಿ ಒಪ್ಪಲ್ಲ ಅಂದರು. ಸರಿ ಅಂತ ಇನ್ನೊಬ್ಬರು ಇದ್ದ ಕೂರ್ಗ್ನವರು ಸರಿನಾ ಸುಬ್ಬಯ್ಯ ಅಂತ ಅವರಿಗೆ ಕೇಳಿದೆ. ಹೆಚ್ಚು ಕಡಿಮೆ ಓಕೆ ಆಗುತ್ತಿತ್ತು. ಬಿಟ್ಟು ಬಿಟ್ಟು ಡೇಟ್ ಬೇಕು ಅಂದಿದ್ದರು. ಅದನ್ನು ಹೇಳಿದಾಗ ಇಲ್ಲ ನಾನು ರಷ್ಯಾಗೆ ಹೋಗುತ್ತಿದ್ದೇನೆ. ಆ ಮೇಲೆ ಆಗಲ್ಲ ಅಂದರು. ಹಾಗಿದ್ದರೆ ಬಿಟ್ಟು ಬಿಡು ಬೇರೆ ಯಾರನ್ನಾದರೂ ನೋಡು ಅಂದರು." ಎಂದು ಆ ಘಟನೆಗಳನ್ನು ವಿವರಿಸಿದ್ದಾರೆ.
ಪುಟ್ಟಣ್ಣ ಕಣಗಾಲ್ ಹಾಗೂ ನಾಗರ ಹಾವು ಸಿನಿಮಾ ಬಗ್ಗೆ ಪ್ರಣವ ಮೂರ್ತಿ ಸಾಕಷ್ಟು ನೆನಪುಗಳಿವೆ. ಪುಟ್ಟಣ್ಣ ಕಣಗಾಲ್ ಅವರೊಂದಿಗಿನ ಒಡನಾಟ, ಮಾತುಕತೆ ನಾಗರ ಹಾವು ಸಮಯದಲ್ಲಿ ಅವರೊಂದಿಗೆ ಓಡಾಡಿದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಸಾಹಸ ಸಿಂಹ ವಿಷ್ಣುವರ್ಧನ್ ಅವರ ವೃತ್ತಿ ಬದುಕಿಗೆ ಹೊಸ ತಿರುವು ಕೊಟ್ಟ ಸಿನಿಮಾವಿದು. ಎಲ್ಲಕ್ಕಿಂತ ಕನ್ನಡ ಚಿತ್ರರಂಗದ ಎವರ್ಗ್ರೀನ್ ಸಿನಿಮಾಗಳಲ್ಲಿ ಒಂದು.
ಪುಟ್ಟಣ್ಣ ಕಣಗಾಲ್ ಜೊತೆ ಕೆಲಸ ಮಾಡಬೇಕು ಅಂತ ಅದೆಷ್ಟೋ ಮಂದಿಯ ಕನಸಾಗಿತ್ತು. ಇಂದಿಗೂ ಯುವ ನಿರ್ದೇಶಕರು ಪುಟ್ಟಣ್ಣ ಕಣಗಾಲ್ ಅವರನ್ನು ಗುರುಗಳ ಸ್ಥಾನದಲ್ಲಿ ನೋಡುವುದು ಉಂಟು. ಪುಟ್ಟಣ್ಣ ಅವರ ಕತೆ ಆಯ್ಕೆ ಮಾಡಿಕೊಳ್ಳುವ ರೀತಿ, ಶಾಟ್ ಸೆಲೆಕ್ಷನ್, ಪಾತ್ರಗಳ ಗಂಭೀರತೆ. ಇವೆಲ್ಲವೂ ಇಂದಿನ ಪೀಳಿಗೆ ಮಾದರಿ ಅಂತಲೇ ಹೇಳಬಹುದು. ಈ ಕಾರಣಕ್ಕೆ ಇಂದಿಗೂ ಪುಟ್ಟಣ್ಣ ಕಣಗಾಲ್ ಸಿನಿಮಾಗಳು ಚರ್ಚೆಯಾಗುತ್ತವೆ.


Click it and Unblock the Notifications











