Cauvery: ಕಾವೇರಿ ವಿವಾದದ ವೇಳೆ ಕನ್ನಡ ಸಂಘಟನೆಗಳಿಗೆ ರಜನಿ ಕ್ಷಮೆ ಕೇಳಿದಿದ್ದೇಕೆ? ಅಂದು ನಡೆದ ಘಟನೆ ಏನು?
ಕರ್ನಾಟಕ ಮತ್ತು ತಮಿಳುನಾಡು ನಡುವಿನ ಕಾವೇರಿ ವಿವಾದ ಮತ್ತೆ ಧುತ್ತೆಂದು ಎದ್ದು ಕೂತಿದೆ. ವಿವಿಧ ಸಂಘಟನೆಗಳು ಬೆಂಗಳೂರು ಬಂದ್ಗೆ ಕರೆ ನೀಡಿವೆ. ಇದಲ್ಲದೇ ಮತ್ತೆ ಶುಕ್ರವಾರ (ಸೆ 29) ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್ಗೆ ಕರೆ ನೀಡಿರುವುದರಿಂದ ಬೆಂಗಳೂರು ಬಹುತೇಕ ಲಾಕ್ ಆಗುವ ಸಾಧ್ಯತೆಗಳೇ ಹೆಚ್ಚು.
ನಾಡುನುಡಿ ನೀರಿನ ವಿಚಾರದಲ್ಲಿ ಯಾವಾಗೆಲ್ಲಾ ಬಂದ್ಗೆ ಕರೆ ನೀಡಲಾಗುತ್ತೋ, ಆಗ ಮೊದಲು ಕೇಳಿ ಬರುವುದು ಚಲನಚಿತ್ರರಂಗದ ಬೆಂಬಲ ಮತ್ತು ಕಲಾವಿದರು ರಾಜ್ಯದ ಪರವಾಗಿ ನಿಲ್ಲುತ್ತಾರೋ ಎನ್ನುವ ಸಂಶಯದ ನೋಟ. ಪ್ರತೀ ಬಾರಿಯೂ ಕಾವೇರಿ/ಮಹದಾಯಿ ನದಿನೀರು ಹಂಚಿಕೆ ವಿವಾದ ತಾರಕಕ್ಕೇರಿದಾಗ ಸೆಲೆಬ್ರಿಟಿಗಳು ಧ್ವನಿ ಎತ್ತಲೇ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುತ್ತದೆ.

ಈ ಪರಿಸ್ಥಿತಿ ಬರಿ ಸ್ಯಾಂಡಲ್ ವುಡ್ ನಲ್ಲಿ ಮಾತ್ರವಲ್ಲ, ಪಕ್ಕದ ಕಾಲಿವುಡ್ ನಲ್ಲೂ ಕೂಡಾ.. ಕಲಾವಿದರಿಗೆ ಭಾಷೆಯ ಚೌಕಟ್ಟು ಇಲ್ಲ ಎಂದು ಸೆಲೆಬ್ರಿಟಿಗಳು ಹೇಳುತ್ತಲೇ ಬಂದರೂ ತಮ್ಮ ನಾಡಿನ ಧ್ವನಿಯಾಗಿ ಮಾತನಾಡಲೇ ಬೇಕಾಗುತ್ತದೆ. ಈಗ ದಕ್ಷಿಣದ ಹೆಚ್ಚಿನ ಸಿನಿಮಾಗಳು ಪ್ಯಾನ್ ಇಂಡಿಯಾ ಆವೃತ್ತಿಯಲ್ಲಿ ಬಿಡುಗಡೆ ಆಗುತ್ತಿರುವುದರಿಂದ, ಕನ್ನಡ ಮತ್ತು ತಮಿಳಿನ ಕಲಾವಿದರು ಸ್ವಾಭಾವಿಕವಾಗಿ ತಮಗಿರುವ ಮಾರುಕಟ್ಟೆಯ ಬಗ್ಗೆ ಆಲೋಚಿಸಿ ಹೆಜ್ಜೆ ಇಡಬೇಕಾಗುತ್ತದೆ. ಈಗ ಅಂತದ್ದೇ ಪರಿಸ್ಥಿತಿ ನಿರ್ಮಾಣವಾಗಿದೆ.
ಕಾವೇರಿ ವಿವಾದ ಇಂದು ನಿನ್ನೆಯದಲ್ಲ, ಇದಕ್ಕಾಗಿ ನಡೆಯದ ಹೋರಾಟಗಳಿಲ್ಲ, ಆದ ಬಂದ್ ಗಳಿಗೆ ಲೆಕ್ಕವಿಲ್ಲ..ಕನ್ನಡ ಮತ್ತು ತಮಿಳಿನ ಕಲಾವಿದರು ದೊಡ್ಡ ಸಂಖ್ಯೆಯಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದೂ ಆಗಿದೆ. ಆದರೆ ಇದ್ಯಾವುದೂ ಎರಡು ರಾಜ್ಯಗಳ ನಡುವಿನ ಜ್ವಲಂತ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳುವಲ್ಲಿ ಯಶಸ್ಸನ್ನು ಪಡೆದಿಲ್ಲ.
ಆದರೂ, ಇಂತಹ ಹೋರಾಟಗಳು ನಡೆಯುತ್ತಲೇ ಇರುತ್ತದೆ. ಕೆಲವು ವರ್ಷಗಳ ಹಿಂದೆ, ತಮಿಳಿನ ಸೂಪರ್ ಸ್ಟಾರ್, ಬೆಂಗಳೂರು ನಗರ ಸಾರಿಗೆಯ (ಬಿಎಂಟಿಸಿ) ಮಾಜಿ ಉದ್ಯೋಗಿಯೂ ಆಗಿರುವ ರಜನೀಕಾಂತ್ ಕಾವೇರಿ ವಿಚಾರದಲ್ಲಿ ಆಡಿದ್ದ ಮಾತೊಂದು ವಿವಾದಕ್ಕೆ ಭಾರೀ ಹೊಡೆತವನ್ನೇ ನೀಡಿತ್ತು. ಕನ್ನಡಪರ ಹೋರಾಟಗಾರರ ಬಗ್ಗೆ ರಜನೀಕಾಂತ್ ಆಕ್ಷೇಪಾರ್ಹ ಮಾತನ್ನು ಆಡಿದ್ದರು.
ಕರ್ನಾಟಕದಲ್ಲಿ ಯಾವುದೇ ಪಕ್ಷ ಅಧಿಕಾರದಲ್ಲಿ ಇರಲಿ, ಕಾವೇರಿ ವಿಚಾರದಲ್ಲಿ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ತಪ್ಪದೇ ಪಾಲಿಸಬೇಕು. ನಮ್ಮ ರೈತರು ಬೆಳೆಗಾಗಿ ನೀರನ್ನು ಕೇಳುತ್ತಿದ್ದೇವೆ, ಕನ್ನಡಪರ ಸಂಘಟನೆಗಳು ತಮ್ಮ ಮಿತಿಯನ್ನು ಮೀರಬಾರದು.

ನಮಗೂ ಇಲ್ಲಿ ಪ್ರತಿಭಟನೆ ಮಾಡಲು ಬರುತ್ತದೆ ಎನ್ನುವುದು ವಾಟಾಳ್ ಮುಂತಾದವರಿಗೆ ಗೊತ್ತಿರಲಿ, ಹೊಗೇನಿಕಲ್ ವಿಚಾರದಲ್ಲಿ ಕರ್ನಾಟಕ ಸರಿಯಾದ ದಾರಿಯಲ್ಲಿ ಸಾಗಲಿ, ಇಂತವರಿಗೆಲ್ಲಾ ಒದೆಯ ಬೇಕಲ್ಲವೇ ಎಂದು ರಜನೀಕಾಂತ್, ಕನ್ನಡ ಹೋರಾಟಗಾರರನ್ನು ಉಲ್ಲೇಖಿಸಿ ಹೇಳಿದ್ದರು. ಅದಕ್ಕೆ ಅಲ್ಲಿನವರು ಸಿಕ್ಕಾಪಟ್ಟೆ ಶಿಳ್ಳೆಯನ್ನು ಹೊಡೆದಿದ್ದರು, ಮರುದಿನ ಮಾಧ್ಯಮಗಳ ಮುಖಪುಟದಲ್ಲಿ ಅದೇ ಇದ್ದವು.
ರಜನೀಕಾಂತ್ ಅವರ ಈ ಹೇಳಿಕೆಗೆ ಕನ್ನಡಪರ ಸಂಘಟನೆಗಳು ಸರಿಯಾಗಿ ತಿರುಗೇಟು ನೀಡಿದ್ದವು ಮತ್ತು ರಜನೀಕಾಂತ್ ಭಾರೀ ವಿರೋಧವನ್ನು ಎದುರಿಸಬೇಕಾಯಿತು. ಇವರ ಕುಚೇಲನ್ ಚಿತ್ರಕ್ಕೆ ಕನ್ನಡ ಸಂಘಟನೆಗಳು ನಿಷೇಧವನ್ನು ಹೇರಿದ್ದವು. ಯಾವ ಮಟ್ಟಿಗೆ ವಿರೋಧ ವ್ಯಕ್ತವಾಗಿತ್ತು ಎಂದರೆ, ಖುದ್ದು ರಜನೀಕಾಂತ್ ಅವರು ಹೈದರಾಬಾದ್ ನಿಂದ ಕನ್ನಡದಲ್ಲೇ ಕ್ಷಮೆಯನ್ನು ಯಾಚಿಸಿದ್ದರು. ಆಮೇಲೆ ಎಲ್ಲವೂ ತಣ್ಣಗಾಗಿದ್ದವು.


Click it and Unblock the Notifications











