Dr.Rajkumar:ಯಾರೇ ಕೂಗಾಡಲಿ ಅಂತ ಅಣ್ಣಾವ್ರು ಕೂತಿದ್ದ ಎಮ್ಮೆಯನ್ನೇ ಎಗರಿಸಿದ್ದ ಅಭಿಮಾನಿ; ಮುಂದೇನಾಯ್ತು?
ಡಾ.ರಾಜ್ಕುಮಾರ್ ವೃತ್ತಿ ಬದುಕಿನಲ್ಲಿ 'ಸಂಪತ್ತಿಗೆ ಸವಾಲ್' ಸಿನಿಮಾ ವಿಶೇಷವಾಗಿ ನಿಲ್ಲುತ್ತೆ. ಯಾಕಂದ್ರೆ, ಈ ಸಿನಿಮಾ ಮೂಲಕ ಡಾ. ರಾಜ್ಕುಮಾರ್ ಗಾಯಕರಾಗಿಯೂ ಚಿತ್ರರಂಗಕ್ಕೆ ಪರಿಚಯವಾಗಿದ್ದರು. ಅಭಿಮಾನಿಗಳಿಗೆ ಅಣ್ಣಾವ್ರು ನಟರಾಗಿ, ಗಾಯಕರಾಗಿ ಡಬಲ್ ಮನರಂಜನೆ ಕೊಟ್ಟಿದ್ದರು. ಸಿನಿಮಾದ ಹಾಡುಗಳು ಕೂಡ ಅಷ್ಟೇ ದಾಖಲೆ ಬರೆದಿದ್ದವು.
"ಯಾರೇ ಕೂಗಾಡಲಿ.. ಊರೇ ಹೋರಾಡಲಿ.. ನಿನ್ನ ನೆಮ್ಮದಿಗೆ ಭಂಗವಿಲ್ಲ".. ಇದು ಸಂಪತಿಗೆ ಸವಾಲ್ ಸಿನಿಮಾದ ಸೂಪರ್ ಹಿಟ್ ಸಾಂಗ್. ಎಮ್ಮೆ ಮೇಲೆ ಅಣ್ಣಾವ್ರು ಕೂತು ಬರುವ ದೃಶ್ಯ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಮನರಂಜನೆ ನೀಡಿತ್ತು. ಆದರೆ, ಈ ಹಾಡಿನ ಚಿತ್ರೀಕರಣ ಮಾಡುವಾಗ ಒಂದು ಘಟನೆ ನಡೆದಿತ್ತು. ಅಭಿಮಾನಿಯೊಬ್ಬ ಈ ಹಾಡಿನಲ್ಲಿ ಅಣ್ಣಾವ್ರು ಕೂತಿದ್ದ ಎಮ್ಮೆಯನ್ನ ಗಾಯಬ್ ಮಾಡಿದ್ದ.

'ಸಂಪತ್ತಿಗೆ ಸವಾಲ್' ಸಿನಿಮಾದ "ಯಾರೇ ಕೂಗಾಡಲಿ.." ಹಾಡಿನ ಚಿತ್ರೀಕರಣ ಗಾಜನೂರಿನಲ್ಲಿ ನಡೆಯುತ್ತಿತ್ತು. ಊರೆಲ್ಲ ಸುತ್ತಿ ಎಮ್ಮೆಯೊಂದನ್ನು ಹುಡುಕಿ ತಂದಿದ್ದರು. ಅದೇ ಎಮ್ಮೆಯನ್ನು ಇಟ್ಟುಕೊಂಡು ಒಂದು ದಿನದ ಚಿತ್ರೀಕರಣ ಕೂಡ ನಡೆದಿತ್ತು. ಅದನ್ನು ನೋಡಿದ ಅಭಿಮಾನಿಯೊಂದ ಮಾಲೀಕನಿಗೆ ಹಣ ಕೊಟ್ಟು ಎಮ್ಮೆಯನ್ನು ತೆಗೆದುಕೊಂಡಿದ್ದ. ಮಾರನೇ ದಿನ ಶೂಟಿಂಗ್ಗೆ ಎಮ್ಮೆನೇ ಇರಲಿಲ್ಲ. ಮುಂದೆನಾಯ್ತು? ಅನ್ನುವ ಸಂಗತಿಯನ್ನು ಆ ಸಿನಿಮಾಗಾಗಿ ಕೆಲಸ ಮಾಡಿದ್ದ ಬಿ. ಮಲ್ಲೇಶ್ ಅವರು ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದರು.
ಅಣ್ಣಾವ್ರು ನಟಿಸುತ್ತಿದ್ದ 'ಸಂಪತ್ತಿಗೆ ಸವಾಲ್' ಸಿನಿಮಾದಲ್ಲಿ ಬಿ. ಮಲ್ಲೇಶ್ ಕೆಲಸ ಮಾಡುತ್ತಿದ್ದರು. ಎವಿ ಶೇಷಗಿರಿ ರಾವ್ ನಿರ್ದೇಶಕರಾಗಿದ್ದರು. ಡಾ.ರಾಜ್ಕುಮಾರ್ ಜೊತೆ ಮಂಜುಳಾ, ವಜ್ರಮುನಿ, ಬಾಲಕೃಷ್ಣ ಅವರಂತಹ ದಿಗ್ಗಜರು ನಟಿಸುತ್ತಿದ್ದರು. ಹಾಡಿನ ಚಿತ್ರೀಕರಣಕ್ಕಾಗಿ ಬಿ. ಮಲ್ಲೇಶ್ ನೋಡುವುದಕ್ಕೆ ಸಾಧು ಎನಿಸುವ ಎಮ್ಮೆಯನ್ನು ಹುಡುಕಿ ತಂದಿದ್ದರು. ಅಣ್ಣಾವ್ರು ಎಮ್ಮೆ ಮೇಲೇರಿ ಒಂದು ದಿನದ ಹಾಡಿನ ಚಿತ್ರೀಕರಣವನ್ನೂ ಮುಗಿಸಿದ್ದರು. ಮಾರನೇ ದಿನದ ಚಿತ್ರೀಕರಣಕ್ಕೆ ಎಮ್ಮೆನೇ ಇರಲಿಲ್ಲ. ಅಭಿಮಾನಿಯೊಬ್ಬ ಅಣ್ಣಾವ್ರು ಕೂತಿದ್ದಾರೆ ಅನ್ನೋ ಕಾರಣಕ್ಕೆ ಆ ಎಮ್ಮೆಯನ್ನು ತೆಗೆದುಕೊಂಡು ಹೋಗಿದ್ದ.
"8 ಗಂಟೆ ಆಯ್ತು ಎಮ್ಮೆನೇ ಬರಲಿಲ್ಲ. 9 ಗಂಟೆ ಆಯ್ತು ಬರಲಿಲ್ಲ. ಹೋಗಿ ಎಮ್ಮೆ ಎಲ್ಲಿ ಹೋಯ್ತಪ್ಪ ಅಂತ ನೋಡಿದ್ರೆ, ಅಣ್ಣಾವ್ರು ಕೂತಿದ್ದಕ್ಕೆ ಯಾವನೋ ಒಬ್ಬ ಚಾಮರಾಜನಗರದವನು ಒಂದೂವರೆ ಸಾವಿರ ಕೊಟ್ಟು ಮಾಲೀಕನಿಂದ ತೆಗೆದುಕೊಂಡು ಹೋಗಿದ್ದ." ಎಂದು ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ.

ಹೇಗೋ ಹುಡುಕಿ ಮತ್ತೊಂದು ಎಮ್ಮೆಯನ್ನು ತೆಗೆದುಕೊಂಡು ಬಂದಿದ್ದರು. ಆಗ ಅಣ್ಣಾವ್ರ ರಿಯಾಕ್ಷನ್ ಹೇಗಿತ್ತು? ಅನ್ನುವುನ್ನು ಬಿ. ಮಲ್ಲೇಶ್ ಅವರು ಸ್ವಾರಸ್ಯಕರವಾಗಿ ವಿವರಿಸಿದ್ದಾರೆ. "ಹಿಂದೆ ನಿಂತಿದ್ದೀವಿ ಅಣ್ಣಾವ್ರು ಬಂದ್ರು. ಶೂಟಿಂಗ್ ಸ್ಟಾರ್ಟ್ ಆಯ್ತು. ಬಂದು ಎಮ್ಮೆ ಮೇಲೆ ಕೂತರು. ತಕ್ಷಣಕ್ಕೆ ಕೆಳಗೆ ಇಳಿದು ಬಿಟ್ರು. ನನ್ನ ಕರೆದು ನಿನ್ನೆ ಬಂದ ಎಮ್ಮೆನೇನಾ ಇದು? ಅಂದರು. ನಿನ್ನೆ ಬಂದ ಎಮ್ಮೆಯ ಕೂದಲು ಸಾಫ್ಟ್ ಆಗಿತ್ತು. ಇದೇನಯ್ಯ ಈತರ ಚುಚ್ಚುತ್ತಿದೆ ಅಂದರು. ಅಯ್ಯೋ ಅಣ್ಣಾ ಹಿಂಗಾಯ್ತಣ್ಣ. ನಾವೇನು ಮಾಡೋಣ ಅಣ್ಣ ಅಂತ ಹೇಳಿದ್ವಿ." ಎಂದು ಆದ ದಿನ ಘಟನೆಯನ್ನು ನೆನೆದಿದ್ದಾರೆ.
"ಯಾರೇ ಕೂಗಾಡಲಿ.." ಹಾಡನ್ನು ಎರಡು ಎಮ್ಮೆ ಬಳಿಸಿ ಶೂಟಿಂಗ್ ಮಾಡಲಾಗಿತ್ತು. ಇದು ಸ್ವತ: ಆ ಸಿನಿಮಾ ಎಡಿಟರ್ ಭಕ್ತ ವತ್ಸಲಂ ಅವರಿಗೂ ಗೊತ್ತಾಗಿರಲಿಲ್ಲವಂತೆ. ಅಲ್ಲದೆ ಪ್ರೇಕ್ಷಕರು ಕೂಡ ಗುರುತು ಹಿಡಿದಿರಲಿಲ್ಲ. ಅಣ್ಣಾವ್ರ ಪ್ರಭಾವ ಹೇಗಿತ್ತು ಅನ್ನುವುದನ್ನು ವಿವರಿಸಿದ್ದಾರೆ. "ಎಡಿಟರ್ ಭಕ್ತ ಮೂರು ತಿಂಗಳು ಎಡಿಟ್ ಮಾಡಿದ್ದಾನೆ. ಬೇರೆ ಎಮ್ಮೆ ಅಂತ ಹೇಳಿಯೇ ಇಲ್ಲ. ಅಷ್ಟೇ ಯಾಕೆ ಈ ಸಿನಿಮಾ ಸಿಲ್ವರ್ ಜುಬಿಲಿ ಓಡಿದೆ. ಅಷ್ಟೊಂದು ಮಂದಿ ಸಿನಿಮಾ ನೋಡಿದ್ದಾರೆ. ಒಬ್ಬನೇ ಒಬ್ಬ ಆಡಿಯನ್ಸ್ ಏನ್ ಸರ್ ಎರಡು ಎಮ್ಮೆ ತೋರಿಸಿದ್ದಾರಾ? ಅಂತ ಹೇಳಿಲ್ಲ." ಎಂದು ಸ್ವಾರಸ್ಯಕರ ಸಂಗತಿಯನ್ನು ಬಿ. ಮಲ್ಲೇಶ್ ಬಿಚ್ಚಿಟ್ಟಿದ್ದಾರೆ.


Click it and Unblock the Notifications











