IAS ಅಧಿಕಾರಿಗಳು ನಟಿಸಬಾರದು ಅಂತ ಸರ್ಕಾರದಿಂದ ನೋಟಿಸ್; ಕ್ಯಾರೆ ಅನ್ನದೆ ನಿವೃತ್ತಿವರೆಗೂ ಆಕ್ಟಿಂಗ್ ಮಾಡಿದ್ದ ಕೆ ಶಿವರಾಂ
ಕೆಲವು ಪ್ರಥಮಗಳಿಗೆ ನಾಂದಿ ಹಾಡಿದ್ದು ದಿವಂತ ನಟ ಹಾಗೂ ಮಾಜಿ ಐಎಎಸ್ ಅಧಿಕಾರಿ ಕೆ ಶಿವರಾಂ. ಬಡಜನರ ಪರವಾಗಿ ನಿಂತು ಜನಪ್ರಿಯತೆ ಗಳಿಸಿದ್ದ ಕೆ ಶಿವರಾಂ ಸರ್ಕಾರಿ ಕೆಲಸದ ಜೊತೆಗೆ ನಟನೆಯಲ್ಲೂ ಆಸಕ್ತಿಯನ್ನು ಹೊಂದಿದ್ದರು. ಹೀಗಾಗಿ ಸರ್ಕಾರದ ಕೆಲಸ ಹಾಗೂ ನಟನೆ ಎರಡನ್ನೂ ಸರಿದೂಗಿಸಿಕೊಂಡು ಹೋಗುತ್ತಿದ್ದರು. 'ಬಾ ನಲ್ಲೇ ಮಧು ಚಂದ್ರಕೆ' ಸಿನಿಮಾ ಬೇರೆ ಸೂಪರ್ ಹಿಟ್ ಆಗಿತ್ತು.
ಈ ಸಿನಿಮಾ ಯಶಸ್ಸಿನಿಂದಲೇ ಕೆ ಶಿವರಾಂ ಮತ್ತಷ್ಟು ಸಿನಿಮಾ ಮಾಡಲು ಮುಂದಾಗಿದ್ದರು. ಇದೇ ವೇಳೆ ಐಎಎಸ್ ಅಧಿಕಾರಿಯಾಗಿದ್ದರೂ ಅವರಿಗಿದ್ದ ಜನಪ್ರಿಯತೆ ಎಲ್ಲರ ಕಣ್ಣು ಕುಕ್ಕುವಂತಿತ್ತು. ಒಬ್ಬ ಐಎಎಸ್ ಅಧಿಕಾರಿ ಈ ಮಟ್ಟಿಗೆ ಜನಪ್ರಿಯತೆ ಗಳಿಸಿದ್ದು ಕೆಲವರಲ್ಲಿ ಅಸೂಯೆ ಹುಟ್ಟಿಸಿದ್ದು ಎಂದು ಈ ಹಿಂದಿನ ಕೆಲವು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ.

ಕೆ ಶಿವರಾಂ ಅವರೇ ಹೇಳಿಕೊಂಡಂತೆ ಅವರಿಗೆ ಎರಡು ಗುರಿ ಇತ್ತು. ಐಎಎಸ್ ಅಧಿಕಾರಿಯಾಗಬೇಕು. ಹಾಗೇ ಸಿನಿಮಾ ನಟನಾಗಬೇಕು ಅಂದ್ಕೊಂಡಿದ್ದರು. ಸರ್ಕಾರದ ಕೆಲಸದ ಜೊತೆಗೆ ನಟನೆ ಮಾಡಿಕೊಂಡಿದ್ದ ಕೆ ಶಿವರಾಂ ಮೇಲೆ ಅಂದಿನ ಸರ್ಕಾರದಲ್ಲಿ ಚೀಫ್ ಸೆಕ್ರೆಟರಿ ಆಗಿದ್ದವರ ಕಣ್ಣು ಬಿದ್ದಿತ್ತು. ಐಎಎಸ್ ಅಧಿಕಾರಿಯಾಗಿದ್ದವರು ಸಿನಿಮಾ ಮಾಡಬಾರದು ಎಂದು ಆದೇಶ ಹೊರಡಿಸಿದ್ರು. ಈ ಬಗ್ಗೆ ಹೆಗ್ಗದ್ದೆ ಸ್ಟುಡಿಯೋ ನೀಡಿದ ಸಂದರ್ಶನದಲ್ಲಿ ಕೆ ಶಿವರಾಂ ಹೇಳಿಕೊಂಡಿದ್ದರು.
ಕನ್ನಡದಲ್ಲಿ ಐಎಎಸ್ ಪರೀಕ್ಷೆ ಬರೆದು ಪಾಸಾಗಿದ್ದ ಮೊದಲ ಅಧಿಕಾರಿ ಕೆ.ಶಿವರಾಂ ಅಂತ ಫೇಮಸ್ ಆಗಿದ್ದರು. ಹಾಗೇ ಭಾರತದ ಇತಿಹಾಸದಲ್ಲೇ ಐಎಎಸ್ ಅಧಿಕಾರಿಯಾಗಿದ್ದುಕೊಂಡು ಆಕ್ಟರ್ ಆದ ಮೊದಲಿಗರಾಗಿದ್ದರು. ಹೀಗಾಗಿ ಆಲ್ ಇಂಡಿಯಾ ಲೆವೆಲ್ನಲ್ಲಿ ಫೇಮಸ್ ಆಗಿದ್ದರು. "ನಾನು ಇಂಡಿಯಾದಲ್ಲೇ ಫೇಮಸ್. ನಮ್ಮ ಆಫೀಸರ್ಗಳ ಸರ್ಕಲ್ನಲ್ಲಿ ನನ್ನ ಹೆಸರು ಎಲ್ಲರಿಗೂ ಗೊತ್ತು. ಭಾರತದ ಇತಿಹಾಸದಲ್ಲಿ ಒಬ್ಬ ಐಎಎಸ್ ಆಫೀಸ್ ಆಕ್ಟರ್ ಆಗಿದ್ದಿದ್ದು. ಇದು ಎಲ್ಲರಿಗೂ ಗೊತ್ತಿತ್ತು. ಹಾಗಾಗಿ ಎಲ್ಲರಿಗೂ ನನ್ನ ಹೆಸರು ಗೊತ್ತಿತ್ತು. ಮೊದಲೇ ನಾವು ಪರ್ಮಿಷನ್ ತೆಗೆದುಕೊಂಡಿದ್ದೆವು." ಎಂದು ಸಿನಿಮಾ ಮಾಡಿದ್ದರ ಬಗ್ಗೆ ಹೇಳಿಕೊಂಡಿದ್ದಾರೆ.

ಸರ್ಕಾರಿ ಕೆಲಸ ಹಾಗೂ ನಟನೆ ಎರಡನ್ನೂ ಜೊತೆ ಜೊತೆಯಲ್ಲೇ ನಿಭಾಯಿಸಿಕೊಂಡು ಹೋಗುತ್ತಿದ್ದರು. ಆದರೆ, ಎಸ್ ಎಂ ಕೃಷ್ಣ ಸಿಎಂ ಆಗಿದ್ದ ವೇಳೆ ಚೀಫ್ ಸೆಕ್ರೆಟರಿ ಆಗಿದ್ದವರು ಐಎಎಸ್ ಅಧಿಕಾರಿಗಳು ನಟನೆ ಮಾಡುವಂತಿಲ್ಲ ಎಂದು ಆದೇಶ ಹೊರಡಿಸಿದ್ದರು. "ನಮ್ಮ ಎಸ್ ಎಂ ಕೃಷ್ಣ ಸರ್ಕಾರದಲ್ಲಿ ಒಬ್ಬರು ಚೀಫ್ ಸೆಕ್ರೆಟರಿ ಇದ್ದರು. ಅವರಿಗೆ ಹೊಟ್ಟೆ ಉರಿ. ನಾನು ರೋಡ್ನಲ್ಲಿ ಹೋದರೆ ಜನ ಮಾತಾಡಿಸುತ್ತಾರೆ. ಎಲ್ಲಿ ಹೋದರೂ ಮಾತಾಡಿಸುತ್ತಾರೆ. ಆ ಮಟ್ಟಿಗೆ ಜನರು ಗುರುತಿಸುತ್ತಾರೆ. ನನ್ನ ಬರ್ತ್ಡೇ ದಿನ ಎರಡು ಫುಲ್ ಪೇಜ್ ವಿಶ್ ಮಾಡುತ್ತಿದ್ದರು. ಇದನ್ನು ನೋಡಿ ಹೊಟ್ಟೆ ಉರಿಗೆ ಐಎಎಸ್ ಅಧಿಕಾರಿಗಳು ಆಕ್ಟಿಂಗ್ ಮಾಡಬಾರದು ಅಂತ ಹೇಳಿದ್ದರು. ಅದು ತಪ್ಪು." ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಆದರೆ, ಇದ್ಯಾವುದಕ್ಕೂ ಕೆ ಶಿವರಾಂ ಖ್ಯಾರೆ ಅಂದಿರಲಿಲ್ಲ. "ನಾನಂತೂ ಕೇರ್ ಮಾಡಿಲ್ಲ. ನಾನು ನಿವೃತ್ತಿ ಹೊಂದುವವರೆಗೂ ಸಿನಿಮಾ ಮಾಡುತ್ತಲೇ ಇದ್ದೆ. ನೀವು ಏನಾದರೂ ಮಾಡಿ ನೋಡೋಣ ಅಂತ ಸಿನಿಮಾ ಮಾಡಿದ್ದೆ. ಹೈ ಕೋರ್ಟ್ಗೂ ಹಾಕಿದೆ. ನ್ಯಾಯಾಲಯದವರಿಗೂ ತೀರ್ಪು ಕೊಡುವುದಕ್ಕೆ ಆಗಲಿಲ್ಲ. ನಾನು ಹೆದರಲಿಲ್ಲ. ನಾನು ಸಿನಿಮಾ ಮಾಡುತ್ತೇನೆ. ಕ್ರಮ ತೆಗೆದುಕೊಳ್ತೀರಾ ಅಂದ್ರೆ, ತೆಗೆದುಕೊಳ್ಳಿ ಅಂದೆ. ಸರ್ಕಾರ ಎಲ್ಲಿ ಕ್ರಮ ತೆಗೆದುಕೊಳ್ಳುತ್ತೆ" ಎಂದಿದ್ದರು.


Click it and Unblock the Notifications











