ಶೂಟಿಂಗ್ ಹೋದ ಮೊದಲ ದಿನವೇ ಕಿತ್ತಾಕಿದ್ರು; ಆಳುತ್ತಾ ಸೆಟ್ಟಿಂದ ಹೊರ ನಡೆದಿದ್ದ ದರ್ಶನ್!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ಕನ್ನಡ ಚಿತ್ರರಂಗದ ಸೂಪರ್ಸ್ಟಾರ್. ಇವತ್ತು ಇವರ ಕಾಲ್ಶೀಟ್ ಬೇಕು ಅಂದರೆ, ವರ್ಷಗಳ ಕಾಲ ಕ್ಯೂನಲ್ಲಿ ನಿಲ್ಲಬೇಕು. ಅಷ್ಟಕ್ಕೂ ಎಲ್ಲರಿಗೂ ದರ್ಶನ್ ಕಾಲ್ಶೀಟ್ ಕೊಡುವುದೂ ಇಲ್ಲ. ಅದು ಕನ್ನಡ ಚಿತ್ರರಂಗದ ಪ್ರತಿಯೊಬ್ಬ ನಿರ್ಮಾಪಕನಿಗೂ ಗೊತ್ತಿದೆ.
ತೂಗುದೀಪ ಶ್ರೀನಿವಾಸ್ ಅವರ ಪುತ್ರ ಆಗಿದ್ದರೂ ಸಿನಿಮಾಗಳಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವುದಕ್ಕೆ ದರ್ಶನ್ ಎಷ್ಟು ಪರದಾಡಿದ್ರು ಅನ್ನೋದು ಗೊತ್ತೇ ಇದೆ. 'ಮೆಜೆಸ್ಟಿಕ್' ಸಿನಿಮಾ ಮಾಡುವುದಕ್ಕೂ ಮುನ್ನ ದರ್ಶನ್ ಒಂದೊಂದು ಪಾತ್ರಕ್ಕಾಗಿ ಸಿಕ್ಕಾಪಟ್ಟೆ ಕಷ್ಟ ಪಟ್ಟಿದ್ದರು. ಅದನ್ನು ಹತ್ತಿರದಿಂದ ಬಲ್ಲವರು ಆಗಾಗ ಹೇಳುತ್ತಲೇ ಬಂದಿದ್ದಾರೆ.

'ಮೆಜೆಸ್ಟಿಕ್'ಗೂ ಮುನ್ನ ದರ್ಶನ್ ಅನುಭವಿ ನಿರ್ದೇಶಕರ ಸಿನಿಮಾದಲ್ಲಿ ನಟಿಸುವುದಕ್ಕೆ ಆಯ್ಕೆ ಆಗಿದ್ದರು. ಹೀರೊ ಅಲ್ಲದಿದ್ದರೂ, ಸಿನಿಮಾದಲ್ಲಿ ಲವರ್ ಬಾಯ್ ಆಗಿ ಕಾಣಿಸಿಕೊಳ್ಳುವ ಪಾತ್ರ ಅದು. ಅಲ್ಲದೆ, ಸಿಕ್ಕ ಅವಕಾಶಗಳನ್ನು ಒಪ್ಪಿಕೊಂಡು ಬದುಕು ರೂಪಿಸಿಕೊಳ್ಳಬೇಕಿತ್ತು. ಹೀಗಾಗಿ ಹೀರೊ ಅಲ್ಲದಿದ್ದರೂ ಆ ಪಾತ್ರಕ್ಕೆ ಜೈ ಎಂದಿದ್ದರು. ಆದರೆ, ಶೂಟಿಂಗ್ ಸೆಟ್ಟಿಗೆ ಹೋದ ದಿನವೇ ಅವರನ್ನು ಸಿನಿಮಾದಿಂದ ತೆಗೆದುಹಾಕಲಾಗಿತ್ತು. ಆ ಸಿನಿಮಾ ಯಾವುದು ಗೊತ್ತೇ? ಅಂದು ನಡೆದ ಘಟನೆ ಏನು? ತಿಳಿಯಲು ಮುಂದೆ ಓದಿ.
ಅದು ಲವರ್ಬಾಯ್ ಕ್ಯಾರೆಕ್ಟರ್
ದರ್ಶನ್ ಆಗಿನ್ನೂ ಹೀರೊ ಆಗಿರಲಿಲ್ಲ. 'ಮೆಜೆಸ್ಟಿಕ್' ಸಿನಿಮಾ ಇನ್ನೂ ಸೆಟ್ಟೇರಿರಲಿಲ್ಲ. ಈ ಸಿನಿಮಾ ಮುನ್ನ ಕನ್ನಡದ ಹಿರಿಯ ನಿರ್ದೇಶಕ ದಿವಂಗತ ಡಿ.ರಾಜೇಂದ್ರ ಬಾಬು 'ಅಮ್ಮ' ಅನ್ನುವ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದರು. ಈ ಸಿನಿಮಾದಲ್ಲಿ ಹಿರಿಯ ನಟಿ ಲಕ್ಷ್ಮಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದರು. ಇದೇ ಸಿನಿಮಾದಲ್ಲಿ ದರ್ಶನ್ ಲವರ್ ಬಾಯ್ ಪಾತ್ರಕ್ಕೆ ಆಯ್ಕೆ ಆಗಿದ್ದರು. ಅಂದು ಮೊದಲ ದಿನ ಸೆಟ್ಟಿಗೆ ಬಂದಿದ್ದ ದರ್ಶನ್ ಅಳುತ್ತಾ ಹೊರ ಹೋಗಿದ್ದರು. ಈ ಘಟನೆಯನ್ನು ಅವರ ಗೆಳೆಯ ಹಾಗೂ ತಂತ್ರಜ್ಞ ಶ್ರೀಕಾಂತ್ ಹೊನ್ನವಳ್ಳಿ ಮಾಣಿಕ್ಯ ಯೂಟ್ಯೂಬ್ ಚಾನೆಲ್ಗೆ ಸಂದರ್ಶನ ನೀಡಿದ್ದ ಸಂದರ್ಭದಲ್ಲಿ ವಿವರಿಸಿದ್ದಾರೆ. ಅದರ ಒಂದು ಝಲಕ್ ಇಲ್ಲಿದೆ.

ಕಾಂಟೇಸಾ ಕಾರಲ್ಲಿ ಬಂದ ದರ್ಶನ್
'ಅಮ್ಮ' ಸಿನಿಮಾದ ಶೂಟಿಂಗ್ ಸಂಜೆ 6 ಗಂಟೆಯಿಂದ ರಾತ್ರಿ 2 ಗಂಟೆವರೆಗೂ ಪ್ಯಾಲೇಸ್ ಗ್ರೌಂಡ್ನಲ್ಲಿ ಇತ್ತು. ಅಂದು ತಮ್ಮ ಪಾತ್ರದಲ್ಲಿ ದರ್ಶನ್ ನಟಿಸುವುದಕ್ಕೆ ಸೆಟ್ಟಿಗೆ ಬಂದಿದ್ದರು. "ದರ್ಶನ್ ಸರ್ ಅವತ್ತು ಆ ಕ್ಯಾರೆಕ್ಟರ್ಗೆ ಬಂದರು. ಪ್ಯಾಲೆಸ್ನಲ್ಲಿ ಶೂಟಿಂಗ್. ಸಂಜೆ ಆರು ಗಂಟೆಯಿಂದ 2 ಗಂಟೆವರೆಗೂ ಶೂಟಿಂಗ್. ಇಬ್ಬರೂ ಲವ್ ಮಾಡೋದು, ಮುಂದಕ್ಕೆ ಮದುವೆ ಆಗೋದು ಈತರ ಪಾತ್ರ ಅದು. ನಮ್ಮ ಜೊತೆಯೆಲ್ಲ ಮಾತಾಡಿದ್ರು. ಆಗ ಡಿ. ರಾಜೇಂದ್ರ ಸಿಂಗ್ ಬಾಬು ಶಾರ್ಟ್ ಇಟ್ಟಿದ್ದರು. ದರ್ಶನ್ ಸರ್ ಕಾಂಟೇಸಾ ಕಾರಲ್ಲಿ ಬಂದು, ಹೀರೊಯಿನ್ ಜೊತೆ ಮಾತಾಡುತ್ತಾರೆ. ಆದರೆ, ಆ ಸಂದರ್ಭದಲ್ಲಿ ಅವರ ಹೈಟ್ ಮ್ಯಾಚ್ ಆಗುತ್ತಿರಲಿಲ್ಲ." ಎಂದು ಘಟನೆಯನ್ನು ಶ್ರೀಕಾಂತ್ ವಿವರಿಸಿದ್ದಾರೆ.
"ಜೀರಾಫೇ ತರ ಆಗಿದ್ದೀರ ಅಂದ್ರು"
ನಿರ್ದೇಶಕ ಡಿ ರಾಜೇಂದ್ರ ಬಾಬು ಅವರಿಗೆ ಯಾಕೋ ಫ್ರೇಮಿಂಗ್ ಇಷ್ಟ ಆಗುತ್ತಿರಲಿಲ್ಲ. ಹೀಗಾಗಿ ದರ್ಶನ್ ಪಾತ್ರದ ಬಗ್ಗೆ ಚರ್ಚೆ ಮಾಡುವುದಕ್ಕೆ ಶುರು ಮಾಡಿದ್ದರು. "ಡಿ ಬಾಬು ಸರ್ ಕಟ್ ಅಂತ ಹೇಳಿ ಫ್ರೇಮಿಂಗ್ ಆಗುತ್ತಿಲ್ಲ. ಏನ್ರಿ ಇಷ್ಟು ಉದ್ದ ಇದ್ದೀರ. ಜೀರಾಫೇ ತರ ಆಗಿದ್ದೀರ ಅಂತ ತಮಾಷೆ ಮಾಡುತ್ತಿದ್ದರು. ಆದರೆ, ಹಿಂದೆ ಹೈಟ್ ಮ್ಯಾಚ್ ಮಾಡುವುದಕ್ಕೆ ಆಗೋದಿಲ್ಲ ಅಂತ ಚರ್ಚೆ ನಡೀತಿತ್ತು. ಎಲ್ಲಾ ತಾರೆಯರು ಇದ್ದಾಗಲೂ ಸಮಸ್ಯೆ ಆಗುತ್ತೆ ಅಂತ ಹೇಳಿದ್ದರು." ಹೀಗಾಗಿ ಅಂದಿನ ಶೂಟಿಂಗ್ ಅನ್ನೇ ಪ್ಯಾಕಪ್ ಮಾಡುವುಕ್ಕೆ ನಿರ್ಧರಿಸಿದ್ದರು.
"ದರ್ಶನ್ ಅಳುತ್ತಾ ಕಾರು ಹತ್ತಿದ್ರು"
"ದರ್ಶನ್ ಯಾಕೆ ಇಷ್ಟ ಆಗಿಲ್ಲ ಗೊತ್ತಿಲ್ಲ. ಹೈಟ್ ಆಗಲಿಲ್ಲವೋ? ಅವತ್ತು ಮೀಸೆ ಬೇರೆ ತೆಗೆದಿದ್ದರು. ಏನಂತಾ ಗೊತ್ತಾಗಿಲ್ಲ ಪ್ಯಾಕಪ್ ಅಂದ್ಬಿಟ್ರು. ಆಗ ದರ್ಶನ್ ಸರ್ಗೆ ಗೊತ್ತಾಗಿ ಹೋಯ್ತು. ದರ್ಶನ್ ಸರ್ ಅಳ್ತಾ ಅಳ್ತಾ ಕಾರು ಹತ್ತಿರ ಬಂದರು. ಏನಾಯ್ತು ಅಂತ ಕೇಳಿದಾಗ, ನನ್ನ ಕ್ಯಾರೆಕ್ಟರ್ ಇಲ್ಲ ಅಂತ ಹೇಳಿದ್ದರು. ಆ ಮೇಲೆ ಸಮಾಧಾನ ಮಾಡಿದ ಬಳಿಕ ಶ್ರೀಕಾಂತ್ ಬಾ ಇಲ್ಲಿ ಸ್ವಲ್ಪ ಹಣ ಇದ್ರೆ ಕೊಡು ಅಂತ ಕೇಳಿದ್ರು. ನಾವೆಲ್ಲರೂ ಸೇರಿಸಿ 200 ರೂಪಾಯಿ ಕೊಟ್ಟೆವು." ಶ್ರೀಕಾಂತ್ ಹೊನ್ನವಳ್ಳಿ ಆದಿನದ ಘಟನೆಯನ್ನು ವಿವರಿಸಿದ್ದಾರೆ.


Click it and Unblock the Notifications











