'ಅಂತ' ಸಿನಿಮಾಗೆ ಜೂಲಿ ಲಕ್ಷ್ಮಿ ನಾಯಕಿ ಆಗೋದು ಇಷ್ಟವಿರಲಿಲ್ಲ? ಆದ್ರೂ ಅವರೇ ಆಯ್ಕೆ ಆಗಿದ್ದೇಗೆ?
ಕನ್ನಡ ಚಿತ್ರರಂಗದ ದಿಕ್ಕನೇ ಬದಲಿಸಿದ ಸಿನಿಮಾ 'ಅಂತ'. ಎಸ್ವಿ ರಾಜೇಂದ್ರ ಸಿಂಗ್ ಬಾಬು ಸಿನಿಮಾ ದೇಶಾದ್ಯಂತ ಚರ್ಚೆಯಾಗುವಂತೆ ಮಾಡಿತ್ತು. ಅಂಬರೀಶ್ ಸ್ಯಾಂಡಲ್ವುಡ್ನ ರೆಬೆಲ್ ಸ್ಟಾರ್ ಆಗಿ ಹೊರಹೊಮ್ಮಿದ್ದರು. ಇನ್ನು ಹಿರಿಯ ನಟಿ ಲಕ್ಷ್ಮಿ ಹೆಣ್ಣಿನ ಅಸಹಾಯಕತೆ, ಕ್ರೌರ್ಯ ಅವನ್ನು ತೋರಿಸುವ ಸಿನಿಮಾದಲ್ಲಿ ಮಿಂಚಿದ್ದರು. ಈ ಸಿನಿಮಾ ಬೇರೆ ಬೇರೆ ಭಾಷೆಗಳಿಗೂ ಡಬ್ ಆಗಿತ್ತು.
'ಅಂತ' ಕನ್ನಡ ಚಿತ್ರರಂಗ ಪ್ರಡ್ಯೂಸ್ ಮಾಡಿದ ಎವರ್ಗ್ರೀನ್ ಸಿನಿಮಾಗಳಲ್ಲಿ ಒಂದು ಅನ್ನೋದರಲ್ಲಿ ಎರಡು ಮಾತೇ ಇಲ್ಲ. ಈ ಸಿನಿಮಾದ ಕತೆ ಹುಟ್ಟಿದ್ದು, ಅದಕ್ಕೆ ಸಿನಿಮಾ ರೂಪ ಬಂದಿದ್ದರ ಹಿಂದೊಂದು ರೋಚಕ ಕಥೆಯೇಯಿದೆ. ಕನ್ನಡದ ಚಿತ್ರರಂಗದಲ್ಲಿ ಅಲ್ಲಿವರೆಗೂ ಅಷ್ಟೊಂದು ಕೌರ್ಯ, ಹೆಣ್ಣಿನ ಮೇಲಿನ ಶೋಷಣೆಯನ್ನು ತೋರಿಸಿರಲಿಲ್ಲ. ಈ ಕಾರಣಕ್ಕೆ ರಾಜಕೀಯ ವಲಯದಲ್ಲೂ ಚರ್ಚೆಯಾಗಿತ್ತು.

ಈ ಸಿನಿಮಾ ಮಾಡುವಾಗ ಲಕ್ಷ್ಮಿ ಹಾಗೂ ಎಸ್.ವಿ ರಾಜೇಂದ್ರ ಸಿಂಗ್ ಬಾಬು ಹೆಚ್ಚು ಸಿನಿಮಾವನ್ನೇನು ಮಾಡಿರಲಿಲ್ಲ. ಹೀಗಾಗಿ 'ಅಂತ' ಸಿನಿಮಾಗೆ ಲಕ್ಷ್ಮಿಯನ್ನು ನಾಯಕಿಯಾಗಿ ಹಾಕಿಕೊಳ್ಳಬೇಕೇ? ಅನ್ನೋ ಪ್ರಶ್ನೆ ಇತ್ತಂತೆ. ಕೊನೆಗೂ ಕಾರಣಾಂತರಗಳಿಂದ ಅವರೇ ಆಯ್ಕೆ ಆಗಿದರು. ನಿರ್ದೇಶಕರಿಗೆ ಲಕ್ಷ್ಮಿ ಈ ಸಿನಿಮಾಗೆ ಬೇಡ ಅಂತ ಅನಿಸಿದ್ದು ಯಾಕೆ? ಲೋಕಸಭೆಯಲ್ಲೂ ಈ ಸಿನಿಮಾ ಚರ್ಚೆಯಾಗಿದ್ದೇನು? 'ಅಂತ' ವಿರುದ್ಧ ಗುಡುಗಿದ್ದ ಆ ರಾಜಕಾರಣಿ ಯಾರು? ಅನ್ನೋದನ್ನು ತಿಳಿಯಲು ಮುಂದೆ ಓದಿ.
ಎಸ್ವಿ ರಾಜೇಂದ್ರ ಸಿಂಗ್ ಬಾಬು 'ಕಿಲಾಡಿ ಜೋಡಿ' ಸಿನಿಮಾವನ್ನು ನಿರ್ದೇಶಿಸಿದ್ದರು. ಅದರಲ್ಲಿ ವಿಷ್ಣುವರ್ಧನ್ ಹೀರೊ, ಲಕ್ಷ್ಮಿನೇ ಹೀರೋಯಿನ್. ಅಂಬರೀಶ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಹೀಗಾಗಿ ಎಸ್ ವಿ ರಾಜೇಂದ್ರ ಸಿಂಗ್ ಬಾಬು ಹಾಗೂ ಲಕ್ಷ್ಮಿ ಪರಿಚಯ ಆಗಿತ್ತು. ಆದರೆ, 'ಅಂತ'ಗೆ ಲಕ್ಷ್ಮಿ ನಾಯಕಿಯಾಗಿ ಬೇಡ ಅಂತ ಅಂದುಕೊಂಡಿದ್ದರು. 'ಅಂತ' ಬಗ್ಗೆ ಇಂತಹ ಇಂಟ್ರೆಸ್ಟಿಂಗ್ ವಿಷಯಗಳ ಬಗ್ಗೆ ಹಿರಿಯ ಪತ್ರಕರ್ತ ಶ್ರೀಧರಮೂರ್ತಿ ಟೋಟಲ್ ಕನ್ನಡ ಯೂಟ್ಯೂಬ್ ಚಾನೆಲ್ನಲ್ಲಿ ರಿವೀಲ್ ಮಾಡಿದ್ದಾರೆ.

"ಎಸ್ವಿ ರಾಜೇಂದ್ರ ಸಿಂಗ್ ಬಾಬು ಕಿಲಾಡಿ ಜೋಡಿ ಸಿನಿಮಾದಲ್ಲಿ ಲಕ್ಷ್ಮಿಯನ್ನು ನಾಯಕಿಯಾಗಿ ಆರಿಸಿಕೊಂಡಾಗ ಲಕ್ಷ್ಮಿಗೂ ಅಷ್ಟಾಗಿ ನಂಬಿಕೆಯಿರಲಿಲ್ಲ. ಯಾಕಂದ್ರೆ ಹೊಸ ನಿರ್ದೇಶಕರು, ಹೊಸ ಹೀರೋ ಇದ್ದರು. ಇದಾದ್ಮೇಲೆ ಅಂತ ಸಿನಿಮಾದಲ್ಲಿ ರಾಜೇಂದ್ರ ಸಿಂಗ್ ಬಾಬು ಅವರಿಗೆ ಲಕ್ಷ್ಮಿಯವರನ್ನು ಮುಂದುವರೆಸುವುದಕ್ಕೆ ಇಷ್ಟವಿರಲಿಲ್ಲ. ಯಾಕಂದ್ರೆ ಅಂತ ಹೀರೋಯಿನ್ ಓರಿಯೆಂಟೆಡ್ ಸಿನಿಮಾ ಅಲ್ಲ. ನಾಯಕಿಗೆ ಹೆಚ್ಚು ಕೆಲಸವಿಲ್ಲ. ನಾಯಕಿ ಪ್ರಧಾನ ಪಾತ್ರವಾದರೆ ಕರೀತಿನಿ ಅಂತ ಹೇಳಿದಾಗ ಲಕ್ಷ್ಮಿ ಸಿನಿಮಾ ಮಾಡುತ್ತೀನಿ ಅಂತ ಹೇಳಿದ್ರಂತೆ. ಆ ಸಿನಿಮಾದಲ್ಲಿ ಇಷ್ಟ ಪಟ್ಟು ನಟಿಸಿದ್ರು. ಅದರಲ್ಲಿ ಮೊದಲ ಎರಡು ಹಾಡು ಲಕ್ಷ್ಮಿಯವರಿಗಾಗಿಯೇ ಸೃಷ್ಟಿಯಾಗಿತ್ತು. ಲಕ್ಷ್ಮಿ ಅಂತಹ ಕಲಾವಿದೆ ಇರೋದ್ರಿಂದ ಹಾಡುಗಳು ಇರಬೇಕು ಅನ್ನೋ ಕಾರಣಕ್ಕೆ ಸಾಂಗ್ ಮಾಡಿದ್ದರು." ಎಂದು ಶ್ರೀಧರಮೂರ್ತಿ ಹೇಳಿದ್ದಾರೆ.
'ಅಂತ' ರಿಲೀಸ್ ಆದ್ಮೇಲೆ ಸಿಕ್ಕಾಪಟ್ಟೆ ಚರ್ಚೆಯನ್ನು ಹುಟ್ಟಾಕಿತ್ತು. ಹಿರಿಯ ರಾಜಕೀಯ ಮುಖಂಡ ಗುಲಾಂ ನಬಿ ಅಜಾದ್ ಲೋಕಸಭೆಯಲ್ಲಿ ಈ ಸಿನಿಮಾದ ಬಗ್ಗೆ ಪ್ರಶ್ನೆ ಮಾಡಿದ್ದರು. "ಸಿನಿಮಾದ ಕ್ಲೈಮ್ಯಾಕ್ಸ್ನಲ್ಲಿ ಹಿಂಸೆಯ ಸನ್ನಿವೇಶಗಳು ಇದೆ. ಗರ್ಭಿಣಿಯನ್ನು ಕಾಲಲ್ಲಿ ಓದೆಯುವಂತಹ ಸನ್ನಿವೇಶಗಳು ಇದೆ. ಅದರ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆ ಈಗಾಗಲೇ ಆಗಿದೆ. ಯಾವ ಮಟ್ಟಿಗೆ ಅಂದರೆ, ಲೋಕ ಸಭೆಯಲ್ಲಿ ಇದು ಚರ್ಚೆ ಆಯ್ತು. ಗುಲಾಂ ನಬಿ ಅಜಾದ್ ಈ ಪ್ರಶ್ನೆಯನ್ನು ಎತ್ತಿದ್ರು. ಇಂತಹ ಕ್ರೌರ್ಯ ಸನ್ನಿವೇಶಗಳು ಇರಬೇಕಾ? ಅಂತ ಪ್ರಶ್ನೆ ಮಾಡಿದ್ದರು." ಎನ್ನುತ್ತಾರೆ.
ಅಷ್ಟಕ್ಕೂ ಅಂತ ಬರುವವರೆಗೂ ಲಕ್ಷ್ಮಿ ಇಮೇಜ್ ಬೇರೆನೇ ಇತ್ತು. ಬಂದ್ಮೇಲೆ ಬೇರೆನೇ ಆಯ್ತು ಎನ್ನುತ್ತಾರೆ ಹಿರಿಯ ಪತ್ರಕರ್ತ ಶ್ರೀಧರಮೂರ್ತಿಗಳು. "ನಾನು ಒಮ್ಮೆ ಲಕ್ಷ್ಮಿಯನ್ನು ಈ ಪ್ರಶ್ನೆ ಕೇಳಿದ್ದೆ. ನೀವು ಹೇಗೆ ಈ ಪಾತ್ರವನ್ನು ಒಪ್ಪಿಕೊಂಡ್ರಿ? ಎಲ್ಲಾ ಸಿನಿಮಾಗಳಲ್ಲಿ ಹೆಣ್ಣಿನ ಘನತೆಯ ಬಗ್ಗೆ ಮಾತಾಡುವಂತಹವರು. ಈ ಪಾತ್ರವನ್ನು ನೀವು ಹೇಗೆ ಒಪ್ಪಿಕೊಂಡ್ರಿ? ಬೇರೆಯವರಾಗಿದ್ದರೆ ನನಗೆ ಗೊತ್ತಿರಲಿಲ್ಲ ಅಂತ ಹೇಳುತ್ತಿದ್ದರೇನೋ.. ಆದರೆ, ಲಕ್ಷ್ಮಿ ಹಾಗೆ ಹೇಳಲಿಲ್ಲ. ನಾನು ಕಥೆಯನ್ನು ಓದಿದ್ದೆ. ಕಥೆಯಲ್ಲಿ ಇಂತಹ ಸನ್ನಿವೇಶಗಳು ಇದೆ ಅಂತ ಗೊತ್ತಿತ್ತು. ಆದರೆ, ನನಗೆ ಒಂದು ಹೆಣ್ಣಿನ ಅಸಹಾಯಕತೆಯನ್ನು ತೋರಿಸಬೇಕಿತ್ತು. ವ್ಯವಸ್ಥೆಯ ಕ್ರೌರ್ಯ ಹೆಣ್ಣಿನ ಮೇಲೆ ಹೇಗೆ ಕೆಲಸ ಮಾಡುತ್ತೆ ಅನ್ನೋದು ತೋರಿಸಬೇಕಾಗಿತ್ತು ಅಂತ ಹೇಳಿದ್ರು." ಎಂದು ಲಕ್ಷ್ಮಿ ಅಭಿಪ್ರಾಯವೇನಿತ್ತು ಅನ್ನೋದನ್ನು ಹೇಳಿದ್ದಾರೆ.


Click it and Unblock the Notifications











