ಶಿವಮೊಗ್ಗದ ಹುಡುಗನೊಂದಿಗೆ ಪುದುಚೆರಿಯಲ್ಲಿ ಸುಮನಾ ಕಿತ್ತೂರು ಲವ್ ಸ್ಟೋರಿ ಶುರುವಾಗಿದ್ದು ಹೇಗೆ?
ಪುದುಚೆರಿಯಲ್ಲಿ ಕಳೆದ ತಿಂಗಳು 17ರಂದು ನಡೆದ ಸರಳ ಸಮಾರಂಭದಲ್ಲಿ ಖ್ಯಾತ ನಿರ್ದೇಶಕಿ ಸುಮನಾ ಕಿತ್ತೂರು, ಸಾಫ್ಟ್ವೇರ್ ಎಂಜಿನಿಯರ್ ಶ್ರೀನಿವಾಸ್ ಅವರನ್ನು ವರಿಸಿದ್ದಾರೆ. ಸುಮನಾ ಕಿತ್ತೂರು ಮೂಲತಃ ಮೈಸೂರಿನ ಪಿರಿಯಾಪಟ್ಟಣದವರು. ಅವರ ಕೈಹಿಡಿದಿರುವ ವರ ಶ್ರೀನಿವಾಸ್ ಶಿವಮೊಗ್ಗದ ಮಂಡಗದ್ದೆಯವರು. ಆದರೆ ಮದುವೆಯಾಗಿದ್ದು ತಮಿಳುನಾಡು ಸಮೀಪದ ಪುದುಚೆರಿಯ ಒರೊವಿಲ್ಲಾದಲ್ಲಿ.
Recommended Video
ಇದು ಪೋಷಕರ ಒಪ್ಪಿಗೆಯೊಂದಿಗೆ ನಡೆದ ಮದುವೆ. ಈ ಪ್ರೀತಿ ಹುಟ್ಟಿಕೊಂಡಿದ್ದು ಪುದುಚೆರಿಯಲ್ಲಿಯೇ. ಮದುವೆ ಶಿವಮೊಗ್ಗದಲ್ಲಿ ನಡೆಯಬೇಕು ಎಂಬ ಅವರ ಬಯಕೆಗೆ ಲಾಕ್ಡೌನ್ ತಣ್ಣೀರೆರಚಿತು. ಕೊನೆಗೆ ಅನಿವಾರ್ಯವಾಗಿ ಪುದುಚೆರಿಯಲ್ಲಿಯೇ ಮತ್ತಷ್ಟು ಸರಳವಾಗಿ ಸಾಂಸಾರಿಕ ಬದುಕಿಗೆ ಕಾಲಿಟ್ಟರು. ತಮ್ಮ ಪ್ರೇಮ ಚಿಗುರಿದ್ದು ಎಲ್ಲಿ? ಹೇಗೆ ಎಂಬ ಮಾಹಿತಿಯನ್ನು ನಿರ್ದೇಶಕಿ ಸುಮನಾ ಕಿತ್ತೂರು 'ಫಿಲ್ಮಿ ಬೀಟ್' ಜತೆ ಹಂಚಿಕೊಂಡಿದ್ದಾರೆ. ಮುಂದೆ ಓದಿ...

ಕುಪ್ಪಳ್ಳಿ ಮದುವೆ
ಲಾಕ್ಡೌನ್ ಹೇಗೂ ಏಪ್ರಿಲ್ ಅಂತ್ಯದಲ್ಲಿ ಮುಗಿಯುತ್ತದೆ. ನಂತರ ಶಿವಮೊಗ್ಗದ ಕುಪ್ಪಳ್ಳಿಗೆ ಹೋಗಿ ಅಲ್ಲಿ ಕುವೆಂಪು ಅವರ ಆಶಯದಂತೆ ಸರಳವಾಗಿ ಮಂತ್ರ ಮಾಂಗಲ್ಯದ ಮೂಲಕ ಮದುವೆಯಾಗೋಣ ಎಂಬ ಬಯಕೆ ಇತ್ತು. ಆದರೆ ಅದು ಮುಂದಕ್ಕೆ ಹೋಯಿತು. ಲಾಕ್ ಡೌನ್ ಕಾರಣದಿಂದ ಇಲ್ಲಿಯೇ ಮದುವೆ ನಡೆಯಿತು. ಮಂತ್ರ ಮಾಂಗಲ್ಯಕ್ಕಿಂತಲೂ ಸರಳವಾಗಿಯೇ ಮದುವೆ ನಡೆಯಿತು. ಒಂದು ಹತ್ತು-ಹನ್ನೆರಡು ಜನ ಇದ್ದರು ಎಂದು ಸುಮನಾ ತಿಳಿಸಿದರು.

ಮದುವೆಗೆ ತಮ್ಮನ ಹಾಜರಿ
ಲಾಕ್ ಡೌನ್ ಮುಗಿದ ಬಳಿಕ ಊರಿಗೆ ಬಂದು ರಿಸೆಪ್ಷನ್ ಆಯೋಜಿಸೋಣ ಎಂದುಕೊಂಡಿದ್ದೆವು. ಪತಿಯ ಸ್ಟೇಟಸ್ ಮೂಲಕ ಎಲ್ಲರಿಗೂ ಮದುವೆಯ ಸಂಗತಿ ಗೊತ್ತಾಯಿತು. ತಾಯಿಗೆ ವಯಸ್ಸಾಗಿರುವುದರಿಂದ ಪ್ರಯಾಣ ಸಾಧ್ಯವಿರಲಿಲ್ಲ. ಹೀಗಾಗಿ ಅವರು ಮದುವೆಗೆ ಬರಲಿಲ್ಲ. ಊರಿನಿಂದ ತಮ್ಮ ಬಂದಿದ್ದರು. ಮಿಕ್ಕಿದವರಿಗೆಲ್ಲ ಬರಲು ಹೆದರಿಕೆ ಇತ್ತು. ವಿಡಿಯೋ ಕಾಲ್ನಲ್ಲಿ ಅಮ್ಮ ಮತ್ತು ಇತರರು ಮದುವೆ ನೋಡಿದರು.

ಪುದುಚೆರಿಯಲ್ಲಿ ಪ್ರಾಜೆಕ್ಟ್ ಕೆಲಸ
ಮುಂಚೆಯಿಂದಲೂ ಪುದುಚೆರಿಗೆ ಪ್ರಾಜೆಕ್ಟ್ ಮೇಲೆ ಹೋಗಿ ಬರುತ್ತಿದ್ದೆ. ಬೇರೆ ದೇಶದ ಕಂಪೆನಿಯೊಂದಕ್ಕೆ ವಿಮೆನ್ ಆಂಡ್ ಎಂಪವರ್ಮೆಂಟ್ ಸಂಬಂಧಿಸಿದಂತೆ ಪ್ರಾಜೆಕ್ಟ್ ವರ್ಕ್ ಮಾಡುತ್ತಿದ್ದೆ. ಒಂದು ಪ್ರಾಜೆಕ್ಟ್ನಿಂದ ಇನ್ನೊಂದು ಪ್ರಾಜೆಕ್ಟ್ ನಡುವೆ ಸಿನಿಮಾ ಕೆಲಸ ಮಾಡುತ್ತೇನೆ. ಹಿಂದೆಯೂ ಇಂಟೀರಿಯರ್ ಡಿಸೈನ್ ಕಂಪೆನಿಗೆ ಕೆಲಸ ಮಾಡುತ್ತಿದ್ದೆ. ಅದರ ಮಧ್ಯೆ ಸಿನಿಮಾ ಕೆಲಸ ಮಾಡುತ್ತಿದ್ದೆ.

ಪ್ರಾಜೆಕ್ಟ್ ಕೆಲಸದಲ್ಲಿ ಭೇಟಿ
ಪಾಂಡಿಚೆರಿಯಲ್ಲಿ ಕನ್ನಡದವರು ಕಡಿಮೆ. ನನ್ನ ಪ್ರಾಜೆಕ್ಟ್ಗೆ ಫೋಟೊಗ್ರಫಿ ಬೇಕಿತ್ತು. ಇವರು ಸಾಫ್ಟ್ವೇರ್ ಎಂಜಿನಿಯರ್, ಜತೆಗೆ ಹವ್ಯಾಸಿ ಛಾಯಾಗ್ರಾಹಕ. ಹಾಗೆಯೇ ಪ್ರವಾಸೋದ್ಯಮದಲ್ಲಿ ಎಂ.ಎ. ಮಾಡಿದ್ದಾರೆ. ನನ್ನ ಪ್ರಾಜೆಕ್ಟ್ಗೆ ಸಂಬಂಧಿಸಿದಂತೆ ನನಗೆ ಶೂಟ್ ಮಾಡಲು ಅಗತ್ಯವಿದ್ದರಿಂದ ಅದರ ಹುಡುಕಾಟದಲ್ಲಿ ಅವರ ಭೇಟಿಯಾಯ್ತು.

ಒಂದು ವರ್ಷದ ಪರಿಚಯ
ಹಾಗೆ ಪರಿಚಯ ಆಗಿ ನೋಡಿದಾಗ ಕನ್ನಡ-ಕನ್ನಡ ನಂಟು ಗೊತ್ತಾಯಿತು ಪರಿಚಯ ಆಗಿದ್ದು, ಮದುವೆಯಲ್ಲಿ ಅಂತ್ಯ ಆಯಿತು. ನಮ್ಮ ಪರಿಚಯ ಆಗಿ ಒಂದು ವರ್ಷವಾಗಿತ್ತು. ತಾಯಿಯವರಿಗೆ ಹುಷಾರಿಲ್ಲ ಎಂದು ಆಗಾಗ್ಗೆ ಊರಿಗೆ ಹೋಗುತ್ತಿದೆ. ಪ್ರಾಜೆಕ್ಟ್ ಕೆಲಸ ಮೇಲೆ ಪುದುಚೆರಿಗೆ ಹೋಗುತ್ತಿದ್ದೆ. ಅಲ್ಲಿಂದ ಜಗತ್ತೆಲ್ಲ ಸುತ್ತುತ್ತಿದ್ದೆ. ಇದೆಲ್ಲದರ ನಡುವೆ ಈ ನಂಟು ಬೆಳೆಯಿತು.

ವೆಬ್ ಸೀರೀಸ್ಗೆ ಕೆಲಸ
ಲಾಕ್ಡೌನ್ಗೂ ಮೊದಲು ಎರಡು ವೆಬ್ಸೀರೀಸ್ ಕೆಲಸ ಮಾಡಿದ್ದೇವೆ. ಬಾಂಬೆ ಕಂಪೆನಿಯೊಂದು ಕನ್ನಡದ ವೆಬ್ ಸೀರೀಸ್ಗೆ ಕೇಳಿತ್ತು. ತಮಿಳಲ್ಲಿ ಮಾಡಿದಂತೆ ವ್ಯಕ್ತಿಯೊಬ್ಬರ ಜೀವನ ಚರಿತ್ರೆಯಿಂದ ಶುರುಮಾಡಲು ಬಯಸಿದ್ದರು. ಅವರಿಗೆ ಕಲ್ಪನಾ ಜೀವನಚರಿತ್ರೆ, ಶ್ರೀಧರ್ ಸರ್ ಅವರ ಕಥೆ ಎರಡನ್ನೂ ನೀಡಿದ್ದೆ. ಲಾಕ್ ಡೌನ್ ಕಾರಣದಿಂದ ಅವು ನಡೆಯಲಿಲ್ಲ.

ಮೈಸೂರಿಗೆ ಸ್ಥಳಾಂತರ
ಮೈಸೂರಿನಲ್ಲಿ ಶ್ರೀನಿವಾಸ್ ಅವರ ಪೋಷಕರು ಇದ್ದಾರೆ. ನಾವು ಮುಂದೆ ಅಲ್ಲಿಗೇ ಶಿಫ್ಟ್ ಆಗಲಿದ್ದೇವೆ. ಇಂಟರ್ ಸ್ಟೇಟ್ ಸಂಚಾರಕ್ಕೆ ಬಿಡುತ್ತಿಲ್ಲ. ಬಿಟ್ಟರೆ ನಾಳೆಯೇ ಬಂದು ಬಿಡುತ್ತೇವೆ. ರೈತರು ಯಾವಾಗ ಮಳೆ ಬರುತ್ತದೆ ಎಂದು ಮೋಡದ ಕಡೆ ಮುಖ ಮಾಡುವಂತೆ ನಾವು ಕಾದು ಕುಳಿತಿದ್ದೇವೆ ಎಂದರು ಸುಮನಾ.


Click it and Unblock the Notifications











