ಉತ್ತರ ಭಾರತದ ರಾಜರೇ ಯಾಕೆ..? ಕನ್ನಡದ ಈ ದೊರೆಗಳ ಇತಿಹಾಸ ತೆರೆಗೆ ಬಂದರೇ? ಯಾಕಿಂತ ಸಿನಿಮಾಗಳು ಬರ್ತಿಲ್ಲ?
ಇತಿಹಾಸದ ಪುಟಗಳಲ್ಲಿ ಉತ್ತರ ಭಾರತದಿಂದ ಹಿಡಿದು ದಕ್ಷಿಣ ಭಾರತದವರೆಗೆ ಹೋರಾಟ ಮಾಡಿದ ಅಷ್ಟೇ ರಾಜ-ಮಹಾರಾಜರು, ರಾಣಿಯರು ಇದ್ದಾರೆ. ಪರಕೀಯರ ವಿರುದ್ಧ ವೀರಾವೇಷದಿಂದ ಹೋರಾಡಿದ್ದಾರೆ. ಗೆದ್ದಿದ್ದಾರೆ, ವೀರ ಮರಣವನ್ನಪ್ಪಿದ್ದಾರೆ. ಚರಿತ್ರೆಯ ಪುಟಗಳಲ್ಲಿ ತಮ್ಮ ಗುರುತನ್ನು ಮೂಡಿಸಿದ್ದಾರೆ. ಇಂದಿಗೂ ಇತಿಹಾಸದ ಪುಟಗಳಲ್ಲಿ ಇವರ ಪರಾಕ್ರಮವನ್ನು ತಿರುವಿ ಹಾಕುತ್ತಿದ್ದರೇ, ಒಮ್ಮೆ ಮೈಜುಂ ಅನ್ನುತ್ತೆ.
ಸಿನಿಮಾಗಳಲ್ಲಿ ಈ ರಾಜ ಮಹಾರಾಜರ ಪರಾಕ್ರಮಗಳನ್ನು ಯಶಸ್ವಿಯಾಗಿ ತೆರೆ ತಂದಿರುವ ಉದಾಹರಣೆಗಳಿವೆ. ಕನ್ನಡದಲ್ಲಿಯೂ ಈ ಹಿಂದೆ ಐತಿಹಾಸಿಕ ಸಿನಿಮಾ ಬಂದಿದ್ದವು. ಆ ಸಿನಿಮಾಗಳನ್ನು ನೋಡಿ ಜನರು ಭೇಷ್ ಎಂದಿದ್ದರು. ಆದ್ರೀಗ ಕನ್ನಡದಲ್ಲಷ್ಟೇ ಅಲ್ಲ. ದಕ್ಷಿಣ ಭಾರತದಲ್ಲೇ ಇಂತಹ ಸಿನಿಮಾಗಳು ಮರೀಚಿಕೆಯಾಗಿವೆ. ಕೇವಲ ಉತ್ತರ ಭಾರತದ ಮಹಾರಾಜರ ಸಿನಿಮಾಗಳ ಮಾತ್ರ ನೋಡುವುದಕ್ಕೆ ಸಿಗುತ್ತಿದೆ.

ಒಂದು ಕಾಲದಲ್ಲಿ ಹಾಗಿರಲಿಲ್ಲ. ಕನ್ನಡದಲ್ಲಿ ಸಾಕಷ್ಟು ಐತಿಹಾಸಿಕ ಸಿನಿಮಾಗಳು ನಿರ್ಮಾಣ ಆಗುತ್ತಿದ್ದವು. ಅದರಲ್ಲೂ ಡಾ.ರಾಜ್ಕುಮಾರ್ ಐತಿಹಾಸ ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸಿದ್ದರು. 'ರಣ್ಧೀರ ಕಂಠೀರವ', 'ಕಿತ್ತೂರು ಚೆನ್ನಮ್ಮ', 'ಇಮ್ಮಡಿ ಪುಲಕೇಶಿ', 'ಶ್ರೀಕೃಷ್ಣದೇವರಾಯ', 'ಮಯೂರ', 'ಹುಲಿಯ ಹಾಲಿನ ಮೇವು' ಅಂತಹ ಸಿನಿಮಾಗಳು ಮನ ಮೆಚ್ಚುಗೆಯನ್ನು ಪಡೆದುಕೊಂಡಿವೆ.
ಇನ್ನು 'ಗಂಡುಗಲಿ ಕುಮಾರರಾಮ' ಸಿನಿಮಾದಲ್ಲಿ ಶಿವಣ್ಣ ನಟಿಸಿದ್ದರು. 'ಕ್ರಾಂತಿವೀರ ಸಂಗೊಳ್ಳಿರಾಯಣ್ಣ' ಸಿನಿಮಾದಲ್ಲಿ ದರ್ಶನ್ ನಟಿಸಿದ್ದಾರೆ. ಈ ಎಲ್ಲಾ ಸಿನಿಮಾಗಳನ್ನೂ ಜನರು ಇಷ್ಟ ಪಟ್ಟಿದ್ದಾರೆ. ಐತಿಹಾಸಿ ಸಿನಿಮಾಗಳಿಗೆ ಮೆಚ್ಚುಗೆ ಸೂಚಿಸಿದ್ದಾರೆ. ಆದರೆ, ಇತ್ತೀಚೆಗೆ ಇಂತಹ ಐತಿಹಾಸಿಕ ಸಿನಿಮಾಗಳು ಕಮ್ಮಿಯಾಗಿವೆ. ಆದರೆ, ಉತ್ತರ ಭಾರತದಲ್ಲಿ ಹೆಚ್ಚೆಚ್ಚು ಸಿನಿಮಾಗಳು ನಿರ್ಮಾಣ ಆಗುತ್ತವೆ. ಅದಕ್ಕೆ ಉತ್ತಮ ಉದಾಹರಣೆ ಇತ್ತೀಚೆಗೆ ಬಂದು ಯಶಸ್ಸು ಕಂಡಿರುವ ಸಿನಿಮಾ 'ಛಾವ'. ಈ ಬೆನ್ನಲ್ಲೇ ಇನ್ನೂ ಕೆಲವು ಸಿನಿಮಾಗಳು ನಿರ್ಮಾಣದ ಹಂತದಲ್ಲಿವೆ.
ಉತ್ತರ ಭಾರತದ ರಾಜರ ಸಾಹಸ, ಪರಾಕ್ರಮ, ತ್ಯಾಗದ ಕುರಿತ ಸಾಕಷ್ಟು ಸಿನಿಮಾಗಳನ್ನು ಮಾಡಿ ದೇಶ ಪ್ರೇಮ ಸಾರಿದ್ದೂ ಇದೆ. ಆದರೆ, ದಕ್ಷಿಣ ಭಾರತದ ರಾಜರು ರಾಜಮನೆತನಗಳ ಕುರಿತು ಇತ್ತೀಚೆಗೆ ಸಿನಿಮಾಗಳೇ ಬಂದಿಲ್ಲ. ಅಂತಹ ಪ್ರಯತ್ನಕ್ಕೂ ಯಾರೂ ಕೈ ಕೂಡ ಆಗಿಲ್ಲ. ಕನ್ನಡದ ದೊರೆಗಳ ಸಾಹಸ, ತ್ಯಾಗವನ್ನು ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡುವಂತೆ ಮಾಡಬೇಕಿದೆ. ವಿಶೇಷ ಅಂದರೆ, ಕನ್ನಡದ ರಾಜರೂ ಕೂಡ ಉತ್ತರ ಭಾರತದ ದೊರೆಗಳಂತೆ ವೀರಾವೇಶದಿಂದ ಪರಕೀಯರ ವಿರುದ್ಧ ಹೋರಾಟ ಮಾಡಿದ್ದಾರೆ. ಅಂತಹ ಸಾಕಷ್ಟು ಹೆಸರುಗಳು ಕಣ್ತುಂದೆ ಬರುತ್ತವೆ.

ನಮ್ಮ ಮಣ್ಣಿನ, ನಮ್ಮ ನೆಲದ ರಾಜ ಮನೆತನಗಳನ್ನು ಮರೆತಿದ್ದೇವೆ. 7ನೇ ಶತಮಾನದಿಂದ ಪರಕೀಯ ಶಕ್ತಿಗಳ ವಿರುದ್ಧ ಕನ್ನಡದ ರಾಜರು ದಿಟ್ಟತನದಿಂದ ಹೋರಾಟ ಮಾಡಿದ್ದಾರೆ. 7ನೇ ಶತಮಾನದಲ್ಲಿ ಪರಕೀಯರು ಆಕ್ರಮಣ ಮಾಡದಂತೆ ತಡೆದು ನಿಲ್ಲಿಸಿದ್ದಾರೆ. ಅಂತಹವರಲ್ಲಿ ಇಮ್ಮಡಿ ಪುಲಕೇಶಿ, ಅಮೋಘವರ್ಷ ನೃಪತುಂಗ, ದೆಹಲಿ ಸುಲ್ತಾನರನ್ನು ಎರಡು ಬಾರಿ ಬಗ್ಗು ಬಡಿದಿದ್ದ ಗಂಡುಗಲಿ ಕುಮಾರರಾಮ, ಬೈಚಪ್ಪ ನಾಯಕ, ವೀರ ಬಲ್ಲಾಳ, ವೀರ ಕಂಪಣರಾಯ, ಶ್ರೀಕೃಷ್ಣ ದೇವರಾಯ, ವೀರ ಮದಕರಿ ನಾಯಕ, ರಾಣಿ ಚೆನ್ನಮ್ಮ ದೇವಿ, ಕಿತ್ತೂರು ರಾಣಿ ಚೆನ್ನಮ್ಮ ಹೀಗೆ ಸಾಕಷ್ಟು ಹೆಸರುಗಳು ಕಣ್ಮ ಮುಂದೆ ಬರುತ್ತವೆ.
ಆದರೆ, ಈಗಿನ ಪರಿಸ್ಥಿತಿಯಲ್ಲಿ ಕನ್ನಡದ ಯಾವುದೇ ನಿರ್ಮಾಣ ಸಂಸ್ಥೆಗಳು ಇಂತಹ ಸಿನಿಮಾಗಳಿಗೆ ಕೈ ಹಾಕುತ್ತಿಲ್ಲ. 'ವೀರ ಮದಕರಿ ನಾಯಕ' ಸೆಟ್ಟೇರಿದರೂ ಅದು ಮುಂದುವರೆಯಲಿಲ್ಲ. ಐತಿಹಾಸಿಕ ಹಿನ್ನೆಲೆಯುಳ್ಳ ಸಿನಿಮಾಗಳನ್ನು ನಿರ್ಮಾಣ ಮಾಡುವ ಗೋಜಿಗೆ ಯಾರು ಹೋಗುತ್ತಲೇ ಇಲ್ಲ. ಬಾಲಿವುಡ್ ಮಂದಿ ಇಂತಹ ಹಿಸ್ಟಾರಿಕಲ್ ಸಬ್ಜೆಕ್ಟ್ಗಳನ್ನು ಹಿಟ್ಟುಕೊಂಡು ಗೆಲ್ಲುತ್ತಿರುವಾಗ ಕನ್ನಡ ಚಿತ್ರರಂಗ ಮಾತ್ರ ಇನ್ನೂ ಲವ್ ಸ್ಟೋರಿ, ಲಾಂಗ್, ಮಚ್ಚು ಅನ್ನೋವ ಸಮಾನದಿಂದಲೇ ಹೊರಬಂದಿಲ್ಲ. ಒಂದು ವೇಳೆ ಇಂತಹ ಐತಿಹಾಸಿಕ ಸಿನಿಮಾಗಳು ಪ್ಯಾನ್ ಇಂಡಿಯಾ ಆದರೆ, ಸ್ಯಾಂಡಲ್ವುಡ್ ಮತ್ತೆ ಶೈನಿಂಗ್ ಆಗುವುದರಲ್ಲಿ ಅನುಮಾನವೇ ಇಲ್ಲ.


Click it and Unblock the Notifications











