"ಅಣ್ಣಾವ್ರು ಕಿಡ್ನಾಪ್ ಆದಾಗ ಡಿಕೆಶಿ, ರಾಕ್ಲೈನ್ ಎಲ್ರೂ ಸೇರಿ ₹50 ಕೋಟಿ ಕೊಟ್ಟಿದ್ರು"; ಎಎಂಆರ್ ರಮೇಶ್
ಕನ್ನಡದ ಕಣ್ಮಣಿ ಡಾ.ರಾಜ್ಕುಮಾರ್ ಅಗಲಿ 18 ವರ್ಷಗಳಾಗಿವೆ. ಇಂದಿಗೂ ಅಣ್ಣಾವ್ರ ನೆನಪು ಕನ್ನಡಿಗರನ್ನು ಕಾಡುತ್ತಲೇ ಇರುತ್ತೆ. ಸುಮಾರು 24 ವರ್ಷಗಳ ಹಿಂದೆ ಅಣ್ಣಾವ್ರನ್ನು ನರಹಂತಕ ವೀರಪ್ಪನ್ ಕಿಡ್ನಾಪ್ ಮಾಡಿದ್ದರು. ಆ ವೇಳೆ ಇಡೀ ಕರ್ನಾಟಕದ ಜನತೆ ಆತಂಕಕ್ಕೆ ಒಳಗಾಗಿತ್ತು. ಅಭಿಮಾನಿಗಳು ಕನ್ನಡಿಗರು ವೀರಪ್ಪನ್ಗೆ ಹಿಡಿಶಾಪ ಹಾಕಿದ್ದರು. ಬರೋಬ್ಬರಿ 108 ದಿನಗಳ ಕಾಲ ಅಣ್ಣಾವ್ರನ್ನು ಕಾಡು ಮೇಡು ಅಂತ ವೀರಪ್ಪನ್ ಅಲೆದಾಡಿಸಿದ್ದ.
ಹುಟ್ಟೂರು ಗಾಜನೂರಿನಲ್ಲಿ ಇದ್ದ ಡಾ.ರಾಜ್ಕುಮಾರ್ ಅವರನ್ನು ಕಾಡುಗಳ್ಳ ವೀರಪ್ಪನ್ ಕಿಡ್ನಾಪ್ ಮಾಡಿದ್ದ. ಇಲ್ಲಿಂದ ಮುಂದಕ್ಕೆ ನಡೆದಿದ್ದು ನಿಜಕ್ಕೂ ರೋಚಕ. ಅಣ್ಣಾವ್ರ ಅಪರಣದ ಬಳಿಕ ಸರ್ಕಾರ ಹಾಗೂ ವೀರಪ್ಪನ್ ಮಧ್ಯೆ ಏನು ಮಾತುಕತೆ ನಡೀತು? ಅಣ್ಣಾವ್ರನ್ನು ವಾಪಾಸ್ ಕರೆದುಕೊಂಡು ಬರುವುದಕ್ಕೆ 108 ದಿನ ಹಿಡಿದಿದ್ದೇಕೆ? ಆ ವೇಳೆ ಅಣ್ಣಾವ್ರನ್ನು ಬಿಡಿಸಿಕೊಂಡು ಬರುವುದಕ್ಕೆ ಯಾರೆಲ್ಲ ಮುಂಚೂಣಿಯಲ್ಲಿದ್ದರು? ಅನ್ನೋದೇ ಇಂಟ್ರೆಸ್ಟಿಂಗ್ ಕಥೆ.

ಅಣ್ಣಾವ್ರ ಕಿಡ್ನಾಪ್ ವಿಷಯ ರಾಜ್ಯವನ್ನು ಬೆಚ್ಚಿ ಬೀಳಿಸಿತ್ತು. ಪರಿಸ್ಥಿತಿ ಹಿಂಸಾಚಾರಕ್ಕೆ ತಿರುಗಿತ್ತು. ಕರ್ನಾಟಕ ಸರ್ಕಾರಕ್ಕೆ ಈ ಅಪಹರಣ ದೊಡ್ಡ ಚಾಲೆಂಜ್ ಆಗಿಬಿಟ್ಟಿತ್ತು. ಈ ವೇಳೆ ತೆರೆಮರೆಯಲ್ಲಿ ಏನೆಲ್ಲಾ ನಡೀತು? ಯಾರು ಎಷ್ಟು ಹಣ ಕೊಟ್ಟರು? ತಾನು ಹೇಗೆ ವೀರಪ್ಪನ್ ಭೇಟಿ ಮಾಡುವುದಕ್ಕೆ ಪಟ್ಟ ಪ್ರಯತ್ನ ಎಲ್ಲವನ್ನೂ ರ್ಯಾಪಿಡ್ ರಶ್ಮಿ ಯೂಟ್ಯೂಬ್ ಚಾನೆಲ್ನಲ್ಲಿ ಎಎಂಆರ್ ರಮೇಶ್ ರಿವೀಲ್ ಮಾಡಿದ್ದಾರೆ.
"ಅಣ್ಣಾವ್ರು ಕಿಡ್ನಾಪ್ ಆಯ್ತಲ್ಲ. ಕಾಡಿಗೆ ಹೋದ ಮೊದಲ ವ್ಯಕ್ತಿ ನಾನೇ. ಫಾರೆಸ್ಟ್ಗೆ ಹೋಗುವ ಮುಂಚೆ ಇದೇ ರಂಗನಾಥ್ ಅನ್ನು ಕರೆದುಕೊಂಡು ಹೋಗುತ್ತೇನೆ. ಯಾಕಂದ್ರೆ, ಅಲ್ಲಿ ಒಳಗಡೆ ಇದ್ದಿದ್ದು ಯಾರು ಅಂತ ನಮಗೆ ಗೊತ್ತಾಗಿ ಹೋಯ್ತು. ಟಿಎನ್ಆರ್ಟಿ, ಟಿಎನ್ಎಲ್ಎ ಹುಡುಗರು ಅಂತ. ಈ ಎರಡೂ ಗ್ಯಾಂಗ್ನವರು ಅಣ್ಣಾವ್ರನ್ನು 2000ನೇ ಇಸವಿಯಲ್ಲಿ ಕಿಡ್ನಾಪ್ ಮಾಡುತ್ತಾರೆ. ಕಿಡ್ನಾಪ್ ಮಾಡಿದ ಮೇಲೆ ನನಗೆ ತಮಿಳು ಉಗ್ರವಾದಿಗಳು ಮಾಡಿದ್ದಾರೆ ಅಂತ ಗೊತ್ತಾಗುತ್ತೆ. ಅವ್ರಿಗೆ ಎಲ್ಟಿಟಿಇಗೆ ಸೇರಬೇಕು ಅಂತ ಒಂದು ಲಿಂಕ್ ಇತ್ತಲ್ಲ. ಆ ಲಿಂಕ್ ಅನ್ನು ಬಳಸಿಕೊಂಡು ತಕ್ಷಣವೇ ರಂಗನಾಥ್ ಅವರನ್ನು ಕರೆದುಕೊಂಡು ಕೊಳತ್ತೂರು ಮಣಿಯ ಬಳಿ ಹೋಗುತ್ತೇವೆ. ಕೊಳತ್ತೂರು ಮಣಿಯವರು ನಾನು ಅವರನ್ನು ಟಚ್ ಮಾಡುವುದಕ್ಕೆ ಆದರೆ ಮಾಡುತ್ತೇನೆ ಎಂದು ಹೇಳಿದ್ದರು. ಮಾತುಕತೆಯನ್ನೆಲ್ಲ ಮಾಡಿಕೊಂಡು ಬಂದ್ವಿ." ಎಂದು ಅಟ್ಟಹಾಸದ ನಿರ್ದೇಶಕ ಎಎಂಆರ್ ರಮೇಶ್ ಹೇಳಿದ್ದಾರೆ.

ಇಷ್ಟೆಲ್ಲ ಪ್ರಯತ್ನ ಮಾಡಿ ಬೆಂಗಳೂರಿಗೆ ಹಿಂತಿರುಗಿದ ಬಳಿಕ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡುತ್ತಾರೆ. ಆಮೇಲೆ ಏನಾಯ್ತು ಕೇಳಿ. "ಅಷ್ಟೊತ್ತಿಗೆ 6 ದಿನಾನೋ 7 ದಿನಾನೋ ಆಗಿತ್ತು. ಫೋಟೋಗಳನ್ನೆಲ್ಲ ತೆಗೆದುಕೊಂಡು ಬಂದು ನಮ್ಮ ನಾರಾಯಣಗೌಡರು, ಈಗ ಅನುಚೇತ್ ಅಂತ ಇದ್ದಾರಲ್ಲ ಜಾಯಿಂಟ್ ಕಮಿಷರ್ ಟ್ರಾಫಿಕ್ ಅವರ ತಂದೆಯವರು ಡಿಸಿಪಿ ಆಗಿದ್ದರು. ನಾರಾಯಣಗೌಡರು ಹಾಗೂ ಗೋಪಾಲ್ ಹೊಸೂರು ಇಬ್ಬರೂ ನಾನು ಹೇಳಿದ ಕತೆಯನ್ನು ಕೇಳಿ ಅವರು ಥ್ರಿಲ್ ಆಗಿದ್ದರು. ಇದು ಸರಿಯಾದ ದಾರಿ, ನೀವು ಸರ್ಕಾರವನ್ನು ಅಪ್ರೋಚ್ ಮಾಡಿ ಖರ್ಗೆಯವರಿಗೆ ಹೇಳು ಅಂದರು. ಆಗ ಖರ್ಗೆಯವರು ಹೋಮ್ ಮಿನಿಸ್ಟರ್ ಆಗಿದ್ದರು. ಅವರ ಬಳಿ ಮಾತಾಡುತ್ತೇನೆ. ಅವರಿಗೆ ಏನೂ ಗೊತ್ತಾಗುತ್ತಲೇ ಇಲ್ಲ. ಆಮೇಲೆ ಚಿನ್ನೇಗೌಡರು ನನ್ನನ್ನು ಕರೆದುಕೊಂಡು ಕೆಂಪಯ್ಯ ಅವರ ಹತ್ತಿರ ಕರೆದುಕೊಂಡು ಹೋದರು." ಎಂದಿದ್ದಾರೆ.
ಎಎಂಆರ್ ರಮೇಶ್ ಹಾಗೂ ಕೆಂಪಯ್ಯ ಅವರ ಮಧ್ಯೆ ನಡೆದ ಮಾತುಕತೆ ಸಫಲವಾಗಲಿಲ್ಲ. ಎಎಂಆರ್ ರಮೇಶ್ ಹಿಡಿದಿದ್ದ ದಾರಿ ಕೆಂಪಯ್ಯ ಅವರಿಗೆ ಸರಿಕಾಣಲಿಲ್ಲ. "ಅಲ್ಲಿ ಕೂತು ಮಾತಾಡಬೇಕಾದರೆ, ಕೆಂಪಯ್ಯ ನೀನು ಹೇಗೆ ಹೋದೆ ಅಂದರು. ನಾನು ರಂಗನಾಥ್ ಅಂದಾಗ ಅವರಿಗೆ ಸ್ವಲ್ಪ ಇರಿಸು ಮುರಿಸು ಆಯ್ತು ಅನಿಸುತ್ತೆ. ತಮಿಳು ಉಗ್ರವಾದಿಗಳ ಜೊತೆ ಹೋಗಿದ್ದಾನೆ ಸರಿ ಬರುತ್ತೋ ಇಲ್ವೋ ಅಂತ ಅವರು ಅಂದುಕೊಂಡಿರಬಹುದು. ನೀವು ಹೇಳಿದರೆ, ಮತ್ತೆ ಹೋಗುತ್ತೇನೆ ನಾನು ಅಂತ ಹೇಳಿದೆ. ರೂಟ್ ಸಿಕ್ಕಿದೆ ಎಂದು ಹೇಳಿದೆ. ಬೇಡ ಅಂದ್ಮೇಲೂ ಇನ್ನೂ ಎರಡು ಬಾರಿ ಹೋಗಿ ಬಂದೆ" ಎಂದು ರ್ಯಾಪಿಡ್ ರಶ್ಮಿ ಯೂಟ್ಯೂಬ್ ಚಾನೆಲ್ನ ಸಂದರ್ಶನದಲ್ಲಿ ಹೇಳಿದ್ದಾರೆ.
ಎಎಂಆರ್ ರಮೇಶ್ ಇಷ್ಟೆಲ್ಲ ಮಾಡಿ ಮುಗಿಸುವ ಹೊತ್ತಿಗೆ ತಮಿಳುನಾಡಿನ ಪತ್ರಕರ್ತ ನಕ್ಕೀರನ್ ಗೋಪಾಲ್ ಅವರನ್ನು ಸಂಧಾನಕ್ಕೆ ನೇಮಕ ಮಾಡಲಾಗುತ್ತೆ. "ಇಷ್ಟೆಲ್ಲ ಆದ್ಮೇಲೆ ನಕ್ಕೀರನ್ ಗೋಪಾಲ್ ಹೋಗುವುದಕ್ಕೆ ಆಯ್ಕೆ ಆಗುತ್ತಾರೆ. ಆಗ ನಾನು ನಕ್ಕೀರನ್ ಗೋಪಾಲ್ ಫ್ಲಾಪ್ ಶೋ ಅಂತ ಹೇಳುತ್ತೇನೆ. ಇದು ವರ್ಕ್ಔಟ್ ಆಗಲ್ಲ ಅಂತ. ಅದಾಗಲೇ ನಕ್ಕೀರನ್ ಗೋಪಾಲ್ ಸಾಕಷ್ಟು ಸಂದರ್ಶನ ಮಾಡಿರುತ್ತಾರೆ. ಅವರೇ ವೀರಪ್ಪನ್ಗೆ ಸಾಕಷ್ಟು ಐಡಿಯಾ ಕೊಟ್ಟಿದ್ದಾರೆ. ಮಾಡಿದರೆ ದೊಡ್ಡದು ಹೊಡಿ ಅಂತ. ಆಗ ಅಣ್ಣಾವ್ರ ಹೆಸರೆಲ್ಲ ಬಂದಿದೆ ಅಲ್ಲಿ. ನಕ್ಕೀರನ್ ಗೋಪಾಲ್ ಅಲ್ಲಿ ಹೋಗಿ ಅಣ್ಣಾವ್ರನ್ನ ನೋಡಿದಾಗ ನಿಮ್ಮಂಥ ದೇವರನ್ನು ಕರೆದುಕೊಂಡು ಬಂದಿದ್ದಾನಲ್ಲ ಅಂತ ಹೇಳುತ್ತಿದ್ದರು. ಇಲ್ಲಿ ಬಂದು ನಿಜಕ್ಕೂ ನನಗೆ ತಡೆದುಕೊಳ್ಳುವುದಕ್ಕೆ ಆಗುತ್ತಿಲ್ಲ ಅಂತ ಹೇಳುವುದು. ವೀರಪ್ಪನ್ ಹತ್ತಿರ ಹೋಗಿ ಎಂಥಾ ಪ್ರೈಸ್ ಕ್ಯಾಚ್ ಗ್ರೇಟ್ ಅನ್ನೋದು. ಅದಾದ್ಮೇಲೆ ದುಡ್ಡು ಹೋಗುವುದಕ್ಕೆ ಶುರುವಾಯ್ತು" ಎಂದಿದ್ದಾರೆ.
ಅಣ್ಣಾವ್ರ ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿಗಳು, ನಿರ್ಮಾಪಕರು, ರಾಜಕಾರಣಿಗಳು ಹಣವನ್ನು ಕೊಟ್ಟಿದ್ದಾರೆ. "ದುಡ್ಡು ಹೋಗುತ್ತಿದೆ. ನನಗೆ ಚೆನ್ನಾಗಿ ಗೊತ್ತು ಇದು ಸಕ್ಸಸ್ ಆಗಲ್ಲ ಅಂತ. ಸರ್ಕಾರ ಅಲ್ಲ. ಯಾರ್ಯಾರೋ ಸಹಾಯ ಮಾಡಿದ್ದಾರೆ. ಸಂಗ್ರಾಮ್ ಸಿಂಗ್ ಕಲೆಕ್ಟ್ ಮಾಡಿದ್ದು, ಅದಾದ್ಮೇಲೆ ರಾಕ್ಲೈನ್ ಅವರು ಕೊಟ್ಟಿದ್ದಾರೆ. ಡಿಕೆಶಿಯವರು ಕೊಟ್ಟಿದ್ದಾರೆ. ಸುಮಾರು ಜನ ಕೊಟ್ಟಿದ್ದಾರೆ. ಸಿದ್ಧಾರ್ಥ್ ಅವರು ಕೊಟ್ಟಿದ್ದಾರೆ. ಎಲ್ಲರೂ ಕೊಟ್ಟು 50 ಕೋಟಿ ರೂಪಾಯಿವರೆಗೂ ಹೋಗಿದೆ. ಅದರಲ್ಲಿ ಸಂದೇಹವೇ ಇಲ್ಲ" ಎಂದು ವೀರಪ್ಪನ್ ಸಿನಿಮಾದ ನಿರ್ದೇಶಕ ಎಎಂಆರ್ ರಮೇಶ್ ಸಂದರ್ಶನದಲ್ಲಿ ತಿಳಿಸಿದ್ದಾರೆ.


Click it and Unblock the Notifications











