ಮತ್ತೆ ನಟನೆಗೆ ಮರಳಿದ 'ಚೈತ್ರದ ಪ್ರೇಮಾಂಜಲಿ' ನಟಿಯ ಫ್ಯಾಮಿಲಿ ಲೈಫ್ ಬಗ್ಗೆ ನಿಮಗೆಷ್ಟು ಗೊತ್ತು?
'ಚೈತ್ರದ ಪ್ರೇಮಾಂಜಲಿ' ಕನ್ನಡ ಚಿತ್ರರಂಗದ ಎವರ್ಗ್ರೀನ್ ಸಿನಿಮಾಗಳಲ್ಲಿ ಒಂದು. ಎಸ್. ನಾರಾಯಣ್ ನಿರ್ದೇಶಿಸಿದ ಮೊದಲ ಸಿನಿಮಾವಿದು. ರಘುವೀರ್ ನಟಿಸಿ, ನಿರ್ಮಾಣ ಮಾಡಿದ್ದ ಮೊದಲ ಸಿನಿಮಾ ಕೂಡ ಹೌದು. ಹಂಸಲೇಖ ಹಾಕಿದ ಟ್ಯೂನ್ಗಳು ಇಂದಿಗೂ ಸಂಗೀತ ಪ್ರಿಯರ ಬಾಯಲ್ಲಿ ಗುನುಗುತ್ತವೆ. ನಿರೀಕ್ಷೆಯೇ ಇಲ್ಲದೆ ಬಾಕ್ಸಾಫೀಸ್ನಲ್ಲಿ ಸದ್ದು ಮಾಡಿದ ಸಿನಿಮಾವೇ 'ಚೈತ್ರದ ಪ್ರೇಮಾಂಜಲಿ'.
'ಚೈತ್ರದ ಪ್ರೇಮಾಂಜಲಿ' ಸಿನಿಮಾದ ಮೂಲಕ ಇನ್ನೊಂದು ಪ್ರತಿಭೆ ಕನ್ನಡಕ್ಕೆ ಪರಿಚಯವಾಗಿತ್ತು. ಅದಾಗಲೇ ತಮಿಳಿನ ಹಲವು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದರು. ಅದೇ ನಟಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಅದೃಷ್ಟದ ನಾಯಕಿ ಅನ್ನೋ ಪಟ್ಟವನ್ನು ಪಡೆದುಕೊಂಡರು. ಅದೇ ನಟಿಯ ಹೆಸರು ಶ್ವೇತಾ.

ಈಗ ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ 'ಲಕ್ಷ್ಮಿ ನಿವಾಸ' ಧಾರಾವಾಹಿ ಮೂಲಕ ಮತ್ತೆ ಕಮ್ಬ್ಯಾಕ್ ಮಾಡಿದ್ದಾರೆ. ಸುಮಾರು 15 ವರ್ಷಗಳ ಬಳಿಕ ಮತ್ತೆ ಬಣ್ಣ ಹಚ್ಚಿರುವ ಶ್ವೇತಾರನ್ನು ಕಂಡು ಕಿರುತೆರೆ ವೀಕ್ಷಕರು ಫಿದಾ ಆಗಿದ್ದಾರೆ. ಆದರೆ, ಮದುವೆ ಬಳಿಕ ಶ್ವೇತಾ ಸಿನಿಮಾವೇ ಮಾಡಿಲ್ಲವೇ? ಇವರ ಫ್ಯಾಮಿಲಿ ಲೈಫ್ ಹೇಗಿದೆ? ಶ್ವೇತಾ ಪತಿ ಯಾರು? ಇಂತಹದ್ದೇ ಒಂದಿಷ್ಟು ಇಂಟ್ರೆಸ್ಟಿಂಗ್ ಸಂಗತಿ ಇಲ್ಲಿದೆ.
ಶ್ವೇತಾ ತನ್ನ ವೃತ್ತಿ ಬದುಕಿನ ಉತ್ತುಂಗದಲ್ಲಿರುವಾಗಲೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಅವರ ಸಾಂಸಾರಿಕ ಜೀವನ ಆರಂಭ ಆಗಿ ಸುಮಾರು 15 ವರ್ಷಗಳೇ ಆಗಿವೆ. ಮದುವೆಗೆ ಮುನ್ನ ಸಿನಿಮಾದಲ್ಲಿ ನಟಿಸುವುದನ್ನು ಬಿಡಬೇಕು ಅನ್ನೋದು ಅವರ ಅತ್ತೆಯ ಒಂದೇ ಒಂದು ಷರತ್ತು ಆಗಿತ್ತು. ಹೀಗಾಗಿ ಅಲ್ಲಿಂದ ಸಿನಿಮಾ ಕಡೆಗೆ ಮುಖ ಮಾಡುವುದಕ್ಕೆ ಹೋಗಿರಲಿಲ್ಲ. ಈಗ ಮತ್ತೆ ಧಾರಾವಾಹಿ ಮೂಲಕ ಕಮ್ಬ್ಯಾಕ್ ಮಾಡಿ, ಜನರ ಮನಸ್ಸು ಗೆದ್ದಿದ್ದಾರೆ.
'ಚೈತ್ರದ ಪ್ರೇಮಾಂಜಲಿ' ನಟಿ ಶ್ವೇತಾ ಕೆಲವು ತಿಂಗಳ ಹಿಂದೆ ರಘುರಾಮ್ ಯೂಟ್ಯೂಬ್ ಚಾನೆಲ್ಗೆ ಒಂದು ಸಂದರ್ಶನ ನೀಡಿದ್ದರು. ಅದೇ ಮೊದಲ ಬಾರಿಗೆ ಕನ್ನಡದಲ್ಲಿ ನೀಡಿದ ಸಂದರ್ಶನಲ್ಲಿ ನಿರ್ದೇಶಕ, ನಿರೂಪಕ ರಘುರಾಮ್ ಅವರೊಂದಿಗೆ ತನ್ನ ಫ್ಯಾಮಿಲಿ ಹಾಗೂ ಸಿನಿಮಾ ಬದುಕಿನ ಬಗ್ಗೆ ಇಂಟ್ರೆಸ್ಟಿಂಗ್ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
ಶ್ವೇತಾ ಮೂಲತ: ಚೆನ್ನೈನವರು. ಹುಟ್ಟಿದ್ದು, ಶಿಕ್ಷಣ ಎಲ್ಲವೂ ಅಲ್ಲಿಯೇ ಮುಗಿಸಿದ್ದಾರೆ. ಶ್ವೇತಾ ತಂದೆ ರಾಜಸ್ಥಾನ ಮೂಲದವರು. ತಾಯಿ ತಂಜಾಪೂರಿನವರು. ಶ್ವೇತಾ 9ನೇ ವಯಸ್ಸಿನಲ್ಲಿರುವಾಗಲೇ ತಂದೆ ಹೃದಯಾಘಾತದಿಂದ ನಿಧನರಾಗಿದ್ದರು. ಹೀಗಾಗಿ ತಾಯಿಯೇ ತಂದೆಯೂ ಆಗಿದ್ದರು. ಅವರ ತಾಯಿ ವೈದ್ಯರಾಗಿದ್ದರೂ, ಡ್ರಾಮಗಳಲ್ಲಿ ನಟಿಸುತ್ತಿದ್ದರು. ಹೀಗಾಗಿ ಶ್ವೇತಾ ಬಾಲ್ಯದಿಂದಲೇ ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು.

ಅಂದ್ಹಾಗೆ, ಕನ್ನಡ ಚಿತ್ರರಂಗಕ್ಕೆ ಶ್ವೇತಾ ಅಂತ ಪರಿಚಯವಾಗಿದ್ದ ಇವರನ್ನು ತಮಿಳುನಾಡಲ್ಲಿ ವಿನೋದಿನಿ ಅಂತ ಗುರುತಿಸುತ್ತಾರೆ. ಆದರೆ, ಇವರ ಹುಟ್ಟಿದ ಹೆಸರು ಲಕ್ಷ್ಮಿ. 1991ರಲ್ಲಿ ತಮಿಳಿನಲ್ಲಿ 'ಆತ ಉನ್ ಕೊಯಿಲಿಲೆ' ಅನ್ನೋ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾದರು. ಇದು ಧನುಷ್ ತಂದೆ ಕಸ್ತೂರಿ ರಾಜ ನಿರ್ದೇಶಿಸಿದ ಮೊದಲ ಸಿನಿಮಾ ಕೂಡ ಹೌದು. ಇಲ್ಲಿಂದ ಹೀರೊಯಿನ್ ಆಗಿ ಸಿನಿ ಜರ್ನಿ ಆರಂಭ ಆಯ್ತು.
ತಮಿಳಿನಲ್ಲಿ ಸಿನಿಮಾಗಳಲ್ಲಿ ಮಿಂಚುತ್ತಿದ್ದಂತೆ ಶ್ವೇತಾಗೆ ಕನ್ನಡ ಸಿನಿಮಾಗೆ ಆಫರ್ ಸಿಕ್ಕಿತ್ತು. ಅದುವೇ ಎಸ್. ನಾರಾಯಣ್ ನಿರ್ದೇಶಿಸಿದ 'ಚೈತ್ರದ ಪ್ರೇಮಾಂಜಲಿ'. ಅಂದು ತನ್ನ ಮೊದಲ ಸಿನಿಮಾಗೆ ಅವಕಾಶ ಸಿಕ್ಕಿದ ಬಗ್ಗೆ ರಘುರಾಮ್ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ರಿವೀಲ್ ಮಾಡಿದ್ದರು.
"ರಘುವೀರ್ ಅವರೇ ನಿರ್ಮಾಪಕರಾಗಿದ್ದರು. ಸಿನಿಮಾ ಮಾಡುವಾಗ ಹಣದ ಸಮಸ್ಯೆ ಇತ್ತು. ನನಗೆ ನೆನಪಿದ್ದ ಹಾಗೇ ಅವರ ಮನೆಯವರಿಗೆ ಸಿನಿಮಾ ಮಾಡುವುದು ಇಷ್ಟವಿರಲಿಲ್ಲ. ಏನೋ ಒಂಥರಾ ಊಟ ಕೊಡುತ್ತಾರೆ. ಎಲ್ಲೋ ಲಾಡ್ಜ್ನಲ್ಲಿ ಉಳಿಸುತ್ತಾರೆ. ಹೀಗೆ ಕಷ್ಟ ಪಟ್ಟು ಸಿನಿಮಾ ಮಾಡಿದ್ದೆವು. ಆದರೆ, ರಘುವೀರ್ ತುಂಬಾ ಒಳ್ಳೆಯ ವ್ಯಕ್ತಿ. ಹಾಗಾಗಿ ಸಿನಿಮಾ ಆಯ್ತು ಅದು." ಎಂದು ಹೇಳಿಕೊಂಡಿದ್ದಾರೆ.
ಕನ್ನಡದಲ್ಲಿ ನಟಿಸಿದ ಬಹುತೇಕ ಸಿನಿಮಾಗಳು ಸೂಪರ್ ಹಿಟ್ ಆಗಿದ್ದವು. ಹೀಗಾಗಿ ಈ ನಟಿಯನ್ನು ಅದೃಷ್ಟದ ನಟಿ ಅಂತ ಕರೆಯುತ್ತಿದ್ದರು. ಆದರೆ, ಶ್ವೇತಾ ವಿವಾಹದ ಬಳಿಕ ಸೈಲೆಂಟ್ ಆದರು. ಶ್ವೇತಾ ಪತಿ ಶ್ರೀಧರ್ ಮೈಸೂರಿನ ಶ್ರೀರಂಗಪಟ್ಟಣದ ಸಮೀಪವಿರುವ ರಾಮನಾಥಪುರದವರು. ಬಿಲ್ಡರ್ ಆಗಿರುವ ಶ್ರೀಧರ್ ಸಕ್ಸಸ್ಫುಲ್ ಉದ್ಯಮಿಯಾಗಿದ್ದಾರೆ. ಈ ಜೋಡಿಗೆ ಇಬ್ಬರು ಮಕ್ಕಳಿದ್ದಾರೆ. ತಮ್ಮ ಕುಟುಂಬದೊಂದಿಗೆ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.
ಈಗ ಮತ್ತೆ ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ಜನಪ್ರಿಯ ಧಾರಾವಾಹಿ 'ಲಕ್ಷ್ಮಿ ನಿವಾಸ' ಮೂಲಕ ಕಮ್ಬ್ಯಾಕ್ ಮಾಡುತ್ತಿದ್ದಾರೆ. ಈ ಧಾರಾವಾಹಿ ಕೂಡ ಕನ್ನಡ ವೀಕ್ಷಕರಿಗೆ ಹಿಡಿದೆ. ಮತ್ತೆ ಬಹಳ ದಿನಗಳ ಬಳಿಕ ಶ್ವೇತಾ ಲಕ್ಕಿ ಚಾರ್ಮ್ ಮುಂದುವರೆದಿದೆ.


Click it and Unblock the Notifications











