"ಗಲ್ಲು ಶಿಕ್ಷೆ ಕೊಟ್ಟ ಖೈದಿಗಳಿಗೂ ಕೊನೆ ಆಸೆ ಕೇಳ್ತಾರೆ, ನನ್ನ ಕೇಳೋರಿಲ್ಲ": ಬಾಲಣ್ಣನ ಕೊನೆ ದಿನಗಳು ಹೇಗಿತ್ತು?
ಕನ್ನಡ ಚಿತ್ರರಂಗ ಕಂಡ ಅತ್ಯಂತ ಪ್ರತಿಭಾವಂತ ನಟ ಬಾಲಕೃಷ್ಣ. ಸುಮಾರು 560ಕ್ಕೂ ಅಧಿಕ ಸಿನಿಮಾಗಳಲ್ಲಿ ಬೇರೆ ಬೇರೆ ಪಾತ್ರಗಳಲ್ಲಿ ನಟಿಸಿದ್ದ ಕಲಾವಿದ. ಕನ್ನಡ ಚಿತ್ರರಂಗಕ್ಕಾಗಿ ಒಂದು ಸ್ಟುಡಿಯೋ ಬೇಕು ಅಂತ ತನ್ನ ಜೀವಮಾನದಲ್ಲಿ ದುಡಿದ ಹಣವನ್ನೆಲ್ಲ ಸುರಿದು ಅಭಿಮಾನ್ ಸ್ಟುಡಿಯೋ ಕಟ್ಟಿದ ಸ್ವಾಭಿಮಾನಿ.
ಚಿತ್ರರಂಗ ಹಾಗೂ ಅಭಿಮಾನಿಗಳು ಪ್ರೀತಿಯಿಂದ ಬಾಲಣ್ಣ ಅಂತ ಕರೆಯುತ್ತಿದ್ದರು. ಆದರೆ, ಅವರ ಪೂರ್ಣ ಹೆಸರು ಟಿ. ಎನ್. ಬಾಲಕೃಷ್ಣ. 1911ನೇ ಇಸವಿಯಲ್ಲಿ ಅರಸಿಕೆರೆಯಲ್ಲಿ ಇವರ ಜನನ. ಅಸಲಿಗೆ ಇವರು ಹುಟ್ಟಿದ ದಿನಾಂಕ ಯಾರಿಗೂ ಗೊತ್ತಿಲ್ಲ. ಅವರಿಗೂ ಗೊತ್ತಿರಲಿಲ್ಲ.

ಬಾಲಕೃಷ್ಣ ಚಿಕ್ಕ ವಯಸ್ಸಿನಿಂದಲೇ ಕಿವಿಯ ಸಮಸ್ಯೆಯಿತ್ತು. ಅವರಿಗೆ ಕಿವಿ ಸರಿಯಾಗಿ ಕೇಳಿಸುತ್ತಿರಲಿಲ್ಲ. ಹೀಗಾಗಿ ಶಾಲೆಯಲ್ಲಿ ಶಿಕ್ಷಣದ ಬಗ್ಗೆ ಆಸಕ್ತಿಯನ್ನು ಕಳೆದುಕೊಂಡರು. ನಾಟಕದ ಕಡೆಗೆ ಹೆಚ್ಚು ಆಸಕ್ತಿಯನ್ನು ಬೆಳೆಸಿಕೊಂಡರು. ಈ ಆಸಕ್ತಿಯೇ ಬಾಲಕೃಷ್ಣ ಅವರನ್ನು ಕನ್ನಡ ಚಿತ್ರರಂಗದ ದಿಗ್ಗಜನನ್ನಾಗಿ ಮಾಡಿತು. ಬಾಲಕೃಷ್ಣ ಅವರ ಜನಪ್ರಿಯತೆ ಸರಿಸಾಟಿಯಿರಲಿಲ್ಲ. ಹೀಗಿದ್ದರೂ, ಅವರ ಅಂತ್ಯ ಮಾತ್ರ ದುರಂತ.
ದಿವಂಗತ ಬಾಲಕೃಷ್ಣ ಬಾಲ್ಯ ಕೂಡ ಆರಾಮದಾಯಕವಾಗಿರಲಿಲ್ಲ. ಇವರ ಪೋಷಕರು ಕೂಲಿ ಕೆಲಸ ಮಾಡುತ್ತಿರುತ್ತಾರೆ. ಜೀವನ ತಕ್ಕ ಮಟ್ಟಿಗೆ ನಡೆಯುತ್ತೆ. ಎಲ್ಲಾ ಸರಿಯಿದೆ ಎನ್ನುವಾಗಳೇ ಅವರ ತಂದೆಗೆ ದೊಡ್ಡ ಕಾಯಿಲೆ ಬರುತ್ತೆ. ಆಗ ಅರಸಿಕೆಯ ಆಸ್ಪತ್ರೆಯಲ್ಲಿ ತೋರಿಸಿದಾಗ, ಜೀವ ಉಳಿಯಬೇಕು ಅಂದರೆ, ಬೆಂಗಳೂರಿನ ಆಸ್ಪತ್ರೆಗೆ ತೋರಿಸಿ ಅಂತ ವೈದ್ಯರು ಹೇಳುತ್ತಾರೆ. ಆದರೆ ಚಿಕಿತ್ಸೆಗೆ 4 ರೂಪಾಯಿ ಬೇಕಿರುತ್ತೆ. ಆಗ ಮಂಡಿ ವ್ಯಾಪಾರಿಯ ಪತ್ನಿಯೊಬ್ಬರಿಗೆ 8 ರೂಪಾಯಿಗೆ ಬಾಲಣ್ಣನನ್ನು ಅವರ ತಾಯಿ ಮಾರುತ್ತಾರೆ ಎಂದು ಹಿರಿಯ ಪತ್ರಕರ್ತ ಎನ್ ಎಸ್ ಶ್ರೀಧರ ಮೂರ್ತಿ ಟೋಟಲ್ ಕನ್ನಡದಲ್ಲಿ ವಿವರಿಸಿದ್ದಾರೆ.
ಬಾಲಕೃಷ್ಣ ಜೀವನದಲ್ಲಿ ಸಾಕಷ್ಟು ಕಷ್ಟ ಸುಖಗಳನ್ನು ಕಂಡಿದ್ದರು. ಪೋಷಕ ಕಲಾವಿದನಾಗಿ, ಖಳನಾಯಕನಾಗಿ ಮಿಂಚಿದ್ದರೂ, ಅವರಿಗೆ ಕಿವಿಯ ಸಮಸ್ಯೆ ಕಾಡುತ್ತಿತ್ತು. ಸರಿಯಾಗಿ ಕೇಳಿಸುತ್ತಿರಲಿಲ್ಲ. ಇಂತಹ ಸಂದರ್ಭದಲ್ಲಿಯೂ ಎದುರಿಗಿದ್ದ ನಟರ ತುಟಿಯ ಚಲನೆಗಳನ್ನು ನೋಡಿಯೇ ಡೈಲಾಗ್ ಹೇಳುತ್ತಿದ್ದ ಪ್ರತಿಭೆ ಇವರದ್ದು.

"ಕೊನೆ ಕೊನೆಯ ದಿನಗಳಲ್ಲಿ ಅವರ ಕಿವಿ ಕೇಳಿಸುತ್ತಲೇ ಇರಲಿಲ್ಲ. ಇದು ಅವರನ್ನು ತುಂಬಾ ಕಾಡಿಸುತ್ತಿತ್ತು. ಎದುರುಗಡೆ ಹೇಳಿದ್ದು ಏನೂ ಕೇಳಿಸುತ್ತಲೇ ಇರಲಿಲ್ಲ. ಹೀಗಿದ್ದರೂ ಎದುರುಗಡೆ ಇದ್ದ ತುಟಿ ಚಲನೆಯನ್ನು ನೋಡಿಕೊಂಡು ಆಕ್ಟಿಂಗ್ ಮಾಡುತ್ತಿದ್ದರು." ಎಂದು ಅವರನ್ನು ಹತ್ತಿರದಿಂದ ಬಲ್ಲ ಹಿರಿಯ ಪತ್ರಕರ್ತ ಎನ್ ಎಸ್ ಶ್ರೀಧರ ಮೂರ್ತಿ ಅವರ ಬಗ್ಗೆ ಮಾಹಿತಿ ನೀಡುವಾಗ ಹೇಳಿಕೊಂಡಿದ್ದಾರೆ.
ಬಾಲಕೃಷ್ಣ ಆರಂಭದಲ್ಲಿ ನಾಟಕಗಳಲ್ಲಿ ನಟಿಸಿದ್ದರು. ಬಳಿಕ ಸಿನಿಮಾಗಳಲ್ಲಿ ಹೆಚ್ಚು ಸಕ್ರಿಯರಾದರು. ಮೊದಲ ಮೊದಲು ಅವರಿಗೆ ಚಿಕ್ಕ ಪುಟ್ಟ ಪಾತ್ರಗಳು ಸಿಗುತ್ತಿದ್ದವು. ಆನಂತ್ರ ಗುರುತು ಹಿಡಿಯುವಂತಹ ಪಾತ್ರಗಳು ಸಿಗುವುದಕ್ಕೆ ಶುರುವಾಗಿತ್ತು. ವಿಜಯನಗರದ ವೀರಪುತ್ರದ ಸಿನಿಮಾದ ಶೂಟಿಂಗ್ ಚೆನ್ನೈನ ಮರೀನಾ ಬೀಚ್ನಲ್ಲಿ ನಡೆಯುತ್ತಿತ್ತು. ರಾತ್ರಿ ಶೂಟಿಂಗ್ ಇದ್ದಿದ್ದರಿಂದ ಇವರ ಸೀನ್ ತಡವಾಗಿತ್ತು. ಹಾಗಾಗಿ ಬೀಚ್ನಲ್ಲಿ ಮಲಗಿದ್ದರು. ಆಗ ಚಿತ್ರತಂಡ ಇವರು ಮನೆಗೆ ಹೋಗಿದ್ದಾರೆಂದು ಪ್ಯಾಕಪ್ ಮಾಡಿತ್ತು. ಅಗ ಅದೇ ಝರಿ ಝರಿ ಲಂಗ, ಕಿರೀಟ ಹಾಕೊಂಡು ದಾರಿಯಲ್ಲಿ ಬಂದರೆ, ಎಲ್ಲರೂ ವಿಚಿತ್ರವಾಗಿ ನೋಡಿದ್ದರು. ಆಗ ಘಟನೆಯನ್ನು ಎನ್ ಎಸ್ ಶ್ರೀಧರ ಮೂರ್ತಿ ಅವರೊಂದಿಗೆ ಬಾಲಣ್ಣ ಹಂಚಿಕೊಂಡಿದ್ದನ್ನು ನೆನಪಿಸಿಕೊಂಡಿದ್ದಾರೆ.
ಬಾಲಣ್ಣನಿಗಿದ್ದ ಹಾಸ್ಯ ಪ್ರಜ್ಞೆಯನ್ನು ಇದೇ ಘಟನೆಯನ್ನು ಉದಾಹರಣೆಯಾಗಿಟ್ಟುಕೊಂಡು ಒಂದು ಸಂಗತಿಯನ್ನು ವಿವರಿಸಿದ್ದಾರೆ. "ಕಲಾವಿದ ನಿದ್ದೆ ಮಾಡಿದ್ದರೂ ಕಾಲು ಅಲ್ಲಾಡಿಸುತ್ತಿರಬೇಕು. ಇಲ್ಲ ಅಂದರೆ, ಸತ್ತೋಗಿಬಿಟ್ಟಿದ್ದಾರೆ ಅಂದುಕೊಳ್ಳುತ್ತಾರೆ ಜನ ಅಂತ ಹೇಳುತ್ತಿದ್ದರು." ಎಂದು ಬಾಲಣ್ಣ ಹಾಸ್ಯ ಪ್ರಜ್ಞೆಯನ್ನು ನೆನಪಿಸಿಕೊಂಡಿದ್ದಾರೆ.
ಬಾಲಣ್ಣ ಕನ್ನಡ ಚಿತ್ರರಂಗಕ್ಕೊಂದು ಸ್ಟುಡಿಯೋ ಕಟ್ಟಬೇಕು ಅಂತ ಆಸೆ ಪಟ್ಟಿದ್ದರು. ಅದಕ್ಕಾಗಿ ಸಿಕ್ಕಾಪಟ್ಟೆ ಕಷ್ಟ ಪಟ್ಟಿದ್ದರು. ಬೆಂಗಳೂರಿನ ಉತ್ತರಹಳ್ಳಿಯಲ್ಲಿ ಸ್ಟುಡಿಯೋವನ್ನು ಕಟ್ಟಿದ್ದರು. ಆದರೆ, ಅಲ್ಲಿ ಹೆಚ್ಚು ಶೂಟಿಂಗ್ ನಡೆಯಲೇ ಇಲ್ಲ. ಇದೊಂದು ಕೊರಗು ಅವರನ್ನು ಕಾಡುತ್ತಲೇ ಇತ್ತು. ಮತ್ತೊಂದು ಕಡೆ ಅವರಿಗೆ ಆರೋಗ್ಯ ಕೈ ಕೊಟ್ಟಿತ್ತು. ಶ್ವಾಸಕೋಶದ ಕ್ಯಾನ್ಸರ್ನಿಂದ ಬಳಲುತ್ತಿದ್ದರು. ಆ ವೇಳೆ ಹಿರಿಯ ಪತ್ರಕರ್ತ ಎನ್ ಎಸ್ ಶ್ರೀಧರ್ ಮೂರ್ತಿ ಅವರು ಅವರನ್ನು ಭೇಟಿ ಮಾಡಲು ಹೋಗಿದ್ದರು. ಆಗ ಬಾಲಣ್ಣ ಹೇಳಿದ ಮಾತನ್ನು ನೆನಪಿಸಿಕೊಂಡಿದ್ದಾರೆ.
"ಕೊನೆಯ ದಿನಗಳಲ್ಲಿ ನಾನು ಶಿವಶಂಕರ್ ಹಾಗೂ ಮೂರು ನಾಲ್ಕು ಜನ ಬಾಲಕೃಷ್ಣ ಅವರನ್ನು ನೋಡುವುದಕ್ಕೆ ಹೋಗಿದ್ವಿ. ಆಗ ಅವರಿಗೆ ಕ್ಯಾನ್ಸರ್ ಆಗಿತ್ತು. ಬಹಳ ಕಷ್ಟ ಪಡೋರು. ಅವರಿಗೆ ತಿನ್ನುವುದಕ್ಕೂ ಕುಡಿಯುವುದಕ್ಕೂ ಬಹಳ ಕಷ್ಟವಿತ್ತು. ಆಗ ಬಾಲಕೃಷ್ಣ ಬಹಳ ಕಷ್ಟ ಪಟ್ಟು ಶಿವಶಂಕರ್ ಅವರ ಬಳಿ ಒಂದು ಮಾತು ಹೇಳಿದ್ರು. ಈ ಮರಣ ದಂಡನೆ ವಿಧಿಸಿದ ಖೈದಿಗಳಿಗೆ ಕೂಡ ಕೊನೆಯ ಆಸೆ ಅಂತ ಕೇಳುತ್ತಾರೆ. ನಾನು ಸಾಯುವುದಕ್ಕೆ ಹತ್ತಿರ ಬಂದಿದ್ದೀನಿ. ನನ್ನ ಕೊನೆಯ ಆಸೆ ಯಾರು ಅಂತ ಕೇಳುವುದಕ್ಕೆ ಯಾರೂ ಗತಿಯಿಲ್ಲ." ಎಂದು ಹೇಳಿದ್ದನ್ನು ಹಿರಿಯ ಪತ್ರಕರ್ತ ಲೇಖಕ ಎನ್ ಎಸ್ ಶ್ರೀಧರ ಮೂರ್ತಿ ಹೇಳಿದ್ದಾರೆ.
ಈ ಮಾತನ್ನು ಬಾಲಣ್ಣ ತನಗಾಗಿ ಹೇಳಿಕೊಂಡಿರಲಿಲ್ಲ. ಅವರ ಕಾಲದಲ್ಲಿ ಕನ್ನಡ ಚಿತ್ರರಂಗ ಇದ್ದಂತೆ ಇರಬೇಕು ಅಂತ ಬಯಸಿದ್ದರು. ಆದರೆ, ಅಷ್ಟೊತ್ತಿಗಾಗಲೇ ಕನ್ನಡ ಚಿತ್ರರಂಗ ಸಾಕಷ್ಟು ಬದಲಾಗಿ ಹೋಗಿತ್ತು.


Click it and Unblock the Notifications











