'ಶೃಂಗಾರ ಕಾವ್ಯ' ಜೋಡಿ ರಘುವೀರ್-ಸಿಂಧು ಪುತ್ರಿ ಎಲ್ಲಿದ್ದಾರೆ? ಈಗ ಹೇಗಿದ್ದಾರೆ ಗೊತ್ತೆ?
ಸ್ಟಾರ್ ನಟ ದಿವಂಗತ ರಘುವೀರ್ ಹೆಸರು ಕನ್ನಡ ಚಿತ್ರರಂಗಕ್ಕೆ ಚಿರಪರಿಚಿತ. ರಘುವೀರ್ ಸೋಲೊ ನಾಯಕನಾಗಿ ನಟಿಸಿದ ಮೊದಲನೇ ಸಿನಿಮಾ ಸಿಲ್ವರ್ ಜುಬ್ಲಿ ಸೆಲೆಬ್ರೆಷನ್ ಮಾಡಿತ್ತು. 'ಚೈತ್ರದ ಪ್ರೇಮಾಂಜಲಿ' ಸಿನಿಮಾ ಕನ್ನಡ ಚಿತ್ರರಂಗದಲ್ಲಿ ದಾಖಲೆಯನ್ನು ಬರೆದಿತ್ತು. ಆ ಬಳಿಕ ಬಂದ 'ಶೃಂಗಾರ ಕಾವ್ಯ' ಸಿನಿಮಾ ಕೂಡ ಅದೇ ಮಟ್ಟಿಗೆ ಸದ್ದು ಮಾಡಿತ್ತು.
'ಶೃಂಗಾರ ಕಾವ್ಯ' ಮಾಡುವ ವೇಳೆ ಸಿನಿಮಾದ ನಟಿ ಸಿಂಧು ಜೊತೆ ಪ್ರೇಮಾಂಕುರವಾಗಿತ್ತು. ಪೋಷಕರ ವಿರೋಧದ ಕಟ್ಟಿಕೊಂಡು ರಘುವೀರ್ ನಟಿ ಸಿಂಧುರನ್ನು ವಿವಾಹವಾಗಿದ್ದರು. ಆದರೆ, ಮನೆ ಬಿಟ್ಟು ಬಂದು ಹೊಸ ಜೀವನ ಕಟ್ಟಿಕೊಳ್ಳುವುದಕ್ಕೆ ಆರಂಭಿಸಿದ್ದರು. ಈ ಜೋಡಿಗೆ ಮುದ್ದಾದ ಹೆಣ್ಣು ಮಗು ಕೂಡ ಜನಿಸಿತ್ತು. ಆ ಮಗುವಿನ ಹೆಸರು ಶ್ರೇಯಾ.

ರಘುವೀರ್ ಹಾಗೂ ಸಿಂಧು ಪುತ್ರಿ ಶ್ರೇಯಾ ಹುಟ್ಟಿದ್ದು ಬೆಂಗಳೂರಿನಲ್ಲೇ. ಇಲ್ಲಿಯ ಗುಡ್ ಶಫರ್ಟ್ ಶಾಲೆಯಲ್ಲಿ ಒಂದು ವರ್ಷ ಶಿಕ್ಷಣ ಕೂಡ ಮಾಡಿದ್ದರು. ವಿವಾಹವಾದ ಕೆಲವು ವರ್ಷಗಳ ಬಳಿಕ ನಟಿ ಸಿಂಧು ಚೆನ್ನೈನಲ್ಲಿ ನೆಲೆಸುವುದಕ್ಕೆ ಆರಂಭಿಸಿದ್ದರು. ಆಗ ಶ್ರೇಯಾ ಕೂಡ ಚೆನ್ನೈಗೆ ಶಿಫ್ಟ್ ಆಗಿದ್ದರು. ತಾಯಿಯ ಆಶ್ರಯದಲ್ಲಿ ಬೆಳೆದಿದ್ದೇ ಹೆಚ್ಚು.
2005ರಲ್ಲಿ ತಾಯಿ ಸಿಂಧು ಸುನಾಮಿ ಸಂತ್ರಸ್ತರಿಗೆ ದೇಣಿ ಸಂಗ್ರಹಿಸಲು ಮುಂದಾಗಿದ್ದರು. ಈ ವೇಳೆ ಅವರ ಶ್ವಾಸ ಕೋಶಕ್ಕೆ ಧೂಳು ತಗುಲಿ ಕೊನೆಯುಸಿರೆಳೆದಿದ್ದರು. ಅಲ್ಲಿಂದ ಶ್ರೇಯಾ ಬೆಳೆದಿದ್ದು ಅವರ ಅಜ್ಜ ಅಜ್ಜಿ ಆಶ್ರಯದಲ್ಲಿಯೇ. ತಮಿಳು ಚಿತ್ರರಂಗದ ಜನಪ್ರಿಯ ನಟ ಸಂಜೀವ್ ಇವರ ಸಂಬಂಧಿಯಾಗಿದ್ದು, ಶ್ರೇಯಾಗೆ ಬೆಂಬಲವಾಗಿ ನಿಂತಿದ್ದರು.
ಎರಡು ವರ್ಷಗಳ ಹಿಂದೆ ರಘುವೀರ್ ಹಾಗೂ ನಟಿ ಸಿಂಧು ಪುತ್ರಿ ಶ್ರೇಯಾ ರಘುರಾಮ್ ಅವರ ಯೂಟ್ಯೂಬ್ ಚಾನೆಲ್ಗೆ ಸಂದರ್ಶನ ನೀಡಿದ್ದರು. ಇದರಲ್ಲಿ ತಂದೆ ರಘುವೀರ್ ಹಾಗೂ ತಾಯಿ ಸಿಂಧು, ಅವರೊಂದಿಗಿನ ನೆನಪು, ಶಿಕ್ಷಣ, ಮದುವೆ, ಪತಿಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ರಘುರಾಮ್ ಜೊತೆ ಹಂಚಿಕೊಂಡ ಮಾಹಿತಿ ಪ್ರಕಾರ, ಶ್ರೇಯಾ ಚೆನ್ನೈನ ಗುಡ್ ಶಫರ್ಡ್ನಲ್ಲಿ ಆರಂಭಿಕ ವಿದ್ಯಾಭ್ಯಾಸ ಮುಗಿಸಿದ್ದರು. ಬಳಿಕ ವಿಜ್ಯೂವಲ್ ಮೀಡಿಯಾದಲ್ಲಿ ಎಂಎಸ್ಸಿ ಪಡೆದು ಎ ಆರ್ ರೆಹಮಾನ್ ಮ್ಯೂಸಿಕ್ ಕಾಲೇಜ್ನಲ್ಲಿ ಕೆಲಸ ಮಾಡುತ್ತಿದ್ದರು.

ಶ್ರೇಯಾ ತಮ್ಮ ಬಹುಕಾಲದ ಗೆಳೆಯ ಹಾಗೂ ಫ್ಯಾಮಿಲಿ ಫ್ರೆಂಡ್ ಅಶ್ವಿನ್ ಎಂಬುವವರನ್ನು ವಿವಾಹವಾಗಿದ್ದಾರೆ. 21ನೇ ವಯಸ್ಸಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ವಿವಾಹದ ಬಳಿಕ ಎ ಆರ್ ರೆಹಮಾನ್ ಮ್ಯೂಸಿಕ್ ಕಾಲೇಜ್ ಬಿಟ್ಟು ಸ್ವಂತ ಫುಡ್ ಬ್ಯುಸಿನೆಸ್ ಮಾಡುತ್ತಿದ್ದಾರೆ. ಅಂದ್ಹಾಘ ಅವರ ಪತಿ ಅಶ್ವಿನ್ ಕೂಡ ಸಿನಿಮಾರಂಗದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಅಟ್ಲಿ, ಸೌಂದರ್ಯ ರಜನಿಕಾಂತ್ ನಿರ್ದೇಶನದ ಸಿನಿಮಾಗಳಿಗೆ ಇವರು ಸಹಾಯಕರಾಗಿ ಕೆಲಸ ಮಾಡುತ್ತಾರೆಂದು ಹೇಳಿಕೊಂಡಿದ್ದರು. ಶ್ರೇಯಾ ಹಾಗೂ ಅಶ್ವಿನ್ ದಂಪತಿಗೆ ಐಯಾನ್ ಎಂಬ ಗಂಡು ಮಗನಿದ್ದಾನೆ.
ರಾಘುರಾಮ್ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ತಮ್ಮ ಬಾಲ್ಯದ ನೆನಪುಗಳನ್ನು ಹಂಚಿಕೊಂಡಿದ್ದಾರೆ. "ನಾನು 10 ವರ್ಷವಿದ್ದಾಗ ನಾನು ನನ್ನ ಅಮ್ಮನನ್ನು ಕಳೆದುಕೊಂಡೆ. ಆ ಮೇಲೆ ನನ್ನ ಅಜ್ಜ ಅಜ್ಜಿಯೊಂದಿಗೆ ನನ್ನ ಬಾಲ್ಯ ಕಳೆದು ಹೋಯ್ತು. ನಮ್ಮ ತಂದೆಯೊಂದಿಗೆ ನಾನು ಸಂಪರ್ಕದಲ್ಲಿ ಇದ್ದೆ. ಆಗಾಗ ರಜೆಯ ದಿನಗಳಲ್ಲಿ ಹೋಗಿ ಅವರನ್ನು ಭೇಟಿ ಮಾಡುತ್ತಿದ್ದೆ. 2014ನಲ್ಲಿ ಅವರೂ ತೀರಿ ಹೋದರು." ಎಂದು ಹೇಳಿಕೊಂಡಿದ್ದರು.
ಇದೇ ಸಂದರ್ಶನದಲ್ಲಿ ಅವರ ತಾಯಿಯ ಸಾವಿನ ಬಗ್ಗೆನೂ ಮಾಹಿತಿ ನೀಡಿದ್ದರು. "2004ರಲ್ಲಿ ಸುನಾಮಿ ಬಂದಾಗ ಕಲಾವಿದರೆಲ್ಲ ಸಂತ್ರಸ್ತರ ನೆರವಿಗೆ ಧಾವಿಸಿದ್ದರು. ನಮ್ಮ ಅಮ್ಮನೇ ಅದರ ಮುಂದಾಳತ್ವ ವಹಿಸಿದ್ದರು. ಅಮ್ಮನಿಗೆ ಉಸಿರಾಟದ ಸಮಸ್ಯೆಯಿತ್ತು. ಆದರೂ ಅದನ್ನು ಲೆಕ್ಕಿಸದೇ ಸುನಾಮಿ ಸಂತ್ರಸ್ತರಿಗೆ ನೆರವು ನೀಡುವುದಕ್ಕೆ ಮುಂದಾದ್ರು. ಬಸ್ ಹತ್ತಿ ಇಳಿದರು. ಅಪಾರ್ಟ್ಮೆಂಟ್ಗಳನ್ನು ಸುತ್ತಿದ್ರು. ಇದು ಅವರ ಶ್ವಾಸಕೋಶದ ಮೇಲೆ ಪರಿಣಾಮ ಬೀರಿತ್ತು. ದಿಢೀರನೇ ಕೋಮಗೆ ಹೋಗ್ಬಿಟ್ರು" ಎಂದು ಹೇಳಿದ್ದಾರೆ.
ಇದೇ ವೇಳೆ ರಘುವೀರ್ ಹಾಗೂ ನಟಿ ಸಿಂಧು ತಮಗೆ ಹುಟ್ಟಿದ ಮಗುವಿಗೆ ಹೆಸರು ಹೇಗಿ ಇಟ್ಟರು ಅನ್ನೋದನ್ನು ಹೇಳಿಕೊಂಡಿದ್ದರು. "ಶೃಂಗಾರ ಕಾವ್ಯ ಸಿನಿಮಾ ಮಾಡಿದ ಬಳಿಕ ಅಮ್ಮ ಪ್ರೆಗ್ನೆಂಟ್ ಆಗಿದ್ದರು. ಆಗ ಮಗ ಹುಟ್ಟಿದರೆ ಶೃಂಗಾರ್ ಅಂತ ಹೆಸರು ಇಡೋದು. ಮಗಳು ಹುಟ್ಟಿದರೆ ಕಾವ್ಯ ಅಂತ ಹೆಸರು ಇಡುವುದೆಂದು ನಿರ್ಧಾರ ಆಗಿತ್ತು. ಆ ಮೇಲೆ ಅಜ್ಜಿ ಬೇಡ ಅಂದರು. ಯಾಕಂದ್ರೆ ಸಿನಿಮಾ ಕೊನೆಯಲ್ಲಿ ಅಮ್ಮ ಪಾತ್ರ ಸಾಯುತ್ತದೆ. ಅದಕ್ಕೆ ಶೃಂಗಾರದಿಂದ 'ಶ್ರ' ತೆಗೆದುಕೊಂಡು ಹಾಗೂ 'ಕಾವ್ಯ' ಯಾ ತೆಗೆದುಕೊಂಡು ಶ್ರೇಯಾ ಎಂದು ಹೆಸರು ಇಡಲಾಗಿದೆ." ಎಂದು ಹೇಳಿಕೊಂಡಿದ್ದಾರೆ.
ಸದ್ಯ ಶ್ರೇಯಾ ಚೆನ್ನೈನಲ್ಲಿ ನೆಲೆಸಿದ್ದಾರೆ. ಸಿನಿಮಾರಂಗ ಇಬ್ಬರು ದಿಗ್ಗಜರ ಪುತ್ರಿಯಾಗಿದ್ದರೂ ಅವರು ಚಿತ್ರರಂಗಕ್ಕೆ ಬರುವ ಮನಸ್ಸು ಮಾಡಲಿಲ್ಲ. ಆದರೂ ಸಿನಿಮಾ ನಂಟನ್ನು ಬಿಟ್ಟಿಲ್ಲ. ಪತಿ ಅಶ್ವಿನ್ ಕೂಡ ಸಿನಿಮಾರಂಗದಲ್ಲೇ ಇರುವುದಿಂದ ಆ ನಂಟು ಇದ್ದೇ. ಆದರೆ, ಅಪ್ಪ- ಅಮ್ಮಇಬ್ಬರ ದುರಂತ ಬದುಕಿನ ನೆನಪು ಅವರನ್ನು ಇಂದಿಗೂ ಕಾಡುತ್ತಿರಬಹುದು.


Click it and Unblock the Notifications











