ಟೈಗರ್ ಪ್ರಭಾಕರ್ ಅವರಿಂದ ಜಯಮಾಲಾ ದೂರ ಆಗಿದ್ದೇಕೆ? ಅಂದು ಟೈಗರ್ ಕೊಟ್ಟಿದ್ದ ಕಾರಣವೇನು?
ಕನ್ನಡ ಚಿತ್ರರಂಗ ಕಂಡ ಅದ್ಭುತ ನಟರಲ್ಲಿ ಟೈಗರ್ ಪ್ರಭಾಕರ್ ಕೂಡ ಒಬ್ಬರು. ಕನ್ನಡ ಅಷ್ಟೇ ಅಲ್ಲದೆ ತೆಲುಗು, ತಮಿಳು ಭಾಷೆಯ ಸಿನಿಮಾಗಳಲ್ಲಿ ನಟಿಸಿ ಗೆದ್ದಿದ್ದ ಮಾಸ್ ಹೀರೋ ಇವರು. ಸುಮಾರು 600ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದ ಟೈಗರ್ ಪ್ರಭಾಕರ್ ಬದುಕಿನ ಕೊನೆಯ ದಿನಗಳು ದುರಂತಮಯವಾಗಿದ್ದವು.
ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ಗೆದ್ದಿದ್ದ ಟೈಗರ್ ಪ್ರಭಾಕರ್ಗೆ ಸೋಲಿನ ರುಚಿ ಸಿಗುವುದಕ್ಕೆ ಶುರುವಾಗಿತ್ತು. ಬಿಡುವಿಲ್ಲದೆ ದುಡಿಯುತ್ತಿದ್ದ ನಟ ದಿಢೀರನೇ ಖಾಲಿ ಕೂರುವ ಸ್ಥಿತಿ ಬಂದಿತ್ತು. ಇನ್ನೇನು ಟೈಗರ್ ಪ್ರಭಾಕರ್ ಜಮಾನ ಮುಗೀತು ಅನ್ನುವಾಗ ಮತ್ತೆ ಗೆಲುವಿನ ರುಚಿ ತೋರಿಸಿದ್ದು ನಟಿ ಜಯಮಾಲಾ. ಆಗ ಟೈಗರ್ ಪ್ರಭಾಕರ್ ನಟಿ ಜಲಮಾಲಾ ಅವರನ್ನು ಮದುವೆ ಆಗಿದ್ದರು.

ಟೈಗರ್ ಪ್ರಭಾಕರ್ ಹಾಗೂ ಜಯಮಾಲಾ ಇಬ್ಬರೂ ಪ್ರೀತಿಸಿ ಮದುವೆ ಆಗಿದ್ದರು. ಸೋಲಿನಿಂದ ಕಂಗೆಟ್ಟಿದ್ದ ಪ್ರಭಾಕರ್ಗೆ ಮತ್ತೆ ಗೆಲುವಿನ ರುಚಿ ತೋರಿಸಿದ ಜಯಮಾಲಾ ಅವರಿಂದ ಯಾಕೆ ದೂರ ಆದರು? ಇಬ್ಬರ ನಡುವಿನ ಬಾಂಧವ್ಯ ಹದಗೆಡುವುದಕ್ಕೆ ಏನು ಕಾರಣ? ಅನ್ನೋದನ್ನು ಹಿರಿಯ ಪತ್ರಕರ್ತ ಎನ್ ಎಸ್ ಶ್ರೀಧರಮೂರ್ತಿ ಟೋಟಲ್ ಕನ್ನಡ ಯೂಟ್ಯೂಬ್ ಚಾನೆಲ್ನಲ್ಲಿ ವಿವರಿಸಿದ್ದಾರೆ.
ಪ್ರಭಾಕರ್ ವೃತ್ತಿ ಜೀವನ ಬಹಳ ಮೇಲೆ ಮೇಲೆ ಹೋಗುತ್ತಿತ್ತು. ವಿಶ್ವ ವಿಜೇತ ಮಾಡಿದ್ದ ಸಿನಿಮಾ 'ಕಿಲಾಡಿ ತಾತ' ಅನ್ನೋ ಸಿನಿಮಾ ಸೂಪರ್ ಹಿಟ್ ಆಗಿತ್ತು. ಅಲ್ಲಿಂದ ಪ್ರಭಾಕರ್ ಸಿಕ್ಕ ಸಿಕ್ಕ ಸಿನಿಮಾಗಳನ್ನು ಒಪ್ಪಿಕೊಳ್ಳುವುದಕ್ಕೆ ಶುರು ಮಾಡಿದ್ದರು. ಈ ವೇಳೆ 'ಪುಟ್ಟ ಹೆಂಡ್ತಿ' ಅನ್ನೋ ಸಿನಿಮಾವನ್ನು ಮಾಡಬಾರದು ಅಂತ ಪ್ರಭಾಕರ್ ನೆನೆದು ಬಹಳಷ್ಟು ಬಾರಿ ಬೇಸರ ಮಾಡಿಕೊಂಡಿದ್ದನ್ನು ಇಲ್ಲಿ ಪತ್ರಕರ್ತ ಎನ್ ಎಸ್ ಶ್ರೀಧರಮೂರ್ತಿ ನೆನಪಿಸಿಕೊಂಡಿದ್ದಾರೆ.
"1969ರಿಂದ 1992ರವರೆಗೂ ಒಂದು ವರ್ಷಕ್ಕೆ 10 ರಿಂದ 15 ಸಿನಿಮಾ ಮಾಡುತ್ತಿದ್ದ ಪ್ರಭಾಕರ್, 1992ರಲ್ಲಿ ಅವರ ಕೈಯಲ್ಲಿ ಇದ್ದಿದ್ದು ಒಂದೇ ಸಿನಿಮಾ ಸಮರ. ಅದೂ ಕೂಡ ಸೂಪರ್ ಫ್ಲಾಪ್ ಆಯ್ತು. ಆಗ ಪ್ರಭಾಕರ್ ವೃತ್ತಿ ಜೀವನದಲ್ಲಿ ದೊಡ್ಡ ಪ್ರಶ್ನಾರ್ಥಕ ಚಿನ್ಹೆ ಬಿತ್ತು. ಆ ಸೋಲನ್ನು ಅವರಿಗೆ ಒಪ್ಪಿಕೊಳ್ಳಲು ಆಗಲಿಲ್ಲ." ಎಂದು ಟೋಟಲ್ ಕನ್ನಡ ಯೂಟ್ಯೂಬ್ ಚಾನೆಲ್ನಲ್ಲಿ ಎನ್ ಎಸ್ ಶ್ರೀಧರಮೂರ್ತಿ ಹೇಳಿದ್ದಾರೆ.

ಈ ಸಮಯದಲ್ಲಿ ಪ್ರಭಾಕರ್ ಹತಾಶ ಸ್ಥಿತಿಯಲ್ಲಿ ಇದ್ದರು. ಆಗ ಇವರು ಜಯಮಾಲಾ ಅವರನ್ನು ಮದುವೆ ಆಗಿದ್ದರು. ಆಗ ಜಯಮಾಲಾಗೆ ಹೀಗೆ ಬಿಟ್ಟರೆ ಪ್ರಭಾಕರ್ ಕುಸಿದು ಹೋಗುತ್ತಾರೆ ಅಂತ ಅನಿಸಿತ್ತು. ಏನಾದರೂ ಮಾಡಿ ಇವರನ್ನು ಮೇಲೆತ್ತಲೇಬೇಕು ಅಂತ ತೀರ್ಮಾನ ಮಾಡಿದ್ದರು. ಆಗ ಪ್ರಭಾಕರ್ ಅವರನ್ನು ಕೂರಿಸಿಕೊಂಡು ಅವರ ಹತ್ತಿರವೇ ಒಂದು ಸ್ಕ್ರಿಪ್ಟ್ ಮಾಡಿಸಿ, ಕಥೆ, ಡೈಲಾಗ್ ಬರೆಸಿ, ನಿರ್ದೇಶನ ಕೂಡ ಮಾಡಿಸಿದರು. ಹಾಗೆ ಬಂದ ಸಿನಿಮಾವೇ ಮಹೇಂದ್ರ ವರ್ಮ.
"ಮಹೇಂದ್ರ ವರ್ಮಾ ಇಡೀ ಗಾಂಧಿನಗರ ಬೆಚ್ಚಿಬೀಳಿಸುವಂತಹ ಯಶಸ್ಸನ್ನು ಕಂಡಿತು. ಪ್ರಭಾಕರ್ ಮತ್ತೆ ಗೆಲುವಿನ ಕಡೆಗೆ ಬಂದರು. ಮಹೇಂದ್ರ ವರ್ಮಾ ಬಳಿಕ ಜೈಲರ್ ಜಗನ್ನಾಥ್ ಕೂಡ ದೊಡ್ಡ ಯಶಸ್ಸನ್ನು ಕಂಡಿತ್ತು. ಹೀಗೆ ಸಾಕಷ್ಟು ಸಿನಿಮಾ ಬಂದವು. ಬಹುಶ: ಮೇಯರ್ ಪ್ರಭಾಕರ್ ಸಿನಿಮಾ ಇವರ ವೃತ್ತಿ ಬದುಕಿನ ಕೊನೆಯ ಸಿನಿಮಾ ಆಯ್ತು." ಎಂದು ಹಿರಿಯ ಪತ್ರಕರ್ತ ಎನ್ ಎಸ್ ಶ್ರೀಧರಮೂರ್ತಿ ವಿವರಿಸಿದ್ದಾರೆ.
ಹಾಗೇ ಪ್ರಭಾಕರ್ ಅವರಿಗೆ ಮತ್ತೆ ಯಶಸ್ಸು ತಂದುಕೊಟ್ಟ ಜಯಮಾಲಾ ಯಾಕೆ ಅವರಿಂದ ದೂರ ಆದರು ಅನ್ನೋದನ್ನು ವಿವರಿಸಿದ್ದಾರೆ. "ಈ ಸಿನಿಮಾ ಬಳಿಕ ಜಯಮಾಲಾ ಹಾಗೂ ಪ್ರಭಾಕರ್ ನಡುವೆ ಅಂತರ ಬೆಳೆಯುವುದಕ್ಕೆ ಶುರುವಾಯ್ತು. ಪ್ರಭಾಕರ್ ಅವರೇ ಒಪ್ಪಿಕೊಂಡಂತೆ ವಯಸ್ಸಿನ ಅಂತರವಿತ್ತು. ಅಲ್ಲದೆ ಪ್ರಭಾಕರ್ಗೆ ಈಗಾಗಲೇ ಮದುವೆ ಆಗಿತ್ತು. ಹೀಗಾಗಿ ಇಬ್ಬರು ಪತ್ನಿಯರೊಂದಿಗೆ ಒಪ್ಪಿಕೊಳ್ಳುವುದು ಕಷ್ಟ ಆಗಿತ್ತು. ಹಾಗೇ ಇಬ್ಬರ ಅಭಿರುಚಿಗಳು ಕೂಡ ಬೇರೆಯಾಗಿತ್ತು. ಪ್ರಭಾಕರ್ಗೆ ಶಕ್ತಿಯಾಗಿದ್ದ ಜಯಮಾಲಾ ಹೋದಮೇಲೆ ದೂರವಿದ್ದ ಸೋಲು ಮತ್ತೆ ಬೆನ್ನು ಹಿಡಿದು ಬಂದಿತ್ತು ಅಂತ ಹೇಳಬಹುದು." ಎಂದು ಪ್ರಭಾಕರ್ ಜೀವನ ಚರಿತ್ರೆಯನ್ನು ಎನ್ ಎಸ್ ಶ್ರೀಧರಮೂರ್ತಿ ವಿವರಿಸಿದ್ದಾರೆ.


Click it and Unblock the Notifications











