"ನಮ್ಮ ಯಜಮಾನ್ರಿಗೆ ಕಿಡ್ನಿ ಕೊಡುವಾಗ ನಾನೊಂದು ನಿರ್ಧಾರ ಮಾಡಿದ್ದೆ"; ದರ್ಶನ್ ತಾಯಿಯ ಆ ನಿರ್ಧಾರ ಏನಾಗಿತ್ತು?
ಕನ್ನಡ ಚಿತ್ರರಂಗ ಕಂಡ ಅದ್ಭುತ ನಟರಲ್ಲಿ ತೂಗುದೀಪ ಶ್ರೀನಿವಾಸ್ ಕೂಡ ಪ್ರಮುಖರು. ಚಿತ್ರರಂಗದಲ್ಲಿ ದಶಕಗಳ ಕಾಲ ಖಳನಾಯಕನಾಗಿ, ಪೋಷಕ ಪಾತ್ರಗಳಲ್ಲಿ ಸಿನಿ ಪ್ರಿಯರನ್ನು ರಂಜಿಸಿದ್ದರು. ಡಾ.ರಾಜ್ಕುಮಾರ್ ನಟಿಸಿದ ಬಹುತೇಕ ಸಿನಿಮಾಗಳಲ್ಲಿ ತೂಗುದೀಪ್ ಶ್ರೀನಿವಾಸ್ ಖಳನಾಯಕನಾಗಿ ಕಾಣಿಸಿಕೊಂಡರೇ ಕಳೆ ಬರುತ್ತಿತ್ತು. ಇವರಿಬ್ಬರ ಜೋಡಿಗೆ ಆಮಟ್ಟಿಗೆ ಬೇಡಿಕೆ ಇತ್ತು.
ತೂಗುದೀಪ ಶ್ರೀನಿವಾಸ್ ಕುಟುಂಬ ಮೈಸೂರಿನಲ್ಲಿ ನೆಲೆಸಿತ್ತು. ಪತ್ನಿ ಮೀನಾ ಹಾಗೂ ಮೂವರು ಮಕ್ಕಳೊಂದಿಗೆ ನೆಲೆಸಿದ್ದರು. ಆದರೆ, ಇತ್ತ ತೂಗುದೀಪ ಶ್ರೀನಿವಾಸ್ ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿಯಾಗಿರುತ್ತಿದ್ದರು. ಒಂದರ ಹಿಂದೊಂದು ಸಿನಿಮಾಗಳಲ್ಲಿ ನಟಿಸುತ್ತಿದ್ದ ತೂಗುದೀಪ ಶ್ರೀನಿವಾಸ್ ಮನೆಗೆ ಹೋಗುತ್ತಿದ್ದದ್ದೇ ವಿರಳ ಎನಿಸಿತ್ತು. ಆ ಮಟ್ಟಿಗೆ ಬ್ಯುಸಿಯಾಗಿರುತ್ತಿದ್ದರು.

ಎಲ್ಲವೂ ಸರಿಯಾಗಿದೆ ಅನ್ನುವಾಗಲೇ ತೂಗುದೀಪ ಶ್ರೀನಿವಾಸ್ ಅವರ ಎರಡೂ ಕಿಡ್ನಿಗಳು ವಿಫಲವಾಗಿದ್ದವು. ಆಗ ಪತ್ನಿ ಮೀನಾ ತೂಗುದೀಪ ಅವರು ಒಂದು ಕಿಡ್ನಿಯನ್ನು ಪತಿಗೆ ಕೊಟ್ಟಿದ್ದರು. ಈ ಹಿಂದೆ ನೀಡಿದ ಬಾರೀ ಹಳೆಯ ಸಂದರ್ಶನವೊಂದರಲ್ಲಿ ತಾನೇಕೆ ಕಿಡ್ನಿ ಕೊಡುವುದಕ್ಕೆ ಮುಂದೆ ಬಂದೆ ಅನ್ನೋದನ್ನು ಮೀನಾ ತೂಗುದೀಪ ಅವರು ಹೇಳಿಕೊಂಡಿದ್ದರು. ಆ ವಿಡಿಯೋವನ್ನು ರಾಘುರಾಮ್ ಅವರು ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಹಾಕಿಕೊಂಡಿದ್ದರು. ಅದೀಗ ಮತ್ತೆ ವೈರಲ್ ಆಗುತ್ತಿದೆ. ಅದರಲ್ಲಿ ಅವರ ಮಾತಿನ ಝಲಕ್ ಇಲ್ಲಿದೆ.
ತಿಂಗಳಿಗೆ ಐದು ದಿನ ಮನೆಗೆ ಬರ್ತಿದ್ರು
ತೂಗುದೀಪ ಶ್ರೀನಿವಾಸ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರಿಂದ ಹೆಚ್ಚು ಕಾಲ ಬೆಂಗಳೂರಿನಲ್ಲಿ ಇರುತ್ತಿದ್ದರು. ಪತ್ನಿ, ಮಕ್ಕಳೊಂದಿಗೆ ಮನೆಯಲ್ಲಿ ಇರುತ್ತಿದ್ದಿದ್ದು ಕೇವಲ ಐದು ದಿನ ಮಾತ್ರ ಅಂತ ಆ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. "ಅವರಿಗೆ ಮಕ್ಕಳ ಮೇಲೆ ತುಂಬಾ ಪ್ರೀತಿ. ನನಗಿಂತಲೂ ಒಂದು ಕೈ ಹೆಚ್ಚು ಪ್ರೀತಿ. ಎಲ್ಲೂ ಹೋಗುತ್ತಿರಲಿಲ್ಲ. ಅವರು ಬರುತ್ತಿದ್ದಿದ್ದೇ ವೀಕೆಂಡ್ನಲ್ಲಿ ಅಂತ ಅನಿಸುತ್ತಿದೆ. 20 ರಿಂದ 25 ದಿನ ಬೆಂಗಳೂರಿನಲ್ಲಿ ಇರೋರು. ಒಂದು ಐದು ದಿನ ನಮ್ಮ ಜೊತೆ ಮನೆಯಲ್ಲಿ ಇರೋರು. ಮನೆಯಲ್ಲಿ ಇದ್ದಾಗ ಪೂರ್ತಿ ಮಕ್ಕಳ ಜೊತೆನೇ ಇರೋರು. ಮಕ್ಕಳು ಓದಿನ ಬಗ್ಗೆ ಎಲ್ಲಾ ವಿಚಾರಿಸೋರು. ಎಲ್ಲೂ ಹೋಗುವುದೇನಿಲ್ಲ. ಹೊರಗೇ ಹೋಗುತ್ತಿರಲಿಲ್ಲ." ಎಂದಿದ್ದಾರೆ.
ಆ ದಿನ ನೆನೆದರೆ ದು:ಖ ಬರುತ್ತೆ
ಪತಿಗೆ ಒಂದು ಕಿಡ್ನಿ ಕೊಡುವುದಕ್ಕೆ ಮೀನಾ ತೂಗುದೀಪ ಮುಂದಾಗಿದ್ದರು. ಕಿಡ್ನಿಯನ್ನು ಕೊಟ್ಟ ದಿನವನ್ನು ನೆನೆದರೆ ಇಂದಿಗೂ ದು:ಖ ಉಮ್ಮಳಿಸಿ ಬರುತ್ತೆ ಎಂದು ಇದೇ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. "ನಾನು ಕಿಡ್ನಿ ಕೊಟ್ಟೆ. ಅದನ್ನು ನಾನು ಈಗಲೂ ನೆನಪಿಸಿಕೊಳ್ಳುವುದಕ್ಕೆ ಆಗಲ್ಲ. ಪ್ರತಿದಿನವೂ ಅದೇ ನೆನಪಾಗುತ್ತೆ. ನಾನು ಒಂದು ಕಿಡ್ನಿ ಕೊಟ್ಮೇಲೆ ಒಂದು ವರ್ಷ ಚೆನ್ನಾಗಿ ಇದ್ದರು. ಆಮೇಲೆ ಹಾರ್ಟ್ ಅಟ್ಯಾಕ್ ಆಗಿ ತೀರಿ ಹೋಗಿದ್ದಾರೆ. ಅವತ್ತಿನ ದಿನ ನೆನೆಸಿಕೊಂಡರೆ ಇವತ್ತಿಗೂ ದು:ಖ ಬರುತ್ತೆ. ಒಂದೇ ಮಂಚದಲ್ಲಿ ನಾನೊಂದು ಕಡೆ ಅವರು ಒಂದು ಕಡೆ. ನನ್ನ ಕಿಡ್ನಿಯನ್ನೇ ಅವರಿಗೆ ಕೊಡಬೇಕಿತ್ತು. ಹಾಗಾಗಿ ನಾನು ಟಾಟಾ ಮಾಡಿ ಹೋದೆ." ಎಂದಿದ್ದರು.

"ಜ್ಞಾನ ಬಂದಿದ್ದೇ 3 ದಿನ ಆದ್ಮೇಲೆ"
ಮೀನಾ ತೂಗುದೀಪ ತನ್ನದೊಂದು ಕಿಡ್ನಿ ಕೊಟ್ಟು ಮೂರು ದಿನ ಆದ್ಮೇಲೆ ಜ್ಞಾನ ಬಂದಿತ್ತು. ಆ ಕ್ಷಣವವನ್ನು ನೆನಪಿಸಿಕೊಂಡಿದ್ದಾರೆ. "ಕಿಡ್ನಿ ಕೊಟ್ಟಾದ್ಮೇಲೆ ನನಗೆ ಜ್ಞಾನ ಬಂದಿದ್ದೇ ಮೂರು ದಿನಗಳು ಆದ್ಮೇಲೆ. ನಮ್ಮ ಯಜಮಾನ್ರಿಗೆ ತಕ್ಷಣವೇ ಜ್ಞಾನ ಬಂದಿತ್ತು. ಒಂದೇ ಆಸ್ಪತ್ರೆಯಲ್ಲಿ ಇಬ್ಬರು ಇದ್ದರೂ ಕೂಡ ನಮ್ಮ ಯಜಮಾನ್ರು ಒಂದು ಪತ್ರ ಬರೆದಿದ್ದರು. ಮೀನಾ ನಾನು ಚೆನ್ನಾಗಿದ್ದೀನಿ. ನೀನು ಹೇಗಿದ್ದೀಯಾ? ಜ್ಞಾನ ಬಂತಾ ಇಲ್ವಾ? ನಾನು ಚೆನ್ನಾಗಿ ಇದ್ದೀನಿ ಅಂತೆಲ್ಲ ಬರೆದರು. ಆಮೇಲೆ ಮೂರು ದಿನಗಳಾದ್ಮೇಲೆ ನನಗೆ ಜ್ಞಾನ ಬಂತು." ಎಂದಿದ್ದಾರೆ.
ಕಿಡ್ನಿ ಕೊಡುವ ತೆಗೆದುಕೊಂಡಿದ್ದ ನಿರ್ಧಾರವೇನು?
ಇದೇ ಸಂದರ್ಶನದಲ್ಲಿ ಕಿಡ್ನಿ ಕೊಡಲು ನಿರ್ಧರಿಸಿದ್ದು ಏಕೆ? ಅನ್ನೋದನ್ನು ಹೇಳಿಕೊಂಡಿದ್ದರು. ಇದು ಎಂತಹವರ ಕಲ್ಲು ಹೃದಯವನ್ನೂ ಕರಗಿಸುತ್ತೆ. "ನಾನೊಂದು ನಿರ್ಧಾರ ಮಾಡಿದ್ದೆ. ನಾನು ಕಿಡ್ನಿ ಕೊಟ್ಟಿದ್ದೀನಿ ಅದೆಲ್ಲ ನನಗೆ ಬೇಕಾಗಿರಲಿಲ್ಲ. ನಮ್ಮ ಯಜಮಾನ್ರು ಚೆನ್ನಾಗಿ ಆಗಬೇಕು. ನನ್ನ ಹೆಸರು ಮೀನಾ ಅಂತ. ನನ್ನಂತಹವರು ಎಷ್ಟೋ ಜನ ಇರುತ್ತಾರೆ. ಆದರೆ, ತೂಗುದೀಪ ಶ್ರೀನಿವಾಸ್ ಅವರು ಒಬ್ಬರೇ ಇರೋದು. ನಾನು ಕಿಡ್ನಿ ಕೊಟ್ಟರೆ, ಚಿತ್ರರಂಗದಲ್ಲಿ ಇನ್ನೂ ಒಂದು ಹತ್ತು ದಿನ ಇರ್ತಾರೆ ಅನ್ನೋ ಕಾನ್ಫಿಡೆನ್ಸ್ ಮೇಲೆ ಕೊಟ್ಟೆ ನಾನು.
ಯಾವುದೇ ಮಕ್ಕಳಿಗಾದರೂ ತಂದೆ ತಾಯಿ ಇಬ್ಬರ ಪ್ರೀತಿನೂ ಬೇಕು. ತಂದೆ ಪ್ರೀತಿನೇ ಬೇರೆ. ತಾಯಿ ಪ್ರೀತಿನೇ ಬೇರೆ. ಅದಕ್ಕೆ ಮಕ್ಕಳೊಂದಿಗೆ ಇಬ್ಬರೂ ಇರಬೇಕು ಅಂತ ಆಸೆ ಪಟ್ಟಿದ್ದೆ. ನಾನೇನೋ ಬಿಡಿ ಮಕ್ಕಳ ಜೊತೆ ತುಂಬಾ ದಿನ ಇದ್ದೆ. ನಮ್ಮ ಯಜಮಾನ್ರು ನೋಡಿರಲಿಲ್ಲ. ಅವರೇ ಇರಲಿ ಅಂತ ಇದ್ದೆ." ಎಂದು ದರ್ಶನ್ ತಾಯಿ ಮೀನಾ ತೂಗುದೀಪ ಹಳೆ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.


Click it and Unblock the Notifications











