ಕನ್ನಡ ಕ್ಲಾಸಿಕ್ ಸಿನಿಮಾ 'ಚೋಮನ ದುಡಿ'ಯಲ್ಲಿ ಒಂದೇ ಒಂದು ಕ್ಲೋಸ್ ಅಪ್ ಸೀನ್ ಯಾಕೆ ಇಟ್ಟಿಲ್ಲ?
ಈ ವರ್ಷ ಕನ್ನಡ ಚಿತ್ರರಂಗ ಸಂಭ್ರಮ ಪಡುವ ವರ್ಷ. ಯಾಕಂದ್ರೆ, ಕನ್ನಡದ ಮೊದಲ ಟಾಕಿ ಸಿನಿಮಾ ಆರಂಭ ಆಗಿ 90 ವರ್ಷಗಳನ್ನು ಪೂರೈಸಿದೆ. ಇಷ್ಟು ವರ್ಷಗಳಲ್ಲಿ ಕನ್ನಡ ಚಿತ್ರರಂಗ ಲೆಕ್ಕವಿಲ್ಲದಷ್ಟು ಅದ್ಭುತ ಸಿನಿಮಾಗಳನ್ನು ನಿರ್ಮಾಣ ಮಾಡಿದೆ. ಇಂದಿಗೂ ಕನ್ನಡ ಕ್ಲಾಸಿಕ್ ಸಿನಿಮಾಗಳು ಫಿಲ್ಮ್ ಮೇಕರ್ಗಳಿಗೆ ಒಂದು ಪಠ್ಯವಿದ್ದಂತೆ.
ಇಂತಹ ಕ್ಲಾಸಿಕ್ ಸಿನಿಮಾಗಳ ಪೈಕಿ 1975ರಲ್ಲಿ ತೆರೆಕಂಡಿದ್ದ 'ಚೋಮನ ದುಡಿ' ಕೂಡ ಒಂದು. ಕನ್ನಡದ ಲೆಜೆಂಡರಿ ನಿರ್ದೇಶಕ ದಿವಂಗತ ಬಿ ವಿ ಕಾರಂತ್ ನಿರ್ದೇಶಿಸಿದ ಈ ಮಾಸ್ಟರ್ ಪೀಸ್ ಕನ್ನಡದ ಟಾಪ್ ಕ್ಲಾಸಿಕ್ ಸಿನಿಮಾಗಳ ಸಾಲಿನಲ್ಲಿ ನಿಲ್ಲುತ್ತದೆ. ಇದು ಕರಾವಳಿ ಭಾಗದ ದೈವ ಪಂಜುರ್ಲಿ ಬಗ್ಗೆ ತೆರೆಮೇಲೆ ತಂದ ಮೊದಲ ಸಿನಿಮಾ.

ಹಿಂದುಳಿದ ವರ್ಗಕ್ಕೆ ಸೇರಿದ ಚೋಮನ ಕರುಣಾಜನಕ ಕಥೆಯನ್ನು ನಿರ್ದೇಶಕ ಬಿ ವಿ ಕಾರಂತ್ ತೆರೆಮೇಲೆ ತಂದಿದ್ದರು. ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಶಿವರಾಮ ಕಾರಂತ್ ಬರೆದ 'ಚೋಮನ ದುಡಿ' ಕಥೆಯನ್ನೇ ಸಿನಿಮಾ ಮಾಡಲಾಗಿತ್ತು. ಈ ಸಿನಿಮಾದಲ್ಲಿ ಒಂದೇ ಒಂದು ಕ್ಲೋಸ್ ಶಾಟ್ ಇರಲಿಲ್ಲ. ಅದನ್ನು ಯಾಕೆ ಇಟ್ಟಿಲ್ಲ ಅನ್ನೋದನ್ನು ರಾಷ್ಟ್ರ ಪ್ರಶಸ್ತಿ ವಿಜೇತ ಹಿರಿಯ ನಿರ್ದೇಶಕ ಗಿರೀಶ್ ಕಾಸರವಳಿ ಬರೆದ 'ಬಿಂಬ ಬಿಂಬನ' ತಮ್ಮ ಪುಸ್ತಕದಲ್ಲಿ ವಿವರಿಸಿದ್ದಾರೆ.
ಇತ್ತೀಚೆಗೆ 'ಬಿಂಬ ಬಿಂಬನ' ಪುಸ್ತಕ ಲೋಕಾರ್ಪಣೆಗೊಂಡಿತ್ತು. ಈ ವೇಳೆ ಈ ಕೃತಿಯ ಒಂದು ಚಾಪ್ಟರ್ನಲ್ಲಿ ರಾಷ್ಟ್ರ ಪ್ರಶಸ್ತಿ ಗೆದ್ದಿದ್ದ 'ಚೋಮನ ದುಡಿ' ಸಿನಿಮಾದಲ್ಲಿ ಕ್ಲೋಸ್ ಅಪ್ ಶಾಟ್ಗಳನ್ನು ಯಾಕೆ ಇಟ್ಟಿಲ್ಲ ಅನ್ನುವುದನ್ನು ಬರೆದಿದ್ದಾರೆ. ಈ ಬಗ್ಗೆ ಪುಸ್ತಕ ಬಿಡುಗಡೆ ವೇಳೆ ಪಿ.ಶೇಷಾದ್ರಿ ಆ ವಿಷಯದ ಬಗ್ಗೆ ಹೀಗೆ ವಿವರಣೆ ಕೊಡುತ್ತಾರೆ.
"ಈಗಾಗಲೇ ಕನ್ನಡ ಚಿತ್ರರಂಗಕ್ಕೆ 90 ವರ್ಷಗಳು ಸಂದಿವೆ. ಸುಮಾರು 4 ಸಾವಿರಕ್ಕೂ ಅಧಿಕ ಸಿನಿಮಾಗಳು ಬಂದಿವೆ. ಕಾಸರವಳ್ಳಿಯವರ 15 ಸಿನಿಮಾಗಳು ಹೇಗೆ ಪುಸ್ತಕದ ರೂಪದಲ್ಲಿ ಬಂದಿದೆಯೋ ಹಾಗೆನೇ ಸುಮಾರು 100ಕ್ಕೂ ಹೆಚ್ಚು ಸಿನಿಮಾಗಳು ಇದೇ ರೀತಿ ಬರಹ ರೂಪಕ್ಕೆ ಇಳಿಯುವ ಸಾಧ್ಯತೆಗಳು ಇದ್ದಾವೆ. ಅದನ್ನೂ ಪ್ರಕಟಿಸುವ ಮೂಲಕ ಒಳ್ಳೆಯ ಪುಸ್ತಕಗಳನ್ನು ಸೃಷ್ಟಿ ಮಾಡಬೇಕಾಗುತ್ತೆ." ಎಂದು ಕನ್ನಡ ಸಿನಿಮಾ ಬಗ್ಗೆ ಕಾಳಜಿಯ ಮಾತುಗಳನ್ನು ಆಡಿದ್ದಾರೆ.

ಇತ್ತೀಚೆಗೆ ಸಿನಿಮಾ ಹಾಗೂ ಧಾರಾವಾಹಿ ಕ್ಷೇತ್ರಗಳಲ್ಲಿ ಕ್ಲೋಸ್ ಅಪ್, ಲಾಂಗ್ ಶಾಟ್, ಸಜೆಷನ್ ಶಾಟ್ಗಳನ್ನು ಇಟ್ಟು ಮುಗಿಸುತ್ತಾರೆ. ಆದರೆ, ಯಾವ ಸಂದರ್ಭದಲ್ಲಿ ಯಾಕೆ ಇಡಬೇಕು? ಅನ್ನೋ ಅರಿವು ಇರುವುದಿಲ್ಲ. ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಚೋಮನ ದುಡಿ' ಸಿನಿಮಾದಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಹೀಗಾಗಿ ಯಾಕೆ ಕ್ಲೋಸ್ ಶಾಟ್ ಇಟ್ಟಿರಲಿಲ್ಲ ಅನ್ನೋದನ್ನು ವಿವರಿಸಿದ್ದಾರೆ.
"ಚೋಮನದುಡಿಯಲ್ಲಿ ಕ್ಲೋಸ್ ಅಪ್ ಇದ್ದಿದ್ದರೆ, ಪ್ರಾಯಶ: ಚೋಮನನ್ನು ಒಂದು ಹಿನ್ನೆಲೆಯಿಂದ ಬೇರ್ಪಡಿಸಿದ ಹಾಗೆ ಆಗುತ್ತಿತ್ತು. ಅವನು ಎದುರಿಸುತ್ತಿದ್ದ ಜಾತಿ ಸಮಸ್ಯೆ, ಊಳಿಗಮಾನ್ಯ ಪದ್ದತಿಯ ಸಮಸ್ಯೆಗೆ ಚೋಮ ಕಾರಣ ಅಲ್ಲ. ಹಾಗಾಗಿ ಪ್ರಾಯಶ: ಕ್ಲೋಸ್ ಅಪ್ ಬಳಸಿ ಚಿತ್ರೀಕರಿಸಿದ್ದರೆ, ತಾತ್ವಿಕ ನೆಲೆಯಲ್ಲಿ ಕಥೆ ಕಟ್ಟಿಕೊಡುವ ಪಠ್ಯಕ್ಕೂ ತಂತ್ರ ಕಟ್ಟಿಕೊಡುವ ಉಪಪಠ್ಯಕ್ಕೈ ಹೊಂದಾಣಿಕೆ ಆಗುತ್ತಿರಲಿಲ್ಲ. ಈ ಕಾರಣಕ್ಕೆ ಚೋಮದುಡಿಯಲ್ಲಿ ಕ್ಲೋಸ್ ಅಪ್ ಇರಲಿಲ್ಲ ಎಂದು ವಿವರಿಸಿದ್ದಾರೆ.


Click it and Unblock the Notifications











