'ಗಂಧದ ಗುಡಿ'ಯಲ್ಲಿ ಬದುಕಿದ ದೊಡ್ಮನೆ: ಡಾ.ರಾಜ್, ಶಿವಣ್ಣ, ಪುನೀತ್ ಸಿನಿಮಾ ಹೈಲೈಟ್ ಏನು?
ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಕೊನೆಯ ಸಿನಿಮಾ 'ಗಂಧದ ಗುಡಿ'. ಇದೊಂದು ಸಿನಿಮಾ ಅನ್ನುವುದಕ್ಕಿಂತ ಅನುಭವ ಅಂತ ರಾಘವೇಂದ್ರ ರಾಜ್ಕುಮಾರ್ ಈಗಾಗಲೇ ಹೇಳಿದ್ದಾರೆ. ತಮ್ಮ ಅಭಿಮಾನಿಗಳಿಗೆ ಅಕ್ಟೋಬರ್ 28ರಂದು ಸಿನಿಮಾ ನೋಡುವಂತೆ ಮನವಿ ಮಾಡಿದ್ದಾರೆ.
'ಗಂಧದ ಗುಡಿ'ಯಲ್ಲಿ ಪವರ್ಸ್ಟಾರ್ ಆಗಿರದೆ ಪುನೀತ್ ರಾಜ್ಕುಮಾರ್ ಆಗಿಯೇ ಕಾಣಿಸಿಕೊಳ್ಳುತ್ತಾರೆ. ಅದುವೇ ಈ ಸಿನಿಮಾದ ಹೈಲೈಟ್. ಹಾಗಂತ 'ಗಂಧದ ಗುಡಿ' ಇದೇ ಮೊದಲೇನಲ್ಲ. ಈಗಾಗಲೇ ಅಣ್ಣಾವ್ರ ಕುಟುಂಬದಿಂದ ಮೂರು ಗಂಧದ ಗುಡಿ ಸಿನಿಮಾ ಈಗಾಗಲೇ ಬಂದಿವೆ.
ಡಾ.ರಾಜ್ಕುಮಾರ್, ಡಾ. ಶಿವರಾಜ್ಕುಮಾರ್, ಡಾ.ಪುನೀತ್ ರಾಜ್ಕುಮಾರ್ ಈ ಮೂವರು 'ಗಂಧದ ಗುಡಿ'ಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೂರೂ ಸಿನಿಮಾಗಳು ದೊಡ್ಮನೆ ಕುಟುಂಬಕ್ಕೆ ಬಿಡಿಸಲಾರದ ನಂಟು ಇದ್ದಂತೆ. ಕಾಡು, ಸಿನಿಮಾ ಮತ್ತು ಅಣ್ಣಾವ್ರ ಈ ಕುಟುಂಬದ ನಂಟಿನ ಬಗ್ಗೆ ರಾಘಣ್ಣ ಮನಬಿಚ್ಚಿ ಮಾತಾಡಿದ್ದಾರೆ.

ಡಾ.ರಾಜ್ಕುಮಾರ್ 'ಗಂಧದ ಗುಡಿ'
1973ರಲ್ಲಿ ತೆರೆಕಂಡ ಸಿನಿಮಾ 'ಗಂಧದ ಗುಡಿ'. ಈ ಸಿನಿಮಾದಲ್ಲಿ ಹಲವು ವಿಶೇಷತೆಗಳಿವೆ. ನಟ ಎಂ.ಪಿ ಶಂಕರ್ ಈ ಸಿನಿಮಾವನ್ನು ನಿರ್ಮಿಸಿದ್ದರು. ಇದು ಅರಣ್ಯ ಸಂರಕ್ಷಣೆ ಬಗ್ಗೆ ತೆರೆದ ಮೊದಲ ಭಾರತದ ಕಮರ್ಷಿಯಲ್ ಸಿನಿಮಾ ಎಂದು ವರದಿಯಾಗಿದೆ. ಇನ್ನೂ ವಿಶೇಷ ಅಂದರೆ, ಇದು ಡಾ.ರಾಜ್ಕುಮಾರ್ ಅಭಿನಯದ 150ನೇ ಸಿನಿಮಾ. ಡಾ.ರಾಜ್ಕುಮಾರ್ ಹಾಗೂ ವಿಷ್ಣುವರ್ಧನ್ ಜೊತೆಗಾಗಿ ಕಾಣಿಸಿಕೊಂಡ ಏಕೈಕ ಸಿನಿಮಾ. 'ಗಂಧದ ಗುಡಿ' 25 ವಾರ ಓಡಿದ ಬಳಿಕ ಹಿಂದಿಯಲ್ಲಿ 'ಕರ್ತವ್ಯ' ಹಾಗೂ ತೆಲುಗಿನಲ್ಲಿ 'ಅಡವಿ ರಾಮುಡು' ಹೆಸರಿನಲ್ಲಿ ರಿಮೇಕ್ ಆಗಿತ್ತು. ಬಳಿಕ ಇದೇ ಸಿನಿಮಾವನ್ನು ಮಲಯಾಳಂನಲ್ಲಿ ಡಬ್ ಮಾಡಿ 'ಚಂದನ ಕಾಡು' ಹೆಸರಿನಲ್ಲಿ ಬಿಡುಗಡೆ ಮಾಡಲಾಗಿತ್ತು. ಹೀಗಾಗಿ ಈ ಸಿನಿಮಾ ಭಾರತೀಯ ಚಿತ್ರರಂಗಕ್ಕೆ ಟ್ರೆಂಡ್ ಸೆಟ್ಟರ್ ಎನ್ನಬಹುದು.

ಶಿವರಾಜ್ಕುಮಾರ್ 'ಗಂಧದ ಗುಡಿ'
ಅಣ್ಣಾವ್ರ 'ಗಂಧದ ಗುಡಿ' ತೆರೆಕಂಡ ಸುಮಾರು 21 ವರ್ಷಗಳ ಬಳಿಕ 'ಗಂಧದ ಗುಡಿ ಭಾಗ 2' ರಿಲೀಸ್ ಆಗಿತ್ತು. ಈ ಸಿನಿಮಾದಲ್ಲಿ ಲೀಡ್ ರೋಲ್ನಲ್ಲಿ ಕಾಣಿಸಿಕೊಂಡಿದ್ದು ಶಿವರಾಜ್ಕುಮಾರ್. ಅಣ್ಣಾವ್ರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾವನ್ನುಎಂ ಪಿ ಶಂಕರ್ ಅವರೇ ನಿರ್ಮಾಣ ಮಾಡಿದ್ದರು. ರಾಜನ್-ನಾಗೇಂದ್ರ ಸಂಗೀತ ನೀಡಿದ್ದರು. ಆದರೆ ಈ ಸಿನಿಮಾ ಬಾಕ್ಸಾಫೀಸ್ನಲ್ಲಿ ಅವರೇಜ್ ಅಂತ ಅನಿಸಿಕೊಂಡರೂ, ಮತ್ತೊಂದು ಪ್ರಯತ್ನ ಗಮನಸೆಳೆದಿತ್ತು.

ಪುನೀತ್ ರಾಜ್ಕುಮಾರ್ 'ಗಂಧದ ಗುಡಿ'
ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ 'ಗಂಧದ ಗುಡಿ' ಉಳಿದ ಎರಡೂ ಸಿನಿಮಾಗಳಿಗೂ ವಿಭಿನ್ನ. ಕರ್ನಾಟಕದ ಪ್ರಕೃತಿ ಸೌಂದರ್ಯವನ್ನು ತೆರೆಮೇಲೆ ತೋರಿಸುವುದಕ್ಕೆ ಪುನೀತ್ ಹೊರಟಿದ್ದರು. ಕಾಡು, ನೆಲ, ಜಲ, ಪ್ರಾಣಿ, ಪಕ್ಷಿ ಸಂಕುಲಗಳನ್ನು ತೆರೆಮೇಲೆ ತರುವುದಕ್ಕೆ ತೋರಿಸುವುದು ಅವರ ಕನಸಾಗಿತ್ತು. ಆ ಕನಸೇ ಅಕ್ಟೋಬರ್ 28ರಂದು ತೆರೆಮೇಲೆ ಮೂಡಲಿದೆ. ಇದು ಅಣ್ಣಾವ್ರ ಕುಟುಂಬದ ಮೂರನೇ 'ಗಂಧದ ಗುಡಿ'.

'ಗಂಧದ ಗುಡಿ'ಯಲ್ಲೇ ಬದುಕಿರುತ್ತಾರೆ
"ಅವನ 29 ಸಿನಿಮಾ ಒಂದಾದರೆ, ಗಂಧದ ಗುಡಿ ಸಿನಿಮಾನೇ ಒಂದಾಗುತ್ತೆ. ಅಂದು ಗಂಧದ ಗುಡಿ ಡಾ.ರಾಜ್ಕುಮಾರ್ ಮಾಡಿದ್ದು, ಗಂಧದ ಗುಡಿ ಭಾಗ 2 ಶಿವರಾಜ್ಕುಮಾರ್ ಮಾಡಿದ್ದು, ಎಂದೆಂದೂ ಗಂಧದ ಗುಡಿ ಪುನೀತ್ ರಾಜ್ಕುಮಾರ್ ಮಾಡಿದ್ದು. ಮೂರೂ ಜನನೂ ಗಂಧದ ಗುಡಿ ಮಾಡಿದ್ದಾರೆ. ಇದೇ ನಮ್ಮ ಕುಟುಂಬಕ್ಕೆ ಒಂದು ಮರುಬಳಕೆ ಇದ್ದಂತೆ. ಪುನೀತ್ ರಾಜ್ಕುಮಾರ್ ಎಂದೆಂದೂ ಗಂಧದ ಗುಡಿಯಲ್ಲಿ ಬದುಕಿರುತ್ತಾರೆ." ಎಂದು ರಾಘವೇಂದ್ರ ರಾಜ್ಕುಮಾರ್ ಹೇಳಿದ್ದಾರೆ.


Click it and Unblock the Notifications











