Independence day 2023: ಇದೇನಾ ಭಾರತದ ಮೊದಲ ದೇಶಭಕ್ತಿ ಸಿನಿಮಾ? 1940 ಬಳಿಕ ದೇಶಪ್ರೇಮದ ಸಿನಿಮಾ ಅಬ್ಬರ ಆರಂಭ!
ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ದೇಶಭಕ್ತಿ ಸಾರುವ ಸಿನಿಮಾಗಳು ಪಾತ್ರ ತುಂಬಾನೇ ದೊಡ್ಡದು. ಇತ್ತೀಚೆಗೆ ದೇಶಭಕ್ತಿ ಅನ್ನುವ ಕಲ್ಪನೆಗೆ ಹೊಸ ರೂಪ ಬಂದಿರಬಹುದು. ಅದೇ ಸಿನಿಮಾರಂಗದಲ್ಲಿ ಪ್ರತಿಬಿಂಬಿಸುತ್ತಿದೆ. ದೇಶಭಕ್ತಿಯ ಸಿನಿಮಾಗಳು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರದಿಂದ ನಿರ್ಮಾಣ ಆಗಿದ್ದಲ್ಲ. ಸ್ವಾತಂತ್ರ್ಯ ಸಿಗುವುದಕ್ಕೂ ಮುನ್ನವೇ ನಿರ್ಮಾಣವಾಗುತ್ತಿದ್ದವು.
ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆಯಲೇಬೇಕು ಎಂಬ ಕಿಚ್ಚು ಎಲ್ಲರಲ್ಲೂ ಇತ್ತು. ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡುತ್ತಿದ್ದ ಕಾಲದಲ್ಲಿ ಸಿನಿಮಾವನ್ನೂ ಒಂದು ಆಸ್ತ್ರವಾಗಿ ಬಳಸಿಕೊಳ್ಳಲಾಗಿತ್ತು. ಅದರ ಪ್ರತಿಫಲವಾಗಿ ಹೆಚ್ಚು ಸಿನಿಮಾಗಳು ನಿರ್ಮಾಣಗೊಂಡವು. 1940 ರಿಂದ 1960ರ ಕಾಲಘಟ್ಟದಲ್ಲಿ ಅತೀ ಹೆಚ್ಚು ದೇಶಭಕ್ತಿ ಸಾರುವ ಸಿನಿಮಾಗಳು ನಿರ್ಮಾಣಗೊಂಡಿದ್ದಾಗಿ ಇತಿಹಾಸ ಹೇಳುತ್ತೆ.

ಅಂದಿನ ಪ್ರತಿಷ್ಠಿತ ನಿರ್ಮಾಣ ಕಂಪನಿ ಬಾಂಬೆ ಟಾಕೀಸ್ 1940ರಲ್ಲಿ 'ಬಂಧನ್' ಅನ್ನೋ ಸಿನಿಮಾವನ್ನು ನಿರ್ಮಾಣ ಮಾಡಿತ್ತು. ದಿಗ್ಗಜ ಅಶೋಕ್ ಕುಮಾರ್ ಹಾಗೂ ಲೀಲಾ ಚಿಟ್ನೀಸ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ಭಾರತದ ಮೊದಲ ದೇಶಭಕ್ತಿ ಸಿನಿಮಾ ಅಂತ ಕೆಲವು ಮೂಲಗಳು ಹೇಳಿವೆ. ಆದರೆ, ಇದನ್ನು ಅಧಿಕೃತವಾಗಿ ಎಲ್ಲೂ ಸಮರ್ಥಿಸಿಲ್ಲ. ಈ ಸಿನಿಮಾ ಒಂದು ಹಾಡು ಇಂದಿಗೂ ಜನಪ್ರಿಯ. ಸರಸ್ವತಿ ದೇವಿ ಸಂಗೀತ ನೀಡಿದ್ದ, ಕವಿ ಪ್ರದೀಪ್ ಬರೆದಿದ್ದ "ಚಲ್ ಚಲ್ ರೇ ನೌಜವಾನ್" ಹಾಡು ಇಂದಿಗೂ ಫೇಮಸ್.
1943ರಲ್ಲಿ ಗ್ಯಾನ್ ಮುಖರ್ಜಿಯ ಸಿನಿಮಾ 'ಕಿಸ್ಮತ್' ತೆರೆಕಂಡಿತ್ತು. ಇದು ಅಂದಿನ ಕಾಲದ ಜನಪ್ರಿಯರ ದೇಶಭಕ್ತಿ ಸಿನಿಮಾಗಳಲ್ಲಿ ಒಂದು ಎನಿಸಿಕೊಂಡಿತ್ತು. ಇದು ಭಾರತೀಯ ಚಿತ್ರರಂಗದಲ್ಲೇ ಮೆಗಾಬ್ಲಾಕ್ಬಸ್ಟರ್ ದಾಖಲಿಸಿದ ಸಿನಿಮಾ. 1940ರಲ್ಲಿ ತೆರೆ ಕಂಡ 'ಬಂಧನ್' 50 ಲಕ್ಷ ಸಂಪಾದಿಸಿದ್ದರೆ, 1943ರಲ್ಲಿ ತೆರೆಕಂಡ 'ಕಿಸ್ಮತ್' ಒಂದು ಕೋಟಿ ರೂ. ಗಳಿಕೆ ಮಾಡುತ್ತು ಎಂದು ವೆಬ್ ಆರ್ಕೇವ್ ಹೇಳಿಕೊಂಡಿದೆ.
1952ರಲ್ಲಿ ಮತ್ತೊಂದು ಸಿನಿಮಾ ಇಡೀ ದೇಶವನ್ನೇ ಸೆಳೆಯಿತು. ಬೆಂಗಾಲಿ ನಿರ್ದೇಶಕ ಹೆಮನ್ ಗುಪ್ತಾ 'ಆನಂದ ಮಠ್' ಸಿನಿಮಾ ನಿರ್ಮಾಣ ಮಾಡಿದ್ದರು. ಬಂಕಿಮ್ ಚಂದ್ರ ಚಟರ್ಜಿ ಕಾದಂಬರಿಯನ್ನು ಆಧರಿಸಿ ಈ ಸಿನಿಮಾವನ್ನು ಮಾಡಲಾಗಿತ್ತು. ಈ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ನಿರ್ಮಾಣಗೊಂಡ ಅತ್ಯುತ್ತಮ ಸಿನಿಮಾಗಳಲ್ಲೊಂದು.

1953ರಲ್ಲಿ 'ಜಾನ್ಸಿ ಕಿ ರಾಣಿ' ಅನ್ನೋ ಸಿನಿಮಾ ರಿಲೀಸ್ ಆಯ್ತು. ಸೊಹ್ರಬ್ ಮೋದಿ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಜಾನ್ಸಿಯ ರಾಣಿ ಲಕ್ಷ್ಮಿಬಾಯಿ ಬ್ರಿಟಿಷರ ವಿರುದ್ಧ ಹೋರಾಡಿದ ಕಥೆಯನ್ನು ತೆರೆಮೇಲೆ ತರಲಾಗಿತ್ತು.
1959ರಲ್ಲಿ ದಕ್ಷಿಣ ಭಾರತದ ನಿರ್ದೇಶಕ ಬಿ ಆರ್ ಪಂತುಲು ದೇಶಭಕ್ತಿ ಸಾರುವ ತಮಿಳು ಸಿನಿಮಾವನ್ನು ನಿರ್ದೇಶಿಸಿದ್ದರು. ಅದುವೇ 'ವೀರಪಂಡಿಯಾ ಕಟ್ಟಬೊಮ್ಮನ್'. ಶಿವಾಜಿ ಗಣೇಶನ್ ಈ ಸಿನಿಮಾದಲ್ಲಿ ನಟಿಸಿದ್ದರು. 18ನೇ ಶತಮಾನದಲ್ಲಿನ ದಕ್ಷಿಣ ಭಾರತದಲ್ಲಿ ಈಸ್ಟ್ ಇಂಡಿಯಾ ಕಂಪನಿ ವಿರುದ್ಧ ಸಮರ ಸಾರಿದ್ದ ಕ್ರಾಂತಿಯ ಕಥೆಯನ್ನು ಆಧರಿಸಿತ್ತು. ಈ ಸಿನಿಮಾಗೆ ರಾಷ್ಟ್ರಪ್ರಶಸ್ತಿ ಕೂಡ ಸಿಕ್ಕಿತ್ತು.
1961ರಲ್ಲಿ ಬಿ ಆರ್ ಪಂತುಲು ಅವರೇ ಕನ್ನಡದಲ್ಲಿ ದೇಶಭಕ್ತಿ ನಿರ್ಮಾಣವನ್ನು ನಿರ್ದೇಶಿಸಿದ್ದರು. ಅದುವೇ 'ಕಿತ್ತೂರು ಚೆನ್ನಮ್ಮ'. ಬಿ ಸರೋಜಾ ದೇವಿ ಈ ಸಿನಿಮಾದಲ್ಲಿ ಚೆನ್ನಮ್ಮನ ಪಾತ್ರದಲ್ಲಿ ನಟಿಸಿದ್ದರು. ಕಿತ್ತೂರಿನ ಚೆನ್ನಮ್ಮ 1824 ರಲ್ಲಿ ಈಸ್ಟ್ ಇಂಡಿಯಾ ಕಂಪನಿ ವಿರುದ್ಧ ಸಮರ ಸಾರಿದ್ದರು. ಬ್ರಿಟಿಷರ ವಿರುದ್ಧ ಹೋರಾಡಿ 1829ರಲ್ಲಿ ಸಾವನ್ನಪ್ಪಿದ ಕಿತ್ತೂರು ಚೆನ್ನಮ್ಮ ಕನ್ನಡದ ಮೊದಲ ಪೂರ್ಣ ಪ್ರಮಾಣದ ದೇಶಭಕ್ತಿ ಸಾರುವ ಸಿನಿಮಾವಾಯ್ತು.
ಈ ಎಲ್ಲಾ ಸಿನಿಮಾಗಳೂ ಯಶಸ್ಸನ್ನು ಕಂಡಿದ್ದವು. ಹೀಗಾಗಿ ಮುಂದಿನ ದಿನಗಳಲ್ಲಿ ದೇಶಭಕ್ತಿಯನ್ನು ಸಾರುವ ಸಿನಿಮಾಗಳು ಹೆಚ್ಚಾಗಿ ನಿರ್ಮಾಣ ಆಗುವುದಕ್ಕೆ ಶುರುವಾದವು. 'ಹಕೀಕತ್', 'ಶಹೀದ್' ತುಂಬಾನೇ ಜನಪ್ರಿಯವಾದವು. ಬಳಿಕ ತೆಲುಗಿನಲ್ಲಿ 'ಅಲ್ಲೂರಿ ಸೀತಾರಾಮರಾಜು' ಅಂತಹ ಸಿನಿಮಾಗಳು ಬಂದವು. 1980 ನಂತರ ದೇಶಭಕ್ತಿಯ ಸಿನಿಮಾಗಳಿಗೆ ಬೇರೆ ಬೇರೆ ರೂಪ ಕೊಟ್ಟು ಸಿನಿಮಾವನ್ನು ನಿರ್ಮಾಣ ಮಾಡಲಾಯ್ತು. ಅದು ಇಂದಿಗೂ ಮುಂದುವರೆದುಕೊಂಡು ಬಂದಿದೆ.


Click it and Unblock the Notifications











