"ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು" ಹಾಡು ಹುಟ್ಟಿದ್ದೇಗೆ? ಹಂಸಲೇಖ ಟ್ಯೂನ್ಗೆ ಅಣ್ಣಾವ್ರ ರಿಯಾಕ್ಷನ್ ಏನಿತ್ತು?
ರಾಜ್ಕುಮಾರ್ ಅಪರೂಪಕ್ಕೆ ಸಿನಿಮಾ ಮಾಡುತ್ತಿದ್ದ ಕಾಲವದು. ಈ ವೇಳೆ ನಾಗಾಭರಣ ಆಕಸ್ಮಿಕ ಸಿನಿಮಾ ಮಾಡುವುದಕ್ಕೆ ಮುಂದಾಗಿದ್ದರು. ಪಾರ್ವತಮ್ಮ ರಾಜ್ ಕುಮಾರ್ ಕೂಡ ಈ ಕಥೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಹೀಗಾಗಿ ಆ ವಯಸ್ಸಿನಲ್ಲಿ ಅಣ್ಣಾವ್ರಿಗೆ ಪ್ರೇಮಕಥೆ ಹೇಳಿ ಬಂದಿದ್ದರು. ಅಂತಹ ಸಿನಿಮಾದಲ್ಲೊಂದು ಅಪ್ಪಟ ಕನ್ನಡ ಹಾಡು "ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು" ಅನ್ನೋ ಹಾಡು ಹುಟ್ಟಿಕೊಂಡಿತ್ತು.
ನಾಗಾಭರಣ ಆಕಸ್ಮಿಕ ಸಿನಿಮಾ ಮಾಡುವುದಕ್ಕೆ ಮುಂದಾಗಿದ್ದರು. ಆಗ ಹಂಸಲೇಖ ಬಳಿ ಬಂದು ಪುಸ್ತಕ ಕೊಟ್ಟು ರಾಜ್ಕುಮಾರ್ ಅವರಿಗೆ ಈ ಸಿನಿಮಾ ಮಾಡಬೇಕು. ಇದನ್ನು ಓದಿಕೊಳ್ಳಿ ಎಂದು ಹೇಳಿದ್ದರು. ಆಗ ಹಂಸಲೇಖ ನಕ್ಕಿದ್ದರಂತೆ. ಅದೊಂದು ಲವ್ ಸ್ಟೋರಿ ಆಗಿದ್ದರಿಂದ ಆ ವಯಸ್ಸನಲ್ಲಿ ರಾಜ್ಕುಮಾರ್ಗೆ ಮಾಡುತ್ತಿದ್ದಾರಲ್ಲ ಅಂತ ಅನಿಸಿತ್ತು.

"ಅಪರೂಪಕ್ಕೆ ಒಂದು ರಾಜ್ಕುಮಾರ್ ಸಿನಿಮಾ ಮಾಡುತ್ತಿದ್ದೇವೆ. ಅವರಿಗೆ ಸರಿ ಹೊಂದುವಂತಹ ಒಂದು ಕಥೆ ಮಾಡೋಣ ಅಂತಿದ್ದೆ. ಅದೆಲ್ಲ ಆಗಲ್ಲ. ಇದೇ ಕಥೆ, ಇದೇ ಪುಸ್ತಕ, ಇದೇ ಹಾಡು ಮಾಡಬೇಕು ಅಂದಿದ್ರು. ಅಣ್ಣಾವ್ರ ಪಕ್ಕದಲ್ಲಿ ಆಂಜನೇಯನ ಹಾಗೇ ನಾಗಾಭರಣ ಕೂತು ಕಥೆ ಒಪ್ಪಿಸುತ್ತಿದ್ದರು. ನನಗೆ ಎಷ್ಟೋ ವರ್ಷಗಳಾದ್ಮೇಲೆ ರಾಜ್ಕುಮಾರ್ ಜೊತೆ ಸಿನಿಮಾ ಮಾಡುವ ಅವಕಾಶ ಸಿಕ್ಕಿದೆ. ಇಂತಹದ್ದೊಂದು ಕಥೆ ತಂದಿದ್ದಾನಲ್ಲ ಅಂತ ಒಳಗಡೆ ಕೊರಗುತ್ತಿದೆ." ಎಂದು ಹಂಸಲೇಖ ಅಂದು ಹೇಳಿಕೊಂಡಿದ್ದರು.
ರಾಜ್ಕುಮಾರ್ಗೆ ಕಥೆ ಎಲ್ಲಾ ಹೇಳಿ ಬಂದ್ಮೇಲೆ ವರದಪ್ಪನವರು ಬಂದು ಹೇಗಿದೆ ಕಥೆ ಅಂತ ಹಂಸಲೇಖ ಅವರಿಗೆ ಹೇಳಿದ್ದರಂತೆ. ಆಗ ಹಂಸಲೇಖ ಸುಮಾರಾಗಿದೆ ಎಂದಿದ್ದರು. ಅಯ್ಯಯ್ಯೋ ಹಾಗೇ ಹೇಳಬೇಡಿ. ಪಾರ್ವತಮ್ಮ ರಾಜ್ಕುಮಾರ್ಗೆ ಗೊತ್ತಾದರೆ ಅಷ್ಟೇ ಎಂದಿದ್ದರಂತೆ. ಇನ್ನೊಂದು ಕಡೆ ರಾಜ್ಕುಮಾರ್ ಮತ್ತೆ ಬಣ್ಣ ಹಚ್ಚುವುದಕ್ಕೆ ನಾಗಾಭರಣ ಪಾತ್ರ ಬಹಳ ದೊಡ್ಡದಿತ್ತು ಎಂದು ಹಂಸಲೇಖ ಹೇಳಿಕೊಂಡಿದ್ದಾರೆ.

"ವರದಪ್ಪನವರು ರಾಜ್ಕುಮಾರ್ ಬರ್ತಾರೆ, ಅವರಿಗೊಂದು ಮಾಸ್ ಸಾಂಗ್ ಕೊಟ್ಟುಬಿಡಿ ಅಂದರು. ಆಗ ಹಂಸಲೇಖ ನೀವು ಯಾವ ಸಾಂಗ್ ಕೇಳಿದರೂ ಟ್ಯೂನ್ ಮಾಡಿ ಕೊಡುತ್ತೇನೆ ಎಂದಿದ್ದರು. ಅಯ್ಯೋ ಮಾಸ್ ಸಾಂಗ್ ಇಲ್ಲೆಲ್ಲಿ ಹಾಕೋದು ಅಂತ ಒದ್ದಾಡಿದ್ದರು. ಸರ್ ಅಲ್ಲೆಲ್ಲೋ ಹುಬ್ಬಳ್ಳಿಗೆ ಹೋಗುತ್ತಾರಲ್ಲ ವಜ್ರಮುನಿಯನ್ನು ಹುಡ್ಕೊಂಡು ಅವರನ್ನು ಕಂಡು ಹಿಡಿಯುವುದರೊಳಗೆ ಜಟಕಾಗಾಡಿ ಮೇಲೆ ಕನ್ನಡದ್ದೊಂದು ಸಾಂಗ್ ಹಾಡಿಬಿಡಿ ಸರ್. ಆಮೇಲೆ ವಜ್ರಮುನಿಯನ್ನಾದರೂ ಹಿಡಿದು ಕೊಳ್ಳಲಿ. ಯಾರನ್ನಾದರೂ ಹಿಡಿದುಕೊಳ್ಳಲಿ ಎಂದೆ" ಎಂದು ಹಂಸಲೇಖ ಹಾಸ್ಯವಾಗಿ ಹೇಳಿದ್ದರು.
ನಿರ್ದೇಶಕ ನಾಗಾಭರಣ ಅವರ ಕಿವಿಯಲ್ಲಿ ಹಂಸಲೇಖ ಎಲ್ಲಾ ವಯಸ್ಸಾದವರ ಪ್ರೇಮಿಗಳ ಕತೆಯನ್ನು ಇಟ್ಟುಕೊಂಡಿದ್ದೀಯ. ಕನ್ನಡಿಗರಿಗಾಗಿ ಒಂದು ಕನ್ನಡ ಹಾಡು ಇಡು ಎಂದಿದ್ದರು. ಬೆಳಗ್ಗೆ ಏಳು ಗಂಟೆಗೆ ಡಾ.ರಾಜ್ಕುಮಾರ್ ಮನೆಗೆ ಇಬ್ಬರು ಹೋದರು. ಆಗ ಅಣ್ಣಾವ್ರು ಯೋಗ ಮಾಡಿ ಕಟುಮಸ್ತಾಗಿ ನಿಂತಿದ್ದರು. ಆಗಲೇ ಅಣ್ಣಾವ್ರಿಗೆ ಸಾಹಿತ್ಯ ಹಾಗೂ ಟ್ಯೂನ್ ಅನ್ನು ಹಂಸಲೇಖ ಒಪ್ಪಿಸುವುದಕ್ಕೆ ಶುರು ಮಾಡಿದ್ದರು.
"ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು ಅಂತ ಒಂದು ಲೈನ್ ಹೇಳಿದೆ. ಅಣ್ಣಾವ್ರು ಏನಿದು ಏನಿದು ಅಂದ್ರು. ಸರ್ ಹುಬ್ಬಳ್ಳಿಗೆ ಹೋಗುತ್ತೀರಲ್ಲ. ಜಟಕಗಾಡಿಯಲ್ಲಿ ಇಂತಹದ್ದೊಂದು ಹಾಡ್ಬಿಡಿ. ಆಮೇಲೆ ವಜ್ರಮುನಿ ಹುಡುಕಿ ಅಂದೆ. ಆಮೇಲೆ ಮುಂದಿನ ಸಾಲು ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು ಅಂದೆ. ತಗಲಾಕಿಕೊಳ್ತಲ್ಲಪ್ಪ ಬಡ್ಡಿ ಮಗಂದು ಅಂದ್ರು." ಎಂದು ಅಣ್ಣಾವ್ರು ಪ್ರತಿಕ್ರಿಯೆ ಕೊಟ್ಟಿದ್ದನ್ನು ಹಂಸಲೇಖ ಹಿಂದೊಮ್ಮೆ ನೆನಪಿಸಿಕೊಂಡಿದ್ದರು.
ಹಾಗೇ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಅಹಂ ಅನ್ನೋದು ಹೆಚ್ಚಿದೆ. ಆದರೆ, ನಾಗಾಭರಣ ತಾನು ನಿರ್ದೇಶಕ ಅನ್ನೋದನ್ನು ಪಕ್ಕಕ್ಕೆ ಇಟ್ಟು, ಕನ್ನಡ ನಾಡಲ್ಲಿ ಕನ್ನಡದ ಹಾಡೊಂದು ಹುಟ್ಟುವುದಕ್ಕೆ ಕಾರಣರಾದರು ಎಂದು ಅಂದು ಹಂಸಲೇಖ ಹೇಳಿಕೊಂಡಿದ್ದಾರೆ.


Click it and Unblock the Notifications











