ಅಣ್ಣಾವ್ರಿಗೆಂದು ಬರೆದ ಕಥೆ ವಿಷ್ಣುವರ್ಧನ್ ಪಾಲಾಗಿದ್ದೇಗೆ? ಆ ಸಿನಿಮಾ ಯಾವುದು ಗೊತ್ತೇ?
ಡಾ. ರಾಜ್ಕುಮಾರ್ ಹಾಗೂ ಡಾ.ವಿಷ್ಣುವರ್ಧನ್ ಇಬ್ಬರೂ ಕನ್ನಡ ಚಿತ್ರರಂಗದ ಎರಡು ಕಣ್ಣುಗಳಿದ್ದಂತೆ. ಇಬ್ಬರಿಗೂ ಅವರದ್ದೇ ಆದ ಅಭಿಮಾನಿ ಬಳಗವಿದೆ. ಅಣ್ಣಾವ್ರ ಸಿನಿಮಾ ಶೈಲಿನೇ ಬೇರೆ. ವಿಷ್ಣುದಾದನ ಸಿನಿಮಾ ಆಯ್ಕೆಗಳೇ ಬೇರೆ. ಆದರೆ, ಈ ಇಬ್ಬರು ಮಹಾನ್ ನಟರೂ ಸಿನಿಮಾ ಪ್ರೇಮಿಗಳನ್ನು ನಾಲ್ಕೈದು ದಶಕಗಳ ಕಾಲ ಬಿಡುವಿಲ್ಲದೆ ರಂಜಿಸಿದ್ದಾರೆ.
ಇಬ್ಬರು ನಟರ ಬಗ್ಗೆ ಇಂದಿಗೂ ಸಾಕಷ್ಟು ಕಥೆಗಳಿವೆ. ಅಣ್ಣಾವ್ರನ್ನು ಕಂಡರೆ ವಿಷ್ಣುದಾದಾಗೂ, ವಿಷ್ಣುದಾದರನ್ನು ಕಂಡರೆ ಅಣ್ಣಾವ್ರಿಗೂ ಆಗುತ್ತಿರಲಿಲ್ವಂತೆ. 'ಗಂಧದ ಗುಡಿ' ಘಟನೆಯ ಬಳಿಕ ಒಬ್ಬರ ಮೇಲೆ ಇನ್ನೊಬ್ಬರಿಗೆ ದ್ವೇಷ ಇತ್ತು ಅನ್ನೋ ಸುದ್ದಿಗಳು ಇಂದಿಗೂ ಹರಿದಾಡುತ್ತಲೇ ಇರುತ್ತವೆ. ಇನ್ನೊಂದು ಕಡೆ ಇಬ್ಬರ ಅಭಿಮಾನಿಗಳು ಕಿತ್ತಾಡಿದ್ದೂ, ಪರಸ್ಪರ ದ್ವೇಷ ಕಾರಿದ್ದೂ ಇದೆ.

ಆದರೆ, ರಾಜ್ಕುಮಾರ್ ಹಾಗೂ ವಿಷ್ಣುವರ್ಧನ್ ಅವರನ್ನು ಹತ್ತಿರದಿಂದ ಬಲ್ಲವರು ಈ ಎಲ್ಲಾ ಅಂತೆ-ಕಂತೆಗಳನ್ನು ತಳ್ಳಿ ಹಾಕಿದ್ದಾರೆ. ಇಬ್ಬರೂ ಒಬ್ಬರನೊಬ್ಬರು ಗೌರವಿಸುತ್ತಿದ್ದರು. ಸಿನಿಮಾರಂಗದಲ್ಲಿ ಎರಡು ತಂಡಗಳಾಗಿ ಕೆಲಸ ಮಾಡುತ್ತಿದ್ದರೂ, ಪರಸ್ಪರ ಒಳಿತನ್ನೇ ಬಯಸಿದ್ದಾರೆ. ಅದಕ್ಕೊಂದು ಸುಂದರ ಉದಾಹರಣೆ ಇಲ್ಲಿದೆ. ಅದೇನು ಅಂತ ತಿಳಿಯುವುದಕ್ಕೆ ಮುಂದೆ ಓದಿ.
ರಾಜ್ಕುಮಾರ್ ಪೌರಾಣಿಕ ಸಿನಿಮಾಗಳಿಂದ ಸಾಮಾಜಿಕ ಸಿನಿಮಾಗಳ ಕಡೆಗೆ ಮುಖ ಮಾಡಿದ ಸಮಯದಲ್ಲಿ ವಿಷ್ಣುವರ್ಧನ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಈ ಕಾರಣಕ್ಕೆ ಅಣ್ಣಾವ್ರ ಹಾಗೂ ವಿಷ್ಣುದಾದ ಅವರ ಸಿನಿಮಾಗಳ ಆಯ್ಕೆ ಬೇರೆಯಾಗಿರುತ್ತಿತ್ತು. ಆದರೆ, ಹಿರಿಯ ನಿರ್ದೇಶಕ ಭಾರ್ಗವ ಅವರಿಗೆ ಅಣ್ಣಾವ್ರು ನಟಿಸಿದ ಸಿನಿಮಾದ ರೀತಿಯಂತಯೇ ವಿಷ್ಣುವರ್ಧನ್ಗೂ ಡೈರೆಕ್ಟ್ ಮಾಡಬೇಕು ಎಂಬ ಆಸೆಯಿತ್ತು. ಆ ಸಿನಿಮಾವೇ 'ನಾ ನಿನ್ನ ಮರೆಯಲಾರೆ'.
'ನಾ ನಿನ್ನ ಮರೆಯಲಾರೆ' ಸಿನಿಮಾದಲ್ಲಿ ನಿರ್ದೇಶಕ ಭಾರ್ಗವ ಅವರು ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುತ್ತಾರೆ. ಈ ವೇಳೆ ಅಣ್ಣಾವ್ರ ಪಾತ್ರದಂತೆ ವಿಷ್ಣುವರ್ಧನ್ಗೂ ಒಂದು ಸಿನಿಮಾ ಮಾಡಬೇಕು ಅಂತ ಕನಸು ಕಂಡಿದ್ದರು. ಹೀಗಾಗಿ ಕಥೆಯನ್ನು ಹುಡುಕುತ್ತಿದ್ದರು. ಅದೇ ವೇಳೆ ತಮ್ಮ ಮನದ ಆಸೆಯನ್ನು ಅಣ್ಣಾವ್ರಿಗೇ ಹೆಚ್ಚಾಗಿ ಕಥೆಯನ್ನು ಬರೆಯುತ್ತಿದ್ದ ಚಿ. ಉದಯಶಂಕರ್ ಬಳಿ ಹೇಳಿಕೊಳ್ಳುತ್ತಾರೆ. ಕೂಡಲೇ ಅವರು ಡಾ.ರಾಜ್ಕುಮಾರ್ ಅವರಿಗೆ ಅಂತಾನೇ ಬರೆದಿದ್ದ ಕಥೆಯನ್ನು ಹೇಳುತ್ತಾರೆ. ಆದರೆ, ಭಾರ್ಗವ ಅವರಿಗೆ ಕಥೆ ಇಷ್ಟ ಆದರೂ ಈ ಕಥೆ ಬೇಡ ಅಂತ ಹೇಳಿದ್ದರು. ಅಣ್ಣಾವ್ರಿಗೆ ಬರೆದ ಕಥೆಯಾದರೆ ಬೇಡ ಎಂದು ಹೇಳುತ್ತಾರೆ. ಆಗ ಚಿ. ಉದಯ್ ಶಂಕರ್ ಕಥೆ ಬಗ್ಗೆ ಸ್ಪಷ್ಟನೆ ಕೊಟ್ಟ ಬಳಿಕ ಒಪ್ಪಿಕೊಳ್ಳುತ್ತಾರೆ ಎಂದು ಕನ್ನಡ ಮಾಣಿಕ್ಯ ಯೂಟ್ಯೂಬ್ ಚಾನೆಲ್ನಲ್ಲಿ ಹೇಳಲಾಗಿದೆ.

ರಾಜ್ಕುಮಾರ್ ಅವರನ್ನು ಗಮನದಲ್ಲಿ ಇಟ್ಟುಕೊಂಡು ಚಿ.ಉದಯಶಂಕರ್ ಕಥೆಯನ್ನು ಬರೆದಿದ್ದು ನಿಜ. ಈ ಕಾರಣಕ್ಕೆ ಭಾರ್ಗವ ಕಥೆ ಬೇಡ. ಈಗಾಗಲೇ ಇದೇ ವಿಚಾರಕ್ಕೆ ಸಮಸ್ಯೆ ಆಗಿದೆ ಎಂದಾಗ, ಉದಯ್ ಶಂಕರ್ ಹೇಳಿದ ಮಾತು ಸಮಾಧಾನ ತಂದಿತ್ತು. ಅಣ್ಣಾವ್ರಿಗಾಗಿಯೇ ಕಥೆ ಬರೆದಿದ್ದರೂ, ಅವರು ಈ ಕತೆಯನ್ನು ಮಾಡುವುದಿಲ್ಲ. ಯಾಕಂದ್ರೆ, ಈಗಾಗಲೇ ಇಂತಹ ಪಾತ್ರದಲ್ಲಿ ನಟಿಸಿದ್ದಾರೆ. ಹಾಗಾಗಿ ಕಥೆ ಓಕೆ ಮಾಡುವುದಿಲ್ಲ. ಹಾಗಾಗಿ ನೀವು ಈ ಕಥೆಯನ್ನು ಬಳಸಿಕೊಳ್ಳಬಹುದು ಎನ್ನುತ್ತಾರೆ.
ಆಗ ಚಿ.ಉದಯ್ಶಂಕರ ಕೊಟ್ಟ ಕತೆಯನ್ನಿಟ್ಟುಕೊಂಡು ಭಾರ್ಗವ ನಿರ್ದೇಶಿಸಿದ ಸಿನಿಮಾವೇ 'ಮತ್ತೆ ಹಾಡಿತು ಕೋಗಿಲೆ'. ಈ ಸಿನಿಮಾ ಕನ್ನಡ ಚಿತ್ರರಂಗದ ಬ್ಲಾಕ್ ಬಸ್ಟರ್ ಲಿಸ್ಟ ಸೇರಿಕೊಂಡಿದೆ. ಅಣ್ಣಾವ್ರ 'ನಾ ನಿನ್ನ ಮರೆಯಲಾರೆ' ಹಾಗೂ ವಿಷ್ಣುದಾದ ಅವರ 'ಮತ್ತೆ ಹಾಡಿತು ಕೋಗಿಲೆ' ಎರಡರಲ್ಲೂ ಕೆಲವು ಹೋಲಿಕೆಗಳಿತ್ತು. 'ನಾ ನಿನ್ನ ಮರೆಯಲಾರೆ' ಸಿನಿಮಾದಲ್ಲೂ ಅಣ್ಣಾವ್ರ ಪಾತ್ರದ ಹೆಸರು ಆನಂದ್ ಅಂತಾಗಿದ್ದರೆ, 'ಮತ್ತೆ ಹಾಡಿತು ಕೋಗಿಲೆ' ಸಿನಿಮಾದಲ್ಲಿ ವಿಷ್ಣು ಪಾತ್ರ ಕೂಡ ಆನಂದ್ ಆಗಿತ್ತು.


Click it and Unblock the Notifications











