"ನೀನೆ ಸಾಕಿದ ಗಿಣಿ..? ಹಾಡಿಗೆ ಕೊಡಲು ಆ ಸಿನಿಮಾ ತೆಗೆದ್ರಾ ಆರತಿ?; ಪುಟ್ಟಣ್ಣಗೆ ಉತ್ತರ ಕೊಟ್ಟ ಆ ಚಿತ್ರ ಯಾವುದು?
ಪುಟ್ಣಣ್ಣ ಕಣಗಾಲ್ ಸಿನಿಮಾಗಳು ಹೇಗೆ ಚರ್ಚೆಯಾಗುತ್ತಿದ್ದವೋ, ಹಾಗೇ ಅವರ ವೈಯಕ್ತಿಕ ಬದುಕು ಕೂಡ ಅಷ್ಟೇ ಚರ್ಚೆಯಾಗುತ್ತಿತ್ತು. ಅದರಲ್ಲೂ ಆರತಿಯೊಂದಿಗಿನ ಅವರ ಸಂಬಂಧ 70 ಹಾಗೂ 80ರ ದಶಕದಲ್ಲಿ ದೊಡ್ಡ ಮಟ್ಟಕ್ಕೆ ಚರ್ಚೆಯಾಗಿತ್ತು. ಪುಟ್ಟಣ್ಣ ಹಾಗೂ ಆರತಿ ಇಬ್ಬರೂ ಪ್ರೀತಿ ಮದುವೆ ಆಗಿದ್ದರು. ಆದರೆ, ಈ ಸಂಬಂಧ ಹೆಚ್ಚು ದಿನ ಉಳಿದಿರಲಿಲ್ಲ.
ಪುಟ್ಟಣ್ಣ ಕಣಗಾಲ್ ಹಾಗೂ ಆರತಿಯ ನಡುವೆ ಬಿರುಕು ಬಿಟ್ಟಿತ್ತು. ಇವರಿಬ್ಬರು ಬೇರೆಯಾಗಿದ್ದು ಏಕೆ ಅನ್ನುವುದಕ್ಕೆ ನೂರೆಂಟು ಕಥೆಗಳಿವೆ. ಅದೇನೇ ಇದ್ದರೂ, ಆರತಿಯಿಂದ ಪುಟ್ಟಣ್ಣ ಕಣಗಾಲ್ ಬೇರೆಯಾದ್ಮೇಲೆ ಎವರ್ಗ್ರೀನ್ ಸಿನಿಮಾ 'ಮಾನಸ ಸರೋವರ' ನಿರ್ದೇಶನ ಮಾಡಿದ್ದರು. ಈ ಸಿನಿಮಾದ ರಿಲೀಸ್ ಆದಾಗ, "ನೀನೇ ಸಾಕಿದ ಗಿಣಿ.." ಹಾಡು ನೋಡಿ, ಇದು ಆರತಿಗಾಗಿಯೇ ಬರೆಸಿದ್ದಾರೆ ಅನ್ನೋ ಸುದ್ದಿ ಹಬ್ಬಿದ್ದವು.

ಈ ಸುದ್ದಿಗಳು ಜೋರಾಗಿ ಚರ್ಚೆಯಾದ ಬಳಿಕ ಆರತಿ ಕೂಡ ಪುಟ್ಟಣ್ಣ ಕಣಗಾಲ್ಗೆ ಟಕ್ಕರ್ ಕೊಡಲು ಮುಂದಾದ್ರು ಅನ್ನೋ ಮಾತಿದೆ. ಹೀಗಾಗಿ ತ್ರಿಕೋನ ಪ್ರೇಮಕಥೆಯನ್ನು ಹೇಳುವ ಸಿನಿಮಾ ನಿರ್ಮಾಣ ಮಾಡಿದ್ದಾರೆ ಅನ್ನೋ ಸುದ್ದಿ ಹಬ್ಬಿತ್ತು. ಈ ಬಗ್ಗೆ ಟೋಟಲ್ ಕನ್ನಡ ಯೂಟ್ಯೂಬ್ ಚಾನೆಲ್ನಲ್ಲಿ ಹಿರಿಯ ಪತ್ರಕರ್ತ ಎನ್ ಎಸ್ ಶ್ರೀಧರಮೂರ್ತಿ ಸ್ವಾರಸ್ಯಕರವಾಗಿ ವಿವರಿಸಿದ್ದಾರೆ.
ಹಿರಿಯ ನಟಿ ಆರತಿಯವರನ್ನು ಹಿರಿಯ ಪತ್ರಕರ್ತ ಎನ್ ಎಸ್ ಶ್ರೀಧರಮೂರ್ತಿ ಹಲವು ಬಾರಿ ಸಂದರ್ಶನ ಮಾಡಿದ್ದಾರೆ. ಈ ವೇಳೆ ಪುಟ್ಟಣ್ಣ ಕಣಗಾಲ್ಗೆ ಟಕ್ಕರ್ ಕೊಡುವುದಕ್ಕೆ ಆರತಿ ಸಿನಿಮಾ ನಿರ್ಮಾಣ ಮಾಡಿದ್ದರಾ? ಅನ್ನುವ ಬಗ್ಗೆ ಪ್ರಶ್ನೆ ಮಾಡಿದ್ದರು. ಈ ಸಂಗತಿಯನ್ನು ಯೂಟ್ಯೂಬ್ ಚಾನೆಲ್ನಲ್ಲಿ ವಿವರಿಸಿದ್ದಾರೆ.
"ಮಾನಸ ಸರೋವರದ ಬಗ್ಗೆ ತುಂಬಾ ಜನ ಮಾತಾಡುತ್ತಾರೆ. ನೀನೆ ಸಾಕಿದ ಗಿಣಿ ಆರತಿಯವರ ಬಗ್ಗೆನೇ ಬರೆದ ಸಾಲು ಅಂತಾನೂ ಹೇಳುತ್ತಾರೆ. ಹಿಂದೆ ಒಂದು ಮಾತಿತ್ತು. ಅರ್ಚನಾ ಅನ್ನುವ ಸಿನಿಮಾ ಮಾನಸ ಸರೋವರಕ್ಕೆ ಉತ್ತರ ಆಗುತ್ತೆ. ಅರ್ಚನಾ ಆರತಿಯವರ ನಿಜ ಜೀವನದ ಕಥೆ ಅನ್ನುವ ಸುದ್ದಿಯಿತ್ತು. ನಾನು ಆರತಿ ಬಳಿ ಮಾತಾಡುವಾಗ ಹಾಗೇನು ಇಲ್ಲ. ಸಿನಿಮಾದ ಕಥೆ ಚೆನ್ನಾಗಿತ್ತು. ಮಾಡಬೇಕು ಅಂತ ಅಂದುಕೊಂಡೆ ಅಂದಿದ್ದರು." ಎಂದು ಹೇಳಿದ್ದಾರೆ.

ಆರತಿ ನಿರ್ಮಿಸಿದ್ದ 'ಅರ್ಚನಾ' ಸಿನಿಮಾ ಅವರದ್ದೇ ಕತೆ ಅಂತಾನೂ ಪುಕಾರು ಹಬ್ಬಿತ್ತು. ಅದಕ್ಕೆ ತಕ್ಕಂತೆ ಇದೊಂದು ತ್ರಿಕೋನ ಪ್ರೇಮಕಥೆಯಾಗಿತ್ತು. ಆರತಿ ಹಾಗೂ ಆಶೋಕ್ ಅವರ ಫೇವರಿಟ್ ಡೈರಕ್ಟರ್ ಮಣಿಮುರುಗನ್ ಆಕ್ಷನ್ ಕಟ್ ಹೇಳಿದ್ದರು. "ಅರ್ಚನಾ ಸಿನಿಮಾಗೆ ಆರು ಮಂದಿ ನಿರ್ಮಾಪಕರು. ಅದರಲ್ಲಿ ಆರತಿ ಕೂಡ ಒಬ್ಬರು. ಮಣಿ ಮುರಗನ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಾರೆ. ಮಣಿ ಮುರುಗನ್ ಆರತಿ ಮೆಚ್ಚಿನ ನಿರ್ದೇಶಕರು. ಅಶೋಕ್ ಹಾಗೂ ಆರತಿ ಸಿನಿಮಾಗಳನ್ನು ಮಣಿ ಮುರುಗನ್ ನಿರ್ದೇಶನ ಮಾಡಿದ್ದಾರೆ. " ಎನ್ನುತ್ತಾರೆ ಎನ್ ಎಸ್ ಶ್ರೀಧರಮೂರ್ತಿ.
"ಈ ಸಿನಿಮಾದಲ್ಲಿ ಆರತಿ, ಅಶೋಕ್ ಹಾಗೂ ಲೋಕೇಶ್ ಪ್ರಧಾನ ಪಾತ್ರದಲ್ಲಿ ಇದ್ದರು. ಇದೊಂದು ತ್ರಿಕೋನ ಪ್ರೇಮಕಥೆ. ಇದರಲ್ಲಿ ಆರ್.ಎನ್ ಜಯಗೋಪಲ್ ಅವರು ಬರೆದ ಬಿರುಗಾಳಿ ಅನ್ನುವ ಹಾಡಿದೆ. ಬಹಳ ಪ್ರಸಿದ್ಧವಾದ ಹಾಡಿದು. ಆದರೆ, ಈ ಸಿನಿಮಾ ಓಡಲಿಲ್ಲ. ಈ ಸಿನಿಮಾ ಓಡಿದ್ದರೆ, ಇನ್ನೊಂದು ಸಿನಿಮಾ ಮಾಡುತ್ತಿದ್ದೆ ಅಂತ ಆರತಿ ಹೇಳಿಕೊಂಡಿದ್ದರು." ಎಂದು ಎನ್ ಎಸ್ ಶ್ರೀಧರಮೂರ್ತಿ ಹೇಳುತ್ತಾರೆ.
ಆರತಿ ನಿರ್ಮಿಸಿದ ಅರ್ಚನಾ ಸಿನಿಮಾ ಫ್ಲಾಪ್ ಆದರೂ, 82 ಹಾಗೂ 83ರಲ್ಲಿ ಬರೊಬ್ಬರಿ 30 ಸಿನಿಮಾಗಳಲ್ಲಿ ನಟಿಸಿದ್ದರು. ಆರತಿ ನಂಬರ್ 1 ನಟಿಯಾಗಿ ಹೊರಹೊಮ್ಮಿದ್ದರು. ಇದೇ ವೇಳೆ ಆರತಿ ಹಾಗೂ ಅಶೋಕ್ ಕಾಂಬಿನೇಷನ್ನಲ್ಲಿ 'ರಾಜ ಮಹಾರಾಜ' ಸಿನಿಮಾ ಬಂದಿತ್ತು. ಆರತಿ ಮಾರ್ಡನ್ ಲುಕ್ನಲ್ಲಿ ಕೊಟ್ಟಿದ್ದರು. ಆಗ "ನಮ್ಮ ಮನೆ ಮಗಳು ದಾರಿ ತಪ್ಪಿದ ಹಾಗಾಗಿದೆ" ಅನ್ನೋ ಟೀಕೆಗಳು ಬಂದಿದ್ದವು.
"ಮಣಿ ಮುರುಗನ್ ನಿರ್ದೇಶಿಸಿದ ಮತ್ತೊಂದು ಸಿನಿಮಾ ರಾಜ ಮಹರಾಜ. ಆರತಿ, ಅಶೋಕ್ ಪ್ರಮುಖ ಪಾತ್ರದಲ್ಲಿ ನಟಿಸಿದ ಸಿನಿಮಾ. ಈ ಸಿನಿಮಾ ಯಾಕೆ ಚರ್ಚೆ ಆಯ್ತು ಅಂದ್ರೆ, ಆ ಕಾಲಕ್ಕೆ ಮಾಡರ್ನ್ ಅನಿಸಬಹುದಾದ ಡ್ರೆಸ್ ಅನ್ನು ಆರತಿ ಈ ಸಿನಿಮಾದಲ್ಲಿ ಹಾಕಿದ್ದರು. ಪತ್ರಿಕೆಗಳಲ್ಲಿ ನಮ್ಮ ಮನೆ ಮಗಳು ದಾರಿ ತಪ್ಪಿದ ಹಾಗಾಗಿದೆ ಅಂತ ಪ್ರೇಕ್ಷಕರು ಬರೆದರು. " ಎಂದಿದ್ದಾರೆ ಎನ್ ಎಸ್ ಶ್ರೀಧರಮೂರ್ತಿ.


Click it and Unblock the Notifications











