ಮನರಂಜನಾ ಕ್ಷೇತ್ರ ಮತ್ತಷ್ಟು ತುಟ್ಟಿ?: ಹೆಚ್ಚಾಗಲಿದೆಯೇ ಸಿನಿಮಾ ಟಿಕೆಟ್ ದರ?
ಕೊರೊನಾ ವೈರಸ್ ಲಾಕ್ಡೌನ್ನಿಂದ ಇಡೀ ಜಗತ್ತೇ ತತ್ತರಿಸಿದೆ. ಆದಾಯವಿಲ್ಲದೆ ಅನೇಕ ಕುಟುಂಬಗಳು ಬೀದಿಗೆ ಬಿದ್ದಿವೆ. ಲೆಕ್ಕವಿಲ್ಲದಷ್ಟು ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಹಾಗೆಯೇ ವೇತನ ಕಡಿತದ ಶಿಕ್ಷೆ ಅನುಭವಿಸುತ್ತಿದ್ದಾರೆ. ಮನರಂಜನಾ ಕ್ಷೇತ್ರದ ಕೂಡ ಸಂಕಷ್ಟಕ್ಕೆ ಸಿಲುಕಿದೆ.
Recommended Video
ಚಿತ್ರೀಕರಣ ಮತ್ತು ಚಿತ್ರಪ್ರದರ್ಶನಗಳು ನಡೆದರೆ ಮಾತ್ರ ಮನರಂಜನಾ ಜಗತ್ತು ನಡೆಯುವುದು. ಚಿತ್ರರಂಗವನ್ನು ನೆಚ್ಚಿಕೊಂಡ ಸಾವಿರಾರು ಕುಟುಂಬಗಳಿಗೆ ಇಂದು ದುಡಿಮೆಯಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಇತರೆ ಕ್ಷೇತ್ರಗಳಲ್ಲಿ ಚಟುವಟಿಕೆಗಳು ಶುರುವಾಗುವ ಸಾಧ್ಯತೆ ಇದ್ದರೂ, ಸಿನಿಮಾ ರಂಗ ಚೇತರಿಸಿಕೊಳ್ಳಲು ವರ್ಷಗಳೇ ಬೇಕಾದೀತು. ಏಕೆಂದರೆ ಚಿತ್ರರಂಗ ಅವಲಂಬಿಸಿರುವುದು ಜನರನ್ನು.
ಪ್ರೇಕ್ಷಕರು ಇದ್ದರೆ ಮಾತ್ರವೇ ಚಿತ್ರರಂಗ ನಡೆಯುತ್ತದೆ. ಹಣ ಹುಟ್ಟುತ್ತದೆ, ಅದರಿಂದ ಸಿನಿ ಕಾರ್ಮಿಕರು, ನಿರ್ಮಾಪಕರು ಮತ್ತು ಇತರರಿಗೆ ಆದಾಯ ಬರುತ್ತದೆ ಹಾಗೆಯೇ ಹೊಸ ಸಿನಿಮಾಗಳ ಸೃಷ್ಟಿಯಾಗುತ್ತದೆ. ಆದರೆ ಚಿತ್ರರಂಗ ಆದಾಯವಿಲ್ಲದೆ ಸಂಕಷ್ಟಕ್ಕೆ ಸಿಲುಕಿದೆ. ಅದನ್ನು ನೆಚ್ಚಿಕೊಂಡವರ ಬದುಕೂ ಅತಂತ್ರವಾಗಿದೆ. ಮುಂದೆ ಓದಿ...

ಐದು ರೂ. ಹೆಚ್ಚಳಕ್ಕೆ ಪ್ರಸ್ತಾಪ
ಸಂಕಷ್ಟದಲ್ಲಿರುವ ಚಿತ್ರರಂಗ ಮತ್ತು ನಿರ್ಮಾಪಕರಿಗೆ ನೆರವಾಗಲು ಕನ್ನಡ ಚಿತ್ರರಂಗ ಟಿಕೆಟ್ ದರ ಏರಿಕೆಯ ಪ್ರಸ್ತಾಪ ಇರಿಸಿದೆ. ಸಿನಿಮಾ ಟಿಕೆಟ್ಗಳ ಮೇಲೆ 5 ರೂಪಾಯಿ ಹೆಚ್ಚಳ ಮಾಡಬೇಕು ಎನ್ನುವುದು ನಿರ್ಮಾಪಕರ ಬೇಡಿಕೆಯಾಗಿದೆ.

ಯಡಿಯೂರಪ್ಪಗೆ ಮನವಿ
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಗುರುವಾರ ಭೇಟಿ ಮಾಡಿದ್ದ ಚಿತ್ರರಂಗದ ಗಣ್ಯರ ನಿಯೋಗ, ಚಿತ್ರೀಕರಣ ಆರಂಭ, ಚಿತ್ರಪ್ರದರ್ಶನಗಳಿಗೆ ಅನುಮತಿ, ಚಿತ್ರೋದ್ಯಮಕ್ಕೆ ಅನುದಾನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಇರಿಸಿತ್ತು. ಅದರಲ್ಲಿ ನಿರ್ಮಾಪಕರ ಸಂಘದಿಂದ ಟಿಕೆಟ್ ದರ ಹೆಚ್ಚಳದ ಪ್ರಸ್ತಾಪವೂ ಸೇರಿದೆ.

ಕ್ಷೇಮ ನಿಧಿ ಸ್ಥಾಪನೆಗೆ ಮನವಿ
'ಟಿಕೆಟ್ ಮೇಲೆ ಐದು ರೂ ಜಾಸ್ತಿ ಮಾಡಿ, ಅದರಿಂದ ಬಂದ ಹಣವನ್ನು ನಿರ್ಮಾಪಕರು, ಹಂಚಿಕೆದಾರರಿಗೆ ಸಹಾಯ ಆಗುವಂತೆ ಕ್ಷೇಮ ನಿಧಿ ಮಾಡುವಂತೆ ಕೇಳಿದ್ದೇವೆ. ಈ ಬೇಡಿಕೆಗೆ ಒಪ್ಪಿಕೊಳ್ಳುತ್ತಾರೋ ಬಿಡುತ್ತಾರೋ ಗೊತ್ತಿಲ್ಲ' ಎಂದು ನಿರ್ಮಾಪಕ ಸಾ.ರಾ ಗೋವಿಂದು 'ಫಿಲ್ಮಿಬೀಟ್'ಗೆ ತಿಳಿಸಿದರು.

ಸರ್ಕಾರಕ್ಕೆ ಬಿಟ್ಟಿದ್ದು
'ಜನರು ಕಷ್ಟದಲ್ಲಿದ್ದಾರೆ. ಇಲ್ಲ ಎನ್ನುವುದು ಸಾಧ್ಯವೇ ಇಲ್ಲ. ಆದರೆ ಚಿತ್ರೋದ್ಯಮದ ಸಮಸ್ಯೆಯನ್ನೂ ಒಂದು ಕಡೆ ನೋಡಬೇಕು. ಆನ್ಲೈನ್ನಲ್ಲಿ ಟಿಕೆಟ್ ಖರೀದಿಸುವಾಗ ಪ್ರೇಕ್ಷಕರು 30-40 ರೂ ಜಾಸ್ತಿ ಕೊಡುತ್ತಾರೆ. ಹಾಗಾಗಿ 5 ರೂ ಹೆಚ್ಚು ಎನಿಸುವುದಿಲ್ಲ. ನಾವು ಪ್ರಸ್ತಾಪ ಇರಿಸಿರುವುದಷ್ಟೇ. ಸರ್ಕಾರ ಎಷ್ಟು ಹೆಚ್ಚು ಮಾಡುತ್ತದೆಯೋ ತಿಳಿದಿಲ್ಲ' ಎಂದು ಹೇಳಿದರು.

ಕೇಂದ್ರ ಸರ್ಕಾರವೇ ಅನುಮತಿ ನೀಡಬೇಕು
'ಮುಖ್ಯಮಂತ್ರಿಗಳು ಸದ್ಯದ ಪರಿಸ್ಥಿತಿಯಲ್ಲಿ ಚಿತ್ರೀಕರಣ ಪ್ರಾರಂಭ ಮಾಡಲು ಅನುಮತಿ ನೀಡುವ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಈ ಕುರಿತು ಆಲೋಚನೆ ಮಾಡುವುದಾಗಿ ಹೇಳಿದ್ದಾರೆ. ಆದರೆ ಚಿತ್ರಮಂದಿರ ಮತ್ತು ಮಾಲ್ಗಳನ್ನು ತೆರೆಯುವ ನಿರ್ಧಾರವನ್ನು ಕೇಂದ್ರ ಸರ್ಕಾರವೇ ತೆಗೆದುಕೊಳ್ಳಬೇಕು ಎಂದಿದ್ದಾರೆ' ಎಂದು ವಿವರಿಸಿದರು.

ಪ್ರೇಕ್ಷಕರಿಗೆ ಮಿತಿ ಹೇರಿದರೆ ಕಷ್ಟ
ಚಿತ್ರಮಂದಿರಗಳನ್ನು ತೆರೆಯಲು ಅವಕಾಶ ನೀಡಿ, ಪ್ರೇಕ್ಷಕರ ಸಂಖ್ಯೆಗೆ ಮಿತಿ ಹೇರಿದರೂ ಕಷ್ಟವಾಗುತ್ತದೆ. ಏಕೆಂದರೆ ಚಿತ್ರಮಂದಿರಗಳು ಹೌಸ್ ಫುಲ್ ಆದರೆ 1 ಲಕ್ಷದವರೆಗೆ ಗಳಿಕೆ ಆಗುತ್ತದೆ. ನಿರ್ಬಂಧ ವಿಧಿಸಿದರೆ ಅದು 30-35 ಸಾವಿರ ರೂ. ಇಳಿಯುತ್ತದೆ. ಇದರಿಂದ ನಿರ್ಮಾಪಕರಿಗೆ ಮತ್ತಷ್ಟು ನಷ್ಟವಾಗುತ್ತದೆ. ಸಾಮಾನ್ಯವಾಗಿ ಪ್ರೇಕ್ಷಕರು ಬರುವುದು ಮೊದಲ ವಾರದ ಆರಂಭದ ಮೂರು ನಾಲ್ಕು ದಿನ ಮಾತ್ರ. ನಂತರ ಜನರನ್ನು ನಿರೀಕ್ಷೆ ಮಾಡಲು ಆಗುವುದಿಲ್ಲ. ಈಗಿನ ಸನ್ನಿವೇಶಲ್ಲಿ ಜನರು ಚಿತ್ರಮಂದಿರಕ್ಕೆ ಬರುವುದೇ ಅನುಮಾನ. ಬಸ್ ಬಿಟ್ಟಿದ್ದರೂ ಅವು ಖಾಲಿ ಓಡಾಡುತ್ತಿವೆ. ಜನರಿಗೆ ಭಯ ಇದೆ. ಏಕೆಂದರೆ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಅವರು ಆತಂಕ ಹಂಚಿಕೊಂಡರು.

ಚಿತ್ರರಂಗ ಉಳಿಯಲು ಒಂದು ವರ್ಷ ಬೇಕು
ಈಗಿನ ಪರಿಸ್ಥಿತಿಯನ್ನು ನೋಡಿದಾಗ ಚಿತ್ರರಂಗ ಸುಧಾರಿಸಿಕೊಳ್ಳಲು ಒಂದು ವರ್ಷವಂತೂ ಬೇಕು. ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಬಹಳ ಕಷ್ಟಪಡಬೇಕಿದೆ. ಅದಕ್ಕಾಗಿ ಚಿತ್ರೀಕರಣ ನಡೆಸಲು ಅನುಮತಿ ಕೋರಿದ್ದೇವೆ. ಸಿನಿಮಾ ನೆಚ್ಚಿಕೊಂಡ ಕಾರ್ಮಿಕರಿಗೆ ಎಷ್ಟು ದಿನ ಹೀಗೆ ಬೇರೆ ರೀತಿ ಸಹಾಯ ಮಾಡಲು ಸಾಧ್ಯ? ಚಿತ್ರೀಕರಣ ಶುರುವಾದರೂ ನಿರ್ಮಾಪಕರಿಗೆ ಖರ್ಚು ಹೆಚ್ಚಾಗುತ್ತದೆ. ಏಕೆಂದರೆ ಇಲ್ಲಿ ಕಾರ್ಮಿಕರ ಮಿತಿ ಹಾಕಲು ಆಗುವುದಿಲ್ಲ. ಯಾರು ಯಾವ ಕೆಲಸ ಮಾಡಬೇಕೋ ಅವರೇ ಅದನ್ನು ಮಾಡಬೇಕು. ಈ ಎಲ್ಲ ಸವಾಲುಗಳ ನಡುವೆ ಚಿತ್ರೋದ್ಯಮವನ್ನು ಉಳಿಸಬೇಕಿದೆ ಎಂದು ತಿಳಿಸಿದರು.


Click it and Unblock the Notifications











