ರೈಲಿನಲ್ಲಿ.. ವಿದೇಶದಲ್ಲಿ.. ಆಫ್ರಿಕಾದ ಕಾಡಿನಲ್ಲಿ ಮೊದಲು ಚಿತ್ರೀಕರಣ ಮಾಡಿದ್ದೇ ದ್ವಾರಕೀಶ್; ಕುಳ್ಳನ ಪ್ರಯೋಗಗಳೇನು?
ಕನ್ನಡದ ಕುಳ್ಳ ಅಂತಲೇ ಕರೆಸಿಕೊಳ್ಳುತ್ತಿದ್ದ ದ್ವಾರಕೀಶ್ ಕನ್ನಡ ಚಿತ್ರರಂಗದ ಒಂದು ಮುತ್ತು. ಈ ಚಿತ್ರರಂಗ ತನ್ನ ಅಸ್ತಿತ್ವವನ್ನು ಇಷ್ಟು ದಿನ ಉಳಿಸಿಕೊಳ್ಳುವುದಕ್ಕೆ ಇವರ ಕೊಡುಗೆ ಕೂಡ ಅಷ್ಟೇ ಪ್ರಮುಖವಾಗಿದೆ. ಸಿನಿಮಾನೇ ನನ್ನ ಜೀವ ಅಂತ ಬದುಕಿದವರಲ್ಲಿ ದ್ವಾರಕೀಶ್ ಕೂಡ ಒಬ್ಬರು. ಹೀಗಾಗಿ ಇವರು ಬದುಕಿದ 80 ವರ್ಷಗಳಲ್ಲಿ ಅತೀ ಹೆಚ್ಚು ಸಮಯ ಸಿನಿಮಾದಲ್ಲಿಯೇ ಕಳೆದಿದ್ದಾರೆ.
ಕನ್ನಡದ ಪ್ರೇಕ್ಷಕರಿಗೆ ಏನಾದರೂ ಹೊಸತನ್ನು ಕೊಡಬೇಕು ಅನ್ನೋ ತುಡಿತ ಯಾವಾಗಲೂ ಇತ್ತು. ಬೇರೆಯವರು ಮಾಡಿದಂತೆ ಕನ್ನಡ ಚಿತ್ರರಂಗದಲ್ಲೂ ಸಿನಿಮಾ ತೆಗೆಯಬೇಕು. ಕನ್ನಡದ ಸಿನಿಪ್ರಿಯರಿಗೆ ವಿಶಿಷ್ಠ ಅನುಭವವನ್ನು ಕೊಡಬೇಕು ಅನ್ನೋ ಹಂಬಲ ಇಟ್ಟುಕೊಂಡೇ ಪ್ರಯೋಗಗಳಿಗೆ ಮುಂದಾಗಿದ್ದರು. ಹೀಗೆ ಪ್ರಯೋಗಕ್ಕೆ ಇಳಿದ ಸಿನಿಮಾಗಳಲ್ಲಿ ಕೆಲವು ಗೆದ್ದಿವೆ. ಮತ್ತೆ ಕೆಲವು ಸೋತಿವೆ.
ದ್ವಾರಕೀಶ್ ತಮ್ಮ ವೃತ್ತಿ ಬದುಕಿನಲ್ಲಿ ಹಲವು ಸಿನಿಮಾಗಳಲ್ಲಿ ಪ್ರಯೋಗಗಳನ್ನು ಮಾಡಿದ್ದಾರೆ. ಅವುಗಳಲ್ಲಿ ಆಯ್ದ ಕೆಲವು ಸಿನಿಮಾಗಳು ಇಲ್ಲಿವೆ. ಇದು ಕನ್ನಡ ಚಿತ್ರರಂಗದ ಮಟ್ಟಿಗೆ ಹೊಸ ಪ್ರಯತ್ನ ಆಗಿತ್ತು. ಸಿನಿಪ್ರಿಯರು ಕೂಡ ಅಷ್ಟೇ ಇಷ್ಟ ಪಟ್ಟು ಸಿನಿಮಾ ನೋಡಿದ್ದರು. ದ್ವಾರಕೀಶ್ ಪ್ರಯೋಗ ಮಾಡಿದ ಆ ನಾಲ್ಕು ಸಿನಿಮಾಗಳಿವು.

ರೈಲಿನಲ್ಲಿ ಕಿಟ್ಟು ಪುಟ್ಟು
ದ್ವಾರಕೀಶ್ 'ಕಿಟ್ಟು ಪುಟ್ಟು' ಸಿನಿಮಾ ಮಾಡುತ್ತಿದ್ದರು. ಈ ಸಿನಿಮಾ ಬಾಕ್ಸಾಫೀಸ್ನಲ್ಲಿ ಉತ್ತಮ ಗಳಿಕೆ ಮಾಡಿತ್ತು. ವಿಷ್ಣುವರ್ಧನ್ ಹಾಗೂ ದ್ವಾರಕೀಶ್ ಕಾಂಬಿನೇಷನ್ನಲ್ಲಿ ಈ ಸಿನಿಮಾ ಬಂದಿತ್ತು. ವಿಶೇಷ ಅಂದ್ರೆ, 'ಕಿಟ್ಟು ಪುಟ್ಟು'ನಲ್ಲಿ ವಿಷ್ಣುವರ್ಧನ್ಗೆ 30 ಸೀನ್ ಇದ್ದರೆ, ದ್ವಾರಕೀಶ್ಗೆ 70 ಸೀನ್ ಇತ್ತು. ಆದರೂ, ವಿಷ್ಣುವರ್ಧನ್ ಬಂದು ನಟಿಸಿದ್ದರು. ಈ ಸಿನಿಮಾದ ಹಾಡುಗಳು ಹಿಟ್ ಆಗಿದ್ದವು. ಅದರಲ್ಲೊಂದು "ಕಾಲವನ್ನು ತಡೆಯೋರು ಯಾರು ಇಲ್ಲ.." ಈ ಹಾಡನ್ನು ರೈಲಿನಲ್ಲಿ ಚಿತ್ರೀಕರಣ ಮಾಡಲಾಗಿತ್ತು. ಇದು ರೈಲಿನಲ್ಲಿ ಚಿತ್ರೀಕರಿಸಿದ ಮೊದಲ ಹಾಡಾಗಿತ್ತು.

ಸಿಂಗಾರಪುರದಲ್ಲಿ ರಾಜ ಕುಳ್ಳ
'ಕಿಟ್ಟು ಪುಟ್ಟು' ಮಾಡುತ್ತಿರುವಾಗಲೇ 'ಉಳಗಂ ಸುಟ್ರುಂ ವಾಲಿಬನ್' ಸಿನಿಮಾ ನೋಡಿದ್ದರು. ಎಂಜಿಆರ್ ಈ ಸಿನಿಮಾದ ಹೀರೊ. ಸಿಂಗಾಪುರ, ಮಲೇಷ್ಯಾದಲ್ಲಿ ಸಿನಿಮಾವನ್ನು ಚಿತ್ರೀಕರಣ ಮಾಡಿದ್ದರು. ಈ ಸಿನಿಮಾ ನೋಡಿ ದ್ವಾರಕೀಶ್ಗೆ ನಾವ್ಯಾಕೆ ವಿದೇಶದಲ್ಲಿ ಸಿನಿಮಾ ಮಾಡಬಾರದು ಅಂತ ಅನಿಸಿತ್ತು. ಹೀಗೆ ಸಿನಿಮಾ ನೋಡಿದಾಗ ಹೊಳೆದ ಸಿನಿಮಾವೇ 'ಸಿಂಗಾಪುರದಲ್ಲಿ ರಾಜ ಕುಳ್ಳ'. ಸುಮಾರು 30 ದಿನಗಳ ಕಾಲ ಸಿಂಗಾಪುರದಲ್ಲಿ ಶೂಟಿಂಗ್ ಮಾಡಿದ್ದರು. ಇದು ವಿದೇಶದಲ್ಲಿ ಚಿತ್ರೀಕರಿಸಿದ ಮೊದಲ ಕನ್ನಡ ಸಿನಿಮಾ ಆಯ್ತು.

'ಆಫ್ರಿಕಾದಲ್ಲಿ ಶೀಲಾ'
ಅದೇ ರೀತಿ ದ್ವಾರಕೀಶ್ ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದರು. ಅದುವೇ 'ಆಫ್ರಿಕಾದಲ್ಲಿ ಶೀಲಾ'. ಈ ಸಿನಿಮಾವನ್ನು ಏಕಕಾಲಕ್ಕೆ ಐದು ಭಾಷೆಗಳಲ್ಲಿ ಚಿತ್ರೀಕರಣ ಮಾಡಿದ್ದರು. ಆಫ್ರಿಕಾದ ಕಾಡುಗಳಲ್ಲಿ ಸಿನಿಮಾವನ್ನು ಚಿತ್ರೀಕರಣ ಮಾಡಿದ್ದರು. ಹಾಲಿವುಡ್ ಸಿನಿಮಾದ ಪ್ರೇರಣೆಯಿಂದ 'ಆಫ್ರಿಕಾದಲ್ಲಿ ಶೀಲಾ' ಕೈಗೆತ್ತಿಕೊಂಡಿದ್ದರು. ಇದು ಕೂಡ ಆಫ್ರಿಕಾದಲ್ಲಿ ಚಿತ್ರೀಕರಿಸಿದ ಮೊದಲ ಸಿನಿಮಾ ಎನಿಸಿಕೊಂಡಿತ್ತು. ಆದರೆ, ಈ ಸಿನಿಮಾ ಬಾಕ್ಸಾಫೀಸ್ನಲ್ಲಿ ಗೆಲ್ಲಲಿಲ್ಲ.

ಹೊಸ ಪ್ರಯತ್ನ 'ಶ್ರುತಿ'
ಶ್ರುತಿ ಸಿನಿಮಾ ಮಾಡಿವಾಗ ದ್ವಾರಕೀಶ್ ಸಿನಿಮಾಗಳು ಸಾಲು ಸಾಲಾಗಿ ಸೋತಿದ್ದವು. ಹೀಗಾಗಿ ಹಣ ಕಾಸಿನ ತೊಂದರೆಯಲ್ಲೂ ಸಿಕ್ಕಿಕೊಂಡಿದ್ದರು. ಈ ವೇಳೆ ತಮಿಳಿನ ಖ್ಯಾತ ನಿರ್ಮಾಣ ಸಂಸ್ಥೆ ಮಾಲೀಕರು 'ಪುದು ವಸಂತಂ' ಅನ್ನುವ ಸಿನಿಮಾ ತೆಗೆದಿದ್ದರು. ಈ ಸಿನಿಮಾ ನೋಡಿ ಅಭಿಪ್ರಾಯ ಸೂಚಿಸುವಂತೆ ಕರೆ ನೀಡಿದ್ದರು. ಆ ಸಿನಿಮಾ ನೋಡಿ ದ್ವಾರಕೀಶ್ ಇಷ್ಟ ಆಗಿತ್ತು. ಹೀಗಾಗಿ ರಿಮೇಕ್ ರೈಟ್ಸ್ ತೆಗೆದುಕೊಂಡು ಬಂದಿದ್ದರು. ಈ ಬಾರಿ ಹೊಸಬರನ್ನು ಹಾಕಿಕೊಂಡು ಸಿನಿಮಾ ಮಾಡಲು ನಿರ್ಧರಿಸಿದ್ದರು. ಸೋಲಿನ ನಡುವೆಯೂ ಪ್ರಯೋಗಕ್ಕೆ ಮುಂದಾಗಿದ್ದರು. ಆ ವೇಳೆ ಕನ್ನಡ ಚಿತ್ರರಂಗಕ್ಕೆ ಸಿಕ್ಕ ನಟಿಯೇ ಶ್ರುತಿ. ಮೊದಲು ಪ್ರಿಯದರ್ಶಿನಿ ಅಂತಿದ್ದ ಹೆಸರನ್ನು ದ್ವಾರಕೀಶ್ ಅವರೇ ಶ್ರುತಿ ಅಂತ ಬದಲಾಯಿಸಿದ್ದರು. ಈ ಸಿನಿಮಾ ಸೂಪರ್ ಹಿಟ್ ಆಗಿದ್ದರೂ, ದ್ವಾರಕೀಶ್ಗೆ ಲಾಭ ತಂದುಕೊಡಲಿಲ್ಲ.


Click it and Unblock the Notifications











