ಲೋಕಲ್ ಡಾನ್ಗೆ ಅಣ್ಣಾವ್ರು ಕತ್ತಿ ತೋರಿದ ಘಟನೆ ನಿಮಗೆ ಗೊತ್ತೇ? ಇದು ವರನಟನ ಕೋಪದ ಕಥೆ!
ಕನ್ನಡ ಚಿತ್ರರಂಗ ಕಂಡ ಮೇರು ನಟ ಡಾ. ರಾಜ್ಕುಮಾರ್. ಇವರ ಅಭಿನಯಕ್ಕೆ, ಸಿನಿಮಾಗಳಿಗೆ ಮರುಳಾಗದವರು ಯಾರಿಲ್ಲ ಹೇಳಿ. ಹಾಗೇ ಅಣ್ಣಾವ್ರ ಸರಳತೆ, ಸೌಮ್ಯಾ ಸ್ವಭಾವ ಹಾಗೂ ಮೃದುವಾದ ಮಾತಿಗೂ ಅಷ್ಟೇ ಜನಪ್ರಿಯರಾದವರು. ಬಹುಶ: ಬಹುತೇಕ ಮಂದಿ ಅಣ್ಣಾವ್ರು ಕೋಪ ಮಾಡಿಕೊಂಡಿದ್ದನ್ನು ನೋಡಿಯೇ ಇಲ್ಲ.
ಅಣ್ಣಾವ್ರನ್ನು ತೀರಾ ಹತ್ತಿರದಿಂದ ಬಲ್ಲವರು ಮಾತ್ರ ಕೆಲವು ಘಟನೆಗಳು ಗೊತ್ತಷ್ಟೇ. ಅಂತಹವರಲ್ಲಿ ಹಿರಿಯ ನಿರ್ದೇಶಕ ಭಗವಾನ್ ಕೂಡ ಒಬ್ಬರು. ದಿವಂಗತ ನಿರ್ದೇಶಕ ಭಗವಾನ್ ಅವರು ಬದುಕಿದ್ದಾಗ ಅಣ್ಣಾವ್ರ ಕೋಪ ಹೇಗಿತ್ತು? ಎನ್ನುವ ಘಟನೆಯನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದರು. ಆ ಸಂದರ್ಶನವನ್ನು ಡೈಲಿ ಮಾಧ್ಯಮ ಯೂಟ್ಯೂಬ್ ಚಾನೆಲ್ನಲ್ಲಿ ಅಪ್ಲೋಡ್ ಮಾಡಲಾಗಿದೆ.

ರಾಜ್ಕುಮಾರ್ ಅವರಿಗೆ ಕೋಪ ಬಂದಿದ್ದನ್ನು ಒಮ್ಮೆ ನಾನು ನೋಡಿದ್ದೇನೆ ಎಂದು ಭಗವಾನ್ ಅವರು ಹೇಳಿಕೊಂಡಿದ್ದರು. ಅದು ಯಾವ ಸಂದರ್ಭ? ಘಟನೆ ಏನು? ಅನ್ನೋದನ್ನು ಸ್ವಾರಸ್ಯಕರವಾಗಿ ಹೇಳಿಕೊಂಡಿದ್ದರು. "ಕೋಪ ಅಂದರೆ ಏನು ಕೆಂಡದಂತಹ ಕೋಪ. ಅದಕ್ಕೂ ನಾನು ಪ್ರತ್ಯಕ್ಷದರ್ಶಿ. ನಾನು ನಾಟಕಗಳನ್ನು ಮಾಡುತ್ತಿದ್ದೆವು. ನಂಜನಗೂಡಿನಲ್ಲಿ ಕ್ಯಾಂಪ್. ನಾಟಕಗಳು ನಡೆಯುತ್ತಿತ್ತು. ಅಲ್ಲಿನ ಕಾಂಟ್ರ್ಯಾಕ್ಟರ್ ಒಬ್ಬ ಡಾನ್. ನಮಗೆ ಯಾರು ದುಡ್ಡು ಕೊಟ್ಟರೆ ಏನು? ಎನ್ನುವ ಲೆಕ್ಕಾಚಾರದಲ್ಲಿ ನಾವು ಇದ್ವಿ. ಆದರೆ, ಡಾನ್ ಎರಡು ದಿನಗಳ ನಾಟಕದ ದುಡ್ಡು ಕೊಟ್ಟಿರಲಿಲ್ಲ. 15 ಸಾವಿರ ರೂಪಾಯಿ ಕಲೆಕ್ಷನ್ ಆಗಿದೆ. ಆದರೆ, ನಮಗೆ ಕೊಡಬೇಕಿದ್ದ ದುಡ್ಡು ಮಾತ್ರ ಕೊಟ್ಟಿರಲಿಲ್ಲ" ಎಂದು ಆ ಘಟನೆಯನ್ನು ನೆನಪಿಸಿಕೊಂಡಿದ್ದರು.
ಡಾನ್ ಎರಡು ನಾಟಕದ ದುಡ್ಡು ಕೊಟ್ಟಿಲ್ಲದೆ ಇದ್ದಿದ್ದರಿಂದ ಜಿ ವಿ ಅಯ್ಯರ್ ಅವರು ಪರದೆ ಎತ್ತದಂತೆ ಹೇಳಿದ್ದರು. ಆಗ ಡಾನ್ ಅಲ್ಲಿಗೆ ಕೋಪದಿಂದ ಭಗವಾನ್ ಅವರಿಗೆ ಅವಾಜ್ ಹಾಕಿದ್ದ. ಮುಂದೇ ದೊಡ್ಡ ಸೀನ್ ನಡೆದು ಹೋಯ್ತು. "ನನಗೆ ಜಿವಿ ಅಯ್ಯರ್ ಅವರು ಅವನು ದುಡ್ಡು ಕೊಡುವವರೆಗೂ ಪರದೆ ಎತ್ತಬೇಡ ಅಂತ ಹೇಳಿದ್ದರು. ಅವರನು ಆರು ಗಂಟೆಗೆ ಬಂದು ಏನ್ರಿ ಫಸ್ಟ್ ಬೆಲ್ ಹೊಡೆಯಲಿಲ್ವಲ್ಲ ಅಂದ. ಫಸ್ಟ್ ಬೆಲ್ ಹೊಡೆಯಲ್ಲ ಅಂದೆ. ಆ ಮೇಲೆ 6.15ಕ್ಕೆ ಬಂದ. ಏನು ಬೆಲ್ ಹೊಡೆಯೋದಿಲ್ವಾ ಅಂದ. ಇಲ್ಲಪ್ಪ ಬೆಲ್ ಹೊಡೆಯುವುದಿಲ್ಲ. ಯಾಕೆ ಹೊಡೆಯಲ್ಲ ಅಂದ? ನೀವು ದುಡ್ಡು ಕೊಟ್ಟಿಲ್ಲ. ಅದಕ್ಕೆ ಹೊಡೆಯೋದಿಲ್ಲ ಅಂದೆ. ಸರಿ ಎಲ್ಲಿ ನಿಮ್ಮ ಐರಿ (ಜಿವಿ ಅಯ್ಯರ್) ಅಂದ. ಅವರಿಬ್ಬರೂ ನಂಜನಗೂಡಿನವರೇ. ಏನೋ ಐರಿ ಪರದೆ ತೆಗೀಬೇಡ ಅಂದಿದಿಯಂತೆ ಅಂದ. ಆಗ ಜಿವಿ ಅಯ್ಯರ್ ನೀನು ದುಡ್ಡು ಕೊಡುವವರೆಗೂ ಪರದೆ ತೆಗೆಯಲ್ಲ ಅಂದರು." ಎಂದು ಆ ಘಟನೆಯ ತೀವ್ರತೆಯನ್ನು ವಿವರಿಸಿದ್ದರು.

ಜಿವಿ ಅಯ್ಯರ್ ಹೀಗೆ ಹೇಳಿದ ಕೂಡಲೇ ಆ ಡಾನ್ಗೆ ಕೋಪ ಬಂದಿತ್ತು. ಜಿ ವಿ ಅಯ್ಯರ್ಗೆ ಅವಾಜ್ ಹಾಕುವುದಕ್ಕೆ ಶುರು ಮಾಡಿದ್ದ. ಒಳ್ಳೆಯ ಮಾತಿನಲ್ಲಿ ಪರದೆ ಎತ್ತಿಸುತ್ತೀಯಾ ಇಲ್ವಾ ಎಂದು ಅವಾಜ್ ಬಿಟ್ಟಿದ್ದ. ಅಲ್ಲದೆ ಜಿವಿ ಅಯ್ಯರ್ ಅವರಿಗೆ ನಿನ್ನ ಬೋಡು ತಲೆಯನ್ನು ಚೂರು ಚೂರು ಮಾಡುತ್ತೇನೆ. ಅಲ್ಲೇ ಅಣ್ಣಾವ್ರು ಮೇಕಪ್ ಹಾಕಿಕೊಳ್ಳುತ್ತಿದ್ದರು. ಅವರಿಗೆ ಮೀಸೆಯನ್ನು ಅಂಟಿಸುತ್ತಿದ್ದರು. ಯಾವಾಗ ಕೆಟ್ಟ ಪದವನ್ನು ಉಪಯೋಗಿಸಿದರೋ ಆಗ ಅಣ್ಣಾವ್ರ ಕಣ್ಣುಗಳು ಕೆಂಪಾಗಿದ್ದವು.
"ಯಾವಾಗ ಕೆಟ್ಟ ಪದವನ್ನು ಉಪಯೋಗಿಸಿ ನಿನ್ನ ಬುರುಡೆಯನ್ನು ಕಾಯಿಸಿಬಿಡುತ್ತೇನೆ ಅಂದನೋ. ಆಗ ಅಣ್ಣಾವ್ರಿಗೆ ಕೋಪ ಎಲ್ಲಿತ್ತೋ ಎದ್ದವರೇ ಕತ್ತಿಯನ್ನು ಹಿಡಿದು ಏನಂದೆ, ಇನ್ನೊಂದು ಸಲ ಹೇಳು ಅನ್ನುತ್ತಿದ್ದಂತೆ ಡಾನ್ ನಡುಗಿ ಹೋದ. ಇವರ ಕಣ್ಣುಗಳನ್ನು ನೋಡುತ್ತೀನಿ. ಆ ಕಣ್ಣುಗಳಲ್ಲಿ ರಕ್ತ ಸುರಿಯುತ್ತಿದೆ. ಅಷ್ಟು ಕೆಂಪಗಾಗಿದೆ. ಅವರು ಯಾವತ್ತೂ ಏಕವಚನದಲ್ಲಿ ಯಾರನ್ನೂ ಮಾತಾಡಿಸಿಲ್ಲ." ಎಂದಿದ್ದರು ಭಗವಾನ್.

ಅಸಲಿಗೆ ಇಲ್ಲಿವರೆಗೂ ನಡೆದಿದ್ದು ಕೇವಲ ಸಂಭಾಷಣೆ ಅಷ್ಟೇ. ಅಣ್ಣಾವ್ರ ಕೋಪ ಇನ್ನೂ ನೆತ್ತಿಗೆ ಹತ್ತಿತ್ತು. "ಅಣ್ಣಾವ್ರು ಕತ್ತಿ ಎತ್ತಿದ್ದೆ ತಡ ನಡುಕ ಶುರುವಾಗಿತ್ತು. ಆಗ ಆಯ್ತು ತಂದು ಬಿಸಾಕುತ್ತೇನೆ ಅಂದ. ಬಿಸಾಕುತ್ತೀಯೋ ಏನು ಮಾಡುತ್ತಿಯೋ. ಮೊದಲು ತಂದು ಇಡು ಅಂದರು. ಹಾಗೇ ಗೊಣಗಿಕೊಂಡು ಆಚೆ ಕಡೆ ಹೋದವನು. ಐದು ನಿಮಿಷದಲ್ಲಿ ದುಡ್ಡು ತೆಗೆದುಕೊಂಡು ಬಂದು ಐದು ಸಾವಿರ ರೂಪಾಯಿ ಇಟ್ಟ. ಇಂತಹವರಿಗೆ ಹೀಗೆ ಮಾಡಬೇಕು. ಒಳ್ಳೆಯ ಮಾತಿನಲ್ಲಿ ಇವರು ಬಗ್ಗುವುದಿಲ್ಲ. ಕತ್ತಿ ತೋರಿಸಿದರೇ ಕತ್ತು ಬಗ್ಗುವುದು ಅಂದರು. ಇದೊಂದು ಘಟನೆಯನ್ನು ನಾನು ನೋಡಿದೆ" ಎಂದು ದಿವಂಗತ ಹಿರಿಯ ನಿರ್ದೇಶಕ ಭಗವಾನ್ ಅವರು ನೆನೆಪಿಸಿಕೊಂಡಿದ್ದರು.
ಇನ್ನು ಮೊದಲ ಡಾನ್ ಸಿನಿಮಾ ಮಾಡಿದ್ದು ಹೇಗೆ ಅಂತಲೂ ಭಗವಾನ್ ಇದೇ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ. "ಸಂದ್ಯಾರಾಗ ಆಯ್ತು. ರಾಜ ದುರ್ಗದ ರಹಸ್ಯ ಆಯ್ತು. ಈ ಸಿನಿಮಾ ಮಾಡಿದ ಮೇಲೆ ಏನು ಮಾಡಬೇಕು ಅನ್ನೋ ಚಿಂತೆ ಕಾಡುವುದಕ್ಕೆ ಶುರುವಾಯ್ತು. ಆ ಸಮಯದಲ್ಲಿ ನಮಗೆ ಬಿಡುವಿತ್ತು. ಬಿಡುವಿನ ವೇಳೆಯಲ್ಲಿ ನಾನು, ರಾಜ್ಕುಮಾರ್, ವರದಪ್ಪ ಎಲ್ಲರೂ ಒಟ್ಟಿಗೆ ಕಳೆಯುತ್ತಿದ್ದಂತೆ ಒಂದು ಕ್ಷಣವದು. ಆಗ ಡಾಕ್ಟರ್ ನೋ ಅಂತ ಒಂದು ಜೇಮ್ಸ್ ಬಾಂಡ್ ಸಿನಿಮಾ ಬಂದಿತ್ತು. ನಾವು ಬಿಡುವಿನ ವೇಳೆಯಲ್ಲಿ ಮದ್ರಾಸ್ನಲ್ಲಿ ಸಿನಿಮಾಗಳನ್ನು ನೋಡುತ್ತಿದ್ವಿ. ಸಾಮಾನ್ಯವಾಗಿ ಇಂಗ್ಲಿಷ್ ಸಿನಿಮಾ ನೋಡುತ್ತಿದ್ವಿ. ಇಲ್ಲ ಹಿಂದಿ ಸಿನಿಮಾ ನೋಡುತ್ತಿದ್ವಿ. ಹಾಗೆ ಹಾಲಿವುಡ್ನಲ್ಲಿ ರಿಲೀಸ್ ಆದ ಒಂದು ತಿಂಗಳಿಗೆ ಇಲ್ಲಿಗೆ ಬರೋದು. ಆಗ ನಾನು ವಿಮರ್ಶೆಗಳನ್ನು ಓದಿದ್ದೆ. ಆಗ ಆ ಸಿನಿಮಾ ನೋಡಲೇಬೇಕು ಅಂತ ಇಬ್ಬರನ್ನೂ ಎಳೆದುಕೊಂಡು ನಾನು, ದೊರೈ, ಅಣ್ಣಾವ್ರು ಹಾಗೂ ವರದಪ್ಪ ನಾಲ್ಕೂ ಮಂದಿನೂ ಹೋದ್ವಿ." ಎಂದು ಬಾಂಡ್ ಸಿನಿಮಾ ನೋಡಿ ಕನ್ನಡದಲ್ಲಿ ಬಾಂಡ್ ಸಿನಿಮಾ ಮಾಡಿದ ಘಟನೆಯನ್ನು ವಿವರಿಸಿದ್ದಾರೆ.
ಈ ಸಿನಿಮಾ ನೋಡಿಕೊಂಡು ಬಂದು ಹೋಟೆಲ್ನಲ್ಲಿ ಮಸಾಲೆ ದೋಸೆ ತಿನ್ನುತ್ತಿದ್ವಿ. ಅಲ್ಲಿ ವುಡ್ಲ್ಯಾಂಡ್ಸ್ ಅನ್ನುವ ಹೋಟೆಲ್ ಇದೆ. ಆಗ ಸುಮ್ಮನೆ, ನಾವು ಇಂತಹದ್ದೊಂದು ಸಿನಿಮಾವನ್ನು ಯಾಕೆ ತೆಗೆಯ ಬಾರದು ಅಂತ ಹೇಳಿದ್ದರು. ಹಾಗೆ ಹೇಳಿದಾಗ ರಾಜ್ಕುಮಾರ್ ಅವರು ಜೋರಾಗಿ ನಕ್ಕುಬಿಟ್ಟರು. ಆಗ ದೊರೈ ಹಾಗೂ ಭಾಗವಾನ್ ಯಾಕೆ ಹೀಗೆ ನಕ್ಕುಬಿಟ್ರಿ ಅಂತ ಅಣ್ಣಾವ್ರನ್ನು ಕೇಳಿದ್ದರು.
"ಇಲ್ಲ ನನಗೆ ಕನ್ನಡದ ಯಾವುದೋ ಗಾದೆ ಜ್ಞಾಪಕಕ್ಕೆ ಬಂದು ಬಿಡ್ತು. ಅದಕ್ಕೆ ನಾನು ನಕ್ಕು ಬಿಟ್ಟೆ ಅಂತ ಅಣ್ಣಾವ್ರು ಹೇಳಿದ್ದರು. ಅಲ್ಲ ನವಿಲನ್ನು ನೋಡಿ ಕೆಂಬೂತ ಪುಕ್ಕ ತೆರೆದುಕೊಳ್ತಂತೆ ಆ ತರ ಆಯ್ತು ನಿಮ್ಮ ಕಥೆ ಅಂತ ಹೇಳಿದರು. ಅದಕ್ಕೂ ಇದಕ್ಕೂ ಏನು ಸಂಬಂಧ? ದೊರೈ ಅವರು ಕೇಳಿದರು. ಅಲ್ಲ ದೊರೈ ಇಂಗ್ಲಿಷ್ ಸಿನಿಮಾ ನೋಡಿ ಕನ್ನಡ ಪಿಕ್ಚರ್ ತೆಗೆಯುತ್ತೀನಿ ಅಂತಿರಲ್ಲ ನಿಮಗಿಂತ ಮುಟ್ಟಾಳರು ಇದ್ದಾರಾ? ಅಂದ್ಬಿಟ್ರು. ನೀವು ಹೂಂ ಅನ್ನಿ. ನಾವು ಸಿನಿಮಾ ತೆಗೆಯದೆ ಹೋದರೆ ಕೇಳಿ" ಅಂತ ದೊರೈ ಹೇಳಿದ್ದರಂತೆ.
ಆಗ ಅಣ್ಣಾವ್ರು ನಿಮ್ಮ ಮನಸ್ಸಿಗೆ ಬಂದರೆ ಜಮಾಯಿಸಿಬಿಡಿ ಅಂತ ಹೇಳಿದ್ದರು. ಅದನ್ನೇ ಇಟ್ಟುಕೊಂಡು ದೊರೈ ಹಾಗೂ ಭಗವಾನ್ ಇಬ್ಬರೂ ಕೆಲಸ ಮಾಡುವುದಕ್ಕೆ ಶುರು ಮಾಡಿದ್ದರು. ಆಗಿನ ಮದ್ರಾಸ್ನಲ್ಲಿ ಇಂಗ್ಲಿಷ್ ಕತೆಗಳನ್ನು ಮಾರುವ ಒಂದು ಬುಕ್ ಸ್ಟಾಲ್ ಇತ್ತು. ಅಲ್ಲಿ ಹೋಗಿ 11 ಜೇಮ್ಸ್ ಬಾಂಡ್ ಪುಸ್ತಕಗಳನ್ನು ಭಗವಾನ್ ತೆಗೆದುಕೊಂಡು ಬಂದಿದ್ದರು. ಅದನ್ನು ಓದಿ ಆ ಮೇಲೆ 'ಜೇಡರ ಬಲೆ' ಎನ್ನುವ ಸಿನಿಮಾವನ್ನು ಮಾಡಿದ್ದರು.


Click it and Unblock the Notifications











